Posted by vidyamaana on 2023-09-23 20:22:34 | Last Updated by Vidyamaana on 2023-09-23 20:22:34
ಪುತ್ತೂರು: ಮಧ್ಯಾಹ್ನ ಕೆಯ್ಯೂರಿನಲ್ಲಿ ನಡೆದ ಕಾರು ಅಪಘಾತದಲ್ಲಿ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಯುಕೆಜಿ ವಿದ್ಯಾರ್ಥಿ,ನುಸ್ರತುಲ್ ಇಸ್ಲಾಂ ಮದ್ರಸದ 1ನೇ ತರಗತಿ ವಿದ್ಯಾರ್ಥಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಮೃತನನ್ನು 5 ವರ್ಷ ಪ್ರಾಯದ ಮುಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ. ಕೆಯ್ಯೂರು ನಿವಾಸಿ ಹಾರೀಸ್ ದಾರಿಮಿ ಅವರ ಪುತ್ರ.
ಪುತ್ತೂರು ಕಡೆ ಬರುತ್ತಿದ್ದ ಈಕೋ ಕಾರು ಬಾಲಕನಿಗೆ ಢಿಕ್ಕಿ ಹೊಡೆದಿದ್ದು, ಬಾಲಕ ಗಂಭೀರ ಗಾಯಗೊಂಡಿದ್ದ. ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಂಜೆ ವೇಳೆ ಮೃತಪಟ್ಟ ಬಗ್ಗೆ ವರದಿಯಾಗಿದೆ.
Posted by Vidyamaana on 2024-06-24 14:11:13 |
ಪ್ರಮಾಣ ವಚನ ಸ್ವೀಕರಿಸಿ ಸಿದ್ದರಾಮಯ್ಯ ಕಾಲಿಗೆ ನಮಸ್ಕರಿಸಿದ ಸಿಟಿ ರವಿ, ಕಿವಿ ಹಿಂಡಿ ಅಭಿನಂದಿಸಿದ ಸಿಎಂ!
ಬೆಂಗಳೂರು : ಕರ್ನಾಟಕದ ವಿಧಾನ ಪರಿಷತ್ಗೆ ನೂತನವಾಗಿ ಆಯ್ಕೆಯಾಗಿ ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಇಂದು ವಿಧಾನಸೌಧಧ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯಿತು. ನೂತನ ಪರಿಷತ್ ಸದಸ್ಯರಿಗೆ ಸಭಾಪತಿ ಬಸವರಾಜ್ ಹೊರಟ್ಟಿ (Basavaraj Horatti) ಪ್ರಮಾಣ ವಚನ (MLC Oath Ceremony) ಬೋಧಿಸಿದರು
ವಿಧಾನಸಭೆ, ಶಿಕ್ಷಕರ ಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ನೂತನ 17 ವಿಧಾನ ಪರಿಷತ್ ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮದಲ್ಲಿ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಸಿಎಂ ಸಿದ್ದರಾಮಯ್ಯ, ಕಾನೂನು ಹಾಗೂ ಸಂಸದೀಯ ಸಚಿವ ಎಚ್ಕೆ ಪಾಟೀಲ್ ಸೇರಿ ಹಲವರು ಭಾಗಿಯಾದರು. ಇದರೊಂದಿಗೆ ವಿಧಾನಸಭೆಯಿಂದ ವಿಧಾನ ಪರಿಷತ್ಗೆ ಆಯ್ಕೆಯಾಗಿರುವ 11 ಸದಸ್ಯರ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮವೂ ನಡೆಯಿತು.
Posted by Vidyamaana on 2023-10-22 07:33:09 |
ಮಂಗಳೂರು: ಫೈನಾನ್ಸ್ ಮತ್ತು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿಯೊಬ್ಬರು ಸಸಿಹಿತ್ಲು ಭಗವತಿ ದೇವಸ್ಥಾನದ ಬಳಿ ಸಂಶಯಾಸ್ಪದ ರೀತಿಯಲ್ಲಿ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ನಡೆದಿದ್ದು ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೈನಾನ್ಸ್, ಬಡ್ಡಿ ವ್ಯವಹಾರ, ರಿಯಲ್ ಎಸ್ಟೇಟ್ ಉದ್ಯಮ ಮಾಡಿಕೊಂಡಿದ್ದ ಸಸಿಹಿತ್ಲು ನಿವಾಸಿ ಸಚಿನ್ ಕುಕ್ಯಾನ್ (40) ಮೃತ ವ್ಯಕ್ತಿ. ಅ.19ರಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಅಂದು ಮಧ್ಯಾಹ್ನ ಸಚಿನ್ ಕುಟುಂಬದ ಹೆಸರಲ್ಲಿ ಸಸಿಹಿತ್ಲು ಭಗವತಿ ದೇವಸ್ಥಾನದಲ್ಲಿ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು. ಊಟದ ಬಳಿಕ ಸಚಿನ್ ಅವರು ತನ್ನ ಪತ್ನಿಯನ್ನು ಮನೆಗೆ ಕರೆದೊಯ್ದು ಬಿಟ್ಟು ಬಂದಿದ್ದರು. ಬಳಿಕ ಕುದ್ರೋಳಿ ದೇವಸ್ಥಾನಕ್ಕೆಂದು ಹೊರಡಲು ತಯಾರಿ ನಡೆಸುತ್ತಿದ್ದರು.
ಎರಡು ಗಂಟೆ ವೇಳೆಗೆ ಮನೆಯಿಂದ ಸ್ವಲ್ಪ ದೂರದಲ್ಲಿ ನಿಲ್ಲಿಸಿದ್ದ ಕಾರಿನತ್ತ ಬಂದಿದ್ದು ಅಲ್ಲಿ ಫೋನಲ್ಲಿ ಮಾತನಾಡುತ್ತಿದ್ದಾಗಲೇ ದಿಢೀರ್ ಆಗಿ ಕುಸಿದು ಬಿದ್ದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಹಣೆಗೆ ಗಾಯಗೊಂಡಿದ್ದ ರೀತಿಯಲ್ಲಿ ಸಚಿನ್ ಪತ್ತೆಯಾಗಿದ್ದರು. ಕೂಡಲೇ ಸ್ಥಳೀಯರು ಮುಕ್ಕ ಶ್ರೀನಿವಾಸ್ ಆಸ್ಪತ್ರೆಗೆ ಕರೆತಂದಿದ್ದು ಅಷ್ಟರಲ್ಲಿ ಸಾವು ಕಂಡಿದ್ದರು. ಹಣೆಗೆ ಗಾಯಗೊಂಡ ರೀತಿ ಕಂಡುಬಂದಿದ್ದರಿಂದ ಯಾರೋ ಹೊಡೆದು ಹೋಗಿರಬೇಕೆಂದು ಶಂಕೆ ವ್ಯಕ್ತವಾಗಿದ್ದು ಸಾವಿನ ಬಗ್ಗೆ ಸಂಶಯಿಸಿ ಮನೆಯವರು ಪೊಲೀಸ್ ದೂರು ನೀಡಿದ್ದಾರೆ.
ಪೊಲೀಸರು ಸ್ಥಳದಲ್ಲಿ ಆಸುಪಾಸಿನ ಸಿಸಿಟಿವಿ ಪರಿಶೀಲನೆ ನಡೆಸಿದ್ದು ಅಂತಹ ಕೃತ್ಯದ ಸುಳಿವು ಸಿಕ್ಕಿಲ್ಲ ಎನ್ನುತ್ತಿದ್ದಾರೆ. ಹಣೆಗೆ ಗಾಯವಾಗಿದ್ದು ಹೌದು. ಹೃದಯಾಘಾತದಿಂದ ಕುಸಿದು ಬಿದ್ದು ರಸ್ತೆಯ ಕಾಂಕ್ರೀಟ್ ತಾಗಿ ಗಾಯವಾಗಿರುವ ಸಾಧ್ಯತೆಯಿದೆ. ಪೋಸ್ಟ್ ಮಾರ್ಟಂ ವರದಿಗೆ ಕಾಯುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಆದರೆ ಸ್ಥಳೀಯರು ಸಾವಿನ ಬಗ್ಗೆ ಸಂಶಯಿಸಿದ್ದು ಅದೇ ವೇಳೆಗೆ ಯಾವುದೋ ಸ್ವಿಫ್ಟ್ ಕಾರು ಬಂದಿತ್ತು. ನಾಲ್ಕು ನಿಮಿಷದಲ್ಲಿ ಘಟನೆ ನಡೆದು ಹೋಗಿತ್ತು. ಅದರ ಬೆನ್ನಲ್ಲೇ ಬಸ್ ಬಂದಿದ್ದು ಬಸ್ ಸಿಬಂದಿಯೇ ಸಚಿನ್ ಕುಸಿದು ಬಿದ್ದಿರುವುದನ್ನು ತಿಳಿಸಿದ್ದರು ಎನ್ನುತ್ತಾರೆ, ಸ್ಥಳೀಯರು. ಸಚಿನ್ ಹಿಂದು ಸಂಘಟನೆಯಲ್ಲಿ ಗುರುತಿಸಿದ್ದು ಅಂತ್ಯಕ್ರಿಯೆ ಸಂದರ್ಭದಲ್ಲಿ ಸಾಕಷ್ಟು ಜನ ಸೇರಿದ್ದರು. ಸ್ಥಳೀಯವಾಗಿ ಎಲ್ಲರಿಗೂ ಬೇಕಾದ ವ್ಯಕ್ತಿಯಾಗಿದ್ದರು.
Posted by Vidyamaana on 2024-03-13 07:28:48 |
ಮೈಸೂರು, ಮಾ 13: ಯದುವೀರ್ ಟಿಕೆಟ್ ಕೊಡುವುದು ನಿಜವಾದದರೆ ಅದನ್ನು ಸ್ವಾಗತಿಸುತ್ತೇನೆ. ಕಾರ್ಯಕರ್ತನಾಗಿ ಅವರ ಪರ ಕೆಲಸ ಮಾಡುತ್ತೇನೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಮನೆಯ ಎಸಿ ರೂಂನಲ್ಲಿ ರಾಜನಾಗಿ ಇರುವ ಬದಲು ಪ್ರಜೆಗಳ ರೀತಿ ಬದುಕುಲು ಯದುವೀರ್ ಬಂದರೆ ಸ್ವಾಗತಿಸದೆ ಇರುವುದಕ್ಕೆ ಆಗುತ್ತಾ?. ರಾಜ – ಪ್ರಜೆ ನಡುವೆ ವ್ಯತ್ಯಾಸ ತೆಗೆದು ರಾಜರೇ ಪ್ರಜೆಗಳ ಜೊತೆ ಇರಲು ಬಂದರೆ ನನ್ನ ಸ್ವಾಗತ. ಅರಮನೆ ಆಸ್ತಿ ವಿಚಾರದಲ್ಲಿ ಸರ್ಕಾರದ ನಡುವೆ ವ್ಯಾಜ್ಯಗಳಿವೆ. ಅದರಲ್ಲಿ ಬಹುತೇಕ ಆಸ್ತಿಗಳು ಸಾರ್ವಜನಿಕರ ಬಳಕೆಯಲ್ಲಿವೆ. ಯದುವೀರ್ ಜನಪ್ರತಿನಿಧಿ ಆಗಿ ಅದನ್ನೆಲ್ಲಾ ಜನರಿಗೆ ಬಿಟ್ಟು ಕೊಡಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಹೋರಾಡಲು ರಾಜರು ಬೀದಿಗೆ ಬಂದ್ರೆ ಸಂತೋಷ:
ಚಾಮುಂಡಿ ಬೆಟ್ಟದ ಮೇಲಿನ ಅರಮನೆ ಆವರಣದ ಒಳಗೆ ಪೈಪ್ ಲೈನ್ ಹಾಕಲು ಅರಮನೆ ವಿರೋಧಿಸಿದೆ. ಯದುವೀರ್ ಜನಪ್ರತಿನಿಧಿ ಆದರೆ ಆ ಸಮಸ್ಯೆ ಬಗೆಹರಿಯುತ್ತೆ. ಶ್ರೀ ರಾಜೇಂದ್ರ ಸ್ವಾಮೀಜಿ ಪ್ರತಿಮೆ ವಿಚಾರದಲ್ಲಿ ಅರಮನೆಯವರ ನ್ಯಾಯಾಲಯಕ್ಕೆ ಹೋಗಿದ್ದಾರೆ. ಯದುವೀರ್ ಈ ಸಮಸ್ಯೆ ಬಗೆಹರಿಸಿ ರಾಜೇಂದ್ರ ಶ್ರೀಗಳ ಪ್ರತಿಮೆ ಅನಾವರಣ ಮಾಡುತ್ತಾರೆ. ಅರಮನೆ ಒಳಗೆ ಆರಾಮಾಗಿ ಇದ್ದಂತ ವ್ಯಕ್ತಿ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡಲು ಬೀದಿಗೆ ಬಂದರೆ ನಮಗೆ ಸಂತೋಷ ಎಂದು ಹೇಳಿದರು.
ಮುಖಂಡರಿಗೆ ಸಿಂಹ ಧನ್ಯವಾದ:
ಅರಮನೆ ವೈಭೋಗ ಬೇಕಾಗಿಲ್ಲ. ಜನರ ಜೊತೆ ಹೋರಾಟಕ್ಕೆ ಬರ್ತಿನಿ ಅಂತಾ ಹೊರಟಿದ್ದಾರೆ, ಅದಕ್ಕೆ ಸ್ವಾಗತ. ಪೊಲೀಸ್ ಠಾಣೆಗೆ ಬಂದು ನಮ್ಮ ಕಾರ್ಯಕರ್ತರ ಸಮಸ್ಯೆ ಬಗೆಹರಿಸಲು ರಾಜರು ಬಂದರೆ ಸಂತೋಷ ಅಲ್ವಾ?. ಸುಖದ ಸುಪತ್ತಿಗೆಯಲ್ಲಿ ಇದ್ದ ನಮ್ಮ ಮಹಾರಾಜರನ್ನು ಮನವೊಲಿಸಿ ರಾಜಕೀಯಕ್ಕೆ ತಂದ ನಮ್ಮ ಮುಖಂಡರಿಗೆ ಧನ್ಯವಾದ ಎಂದು ಸಿಂಹ ತಿಳಿಸಿದರು.
ನನಗೆ ಈ ಕ್ಷಣಕ್ಕೂ ವಿಶ್ವಾಸವಿದೆ. ಸಂಘಟನೆ, ಸಿದ್ದಾಂತಕ್ಕೆ ಗಟ್ಟಿಯಾಗಿ ನಿಂತಿರುವ ನನಗೆ ಟಿಕೆಟ್ ಸಿಗುತ್ತದೆ. 25 ಸಂಸದರಲ್ಲಿ ನನ್ನಷ್ಟು ಹಿಂದೂತ್ವದ ಕಮಿಟ್ ಮೆಂಟ್ ಇರುವ ಮತ್ಯಾರು ಇದ್ದಾರೆ? ಹಿಂದೂತ್ವದ ವಿಚಾರದಲ್ಲಿ ನನ್ನನ್ನು ಯಾರಿಗೂ ಮ್ಯಾಚ್ ಮಾಡಲು ಯಾರು ಆಗಲ್ಲ ಎಂದರು.
ಬ್ಯಾನರ್, ಬಂಟಿಂಗ್ ಕಟ್ಟಲೂ ಸಿದ್ಧ:
ಮೋದಿ ಅವರ ಬಗ್ಗೆ ಸಿದ್ದರಾಮಯ್ಯ ಬಾಯಿಗೆ ಬಂದ ರೀತಿ ಟೀಕಿಸಿದ್ದಾಗ ಸಿದ್ದರಾಮಯ್ಯ ಮಾತನ್ನು ದೊಡ್ಡ ಮಟ್ಟದಲ್ಲಿ ಖಂಡಿಸುವ ವ್ಯಕ್ತಿ ಈ ಪ್ರತಾಪ್ ಸಿಂಹ. ಇದು ನನ್ನ ದೌರ್ಬಲ್ಯವಾ?. ಮೈಸೂರು – ಕೊಡಗು ಅಭಿವೃದ್ಧಿ ಗೆ ಅತಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡಿದ್ದು ನನ್ನ ದೌರ್ಬಲ್ಯವಾ?. ನನಗೆ ಪಕ್ಷ ನಿಷ್ಠೆ ನನಗೆ ಇದೆ. ಬ್ಯಾನರ್, ಬಂಟಿಂಗ್ ಕಟ್ಟಲು ನಾನು ಸಿದ್ದ. ನನಗಾಗಿ ಪಕ್ಷ, ಕಾರ್ಯಕರ್ತರು ದುಡಿದಿದ್ದಾರೆ. ನಾನು ಮುಂದೆ ಅವರಂತೆಯೆ ದುಡಿಯುತ್ತೇನೆ ಎಂದು ಪ್ರತಾಪ್ ಸಿಂಹ ಹೇಳಿದರು.
Posted by Vidyamaana on 2024-03-06 04:53:57 |
ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಲವಾರು ವಿಡಿಯೋಗಳು ಹರದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ವಿಡಿಯೋಗಳು ನಮ್ಮನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತವೆ. ಸದ್ಯ ಅಂತಹದೊಂದು ವಿಡಿಯೋ ವೈರಲ್ ಆಗಿದ್ದು, ನರೇಂದ್ರ ಮೋದಿ ಯಾರು ಎಂದು ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಗಳು ಕೊಟ್ಟಂತಹ ಉತ್ತರ ಹೇಗಿತ್ತು ಎಂಬುದನ್ನು ನೀವು ಒಮ್ಮೆ ನೋಡಿ
ಸೋಷಿಯಲ್ ಮೀಡಿಯಾದಲ್ಲಿ ಪ್ರತಿನಿತ್ಯ ವಿವಿಧ ರೀತಿಯ ವಿಡಿಯೋಗಳು ಹರಿದಾಡುತ್ತಿರುತ್ತವೆ. ಅದರಲ್ಲಿ ಕೆಲವೊಂದು ವಿಡಿಯೋಗಳು ಭಾವನಾತ್ಮಕವಾಗಿದ್ದರೆ, ಕೆಲವು ವಿಡಿಯೋಗಳು ನಮಗೆಲ್ಲರಿಗೂ ಜೀವನ ಪಾಠವನ್ನು ಕಲಿಸುವಂತಿರುತ್ತದೆ. ಇನ್ನೂ ಹಲವು ಹಾಸ್ಯಮಯ ವಿಡಿಯೋಗಳು ಹರಿದಾಡುತ್ತಿರುತ್ತವೆ.
ಇಂತಹ ದೃಶ್ಯಗಳಂತೂ ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತವೆ. ಸದ್ಯ ಅಂತಹದೊಂದು ವಿಡಿಯೋ ವೈರಲ್ ಆಗಿದ್ದು, ಪ್ರಧಾನಿ ಮೋದಿ ಯಾರು ಎಂದು ಪತ್ರಕರ್ತೆ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿಗಳು ಕೊಟ್ಟಂತಹ ಉತ್ತರವನ್ನು ನೋಡಿ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಖಾಸಗಿ ನ್ಯೂಸ್ ಚಾನೆಲ್ ಒಂದರ ರಿಪೋರ್ಟರ್ ಒಬ್ಬರು ಶಾಲಾ ವಿದ್ಯಾರ್ಥಿಗಳ ಬಳಿ ಜನರಲ್ ನಾಲೆಜ್ ಪ್ರಶ್ನೆಗಳನ್ನು ಕೇಳುತ್ತಿರುವ ದೃಶ್ಯವನ್ನು ಕಾಣಬಹುದು. ವೈರಲ್ ಆಗುತ್ತಿರುವ ಈ ವಿಡಿಯೋವನ್ನು @psyco_rider_143 ಎಂಬ ಹೆಸರಿನ ಇನ್ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿ ಪತ್ರಕರ್ತೆಯೊಬ್ಬರು ಶಾಲಾ ವಿದ್ಯಾರ್ಥಿಗಳ ಬಳಿ ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತಿರುವ ದೃಶ್ಯವನ್ನು ನೋಡಬಹುದು. ಮೊದಲಿಗೆ ಆ ಪತ್ರಕರ್ತೆ ವಿದ್ಯಾರ್ಥಿಯೊರ್ವನ ಬಳಿ ಲಾಲು ಪ್ರಸಾದ್ ಯಾದವ್ ಯಾರು ಗೊತ್ತಾ? ಎಂಬ ಪ್ರಶ್ನೆಯನ್ನು ಕೇಳುತ್ತಾರೆ, ಅದಕ್ಕೆ ಆ ಬಾಲಕ ಹಾ.. ಗೊತ್ತಿದೆ ಅನ್ನೋ ಉತ್ತರವನ್ನು ನೀಡುತ್ತಾನೆ. ಬಳಿಕ ಪತ್ರಕರ್ತೆ ಹಾಗಾದ್ರೆ ಅವರು ಯಾರು ಎಂದು ಹೇಳಬಹುದೇ ಎಂದು ಪ್ರಶ್ನೆ ಕೇಳುತ್ತಾರೆ. ಈ ಪ್ರಶ್ನೆಗೆ ಹೇಗೆ ಉತ್ತರಿಸುವುದು ಎಂದು ತಿಳಿಯದ ಆ ವಿದ್ಯಾರ್ಥಿ ನಗುತ್ತಾ, ನಾಚಿಕೆಯಿಂದ ಅಲ್ಲಿಂದ ಹೋಗಿಯೇ ಬಿಡುತ್ತಾನೆ.
ನಂತರ ರಿಪೋರ್ಟರ್ ವಿದ್ಯಾರ್ಥಿನಿಯೊಬ್ಬಳ ಬಳಿ ನರೇಂದ್ರ ಮೋದಿ ಯಾರು ಎಂಬ ಪ್ರಶ್ನೆಯನ್ನು ಕೇಳುತ್ತಾರೆ, ಅದಕ್ಕೆ ಆ ವಿದ್ಯಾರ್ಥಿನಿ ಬಹಳ ಆತ್ಮವಿಶ್ವಾಸದಿಂದ ಬಿಹಾರದ ಪ್ರಧಾನ ಮಂತ್ರಿ ಎಂದು ಥಟ್ಟನೆ ಉತ್ತರಿಸುತ್ತಾಳೆ. ತಾನು ತಪ್ಪು ಉತ್ತರ ನೀಡಿದ್ದೇನೆ ಎಂದು ಅರಿತ ಆ ಬಾಲಕಿ ತಕ್ಷಣವೇ ಅವರು ಭಾರತದ ಪ್ರಧಾನ ಮಂತ್ರಿ ಎಂಬ ಉತ್ತರವನ್ನು ನೀಡುತ್ತಾಳೆ. ವಿದ್ಯಾರ್ಥಿನಿಯ ಉತ್ತರವನ್ನು ಕಂಡು ನೋಡುಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 70 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ʼಒಬ್ಬ ಬಳಕೆದಾರರು ಪಾಪ ಆ ಹುಡುಗಿ ಸ್ವಲ್ಪ ನರ್ವಸ್ ಆಗಿ ಮೊದಲಿಗೆ ತಪ್ಪು ಉತ್ತರವನ್ನು ನೀಡಿದ್ದಾಳೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಬಿಹಾರದ ಶಿಕ್ಷಣ ಉತ್ತಮ ಗುಣಮಟ್ಟದ್ದಾಗಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ವಿದ್ಯಾರ್ಥಿಗಳ ಉತ್ತರವನ್ನು ಕೇಳಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ
Posted by Vidyamaana on 2023-05-15 13:48:30 |
ಪುತ್ತೂರು : ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡರ ವಿರುದ್ಧ ಅವಹೇಳನಕಾರಿ ಬರಹದೊಂದಿಗೆ ಭಾವಚಿತ್ರ ಲಗತ್ತಿಸಿ ಬ್ಯಾನರ್ ಅಳವಡಿಸಿದ ಪುತ್ತೂರು ಬಸ್ಸು ನಿಲ್ದಾಣದ ಬಳಿ ಪ್ರಕರಣದಲ್ಲಿ ಇಬ್ಬರನ್ನು ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನರಿಮೊಗರು ಗ್ರಾಮದ ಸಹೋದರರಾದ ವಿಶ್ವನಾಥ್ ಹಾಗೂ ಮಾಧವ ಪೊಲೀಸ್ ವಶದಲ್ಲಿರುವವರು. ಪುತ್ತೂರು ಕೆ.ಎಸ್ಆರ್.ಟಿಸಿ ಬಸ್ಸು ನಿಲ್ದಾಣದ ಎದುರು ಅರಣ್ಯ ಇಲಾಖೆಯ ಆವರಣ ಗೋಡೆ ಬಳಿ ಅವಹೇಳನಕಾರಿ ಬ್ಯಾನರ್ ಅಳವಡಿಸಲಾಗಿತ್ತು.
ಪುತ್ತೂರು ನಗರಸಭಾ ಆಯುಕ್ತ ಮಧು ಎಸ್ ಮನೋಹರ್ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದರಲ್ಲಿ “ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರಧ್ಧಾಂಜಲಿ “ ಎಂದು ನಳಿನ್ ಕುಮಾರ್ ಕಟೀಲು ಹಾಗೂ ಡಿ.ವಿ ಸದಾನಂದ ಗೌಡ ಎಂದು ಬರೆಯಲಾಗಿತ್ತು. ಆ ಬ್ಯಾನರ್ ಗೆ ಚಪ್ಪಲಿ ಹಾರವನ್ನು ಹಾಕಿರುವ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಲಾಗಿತ್ತು.
Posted by Vidyamaana on 2023-08-05 02:19:07 |
ಪುತ್ತೂರು:ಸುಮಾರು ಒಂದೂವರೆ ವರ್ಷದಿಂದ ಪುತ್ತೂರು ಎಪಿಎಂಸಿ ರಸ್ತೆಯ ಅಕ್ಷಯ ಕಾಂಪ್ಲೆಕ್ಸ್ನ ಪ್ರಥಮ ಮಹಡಿಯಲ್ಲಿ ಕಾರ್ಯಾಚರಿಸುತ್ತಿರುವ ಭಾರತ್ -ಒನ್ ಸೌಹಾರ್ದ ಸಹಕಾರಿ ಸಂಘ ಮತ್ತು ಸಂಸ್ಥೆಯ ಅಡಿಯಲ್ಲಿ ಕಾರ್ಯಾಚರಿಸುತ್ತಿದ್ದ ಟಾರ್ಗೆಟ್ 2 ಸಕ್ಸಸ್ ಎಂಬ ಟ್ರೇಡಿಂಗ್ ವ್ಯವಹಾರ ಸಂಸ್ಥೆಗಳು ಮೆಚೂರ್ ಆಗಿರುವ ಠೇವಣಿಗಳಿಗೆ ಸ೦ಬ೦ಧಿಸಿ ಹಣ ಹಿ೦ದಿರುಗಿಸದೆ ಗ್ರಾಹಕರಿಗೆ ಮತ್ತು ಸಿಬ್ಬಂದಿಗಳಿಗೆ ವಂಚನೆ ಮಾಡಿರುವುದಾಗಿ ಆರೋಪಿಸಿ ಗ್ರಾಹಕರು ಮತ್ತು ಸಿಬ್ಬಂದಿಗಳು ಸೇರಿ ಸಂಸ್ಥೆಯ ಅಧ್ಯಕ್ಷರನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ ಘಟನೆ ಆ.4ರಂದು ನಡೆದಿದೆ. ವಂಚನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಾರತ್ ಓನ್ ಸೌಹಾರ್ದ ಸಹಕಾರಿ ಸಂಘವು ಗ್ರಾಹಕರಿಗೆ ಮತ್ತು ಅಲ್ಲಿನ ಸಿಬ್ಬಂದಿಗಳಿಗೆ ವಂಚನೆ ಮಾಡಿರುವುದಾಗಿ ಆರೋಪಿಸಿ ಒಳಮೊಗ್ರು ಗ್ರಾಮದ ನಿವಾಸಿಯಾದ ನಾರಾಯಣ ನಾಯ್ಕ ಎಂಬವರು ಪುತ್ತೂರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ಸಂಸ್ಥೆಯ ಅಧ್ಯಕ್ಷ ಗಿರೀಶ್ ರೈ ಎಂಬವರು ಗ್ರಾಹಕರಿಂದ ಡೆಪೋಸಿಟ್ ಪಡೆದು ಅದನ್ನು ಹಿಂದಿರುಗಿಸದ ವಂಚನೆ ಮಾಡಿದ್ದಾರೆ ಇದರ ಜೊತೆಗೆ ಸಂಸ್ಥೆಯ ಸಿಬ್ಬಂದಿಗಳಿಗೆ ಷರತ್ತು ವಿಧಿಸಿ ಅವರಿಂದಲೂ ಅತ್ಯಧಿಕ ಮೊತ್ತದ ಡೆಪೋಸಿಟ್ ಪಡೆದುಕೊಂಡಿದ್ದಾರೆ ಆದರೆ ಸಿಬ್ಬಂದಿಗಳಿಗೆ ಸರಿಯಾದ ವೇತನ ನೀಡದೆ ಸಂಸ್ಥೆಯಲ್ಲಿ ಇಟ್ಟಿರುವ ಡೆಪೋಸಿಟ್ ಹಣವನ್ನು ಹಿಂತಿರುಗಿಸದೆ ವಂಚನೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ತಲೆಮರೆಸಿಕೊಂಡಿದ್ದ ಅಧ್ಯಕ್ಷ:
ಭಾರತ್ ಓನ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಗಿರೀಶ್ ರೈ ಎಂಬವರು ಹಲವು ಸಮಯಗಳಿಂದ ತಲೆಮರೆಸಿಕೊಂಡಿದ್ದರು ಎಂದು ಗ್ರಾಹಕರು ಮತ್ತು ಸಿಬ್ಬಂದಿಗಳು ಅವರ ಪತ್ತೆಗಾಗಿ ಕಾಯುತ್ತಿದ್ದರು.ಆ 04ರಂದು ಅವರು ಪುತ್ತೂರು ಐಸಿಐಸಿಐ ಬ್ಯಾಂಕ್ಗೆ ಬಂದಿದ್ದಾರೆಂಬ ಮಾಹಿತಿ ಪಡೆದು ಅಲ್ಲಿಗೆ ಆಗಮಿಸಿದ ಹಲವು ಗ್ರಾಹಕರು ಮತ್ತು ಸಿಬ್ಬಂದಿಗಳು ಸುತ್ತುವರಿದು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಠಾಣೆ,ಮುಂದೆ ಜಮಾಯಿಸಿದ ಜನರು: ಬ್ಯಾಂಕ್ನ ಅಧ್ಯಕ್ಷ ಗಿರೀಶ್ ರೈ ಅವರನ್ನು ಠಾಣೆಗೆ ಕರೆದೊಯ್ದ ಮಾಹಿತಿ ತಿಳಿಯುತ್ತಲೇ, ಹಣ ಕಳೆದುಕೊಂಡಿದ್ದ ಹಲವು ಗ್ರಾಹಕರು ಮತ್ತು ಸಿಬ್ಬಂದಿಗಳು ಠಾಣೆಯ ಮುಂದೆ ಜಮಾಯಿಸಿ ತಾವು ಮೋಸ ಹೋಗಿರುವ ಕುರಿತು ಪೊಲೀಸರಿಗೆ ಮಾಹಿತಿ ನೀಡಿದರು
ಲಕ್ಷಾಂತರ ರೂಪಾಯಿ ಕಳೆದುಕೊಂಡ ಸಿಬ್ಬಂದಿಗಳು ಗ್ರಾಹಕರು:
ಕ್ಯಾಶಿಯರ್ ಆಗಿ ಅಪಾಯಿಂಟ್ಮೆಂಟ್ ಮಾಡಬೇಕಾದರೆ ರೂ.5 ಲಕ್ಷ ಪೋಸಿಟ್ ಇಡಬೇಕೆಂಬ ಷರತ್ತು ವಿಧಿಸಿದಂತೆ ಕವಿತಾ ಎಂಬವರು ಪರಿಚಯಸ್ಥರ ಮೂಲಕ ರೂ.5 ಲಕ್ಷ ಮತ್ತು ತನ್ನ ಸ್ವಂತದ್ದೆಂದು ರೂ.50 ಸಾವಿರವನ್ನು ಡೆಪೋಸಿಟ್ ಇಟ್ಟಿದ್ದರು.ಹರ್ಷಿತಾ ಎಂಬವರು ಕ್ಲರ್ಕ್ ಹುದ್ದೆಗೆ ರೂ.1 ಲಕ್ಷ, ಗೋಪಾಲಕೃಷ್ಣ ಪಂಜ ಎಂಬವರು ರೂ.1 ಲಕ್ಷ, ಹರೀಶ್ ಎಂಬವರು ಅವರ ತಂಗಿಯ ಹೆಸರಿನಲ್ಲಿ ರೂ.1 ಲಕ್ಷ, ದೀಕ್ಷನ್ ಎಂಬವರು ರೂ.1 ಲಕ್ಷ, ನಾರಾಯಣ ಎಂಬವರು ಲಕ್ಷಾಂತರ ರೂಪಾಯಿ ಹೀಗೆ ಹಲವಾರು ಮಂದಿ ತಾವು ಡೆಪೋಸಿಟ್ ಇಟ್ಟು ಮೋಸಹೋಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ಮಾಧ್ಯಮದ ಮುಂದೆ ಅವಲತ್ತುಕೊಂಡರು.