Posted by vidyamaana on 2024-06-30 19:51:42 |
ಬಂಟ್ವಾಳ : ತಾಲೂಕಿನ ವಿವಿಧ ಕಡೆಗಳಿಗೆ ತೆರಳಿ ಮಳೆಹಾನಿ ಬಗ್ಗೆ ವೀಕ್ಷಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಜಿಲ್ಲೆಯಲ್ಲಿಯೇ ಖ್ಯಾತಿ ಪಡೆದಿರುವ ಕಲ್ಲಡ್ಕದ ಯಾಸೀರ್ ಅವರ ಅಪರೂಪದ ವಸ್ತುಗಳ ಸಂಗ್ರಹವಿರುವ ಕಲ್ಲಡ್ಕ ಮ್ಯೂಸಿಯಂಗೆ ಭೇಟಿ ನೀಡಿದರು.ಹಿಂದಿನ ಕಾಲದ ವಸ್ತುಗಳು, ನಾಣ್ಯ, ಪತ್ರಿಕೆಗಳ ಸಂಗ್ರಹವನ್ನು ವೀಕ್ಷಿಸಿ ರೋಮಾಂಚನಗೊಂಡ ಅವರು ಯಾಸೀರ್ ಅವರ ವಸ್ತುಗಳ ಸಂಗ್ರಹಣ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅತ್ಯಂತ ಸಾವಕಾಶವಾಗಿ ಪ್ರತಿಯೊಂದು ವಸ್ತುಗಳನ್ನು ಕುತೂಹಲದಿಂದ ವೀಕ್ಷಿಸಿ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮೊಡಂಕಾಪುವಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು. ಇಲ್ಲಿನ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಎಲ್ಲರಿಗೂ ಕೈಕುಲುಕಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಮಕ್ಕಳಿಂದ ಅಂಬೇಡ್ಕರ್ ಬಗ್ಗೆ ಹಾಡು ಹಾಡಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಗಮನ ಸೆಳೆದರು. ತಹಸೀಲ್ದಾರ್ ಅರ್ಚನಾ ಭಟ್, ವಿದ್ಯಾರ್ಥಿ ನಿಲಯ ಮೇಲ್ವಿಚಾರಕರು ಜೊತೆಗಿದ್ದರು.
Posted by Vidyamaana on 2024-03-19 11:48:44 |
ಬೆಂಗಳೂರು: ಇಂದು ನಿಗದಿಯಾಗಿದ್ದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಸುದ್ದಿಗೋಷ್ಠಿ ಮುಂದೂಡಲ್ಪಟ್ಟಿದೆ.
ಬೆಂಗಳೂರಿನಲ್ಲಿ ಇಂದು ಸದಾನಂದ ಗೌಡ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರ ಜೊತೆ ಚರ್ಚೆ ನಡೆಸಲಿದ್ದು, ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಮುಂದೂಡಲಾಗಿದೆ ಎಂದು ಹೇಳಲಾಗಿದೆ.
Posted by Vidyamaana on 2024-02-14 20:59:58 |
ಮಂಗಳೂರು : ಮಂಗಳೂರು ಖಾಸಗಿ ಶಾಲೆಯ ವಿವಾದ ಪ್ರಕರಣ ನಡೆದ ಬೆನ್ನಲ್ಲೇ ದ.ಕ. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರನ್ನು (ಡಿಡಿಪಿಐ) ದಿಢೀರ್ ವರ್ಗಾವಣೆ ಮಾಡಲಾಗಿದೆ. ನೂತನ ಡಿಡಿಪಿಐ ಆಗಿ ವೆಂಕಟೇಶ ಸುಬ್ರಾಯ ಪಟಗಾರ ಅವರನ್ನು ನಿಯುಕ್ತಿಗೊಳಿಸಲಾಗಿದೆ ಶಾಲೆಯ ವಿವಾದದ ನಿರ್ವಹಣೆಯಲ್ಲಿ ವಿಫಲರಾಗಿರುವ ಕುರಿತು ಹಾಗೂ ಡಿಡಿಪಿಐ ವರ್ತನೆ ಬಗ್ಗೆ ಕಾಂಗ್ರೆಸ್ ನಾಯಕರು ತೀವ್ರ ಅಸಮಾಧಾನ ಹೊರಹಾಕಿದ್ದರು. ಮಂಗಳವಾರ ಶಾಲೆಗೆ ಭೇಟಿ ನೀಡಿದ್ದ ಮಾಜಿ ಸಚಿವ ರಮಾನಾಥ ರೈ, ಸಮಸ್ಯೆ ಉದ್ಭವ ಆದಾಗಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಸರಿಪಡಿಸಬೇಕಿತ್ತು. ಆದರೆ ಅಧಿಕಾರಿಗಳು ಕರ್ತವ್ಯ ನಿರ್ವಹಣೆಯಲ್ಲಿ ಹಿಂದುಳಿದಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಮಾಜಿ ಶಾಸಕರಾದ ಐವನ್ ಡಿಸೋಜ, ಜೆ.ಆರ್.ಲೋಬೊ ಕೂಡ ಅಧಿಕಾರಿಗಳ ವರ್ತನೆಯನ್ನು ಖಂಡಿಸಿದ್ದರು. ಇದರ ಬೆನ್ನಲ್ಲೇ ಡಿಡಿಪಿಐ ದಯಾನಂದ ನಾಯ್ಕ ಅವರನ್ನು ಬೆಳಗಾವಿ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯಕ್ಕೆ ಪ್ರವಾಚಕರನ್ನಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.
ಕಲಬುರಗಿಯ ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತರ ಕಚೇರಿಯಲ್ಲಿ ಉಪನಿರ್ದೇಶಕ (ಯೋಜನೆ)ರಾಗಿದ್ದ ವೆಂಕಟೇಶ ಸುಬ್ರಾಯ ಪಟಗಾರ ಅವರನ್ನು ದಕ್ಷಿಣ ಕನ್ನಡ ಡಿಡಿಪಿಐ ಆಗಿ ನೇಮಕ ಮಾಡಲಾಗಿದೆ
Posted by Vidyamaana on 2023-09-15 18:31:28 |
ಪುತ್ತೂರು : ಹಣ ಎಂದರೆ ಹೆಣ ಕೂಡ ಬಾಯಿ ಬಿಡುತ್ತದೆ ಎಂಬ ಗಾದೆಯಂತೆ ಬಹುತೇಕ ಜನರು ಹಣದ ವಿಚಾರದಲ್ಲೇ ಮೋಸ ಹೋಗುತ್ತಾರೆ. ಬಿಟ್ ಕ್ವಾಂಟ್ ಎಂಬ ಮನಿ ಆ್ಯಪ್ ನಲ್ಲಿ ಹಣ ಹೂಡಿಕೆ ಮಾಡಿದ ಜನರು ಮೋಸ ಹೋಗಿದ್ದಾರೆ. ಪುತ್ತೂರು ತಾಲೂಕಿನ ಹಲವು ಮಂದಿ ಈ ಆ್ಯಪ್ ನಲ್ಲಿ ಹಣ ಹೂಡಿ ಮೋಸ ಹೋಗಿದ್ದಾರೆ ಎಂಬ ಬಗ್ಗೆ ವರದಿಯಾಗಿದೆ.
‘ಬಿಟ್ ಕ್ವಾಂಟ್’… ಇದೊಂದು ವಿದೇಶಿ ಹಣ ಹೂಡಿಕೆಯ ಆಪ್ ಆಗಿದೆ. 2018ರಲ್ಲಿ ಆರಂಭಗೊಂಡ ಲಂಡನ್ ಯುನೈಟೆಡ್ ಕಿಂಗ್ ಡಂ ಕಂಪೆನಿ ಅಂತ ಹೇಳಲಾಗಿದೆ.
ಇದೊಂದು ಕ್ರಿಪ್ಟೋಕರೆನ್ಸಿಗಳಿಗೆ ವಿನಿಮಯ ವೇದಿಕೆಯಾಗಿದೆ. ಮೊದಲಿಗೆ ಬಿಟ್ ಕ್ವಾಂಟ್ ಎಂಬ ಆ್ಯಪ್ ಅನ್ನು ನಮ್ಮ ಮೊಬೈಲ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬೇಕಾಗಿದೆ.
ಆ್ಯಪ್ ಡೌನ್ಲೋಡ್ ಮಾಡಿ ಅದರಲ್ಲಿರುವ ಅಪ್ಲಿಕೇಶನ್ ಭರ್ತಿ ಮಾಡಿದ ಬಳಿಕ ನಾವು ಹಣ ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ 6 ಸಾವಿರದಿಂದ 5 ಲಕ್ಷದ ತನಕ ಹಣ ಹೂಡಿಕೆ ಮಾಡಬಹುದಾಗಿದೆ. ಹೀಗೆ ಹಣ ಹೂಡಿಕೆ ಮಾಡಿದ ಗ್ರಾಹಕರಿಗೆ ಆಪ್ನಲ್ಲಿ 10 ಕಂಪೆನಿಗಳನ್ನು ತೋರಿಸಲಾಗುತ್ತದೆ. ಪ್ರತಿದಿನ ಸಂಜೆ ಈ ಕಂಪೆನಿಗಳಲ್ಲಿ ಟ್ರೆಡಿಂಗ್ ಮಾಡುವ ವ್ಯವಸ್ಥೆ ಇರುತ್ತದೆ. ಕೆಲವು ದಿನ ಎರಡು ಟ್ರೇಡಿಂಗ್ ಇದ್ದರೆ., ಇನ್ನುಳಿದ ದಿನ ಒಂದೇ ಟ್ರೇಡಿಂಗ್ ಇರುತ್ತದೆ. ಟ್ರೇಡಿಂಗ್ ಬಗ್ಗೆ ವಾಟ್ಸಪ್ ಗ್ರೂಪ್ಗಳಲ್ಲಿ ಮಾಹಿತಿ ಹಂಚಿಕೊಳ್ಳಲಾಗುತ್ತದೆ. ಇದಲ್ಲದೆ ನಾವು ಯಾವ ಕಂಪೆನಿಗೆ ಟ್ರೇಡಿಂಗ್ ಮಾಡಬೇಕು ಎನ್ನುವ ಬಗ್ಗೆಯೂ ನಮಗೆ ವಾಟ್ಸಪ್ ಗ್ರೂಪ್ನಲ್ಲಿ ಮಾಹಿತಿ ಬರುತ್ತದೆ.
ನಾವು 6 ಸಾವಿರ ಹಣ ಹೂಡಿಕೆ ಮಾಡಿದ ದಿನದಿಂದಲೇ ಟ್ರೇಡಿಂಗ್ ಆರಂಭವಾಗುತ್ತದೆ. ಹೊಸದಾಗಿ ಸೇರಿದ ಗ್ರಾಹಕರ ಟ್ರೇಡಿಂಗ್ ಸಿಗ್ನಲ್ ದರ ಶೇ.6, ಅತ್ಯಧಿಕ ವಹಿವಾಟು ಸಿಗ್ನಲ್ ದರ ಶೇ.10 ಆಗಿರುತ್ತದೆ.
ನಾವು ಒಬ್ಬ ವ್ಯಕ್ತಿಯನ್ನು 6 ಸಾವಿರ ಹಣ ಹೂಡಿಕೆ ಮಾಡಿ ಆಹ್ವಾನಿಸಿದಾಗ ನಮ್ಮ ಟ್ರೇಡಿಂಗ್ ಸಿಗ್ನಲ್ ದರ ಶೇ.7 ಆಗುತ್ತದೆ. 2 ಜನರನ್ನು ಸೇರಿಸಿದರೆ ಶೇ.8 ಹಾಗೇ ಹೆಚ್ಚುತ್ತಾ ಹೋಗುತ್ತದೆ. ನಾವು 8 ಜನರನ್ನು ಸೇರಿಸಿದಾಗ ನಮ್ಮ ಟ್ರೇಡಿಂಗ್ ಸಿಗ್ನಲ್ ದರ ಶೇ.10 ಆಗುತ್ತದೆ.
ಕಂಪೆನಿಯವರು ಜನರನ್ನು ನಂಬಿಸುವ ರೀತಿಯೇ ಹಣ ಹೂಡಿಕೆ ಮಾಡಿ ಟ್ರೇಡಿಂಗ್ ಮಾಡುತ್ತಾ ಹೋದಂತೆ ತನ್ನ ಚಾಣಾಕ್ಷತನವನ್ನು ತೋರಿಸುತ್ತಾ. ಹೆಚ್ಚೆಚ್ಚು ಹಣ ಪಡೆಯುತ್ತಾ ಜನರಿಗೆ ಮೋಸ ಮಾಡುತ್ತಾ ಹೋಗುತ್ತದೆ.
ಸ್ಮಾರ್ಟ್ ಯುಗದಲ್ಲಿ ನಾವು ಬಹಳಷ್ಟು ಎಚ್ಚರಿಕೆಯಿಂದ ಹೆಜ್ಜೆ ಇರಿಸಬೇಕಾದ ಅನಿವಾರ್ಯತೆ ಇದೆ. ಯಾವುದೇ ಆಮಿಷಗಳಿಗೆ ಬಲಿಯಾಗಬೇಡಿ ಅದರಲ್ಲೂ ಹಣದ ವಿಚಾರದಲ್ಲಿ ನಾವು ಬಹಳ ಜಾಗರೂಕತೆಯಿಂದ ವ್ಯವಹರಿಸಬೇಕಾಗಿದೆ
Posted by Vidyamaana on 2023-07-15 01:58:15 |
ಪುತ್ತೂರು: ವಿವೇಕಾನಂದ ಕಾನೂನು ಮಹಾವಿದ್ಯಾಲಯದಿಂದ ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣವು ಶನಿವಾರ ಜ.15ರಂದು ನಡೆಯಲಿದೆ. ಒಂದು ದಿನದ ಈ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕೊಚ್ಚಿಯ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ ನಿಕಟಪೂರ್ವ ಕುಲಪತಿ ಡಾ| ಕೆ. ಸಿ ಸನ್ನಿ ಉದ್ಘಾಟಿಸಲಿದ್ದು, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಈ ವಿಚಾರ ಸಂಕಿರಣದಲ್ಲಿ ಪುತ್ತೂರಿನ ಹಿರಿಯ ನ್ಯಾಯವಾದಿಗಳಾದ ಎಂ. ರಾಮ್ ಮೋಹನ್ ರಾವ್, ಹೈಕೋರ್ಟ್ ವಕೀಲ ಅರುಣ್ ಶ್ಯಾಮ್, ಹಿರಿಯ ಕಾನೂನು ಪ್ರಾಧ್ಯಾಪಕರಾದ ಡಾ. ಸಾಯಿರಾಂ ಭಟ್ ಹಾಗೂ ಡಾ| ಕೆ. ಆರ್. ಐತಾಳ್ ಏಕರೂಪ ನಾಗರಿಕ ಸಂಹಿತೆ ಕುರಿತಾದ ವಿವಿಧ ಗೋಷ್ಠಿಗಳನ್ನು ನಡೆಸಿಕೊಡಲಿದ್ದಾರೆ.
ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಕುರಿತಾಗಿ ಅಭಿಪ್ರಾಯಗಳನ್ನು ನೀಡಲು ಭಾರತದ ಕಾನೂನು ಆಯೋಗವು ಅವಕಾಶವನ್ನು ನೀಡಿರುತ್ತದೆ. ಈ ಹಿನ್ನಲೆಯಲ್ಲಿ ಸಮಾಜದ ಆಗುಹೋಗುಗಳಿಗೆ ಸದಾ ಸ್ಪಂದಿಸುತ್ತಿರುವ ಪುತ್ತೂರಿನ ವಿವೇಕಾನಂದ ಕಾನೂನು ಮಹಾವಿದ್ಯಾಲಯವು ಸಮಾಜದ ಪ್ರಜ್ಞಾವಂತ ನಾಗರಿಕರಿಗೆ ಭಾರತದಲ್ಲಿ ಸಮಾನ ನೀತಿ ಸಂಹಿತೆಯ ಕುರಿತು ಮಾಹಿತಿ ನೀಡುವ ಹಿನ್ನಲೆಯಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಅದರಲ್ಲಿ ಭಾಗವಹಿಸಿ, ಅಲ್ಲಿ ನಡೆಯಲಿರುವ ಚರ್ಚೆಯಲ್ಲಿ ನಾಗರಿಕರಿಗೆ ಅಮೂಲ್ಯ ಸಲಹೆಯನ್ನು ನೀಡಲು ಹಾಗೂ ತಮ್ಮಲ್ಲಿರುವ ಸಂದೇಹಗಳನ್ನು ಬಗೆಹರಿಸಿಕೊಳ್ಳುವ ಅವಕಾಶವಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
Posted by Vidyamaana on 2024-04-12 14:41:18 |
ಮೈಸೂರು: ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಗುರುಪಾದಸ್ವಾಮಿ ತಮ್ಮ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ಧ್ವಜ ನೀಡುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.