Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34
ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.
ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
Posted by Vidyamaana on 2023-12-04 16:58:53 |
ಚಾಮರಾಜನಗರ: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರ ಬಾವ ಮಹದೇವಯ್ಯ ಅವರ ಶವ ಪತ್ತೆಯಾಗಿದೆ.
ಇಂದು ಬೆಳಗ್ಗೆ ಅವರ ಕಾರು ಪತ್ತೆಯಾಗಿದ್ದು, ಅದರಲ್ಲಿ ರಕ್ತದ ಕಲೆಗಳು ಇರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಮಹದೇವಯ್ಯ ಅವರು ಕೊಲೆಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ತೀವ್ರ ಹುಡುಕಾಟ ನಡೆಸಿದ್ದರು. ಇದೀಗ ಚಾಮರಾಜನಗರದ ರಾಮಾಪುರದ ನಿರ್ಜನ ಪ್ರದೇಶವೊಂದರಲ್ಲಿ ಮಹದೇವಯ್ಯ ಅವರ ಶವ ಪತ್ತೆಯಾಗಿದೆ. ಡಿಸೆಂಬರ್ 1ರ ರಾತ್ರಿ ಮಹದೇವಯ್ಯ ಅವರು ಚನ್ನಪಟ್ಟಣ ತೋಟದ ಮನೆಯಲ್ಲಿದ್ದರು. ಮಧ್ಯರಾತ್ರಿ 12 ಗಂಟೆಗೆ ತೋಟದ ಮನೆಗೆ ನುಗ್ಗಿದ ಮೂವರು ಅಪರಿಚಿತರು, ಬಳಿಕ ಮನೆಯಲ್ಲಿ ಲಾಕರ್ ಓಪನ್ ಮಾಡಿಸಿ ಪತ್ರ ದುಡ್ಡು ಕೊಂಡೊಯ್ದಿರುವ ಶಂಕೆ ವ್ಯಕ್ತವಾಗಿತ್ತು.
Posted by Vidyamaana on 2023-10-02 18:58:07 |
ಕೊಚ್ಚಿ: ಕಾರೊಂದು ಪೆರಿಯಾರ್ ನದಿಗೆ ಬಿದ್ದು ಇಬ್ಬರು ವೈದ್ಯರು ಮೃತಪಟ್ಟಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ನಡೆದಿದೆ.
ಇದೇ ವೇಳೆ ಇನ್ನೂ ಮೂವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೃತರನ್ನು ಅದ್ವೈತ್ (29) ಮತ್ತು ಅಜ್ಮಲ್ (29) ಎಂದು ಗುರುತಿಸಲಾಗಿದೆ. ಇವರು ಖಾಸಗಿ ಆಸ್ಪತ್ರೆಯ ವೈದ್ಯರಾಗಿದ್ದರು.
ಡಾ.ಅದ್ವೈತ್ ಕಾರು ಚಾಲನೆ ಮಾಡುತ್ತಿದ್ದು, ಮೊಬೈಲ್ ನ ಗೂಗಲ್ ಮ್ಯಾಪ್ ಆನ್ ಮಾಡಿದ್ದರು ಎಂದು ಹೇಳಲಾಗುತ್ತಿದೆ.
ಗೋತುರುತ್ನಲ್ಲಿ ಭಾರೀ ಮಳೆಯಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಗೋಚರತೆ ಕೂಡ ತುಂಬಾ ಕಡಿಮೆ ಇತ್ತು. ಕಾರು ಚಲಾಯಿಸುತ್ತಿದ್ದ ಯುವಕ ಗೂಗಲ್ ಮ್ಯಾಪ್ ತೋರಿಸಿದ ಮಾರ್ಗದಲ್ಲಿ ಹೋಗುತ್ತಿದ್ದ. ಎಡ ತಿರುವಿನಲ್ಲಿ ಕಾರನ್ನು ತಿರುಗಿಸಬೇಕಾಗಿದ್ದರೂ ಆಕಸ್ಮಿಕವಾಗಿ ಮುಂದೆ ಹೋಗಿದ್ದರಿಂದ ಕಾರು ನದಿಗೆ ಬಿದ್ದಿದೆ.
Posted by Vidyamaana on 2023-06-14 08:48:13 |
ಪುತ್ತೂರು: ತವರು ಮನೆಗೆ ತೆರಳಿದ್ದ ಮಹಿಳೆಯೋರ್ವರು ಅಲ್ಲಿ ತನ್ನ ೧೧ ತಿಂಗಳ ಮಗುವನ್ನು ಬಿಟ್ಟು ಪುತ್ತೂರಿನಲ್ಲಿದ್ದ ತನ್ನ ಪ್ರಿಯತಮನನ್ನು ಸೇರಿಕೊಂಡಿದ್ದು ಆಕೆಯನ್ನು ಹುಡುಕಿಕೊಂಡು ಮನೆಯವರು ತಡ ರಾತ್ರಿ ಪುತ್ತೂರಿನ ಕೋಡಿಂಬಾಡಿಯಲ್ಲಿ ಹುಡುಕಾಟ ನಡೆಸಿದ್ದು ಆದರೆ ಅಲ್ಲಿಂದ ಅವರಿಬ್ಬರು ತಪ್ಪಿಸಿಕೊಂಡಿದ್ದು ಪೊಲೀಸರು ಹುಡುಕಾಟ ನಡೆಸಿದ ಘಟನೆ ಜೂ. ೧೩ ರಂದು ತಡ ರಾತ್ರಿ ನಡೆದಿದೆ.
ಹುಬ್ಬಳ್ಳಿಯ ಮಹಿಳೆಯೋರ್ವರು ಅದೇ ಊರಿನ ಯುವಕನೋರ್ವನನ್ನು ಪ್ರೀತಿಸುತ್ತಿದ್ದು ಆತ ಕೋಡಿಂಬಾಡಿ ಭಾಗದಲ್ಲಿ ತೋಟದಲ್ಲಿ ಕೂಲಿ ಕೆಲಸ ಮಾಡುತ್ತಿದ್ದಾನೆ ಎಂಬ ಮಾಹಿತಿ ಮನೆಯವರಿಗೆ ಮೊದಲೇ ಇತ್ತು. ತವರು ಮನೆಯಲ್ಲಿದ್ದ ಆಕೆ ದಿಡೀರನೆ ತನ್ನ ಮಗುವನ್ನು ತೊರೆದು ನಾಪತ್ತೆಯಾಗಿದ್ದಳು. ಫೋನ್ ಕರೆಯನ್ನು ಸ್ವೀಕರಿಸುತ್ತಿರಲಿಲ್ಲ. ಆಕೆ ತಪ್ಪಿಸಿಕೊಂಡು ಆತನ ಬಳಿಗೆ ಬಂದಿರಬಹುದು ಎಂದು ಭಾವಿಸಿ ಆಕೆಯ ತವರು ಮನೆಯವರು ಪುತ್ತೂರಿಗೆ ಬಂದಿದ್ದಾರೆ. ರಾತ್ರಿ ಸುಮಾರು ೧೧ ಗಂಟೆಯ ವೇಳೆ ಕೋಡಿಂಬಡಿಗೆ ಬಂದಿದ್ದಾರೆ. ಪರಿಚಯವಿಲ್ಲದ ಜನರು ವ್ಯಕ್ತಿಯೋರ್ವನನ್ನು ಹುಡುಕಾಟ ನಡೆಸುತ್ತಿದ್ದಾರೆ ಎಂಬ ವಿಚಾರ ತಿಳಿದ ಕೋಡಿಂಬಾಡಿ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರ್ ರವರು ಅವರಿಂದ ಮಾಹಿತಿ ಪಡೆದುಕೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಹಿತಿ ನೀಡಿದ ಕೆಲವೇ ನಿಮಿಷದಲ್ಲಿ ಸ್ಥಳಕ್ಕೆ ಪೊಲಿಸರು ಬಂದಿದ್ದು ಪೊಲೀಸರು ಅವರ ಜೊತೆ ಹುಡುಕಾಟ ಆರಂಭಿಸಿದ್ದಾರೆ. ಆದರೆ ಕೋಡಿಂಬಾಡಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಆತ ಅಲ್ಲಿಂದ ಪರಾರಿಯಾಗಿದ್ದ. ಹುಡುಕಾಟ ನಡೆಸಿದ ಅವರು ಕೊನೆಗೆ ಪುತ್ತೂರಿಗೆ ಬಂದು ನಗರ ಠಾಣೆಯಲ್ಲಿ ಸೇರಿಕೊಂಡಿದ್ದರು. ಬಳಿಕ ಪೊಲೀಸರು ಟವರ್ ಲೊಕೇಶನ್ ಪತ್ತೆ ಮಾಡಿದಾಗ ಅವರಿಬ್ಬರೂ ಸಿದ್ದಕಟ್ಟೆಯಲ್ಲಿರುವುದಾಗಿ ಮಾಹಿತಿ ಲಬ್ಯವಾಗಿದ್ದು ಸಿದ್ದಕಟ್ಟೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಗ್ರಾಪಂ ಸದಸ್ಯನ ಕಾಳಜಿಗೆ ಪ್ರಶಂಸೆ
ಪರವೂರಿಂದ ಮಗಳನ್ನು ಹುಡುಕಿಕೊಂಡು ಬಂದ ಕುಟುಂಬಸ್ಥರಿಗೆ ತಕ್ಷಣಕ್ಕೆ ನೆರವಿಗೆ ಸಿಕ್ಕಿದ್ದು ಕೋಡಿಂಬಾಡಿ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರ್. ತಡ ರಾತ್ರಿ ಯಾರೂ ಇಲ್ಲದ ವೇಳೆ ಊರು ಕೇರಿ ಗೊತ್ತಿಲ್ಲದ ಆ ಕುಟುಂಬಕ್ಕೆ ಗ್ರಾಪಂ ಸದಸ್ಯ ನೆರವಾಗಿದ್ದಾರೆ. ನಾಪತ್ತೆಯಾಗಿದ್ದ ಮಗಳನ್ನು ಹುಡುಕುವಲ್ಲಿ ಸಹಕಾರ ನೀಡಿದ್ದಲ್ಲದೆ ಪೊಲೀಸರನ್ನು ಕರೆಸಿ ಕುಟುಂಬಕ್ಕೆ ಸಂಪೂರ್ಣ ನೆರವು ನೀಡಿದ್ದು ಹುಬ್ಬಳ್ಳಿಯಿಂದ ಬಂದ ಕುಟುಂಬ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರ್ ಅವರ ಸಹಾಯಕ್ಕೆ ಅಭಿನಂದಿಸಿದ್ದಾರೆ.
ಉಚಿತ ಬಸ್ಸಿನಲ್ಲಿ ಬಂದಿದ್ದಳು
ಕೈಯಲ್ಲಿ ನಯಾ ಪೈಸೆ ಇಲ್ಲದಿದ್ದರೂ ಕೆಎಸ್ಆರ್ಟಿಸಿ ಬಸ್ಸಿನಲ್ಲಿ ಬಂದಿದ್ದ ಮಹಿಳೆ ಹುಬ್ಬಳ್ಳಿಯಿಂದ ಪುತ್ತೂರು ತನಕವೂ ಉಚಿತವಾಗಿಯೇ ಪ್ರಯಣ ಬೆಳೆಸಿದ್ದಳು ಎನ್ನಲಾಗಿದೆ. ಪುತ್ತೂರಿಗೆ ಬರಲು ಹಣ ಇಲ್ಲ ಎಂದು ಆಕೆ ಹೇಳಿದಾಗ ಬಸ್ಸು ಫ್ರೀ ಇದೆ ಬಾ ಎಂದು ಆತ ತಿಳಿಸಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ಆದರೆ ಆಕೆ ಅಷ್ಟು ಬೇಗ ನಮ್ಮ ಕಣ್ಣು ತಪ್ಪಿಸಿ ಬರುತ್ತಾಳೆ ಎಂದು ನಾವು ಗ್ರಹಿಸಿಯೇ ಇರಲಿಲ್ಲ ಎಂದು ಮಹಿಳೆಯ ತಾಯಿ ಕಣ್ಣೀರು ಹಾಕುತ್ತಿದ್ದರು.
Posted by Vidyamaana on 2023-08-02 23:19:34 |
ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/11 ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ದರ್ಬೆ ಫೀಡರ್ನಲ್ಲಿ ಆ.3ರಂದು ಗುರುವಾರ ಪೂರ್ವಾಹ್ನ ಗಂಟೆ 10:00 ರಿಂದ ಅಪರಾಹ್ನ 5:00 ರವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ, 110/33/11 ಕೆ.ವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಮೇಲೆ ತಿಳಿಸಿದ ಫೀಡರ್ನಿಂದ ವಿದ್ಯುತ್ ಸರಬರಾಜಾಗುವ ಪ್ರೈವೇಟ್ ಬಸ್ ಸ್ಟಾಂಡ್, ಕೆಎಸ್ಆರ್ಟಿಸಿ ಬಸ್ ಸ್ಟಾಂಡ್, ನೆಲ್ಲಿಕಟ್ಟೆ, ಎಳ್ಳುಡಿ ಮತ್ತು ಕಲ್ಲಾರೆ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
Posted by Vidyamaana on 2024-03-16 10:22:14 |
ಪುತ್ತೂರು: ಸಂಕಷ್ಟದಲ್ಲಿದ್ದ ರೈತರಿಗೆ ಸಂತೋಷದ ಸುದ್ದಿಯನ್ನು ರಾಜ್ಯ ಸರಕಾರ ನೀಡಿದ್ದು ರೈತರು ವಿವಿಧ ಸಹಕಾರಿ ಸಂಘಗಳಿಂದ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಬಡ್ಡಿಯನ್ನು ಮನ್ನಾ ಮಾಡಲು ಆದೇಶ ಹೊರಡಿಸಿದೆ, ದ ಕ ಮತ್ತು ಉಡುಪಿ ಜಿಲ್ಲೆಯ ರೈತರ ಸಂಕಷ್ಠಗಳ ಬಗ್ಗೆ ಕಳೆದ ವಿಧಾನಸಭಾ ಅಧಿವೇಶನದಲ್ಲಿ ಮಾತನಾಡಿದ್ದ ಪುತ್ತೂರಿನ ಶಾಶಕರಾದ ಅಶೋಕ್ ರೈಯರು ರೈತರ ಸಾಲದ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವಂತೆ ಆಗ್ರಹಿಸಿದ್ದರು. ಇದೀಗ ಸರಕಾರ ಬಡ್ಡಿ ಮನ್ನಾ ಮಾಡಿ ಆದೇಶ ಹೊರಡಿಸಿದೆ.
ರೈತರು ರಾಜ್ಯದ ಸಹಕಾರ ಸಂಘಗಳು ಅಂದರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದು ೨೦೨೩ ಡಿ.೩೧ ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಹಾಗೂ ದೀರ್ಘಾವಧಿ ಕೃಷಿ ಮತ್ತು ಕೃಷಿ ಸಂಬಂಧಿತ ಸಾಲಗಳ ಕಂತುಗಳ ಅಸಲನ್ನು ದಿನಾಂಕ:೨೯-೦೨-೨೦೨೪ ರೊಳಗೆ ಸಂಬಂಧಪಟ್ಟ ಪತ್ತಿನ ಸಹಕಾರ ಸಂಘ/ಬ್ಯಾಂಕುಗಳಿಗೆ ಪೂರ್ತಿಯಾಗಿ ಮರುಪಾವತಿಸಿದಲ್ಲಿ ಈ ಮೊತ್ತಕ್ಕೆ ಬಾಕಿಯಿರುವ ಬಡ್ಡಿಯನ್ನು ಮನ್ನಾ ಮಾಡಲು ಮತ್ತು ಈ ರೀತಿ ಮನ್ನಾ ಮಾಡಿದ ಬಡ್ಡಿ ಮೊಬಲಗನ್ನು ಸಹಕಾರ ಸಂಘಗಳಿಗೆ ಸರ್ಕಾರವು ಭರ್ತಿ ಮಾಡಲು ಕೆಲವು ಷರತ್ತಿಗೊಳಪಟ್ಟು ಮಂಜೂರಾತಿ ನೀಡಿ ಆದೇಶಿಸಲಾಗಿದೆ.
ಯೋಜನೆಯಲ್ಲಿ ಸಹಕಾರ ಸಂಘಗಳು ಸಲ್ಲಿಸಿದ ಮಾಹಿತಿಯನ್ವಯ ದಿನಾಂಕ:೨೯-೦೨-೨೦೨೪ ರವರೆಗೆ ೨೯,೪೫೬ ರೈತರು ರೂ.೨೮೧.೮೮ ಕೋಟಿಗಳ ಸುಸ್ತಿ ಸಾಲವನ್ನು ಮರುಪಾವತಿಸಿದ್ದು ಇದರ ಮೇಲೆ ಸರ್ಕಾರದ ಬಡ್ಡಿ ರೂ.೨೧೪.೫೫ ಕೋಟಿಗಳಾಗಿರುತ್ತದೆ.
ಬರಗಾಲ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರೈತರ ಅನುಕೂಲಕ್ಕಾಗಿ ಸುಸ್ತಿ ಸಾಲಗಳ ಬಡ್ಡಿ ಮನ್ನಾ ಯೋಜನೆಯಡಿ ಸುಸ್ತಿ ಸಾಲಗಳ ಮರುಪಾವತಿ ಅವಧಿಯನ್ನು ದಿನಾಂಕ: ೩೧-೦೩-೨೦೨೪ ರವರೆಗೆ ವಿಸ್ತರಿಸುವಂತೆ ನಿಬಂಧಕರು ಕೋರಿದ್ದು . ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಸರ್ಕಾರದ ಆದೇಶ ಸಂಖ್ಯೆ:ಸಿಒ ೨೯೧ ಸಿಎಲ್ಎಸ್ ೨೦೨೩, ದಿನಾಂಕ:೨೦-೦೧-೨೦೨೪ ರ ಆದೇಶದಲ್ಲಿ ಬಡ್ಡಿಮನ್ನಾ ಮಾಡುವ ಯೋಜನೆಯಲ್ಲಿ ಬಡ್ಡಿ ಮನ್ನಾ ಸೌಲಭ್ಯವನ್ನು ಪಡೆಯಲು ರಾಜ್ಯದ ರೈತರು ಸಹಕಾರ ಸಂಘಗಳು ಅಂದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು, ಲ್ಯಾಂಪ್ಸ್ ಸಹಕಾರ ಸಂಘಗಳು, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕುಗಳು ಮತ್ತು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕುಗಳಿಂದ ಸಾಲ ಪಡೆದು ದಿನಾಂಕ:೩೧-೧೨-೨೦೨೩ ಕ್ಕೆ ಸುಸ್ತಿಯಾಗಿರುವ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಸಂಬಂದಿತ ಸಾಲಗಳ ಕಂತುಗಳ ಅಸಲನ್ನು ಪಾವತಿಸಲು ನಿಗದಿಪಡಿಸಿದ್ದ ದಿನಾಂಕ:೨೯-೦೨-೨೦೨೪ನ್ನು ದಿನಾಂಕ:೩೧-೦೩-೨೦೨೪ ರವರೆಗೆ ವಿಸ್ತರಿಸಿ ಆದೇಶಿಸಿದೆ.