Posted by vidyamaana on 2023-06-29 12:19:28 |
ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.
ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು, ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು.
ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು. ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು.
ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು.
ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ ಮುಸ್ಲಿಂ ಮಗುವೊಂದು ಮೃತಪಟ್ಟಿದೆ.
ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.
Posted by Vidyamaana on 2024-01-31 20:32:27 |
ಬೆಂಗಳೂರು :ಇತ್ತೀಚೆಗೆ ನಮ್ಮೂರ ಹೋಟೆಲ್ನಲ್ಲಿ ನಿಂತಿದ್ದ ಯುವತಿಗೆ ಅಲ್ಲೇ ಇದ್ದ ಯುವಕನೋರ್ವ ಯುವತಿಯ ಹಿಂದಿನ ಭಾಗಕ್ಕೆ ಬೇಕಂತಲೇ ಟಚ್ ಮಾಡಿ ಕೀಟಲೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದ. ಈ ಕುರಿತು ಯುವತಿಯ ಪೋಷಕರು ನೀಡಿದ ದೂರಿಯನನ್ವಯ ವಿಜಯನಗರ ಪೊಲೀಸರು ಕೇಸು ದಾಖಲಿಸಿದ್ದು, ಇದೀಗ ಆರೋಪಿ ಚಂದನ್ ಎಂಬಾತನನ್ನು ಬಂಧಿಸಿದ್ದಾರೆ.
ಡಿ.30 ರಂದು ಸಂಜೆ 7.30ರ ಸುಮಾರಿಗೆ ಸ್ನೇಹಿತೆಯೊಂದಿಗೆ ನಮ್ಮೂರ ಹೋಟೆಲ್ಗೆ ತಿಂಡಿ ತಿನ್ನಲೆಂದು ಯುವತಿ ಬಂದಿದ್ದು, ಆಕೆಯನ್ನು ಕಂಡ ಯುವಕ ಬೇಕೆಂತಲೇ ಆಕೆಯ ಸೊಂಟದ ಹಿಂಭಾಗ ಮುಟ್ಟಿ ಅಸಭ್ಯವಾಗಿ ವರ್ತಿಸಿದ್ದ. ಕೂಡಲೇ ಯುವತಿ ತರಾಟೆ ತೆಗೆದುಕೊಂಡಾಗ ಅಲ್ಲಿಂದ ಓಡಿ ಹೋಗಿದ್ದ. ಈ ಘಟನೆ ಸಂಬಂಧ ವೀಡಿಯೋ ಜ.18 ರಂದು ವೈರಲ್ ಆಗಿತ್ತು. ಯುವತಿ ಪೋಷಕರು ಪೊಲೀಸರಿಗೆ ಈ ಕುರಿತು ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಕಾಮುಕ ಚಂದನ್ನನ್ನು ಬಂಧಿಸಿದ್ದಾರೆ.
ಗ್ಯಾಸ್ ಸಿಲಿಂಡರ್ ಡೆಲಿವರಿ ಕೆಲಸ ಮಾಡುವ ವೃತ್ತಿ ಮಾಡಿಕೊಂಡಿದ್ದ ಆರೋಪಿ ಚಂದನ್, ಹಂಪಿನಗರ ನಿವಾಸಿ. ಘಟನೆ ನಡೆದ ದಿನ ಸ್ನೇಹಿತರೊಂದಿಗೆ ಸಿನಿಮಾ ನೋಡಿಕೊಂಡು ಬಂದ ಚಂದನ್ ಭರ್ಜರಿ ಪಾರ್ಟಿ, ಕಂಠ ಪೂರ್ತಿ ಕುಡಿದು ಊಟಕ್ಕೆ ಎಂದು ವಿಜಯನಗರ ಹೋಟೆಲ್ಗೆ ಬಂದಿದ್ದ. ಊಟ ಮುಗಿಸಿ ಹೋಟೆಲ್ ಹೊರಗೆ ಚಂದನ್ ಗ್ಯಾಂಗ್ ಮಾತಾಡಿಕೊಂಡು ನಿಂತಿದ್ದರು.
ಈ ಸಂದರ್ಭದಲ್ಲಿ ಯುವತಿ ಅಲ್ಲಿಗೆ ಬಂದಿದ್ದಾಳೆ. ಇದನ್ನು ಕಂಡ ಸ್ನೇಹಿತನೋರ್ವ ಆಕೆಯನ್ನು ಮುಟ್ಟಿದರೆ ಐದು ಸಾವಿರ ಕೊಡುತ್ತೀನಿ ಎಂದು ಚಂದನ್ಗೆ ಹೇಳಿದ್ದಾನೆ. ಅಷ್ಟಕ್ಕೇ ಚಂದನ್ ಕುಡಿದ ಅಮಲಿನಲ್ಲಿ ಹಿಂಬದಿಯಿಂದ ಹೋಗಿ ಯುವತಿಗೆ ಮುಟ್ಟಿ ಅನುಚಿತವಾಗಿ ವರ್ತನೆ ಮಾಡಿ ಕಾಲ್ಕಿತ್ತಿದ್ದ. ನಂತರ ಯುವತಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದು, ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಇದೀಗ ಪೊಲೀಸರು ಆರೋಪಿ ಚಂದನ್ನನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.
Posted by Vidyamaana on 2023-12-01 08:57:16 |
ಚಿಕ್ಕಮಗಳೂರು: ಬ್ಯಾಂಕ್ ಸಿಬಂದಿಗಳೇ ಬ್ಯಾಂಕ್ಗೆ ದೋಖಾ ಮಾಡಿರುವ ಘಟನೆ ಚಿಕ್ಕಮಗಳೂರು ನಗರದ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಡೆದಿದೆ. ಸಂಬಂಧ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬ್ಯಾಂಕ್ ಸಿಬಂದಿಗಳು ಬ್ಯಾಂಕ್ನಲ್ಲಿ ಗ್ರಾಹಕರು ಇರಿಸಿದ್ದ ಚಿನ್ನ ಮತ್ತು ಎಫ್ಡಿ ಹಣವನ್ನು ದುರುಪಯೋಗಪಡಿಸಿಕೊಳ್ಳಲಾಗಿದ್ದು ನಕಲಿ ಚಿನ್ನದ ಮೇಲೆ ಲೋನ್ ಮಾಡಿ ಹಣ ದುರುಪಯೋಗಪಡಿಸಿಕೊಂಡಿದ್ದು ಇದರಿಂದ ಗ್ರಾಹಕರಲ್ಲಿ ಆತಂಕ ಮೂಡಿಸಿದೆ. ಗ್ರಾಹಕರು ಇರಿಸಿದ್ದ ಚಿನ್ನವನ್ನು ಮಾರಾಟ ಮಾಡಿ ಆ ಜಾಗದಲ್ಲಿ ನಕಲಿ ಚಿನ್ನವನ್ನು ಇರಿಸಲಾಗಿದೆ. ಹಾಗೂ ಎಫ್ಡಿ ಹಣವನ್ನು ಡ್ರಾ ಮಾಡಿಕೊಂಡು ಗ್ರಾಹಕರಿಗೆ ಬ್ಯಾಂಕ್ ಸಿಬಂದಿಗಳು ವಂಚಿಸಿದ್ದಾರೆ.
ಬೆಂಗಳೂರಿನ ಬ್ಯಾಂಕ್ ಅಧಿಕಾರಿಗಳು ಈ ಸಂಬಂಧ ಪರಿಶೀಲನೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದ್ದು, ಗ್ರಾಹಕರು ಬ್ಯಾಂಕ್ನಲ್ಲಿ ಇರಿಸಿದ್ದ ಚಿನ್ನವನ್ನು ಮಾರಾಟ ಮಾಡಿ ನಕಲಿ ಚಿನ್ನವನ್ನು ಆ ಜಾಗದಲ್ಲಿ ಇರಿಸಲಾಗಿದ್ದು, 141 ಚಿನ್ನದ ಪ್ಯಾಕೇಟ್ಗಳಲ್ಲಿ 140 ಪ್ಯಾಕೇಟ್ಗಳಲ್ಲಿ ನಕಲಿ ಚಿನ್ನವನ್ನು ಇರಿಸಿರು ವುದು ಪರಿಶೀಲನೆ ವೇಳೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿದು ಬಂದಿದೆ.
ಬ್ಯಾಂಕ್ ಸಿಬಂದಿಗಳು ಕೋಟ್ಯಂತರ ರೂ. ಬ್ಯಾಂಕ್ಗೆ ಮೋಸ ಮಾಡಿದ್ದು, ಈ ಪ್ರಕರಣ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಬ್ಯಾಂಕ್ ಸಿಬಂದಿಗಳಾದ ಶಾಖೆಯ ಮ್ಯಾನೇಜರ್ ಸಂದೀಪ್ ಕೊಲ್ಲೂರಿ, ಪ್ರಶಾಂತ್, ನಾರಾಯಣಸ್ವಾಮಿ, ಲಾವಣ್ಯ, ಶ್ವೇತಾ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ. ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಬೆಂಗಳೂರು ಮ್ಯಾನೇಜರ್ ದೂರು ನೀಡಿದ್ದು, ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದು, ತನಿಖೆಯಿಂದ ಇನಷ್ಟು ಮಾಹಿತಿ ಬಹಿರಂಗಗೊಳ್ಳಬೇಕಿದೆ.
Posted by Vidyamaana on 2023-07-15 13:21:24 |
ಪುತ್ತೂರು: ಬಪ್ಪಳಿಗೆಯಲ್ಲಿ ರಸ್ತೆ ಬದಿಯ ಅಪಾಯದ ಮರಗಳ ಗೆಲ್ಲುಗಳ ತೆರವು ಕಾರ್ಯಾಚರಣೆ ವೇಳೆ ಕ್ರೇನ್ ಬಕೇಟ್ ಕಡಿದು ಇಬ್ಬರು ಕಾರ್ಮಿಕರು ಗಾಯಗೊಂಡ ಘಟನೆ ಜು.15 ರಂದು ನಡೆದಿದೆ.ರಸ್ತೆ ಬದಿಯ ಅಪಾಯದ ಮರಗಳ ಗೆಲ್ಲುಗಳ ತೆರವು ಕಾರ್ಯಾಚರಣೆಯು ಬಪ್ಪಳಿಗೆ ಗೆಳೆಯರ ಬಳಗ ಮತ್ತು ಮೆಸ್ಕಾಂ ಜೊತೆ ಜಂಟಿ ಕಾರ್ಯಾಚರಣೆ ನಡೆಯುತ್ತಿತ್ತು. ಈ ವೇಳೆ ಕ್ರೇನ್ ಬಕೇಟ್ ಕಡಿದ ಪರಿಣಾಮ ಕ್ರೇನ್ ಬಕೇಟ್ ಸಮೇತ ಕಾರ್ಮಿಕರಿಬ್ಬರು ನೆಲಕ್ಕೆ ಅಪ್ಪಳಿಸಿದ ಪರಿಣಾಮ ಇಬ್ಬರು ಕಾರ್ಮಿಕರಿಗೆ ಗಾಯವಾಗಿದೆ. ಗಾಯಾಳುಗಳು ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
Posted by Vidyamaana on 2024-03-21 09:50:58 |
ಪುತ್ತೂರು: ಬಹುಭಾಷಾ ತಾರೆ ಪ್ರಿಯಾಮಣಿ ಅವರನ್ನು ಪುತ್ತೂರಿಗೆ ಕರೆಸಿಕೊಂಡು ಅದ್ದೂರಿಯಾಗಿ ಪುತ್ತೂರಿನ ಜನರ ಸೇವೆಗೆ ತೆರೆದುಕೊಂಡ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆಗೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿದರು.
ಉದ್ಘಾಟನೆ ಸಂದರ್ಭ ಅಧಿವೇಶನ ನಡೆಯುತ್ತಿದ್ದ ಕಾರಣ ಭಾಗವಹಿಸಲು ಅಸಾಧ್ಯವಾಗಿತ್ತು. ಆದ್ದರಿಂದ ಇದೀಗ ಮಳಿಗೆಗೆ ಭೇಟಿ ನೀಡಿದರು.
ವಜ್ರ ಮತ್ತು ಚಿನ್ನದ ಆಭರಣಗಳ ವಿವಿಧ ವಿನ್ಯಾಸಗಳನ್ನು ಕಂಡ ಶಾಸಕ ಅಶೋಕ್ ಕುಮಾರ್ ರೈ ಅವರು ಮಳಿಗೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬ್ರಾಂಚ್ ಮ್ಯಾನೇಜರ್ ಕೆ.ಎಸ್ ಮುಸ್ತಫಾ ಕಕ್ಕಿಂಜೆ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಹಮ್ರಾಝ್, ಪವನ್, ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
Posted by Vidyamaana on 2024-04-22 17:13:52 |
ಪುತ್ತೂರು: ಏ.23ರಂದು ಕಾಂಗ್ರೆಸ್ ನ ದಕ್ಷಿಣ ಕನ್ನಡ ಲೋಕಸಭಾ ಅಭ್ಯರ್ಥಿ ಪದ್ಮರಾಜ್ ಆರ್ ಪೂಜಾರಿ ಪರ ಪುತ್ತೂರಿನಲ್ಲಿ ನಡೆಸಲು ಉದ್ದೇಶಿಸಿದ್ದ ರೋಡ್ ಶೋ ಚುನಾವಣಾ ರ್ಯಾಲಿಯನ್ನು ಸಾರ್ವಜನಿಕರ ಹಿತದೃಷ್ಠಿಯಿಂದ ರದ್ದುಗೊಳಿಸಲಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರೋಡ್ ಶೋ ನಡೆಸುವುದರಿಂದ ಟ್ರಾಫಿಕ್ ಸಮಸ್ಯೆ ಉಂಟಾಗುತ್ತದೆ. ಇದರಿಂದ ವಾಹನಗಳಲ್ಲಿ ವಿವಿಧ ಕಡೆ ತೆರಳುವ ಜನರಿಗೆ ತೊಂದರೆಯಾಗಲಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ತೆರಳಲು ತೊಂದರೆಯಾಗಲಿದ್ದು, ದೈನಂದಿನ ವ್ಯವಹಾರಕ್ಕಾಗಿ ನಗರಕ್ಕೆ ಬರುವ ಜನಸಾಮಾನ್ಯರಿಗೂ ತೊಂದರೆಯಾಗಲಿದೆ ಎಂದು ಏ.23ರಂದು ನಡೆಸಲು ಉದ್ದೇಶಿಸಿದ್ದ ರೋಡ್ ಶೋ ಪ್ಯಾಲಿಯನ್ನು ರದ್ದುಗೊಳಿಸಲಾಗಿದೆ.
Posted by Vidyamaana on 2024-01-25 16:52:35 |
ಪುತ್ತೂರು: 31ನೇ ವರ್ಷದ ಹೊನಲು ಬೆಳಕಿನ ಪುತ್ತೂರು ಕೋಟಿ-ಚೆನ್ನಯ ಜೋಡುಕರೆ ಕಂಬಳ ಜ.27 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ದೇವರಮಾರು ಗದ್ದೆಯಲ್ಲಿ ನಡೆಯಲಿದೆ ಎಂದು ಕಂಬಳ ಸಮಿತಿ ಅಧ್ಯಕ್ಷ ಎನ್. ಚಂದ್ರಹಾಸ ಶೆಟ್ಟಿ ತಿಳಿಸಿದ್ದಾರೆ.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದಿ.ಜಯಂತ ರೈ ಹಾಗೂ ದಿ.ಎನ್. ಮುತ್ತಪ್ಪ ರೈ ಅವರ ನೇತೃತ್ವದಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಗೌರವಾಧ್ಯಕ್ಷತೆಯಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಅವರ ಗೌರವ ಉಪಸ್ಥಿತಿಯಲ್ಲಿ ಕಳೆದ ಮೂವತ್ತು ವರ್ಷಗಳಿಂದ ನಡೆದುಕೊಂಡು ಬಂದಿರುವ ಪುತ್ತೂರು ಕೋಟಿ-ಚೆನ್ನಯ ಕಂಬಳಕ್ಕೆ ಭಾರೀ ಮಹತ್ವವಿದೆ. ಈ ಮೂಲಕ ಪುತ್ತೂರಿನ ಸಂಸ್ಕೃತಿ, ಘನತೆಯನ್ನು ಎತ್ತಿ ಹಿಡಿದಿದೆ ಎಂದು ಹೇಳಿದರು.
ಜ.27 ರಂದು ಬೆಳಿಗ್ಗೆ ಉದ್ಘಾಟನಾ ಸಮಾರಂಭವನ್ನು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಉದ್ಘಾಟಿಸಲಿದ್ದು, ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಕೆ.ಸೀತಾರಾಮ ರೈ ಸವಣೂರು ಸಮಾರಂಭದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಸಂತ ಫಿಲೋಮಿನಾ ಕಾಲೇಜು ಪ್ರಾಂಶುಪಾಲ ರೆ.ಫಾ.ಆಂಟನಿ ಪ್ರಕಾಶ್ ಮೊಂತೆರೋ, ಡಾ.ಸುರೇಶ್ ಪುತ್ತೂರಾಯ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ನಗರಸಭೆ ಪೌರಾಯುಕ್ತ ಮಧು ಎಸ್.ಮನೋಹರ್ ಸೇರಿದಂತೆ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಂಜೆ 6.00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಅಶೋಕ್ ಕುಮಾರ್ ರೈ ವಹಿಸಲಿದ್ದು, ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಉಪಸ್ಥಿತರಿರುವರು. ಮುಖ್ಯ ಅತಿಥಿಗಳಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್, ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಕೇಂದ್ರ ನಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಶಾಸಕರಾದ ಪ್ರದೀಪ್ ಈಶ್ವರ್, ಮಂಥರ್ ಗೌಡ, ಉಮಾನಾಥ ಕೋಟ್ಯಾನ್, ವೇದವ್ಯಾಸ ಕಾಮತ್, ರಾಜೇಶ್ ನಾಯ್ಡ್, ಭರತ್ ಶೆಟ್ಟಿ, ಹರೀಶ್ ಪೂಂಜಾ, ಭಾಗೀರಥಿ ಮುರುಳ್ಯ, ವಿಧಾನಪರಿಷತ್ ಸದಸ್ಯ ಹರೀಶ್ ಕುಮಾರತ್ತಿತರರು ರಾಜಕೀಯ ನೇತಾರರು, ಉದ್ಯಮಿಗಳು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ವಿಶೇಷ ಆಕರ್ಷಣೆಯಾಗಿ ನಾಯಕ ನಟರಾದ ಪ್ರಜ್ವಲ್ ದೇವರಾಜ್, ಕಾರ್ತಿಕ್ ಜಯರಾಮ್, ನಟಿಯರಾದ ಸೋನು ಗೌಡ, ನೇಹಾ ಗೌಡ, ನಟರಾದ ಗುರುನಂದನ್, ಅರವಿಂದ ಬೋಳಾರ್, ಅರ್ಜುನ್ ಕಾಪಿಕಾಡ್, ರೂಪೇಶ್ ಶೆಟ್ಟಿ, ಚಂದನ್ ಗೌಡ ಪಾಲ್ಗೊಳ್ಳಲಿದ್ದಾರೆ. ಸಮಾರಂಭದಲ್ಲಿ ಮಾಣಿಸಾಗು ಉಮೇಶ್ ಶೆಟ್ಟಿ (ಕಂಬಳ), ಕೇಶವ ಗೌಡ (ಉದ್ಯಮ), ರವೀಂದ್ರ ಶೆಟ್ಟಿ ನುಳಿಯಾಲು (ಧಾರ್ಮಿಕ), ದೀಪಕ್ ರೈ ಪಾಣಾಜೆ (ನಟ), ಜೈಗುರು ಆಚಾರ್ ಹಿಂದಾರ್ (ಹೈನುಗಾರಿಕೆ), ಕಡಬ ಶ್ರೀನಿವಾಸ ರೈ (ಯಕ್ಷಗಾನ) ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಜ.28 ರಂದು ಬೆಳಿಗ್ಗೆ 11 ಗಂಟೆಗೆ ನಡೆಯುವ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಹಲವಾರು ಗಣ್ಯರು ಪಾಲ್ಗೊಳ್ಳಲಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಸಂಚಾಲಕ ವಸಂತ ಕುಮಾರ್ ರೈ, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ, ಪ್ರಧಾನ ಕಾರ್ಯದರ್ಶಿ ದಿನೇಶ್ ಕುಲಾಲ್ ಪಿ.ವಿ., ಉಪಾಧ್ಯಕ್ಷ ನಿರಂಜನ ರೈ ಮಠಂತಬೆಟ್ಟು ಉಪಸ್ಥಿತರಿದ್ದರು.