Posted by vidyamaana on 2023-11-07 04:42:13 |
ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.
ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Posted by Vidyamaana on 2023-03-21 16:40:15 |
ಪುತ್ತೂರು: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಪುತ್ತೂರು ಕಾಂಗ್ರೆಸ್ ಅಭ್ಯರ್ಥಿಯಾಗಿ ಅಶೋಕ್ ಕುಮಾರ್ ರೈ ಅವರ ಹೆಸರನ್ನು ಎಐಸಿಸಿ ಅಂತಿಮಗೊಳಿಸಿದೆ ಎಂಬ ಸುದ್ದಿ ಲಭ್ಯವಾಗಿದೆ.
ಇದರ ನಡುವೆ ಪುತ್ತೂರು ಮಹಿಳಾ ಕಾಂಗ್ರೆಸ್ ಘಟಕ ಪತ್ರಿಕಾಗೋಷ್ಠಿ ನಡೆಸಿದ್ದು, ನಿಗೂಢ ಹೆಜ್ಜೆಯೊಂದನ್ನು ಮುಂದಿಟ್ಟಿದೆ. ಇದು ಸಾರ್ವಜನಿಕ ವಲಯದಲ್ಲಿ ಹಲವು ಅನುಮಾನಗಳಿಗೆ ಎಡೆ ನೀಡಿದೆ.
ಅಶೋಕ್ ಕುಮಾರ್ ರೈ ಅವರು ಕಾಂಗ್ರೆಸ್ ಸೇರ್ಪಡೆಯ ಬಳಿಕ ವಿಧಾನಸಭಾ ಕ್ಷೇತ್ರದ ತುಂಬಾ ಓಡಾಡುತ್ತಿದ್ದಾರೆ. ಇದಕ್ಕಾಗಿ ಸಾಕಷ್ಟು ಸಮಯವನ್ನು ನೀಡುತ್ತಿದ್ದಾರೆ. ಇದರ ಹಿಂದಿನ ಮರ್ಮ ಪಕ್ಷದ ಆಕಾಂಕ್ಷಿ ಅಭ್ಯರ್ಥಿಗಳಿಗೆ ತಿಳಿಯದ ವಿಚಾರವೇನಲ್ಲ. ಈ ನಡುವೆ ಮಂಗಳವಾರ ಪುತ್ತೂರು ಮಹಿಳಾ ಕಾಂಗ್ರೆಸ್ ಘಟಕ ಪತ್ರಿಕಾಗೋಷ್ಠಿ ನಡೆಸಿ, ಶಕುಂತಳಾ ಶೆಟ್ಟಿ ಅವರನ್ನೇ ಶಾಸಕ ಅಭ್ಯರ್ಥಿಯಾಗಿ ಘೋಷಿಸಿ ಎಂದು ಆಗ್ರಹಿಸಿದೆ. ಅಶೋಕ್ ಕುಮಾರ್ ರೈ ಅಭ್ಯರ್ಥಿಯಾಗಿ ಆಯ್ಕೆ ಅಂತಿಮ ಎಂಬ ಸುದ್ದಿ ಅದರ ಬೆನ್ನಲ್ಲೇ ಹೊರಬಿದ್ದಿರುವ ಕಾರಣ, ಮಹಿಳಾ ಕಾಂಗ್ರೆಸಿನ ಆಗ್ರಹದ ಹಿಂದಿನ ನಿಗೂಢ ನಡೆ ಬೇರೆಯೇ ಹೊಳಹನ್ನು ತೋರಿಸುವಂತಿದೆ.
ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಅರಸ್, ಉಪಾಧ್ಯಕ್ಷೆ ವಿಶಾಲಾಕ್ಷಿ ಬನ್ನೂರು, ಖಜಾಂಜಿ ಶುಭ ಮಾಲಿನಿ ಮಲ್ಲಿ, ಕೆಪಿಸಿಸಿ ಕಾರ್ಯದರ್ಶಿ ಸಾಹಿರಾ ಬಾನು, ವಿಲ್ಮಾ ಗೋನ್ಸಾಲ್ವಿಸ್ ಅವರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಪರ ಬ್ಯಾಟಿಂಗ್ ಬೀಸಿದ್ದಾರೆ.
ಶಕುಂತಳಾ ಶೆಟ್ಟಿ ಅವರಿಗೆ ಮುಂದೆ ಅವಕಾಶ ಸಿಗಬಹುದು ಎನ್ನುವ ನಿರೀಕ್ಷೆ ಇಲ್ಲ. ಆದ್ದರಿಂದ ಈ ಬಾರಿ ಟಿಕೇಟ್ ನೀಡುವಂತೆ ಕೇಳಿಕೊಳ್ಳುತ್ತಿದ್ದೇವೆ. ಮಹಿಳಾ ಮತದಾರರ ಒಲವು ಶಕುಂತಳಾ ಶೆಟ್ಟಿ ಅವರ ಪರವಾಗಿ ಇರುವುದರಿಂದ, ಗೆಲುವು ನಿಶ್ಚಿತ ಎಂದಿದ್ದಾರೆ.
ಎರಡು ಬಾರಿ ಶಾಸಕರಾಗಿದ್ದ ಶಕುಂತಳಾ ಶೆಟ್ಟಿ ಅವರು ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿದವರು. ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಯಾಗಿಯೂ ಗುರುತಿಸಿಕೊಂಡವರು. ಜನರ ಸಮಸ್ಯೆಗಳನ್ನು ಬಹಳ ಹತ್ತಿರದಿಂದ ಕಂಡು, ಅದನ್ನು ಬಗೆಹರಿಸಿದವರು. ಆದ್ದರಿಂದ ಅವರು ಮತ್ತೊಮ್ಮೆ ಶಾಸಕರಾಗಿ ಆಯ್ಕೆ ಆಗಬೇಕು. ಅವರು ಶಾಸಕ ಅಭ್ಯರ್ಥಿಯಾದರೆ ಖಂಡಿತಾ ಜಯ ದೊರಕುತ್ತದೆ. ಆದ್ದರಿಂದ ಅವರನ್ನು ಅಭ್ಯರ್ಥಿಯಾಗಿ ಘೋಷಿಸುವಂತೆ ಆಗ್ರಹಿಸಿದ್ದಾರೆ.
Posted by Vidyamaana on 2023-08-18 14:58:21 |
ಪುತ್ತೂರು: ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ಸಾಮಾಜಿಕ ಜಾಲತಾಣದಲ್ಲಿ ಆಯೋಜಿಸಿದ `ಶೇರ್ ಯುವರ್ ಗ್ಲೋ’ ಫೊಟೋ ಸ್ಪರ್ಧೆಯಲ್ಲಿ ವಿಜೇತರಾದ ಧನ್ಯ ಕಿರಣ್ ಶೆಟ್ಟಿ ಅವರಿಗೆ ಸಂಸ್ಥೆಯ ಆಡಳಿತ ನಿರ್ದೇಶಕರಾದ ಜಿ.ಎಲ್. ಬಲರಾಮ್ ಆಚಾರ್ಯ ಅವರು 5000 ರೂ. ಮೌಲ್ಯದ ಗಿಫ್ಟ್ ವೋಚರ್ ನೀಡಿ ಅಭಿನಂದಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಅಭಿನಂದನೆ ಸಲ್ಲಿಸಲಾಯಿತು.
Posted by Vidyamaana on 2024-01-19 14:39:12 |
ಹಾಸನ: ಸಕಲೇಶಪುರದ ಪೊಲೀಸ್ ಕ್ವಾರ್ಟರ್ಸ್ ನಲ್ಲಿ ಕಾನ್ಸ್ ಟೇಬಲ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸೋಮಶೇಖರ್ (39) ಮೃತರು ಎಂದು ತಿಳಿದು ಬಂದಿದೆ.ಸಕಲೇಶಪುರದಲ್ಲಿ 112 ಪೊಲೀಸ್ ವಾಹನದ ಚಾಲಕನಾಗಿ ಸೋಮಶೇಖರ್ ಕರ್ತವ್ಯ ನಿರ್ವಹಿಸುತ್ತಿದ್ದರು. ಪತಿ ಸೋಮಶೇಖರ್ ವಿರುದ್ಧ ಕಿರುಕುಳ ಆರೋಪ ಮಾಡಿ ಪತ್ನಿ DySPಗೆ ದೂರು ನೀಡಿದ್ದರು. ಇದರಿಂದ ಮನನೊಂದು ಸೋಮಶೇಖರ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸಕಲೇಶಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ
Posted by Vidyamaana on 2023-03-28 07:49:59 |
ಪುತ್ತೂರು: ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯಕ್ಕೆ ಇದ್ದ ಮೀಸಲಾತಿಯನ್ನು ರದ್ದು ಮಾಡಿದ ನಿರ್ಣಯವನ್ನು ಖಂಡಿಸಿ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಎಸ್ ಡಿ ಪಿ ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯಿಂದ ಮಾ.28ರಂದು ಪುತ್ತೂರು ಕಿಲ್ಲೆ ಮೈದಾನದ ಅಮರ್ ಜವಾನ್ ಸ್ಮಾರಕ ಜ್ಯೋತಿ ಬಳಿ ಪ್ರತಿಭಟನೆ ನಡೆಯಿತು.
ಮುಸ್ಲಿಂಮರಿಗೆ ಪ್ರವರ್ಗ 2ಬಿ ಅಡಿಯಲ್ಲಿದ್ದ ಶೇ 4ರಷ್ಟು ಮೀಸಲಾತಿಯನ್ನು ರದ್ದು ಮಾಡಿರುವುದು ಒಂದು ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಮಾಡಿರುವ ಉದ್ದೇಶಿತ ದಾಳಿಯಾಗಿದೆ. ಇದು ಸರ್ಕಾರದ ಅಸಂವಿಧಾನಿಕ ತೀರ್ಮಾನವಾಗಿದೆ. ಮುಸ್ಲಿಮರ ವಿರುದ್ಧ ಸರ್ಕಾರ ನಡೆಸುವ ಷಡ್ಯಂತ್ರ ಇದಾಗಿದ್ದು, ಬಿಜೆಪಿ ತನ್ನ ಕೋಮುವಾದಿತನವನ್ನು ಪದೇ ಪದೇ ಪ್ರದರ್ಶಿಸುತ್ತಲೇ ಇದೆ. ಬರುವ ಚುನಾವಣೆಯಲ್ಲಿ ಇದರ ಪರಿಣಾಮ ಬಿಜೆಪಿ ಎದುರಿಸಬೇಕಾದಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೋರಾಟದ ಮೂಲಕ ನ್ಯಾಯಾಲಯದಲ್ಲ ಪ್ರಶ್ನಿಸಲಿದ್ದೇವೆ:ಅಬ್ದುಲ್ ಮಜೀದ್ ಖಾನ್
ಎಸ್ಡಿಪಿಐ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಮಜೀದ್ ಖಾನ್ ಅವರು ಮಾತನಾಡಿ ವಿವಿಧ ಆಯೋಗ ಕೂಡ ಮುಸ್ಲಿಂಮರನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿರುವುದನ್ನು ನಾವು ಕಾಣಬಹುದು. ವಾಸ್ತವಾಂಶ ಹೀಗಿದ್ದರೂ ಸಹ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ತಡೆಯೊಡ್ಡುವ ಹಾಗೂ ಮುಖ್ಯವಾಹಿನಿಗೆ ಬರದಂತೆ ನೋಡಿಕೊಳ್ಳುವ ಕುತಂತ್ರ ಮುಂದುವರಿದ ಭಾಗವಾಗಿ 2ಬಿ ಮೀಸಲಾತಿ ರದ್ದುಪಡಿಸಿರುವುದು ದೃಢವಾಗಿದೆ. ಧರ್ಮವನ್ನು ಗುರಿ ಮಾಡಿ ರಾಜಕೀಯ ಬೇಳೆ ಬೆಯಿಸಲು ನಾವು ಬಿಡುವುದಿಲ್ಲ. ಟಿಪ್ಪು ಮತ್ತು ಅಸ್ಮತ್ತುಲ್ಲಾ ಖಾನ್ ಅವರ ಸಂತತಿಯಾಗಿರುವ ನಾವು ಹೋರಾಟದ ಮೂಲಕ ನ್ಯಾಯಾಲಯದಲ್ಲಿ, ಹೈಕೋರ್ಟ್, ಸುಪ್ರೀಮ್ ಕೋರ್ಟ್ನಲ್ಲಿ ಪ್ರಶ್ನಿಸಲಿದ್ದೇವೆ ಎಂದರು.
ಮೀಸಲಾತಿ ಕೊಡದಿದ್ದರೆ ವಿಧಾನಸಭಾ ಚಲೋ ಚಳುವಳಿ ಎಚ್ಚರಿಕೆ:ಇಬ್ರಾಹಿಂ ಸಾಗರ್
ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಇಬ್ರಾಹಿಂ ಸಾಗರ್ ಅವರು ಮಾತನಾಡಿ ಬಿಜೆಪಿ ಸರಕಾರ ಬಂದ ಬಳಿಕ ಮುಸಲ್ಮಾನರ ಮೇಲೆ ನಿರಂತರ ದಬ್ಬಾಳಿಕೆ ಮಾಡಿಕೊಂಡು ಬಂದಿದೆ. ಮುಸಲ್ಮಾನರಿಗೆ ಶೈಕ್ಷಣಿಕ, ಉದ್ಯೋಗದಲ್ಲಿ ಸೌಲಭ್ಯವನ್ನು ಸರಕಾರ ಕಿತ್ತುಕೊಳ್ಳುವ ಮೂಲಕ ಸಾಮಾಜಿಕ, ರಾಜಕೀಯ, ಆರ್ಥಿಕವಾಗಿ ಮುಸಲ್ಮಾನರನ್ನು ಇಲ್ಲದಂತೆ ಮಾಡುವ ಹುನ್ನಾರವನ್ನು ಕೋಮುವಾದಿ ಸರಕಾರ ಮಾಡುತ್ತಿದೆ. ಮೀಸಲಾತಿ ಪುನಃ ಕೊಡದಿದ್ದರೆ ವಿಧಾನಸಭಾ ಚಲೋ ಚಳುವಳಿ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದರು.
ಹಸಿವು, ಭಯಮುಕ್ತ ಸಮಾಜವನ್ನು ಪಡೆದೇ ಪಡೆಯುತ್ತೇವೆ:ಅಬ್ದುಲ್ ಹಮೀದ್ ಸಾಲ್ಮರ
ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷ ಅಬ್ದುಲ್ ಹಮೀದ್ ಸಾಲ್ಮರ ಅವರು ಮಾತನಾಡಿ ಬೇತಾಳ ಶವವನ್ನು ಎತ್ತಿಕೊಂಡು ಹೋಗುವ ಕಥೆಯಂತೆ ಬಿಜೆಪಿಗೂ ತನ್ನ ಕೊನೆ ಹಂತದ ಪರಿಸ್ಥಿತಿ ಬರಲಿದೆ. ರಾಜ್ಯದಲ್ಲಿ ಹಸಿವು ಮುಕ್ತ, ಭಯಮುಕ್ತ ಸಮಾಜವನ್ನು ನಾವು ಪಡೆದೇ ಪಡೆಯುತ್ತೇವೆ ಎಂದರು.
ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಮುಖಂಡರಾದ ಅಶ್ರಫ್ ಬಾವು, ಪ್ರಧಾನ ಕಾರ್ಯದರ್ಶಿ ರಹೀಮ್, ಕಬಕ ಗ್ರಾ.ಪಂ ಸದಸ್ಯ ಪಾರೂಕ್ ಕಬಕ, ಉಪ್ಪಿನಂಗಡಿ ಗ್ರಾ.ಪಂ ಸದಸ್ಯ ರಶೀದ್ ಪುಣ್ಚಪ್ಪಾಡಿ, ವಿಶ್ವನಾಥ್ ಪುಣ್ಚತ್ತಾರ್, ಪಿಬಿಕೆ ಮಹಮ್ಮದ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಪ್ರತಿಭಟನೆ ಬಳಿಕ ಸಹಾಯಕ ಆಯುಕ್ತರ ಕಚೇರಿ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
Posted by Vidyamaana on 2023-12-19 04:52:15 |
ಬೆಂಗಳೂರು: ಆರು ಮಂದಿ ಮಹಿಳೆಯರು ರಾಮನಗರ ಬಳಿಯ ಹಂಡಿ ಗುಂಡಿ ಬೆಟ್ಟಕ್ಕೆ ಟ್ರಕ್ಕಿಂಗ್ ಹೋಗಿ ಮರಳಿ ಬರಲು ದಾರಿ ಕಾಣದೆ ಸಿಕ್ಕಿಬಿದ್ದು ಕೊನೆಗೆ ಪೊಲೀಸರು ರಕ್ಷಿಸಿದ ಘಟನೆ ನಡೆದಿದೆ.
ಮಹಿಳೆಯರು ರಾಮನಗರ ಜಿಲ್ಲೆಯ ಬಸವನಪುರ ಗ್ರಾಮದಲ್ಲಿ ಭಾನುವಾರ ಬೆಳಗ್ಗೆ ಕಾರು ನಿಲ್ಲಿಸಿ ಅಲ್ಲಿಂದ ಹಂಡಿ ಗುಂಡಿ ಬೆಟ್ಟದ ಕಾಡಿನಲ್ಲಿ ಟ್ರಕ್ಕಿಂಗ್ ತೆರಳಿದ್ದರು. ಸಂಜೆ ವೇಳೆಗೆ ಬೆಟ್ಟದಿಂದ ಇಳಿದು ಬರುತ್ತಿದ್ದಾಗ ರಸ್ತೆ ಸಿಗಲಿಲ್ಲ. ರಾತ್ರಿಯಾದರೂ ಅತ್ತಿತ್ತ ಹುಡುಕಾಡಿ ರಸ್ತೆ ಸಿಗದೇ ಇದ್ದುದರಿಂದ 7.15ರ ಸುಮಾರಿಗೆ 112 ನಂಬರಿಗೆ ಫೋನ್ ಮಾಡಿದ್ದರು.
ಕೂಡಲೇ ರಾಮನಗರ ಗ್ರಾಮಾಂತರ ಠಾಣೆಯಲ್ಲಿ ಗಸ್ತಿನಲ್ಲಿದ್ದ ರಾಜೇಶ್ ಮತ್ತು ರಮೇಶ್ ಆ ಭಾಗದಲ್ಲೇ ಇದ್ದುದರಿಂದ ಅವರಿಗೆ ಸಂದೇಶ ಹೋಗುತ್ತದೆ. 7.30ರ ಸುಮಾರಿಗೆ ಮಹಿಳೆಯರನ್ನು ಫೋನಲ್ಲಿ ಸಂಪರ್ಕಿಸಿದ ಪೊಲೀಸರು, ನೀವು ಯಾವುದೇ ಆತಂಕ ಪಡುವುದು ಬೇಡ. ನಾವು ಹುಡುಕಿ ಬರುತ್ತೇವೆ ಎಂದು ಹೇಳಿದ್ದಾರೆ. ಆದರೆ ಪೊಲೀಸರ ವಾಹನವನ್ನೂ ಬೆಟ್ಟಕ್ಕೆ ಒಯ್ಯಲಾಗದೆ ಅರ್ಧಕ್ಕೆ ನಿಲ್ಲಿಸಿದ್ದಾರೆ.
ರಾತ್ರಿ 8.30ರ ವೇಳೆಗೆ ಸ್ಥಳೀಯ ಸಾರ್ವಜನಿಕರ ಸಹಾಯ ಪಡೆದು ಪೊಲೀಸರು ಟಾರ್ಚ್ ಲೈಟ್ ಹಿಡಿದು ಕಾಡಿನಲ್ಲಿ ಹುಡುಕಾಡಿದ್ದಾರೆ. ಎರಡು ಕಿಮೀ ಉದ್ದಕ್ಕೆ ಕಾಡಿನಲ್ಲಿ ನಡೆದ ಬಳಿಕ ಮಹಿಳೆಯರು ಸಿಕ್ಕಿದ್ದು, ಮರಳಿ ರಸ್ತೆಗೆ ತಲುಪಿಸಿದ್ದಾರೆ. ಹಂಡಿ ಗುಂಡಿ ಬೆಟ್ಟದಲ್ಲಿ ಕರಡಿ, ಚಿರತೆಗಳಿದ್ದು, ಅದೃಷ್ಟವಶಾತ್ ಮಹಿಳೆಯರಿಗೆ ತೊಂದರೆ ಮಾಡಿಲ್ಲ. 112 ಗೆ ಕರೆ ಮಾಡಲು ಫೋನ್ ನೆಟ್ವರ್ಕ್ ಸಿಕ್ಕಿದ್ದರಿಂದ ಬಚಾವಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯರು ಬನ್ನೇರುಘಟ್ಟ ಆಸುಪಾಸಿನಲ್ಲಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರಾಗಿದ್ದಾರೆ.