Posted by vidyamaana on 2023-08-18 08:29:00 |
ಬೆಳ್ತಂಗಡಿ: ರೋಗಿಯೊಬ್ಬರನ್ನು ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.
ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
Posted by Vidyamaana on 2023-09-17 20:06:36 |
ಸುರತ್ಕಲ್: ಖಾಸಗಿ ಎಕ್ಸ್ ಪ್ರೆಸ್ ಬಸ್ಸನ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಗಂಭೀರ ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಹೊಸಬೆಟ್ಟು ಎಂಬಲ್ಲಿ ರವಿವಾರ ನಡೆದಿದೆ.
ಗಾಯಗೊಂಡವರನ್ನು ಹಳೆಯಂಗಡಿ ಇಂದಿರಾ ನಗರ ನಿವಾಸಿ ಪುತ್ತುಮೋನು ಎಂಬವರಮಗ ಮುಹಮ್ಮದ್ ಸಾಹಿಲ್ ಮತ್ತು ಪಕ್ಷಿಕೆರೆ ಹೊಸಕಾಡು ನಿವಾಸಿ ಇಮ್ಮಿಯಾಝ್ ಎಂಬವರ ಮಗ ಅರಾಫತ್ ಎಂದು ತಿಳಿದು ಬಂದಿದೆ.
ಘಟನೆಯ ವಿವರ
ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಹೊಸಬೆಟ್ಟು ಎಂಬಲ್ಲಿ ಮಂಗಳೂರಿಂದ ಉಡುಪಿ ಕಡೆಗೆ ಬರುತ್ತಿದ್ದ ಎಕ್ಸ್ ಪ್ರೆಸ್ ಬಸ್ ವಿರುದ್ಧ ದಿಕ್ಕಿನಲ್ಲಿ ಸಂಚರಿಸಿ ರಸ್ತೆ ಬದಿ ಬೈಕ್ ನೊಂದಿಗೆ ನಿಂತಿದ್ದ ಯುವಕರಿಗೆ ಡಿಕ್ಕಿ
ಹೊಡೆಯಿತೆನ್ನಲಾಗಿದೆ.
ಘಟನೆಯಲ್ಲಿ ಇಬ್ಬರೂ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಇದೇ ಸಂಸ್ಥೆಗೆ ಸೇರಿದ ಬಸ್ಸಿನ ಚಾಲಕ ನಿರ್ವಾಹಕ ಇತ್ತೀಚಿಗೆ ಹೊಸಬೆಟ್ಟು ಸಮೀಪ ಬೈಕ್ ಸವಾರರ ಜೊತೆಗೆ ಹೊಡೆದಾಟಕ್ಕಿಳಿದಿದ್ದು ವೈರಲ್ ಆಗಿತ್ತು. ಪೊಲೀಸ್ ಇಲಾಖೆ ಈ ಬಸ್ಸಿನ ಸಿಬ್ಬಂದಿಯ ಆಟಾಟೋಪ ನಿಲ್ಲಿಸಲು ವಿಫಲವಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
Posted by Vidyamaana on 2024-01-26 04:16:30 |
ಬೆಂಗಳೂರು : ನಮ್ಮ ರಾಜ್ಯದ ರಾಜಧಾನಿ ಎಷ್ಟೇ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದರೂ ಫಾರಿನ್ ಸಿಟಿಯಾಗಲು ಸಾಧ್ಯವಿಲ್ಲ. ಪಬ್ಲಿಕ್ ಪಾರ್ಕ್, ರಸ್ತೆ ಹಾಗೂ ಬಸ್ ನಿಲ್ದಾಣದಲ್ಲಿಯೇ ಕಿಸ್ಸಿಂಗ್, ಹಗ್ಗಿಂಗ್, ರೊಮ್ಯಾನ್ಸಿಂಗ್ ಮಾಡುವುದಕ್ಕೆ ಕಡಿವಾಣವಿದೆ. ಆದರೆ, ಇಲ್ಲೊಂದು ಜೋಡಿ ಪಾರ್ಕ್ ಪಕ್ಕದ ರಸ್ತೆಯಲ್ಲಿಯೇ ಕಾರು ನಿಲ್ಲಿಸಿ ಮಟ ಮಟ ಮದ್ಯಾಹ್ನವೇ ಕಾಮತೃಷೆ ತೀರಿಸಿಕೊಳ್ಳುತ್ತಿದ್ದಾರೆ.ಇದನ್ನು ನೋಡಿದ ಪೊಲೀಸಪ್ಪ ಬುದ್ಧಿ ಹೇಳಲು ಮುಂದಾದರೆ ಅವರಿಗೆ ಕಾರು ಗುದ್ದಿಸಿ ಪರಾರಿ ಆಗಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಹೌದು, ಬೆಂಗಳೂರು ಸೇಫ್ ಸಿಟಿ, ಸಂಸ್ಕೃತಿಯೂ ಇರುವಂತಹ ಸಿಟಿ ಎಂದು ನಾವು ನಂಬಿದ್ದೇವೆ. ಇಲ್ಲಿ ಕೆಲವು ವಿದೇಶಗಳಲ್ಲಿರುವಂತೆ ಬಯಲಿನಲ್ಲಿಯೇ ದೈಹಿಕ ಕಾಮನೆಗಳನ್ನು ತೀರಿಸಿಕೊಳ್ಳಲು ಅವಕಾಶವಿಲ್ಲ. ಇಷ್ಟಿದ್ದರೂ ಅಲ್ಲೊಂದು, ಇಲ್ಲೊಂದು ಸಾರ್ವಜನಿಕ ಸ್ಥಳದಲ್ಲಿಯೇ ಕಿಸ್ ಮಾಡುವ ದೃಶ್ಯಗಳು ಕಂಡುಬರುತ್ತಿದೆ. ಇಂಥಹ ಘಟನೆಗಳಿಗೆ ಸಾರ್ವಜನಿಕರು ಹಾಗೂ ಸ್ಥಳೀಯ ಪೊಲೀಸರು ಬುದ್ಧಿ ಹೇಳಿ ಅಂತಹ ಜೋಡಿಗಳನ್ನು ಅಲ್ಲಿಂದ ಕಳಿಸುತ್ತಾರೆ. ಇಂತಹ ದೃಶ್ಯಗಳಿಂದ ಚಿಕ್ಕ ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂಬುದು ನಮ್ಮ ವಾದವಾಗಿದೆ.ಬೆಂಗಳೂರಿನ ಜ್ಞಾನಭಾರತಿ ಪೊಲೀಸ್ ಠಾಣೆ ಪಿಎಸ್ಐ ಮಹೇಶ್ ಅವರು ಜ.20ರ ಮಧ್ಯಾಹ್ನ 3.30ರ ವೇಳೆಗೆ ಮನೆಗೆ ಬಂದು ಊಟ ಮಾಡಿ ಹೊರಗೆ ಬಂದಾಗ ಪಾರ್ಕಿನ ಬಳಿ ಒಂದು ಕಾರು ನಿಂತುಕೊಂಡು ಅಲುಗಾಡುತ್ತಿತ್ತು. ಇನ್ನು ಅದನ್ನು ಗಮನಿಸದೇ ಮುಂದಕ್ಕೆ ಹೋಗಿ ಹಿಂದಕ್ಕೆ ತಿರುಗಿ ನೋಡಿದರೆ ಯುವಕ ಹಾಗೂ ಯುವತಿ ಇಬ್ಬರೂ ಕಾರಿನ ಹಿಂಬದಿ ಸೀಟಿನಲ್ಲಿ ಕಾಮತೃಷೆ ತೀರಿಸಿಕೊಳ್ಳುವುದು ಕಣ್ಣಿಗೆ ಬಿದ್ದಿದೆ. ಇದೇ ರಸ್ತೆಯಲ್ಲಿ ಶಾಲಾ ಮಕ್ಕಳು, ಮಹಿಳೆಯರು ಅಡ್ಡಾಡುವ ರಸ್ತೆಯಾಗಿದ್ದು, ಅವರಿಗೆ ಮುಜುಗರ ಉಂಟಾಗುವುದನ್ನು ತಪ್ಪಿಸುವ ಉದ್ದೇಶದಿಂದ ಪಿಎಸ್ಐ ಮಹೇಶ್ ಅವರು ಕಾರಿನಲ್ಲಿದ್ದವರಿಗೆ ಬುದ್ಧಿ ಹೇಳಲು ಮುಂದಾಗಿದ್ದಾರೆ. ಈ ವೇಳೆ ಕಾರಿನ ನಂಬರ್ ನೋಟ್ ಮಾಡಿಕೊಂಡು ಅವರಿಗೆ ಬುದ್ಧಿ ಹೇಳಬೇಕು ಎನ್ನುವಷ್ಟರಲ್ಲಿ ಯುವಕ ಕಾರನ್ನು ಸ್ಟಾರ್ಟ್ ಮಾಡಿದ್ದಾನೆ.ಕಾರು ಸ್ಟಾರ್ಟ್ ಆದ ಕೂಡಲೇ ಪೊಲೀಸಪ್ಪನಿಗೆ ಎಲ್ಲಿಯೂ ಅಕ್ಕ ಪಕ್ಕದಲ್ಲಿ ಸರಿದುಕೊಳ್ಳಲು ಜಾಗವೇ ಇರಲಿಲ್ಲ. ಆದ್ದರಿಂದ ಕಾರಿನಲ್ಲಿದ್ದ ಯುವಕ ನೇರವಾಗಿ ಕಾರನ್ನು ಪಿಎಸ್ಐ ಮೇಲೆಯೇ ಹರಿಸಲು ಮುಂದಾಗಿದ್ದಾನೆ. ಈ ವೇಳೆ ಪಿಎಸ್ಐ ಮಹೇಶ್ ಕಾರಿನ ಬಾನೆಟ್ ಮೇಲೆ ಬಿದ್ದಿದ್ದಾರೆ. ಹಾಗೆಯೇ ಕಾರನ್ನು ತುಸು ದೂರು ಓಡಿಸಿದ ಯುವಕ ನಂತರ ರಿವರ್ಸ್ ಗೇರ್ ಹಾಕಿ ಒಮ್ಮೆಲೆ ಚಲಾಯಿಸಿದ್ದಾನೆ. ಆಗ ಬಾನೆಟ್ ಮೇಲಿಂದ ಪಿಎಸ್ಐ ಕೆಳಗೆ ಬಿದ್ದು ತಲೆಗೆ ಗಾಯವಾಗಿ ಮೂರ್ಛೆ ತಪ್ಪಿ ಬಿದ್ದಿದ್ದಾರೆ. ಅಲ್ಲಿದ್ದ ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನಂತರವೇ ಅವರಿಗೆ ಎಚ್ಚರವಾಗಿದೆ.ಕಾಮತೃಷೆ ತೀರಿಸಿಕೊಳ್ಳುತ್ತಿದ್ದ ಜೋಡಿಗೆ ಬುದ್ಧಿ ಹೇಳಲು ಮುಂದಾದ ಪಿಎಸ್ಐ ಮಹೇಶ್ ಆಸ್ಪತ್ರೆಯಿಂದ ಬಂದು ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಹಿಟ್ ಅಂಡ್ ರನ್ ಪ್ರಕರಣವನ್ನು ದಾಖಲಿಸಿದ್ದಾರೆ. ಇನ್ನೂ ಗಾಯಗಳಿಂದ ಪೂರ್ಣ ಪ್ರಮಾಣದಲ್ಲಿ ಚೇತರಿಕೆ ಕಾಣದೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಇಂತಹ ಘಟನೆಗಳಿಗೆ ಕಡಿವಾಣ ಬೀಳಬೇಕಿದೆ ಎಂದು ಹೇಳಿದ್ದಾರೆ.
Posted by Vidyamaana on 2023-04-17 05:59:48 |
ಪುತ್ತೂರು: ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅರುಣ್ ಕುಮಾರ್ ಪುತ್ತಿಲ ರವರು ಇಂದು ನಾಮಪತ್ರ ಸಲ್ಲಿಸಲಿದ್ದು, ದರ್ಬೆ ವೃತ್ತದಿಂದ ಪುತ್ತೂರು ತಾಲೂಕು ಆಡಳಿತ ಸೌಧದ ವರೆಗೆ ಮೆರವಣಿಗೆಯೊಂದಿಗೆ ತೆರಳಿ ನಾಮಪತ್ರ ಸಲ್ಲಿಸಲಿದ್ದಾರೆ. ಈ ಹಿನ್ನೆಲೆ ದರ್ಬೆ ಜಂಕ್ಷನ್ ನಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ.ಹಿಂದೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಪುತ್ತಿಲ ರವರು ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಪುತ್ತಿಲ ಪರ ಪ್ರಚಾರ ನಡೆಸಲು ಸಾವಿರಾರು ಕಾರ್ಯಕರ್ತರು ಜಮಾವಣೆಗೊಂಡಿದ್ದರು.
Posted by Vidyamaana on 2024-05-28 21:28:50 |
ಬೆಂಗಳೂರು : ರಾಜ್ಯಾದ್ಯಂತ ಮೇ 29ರಿಂದ ಶಾಲೆಗಳು ಆರಂಭವಾಗುತ್ತಿದ್ದು, ರಾಜ್ಯ ಪಠ್ಯಕ್ರಮದ ಸರಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಕುರಿತ ವಾರ್ಷಿಕ ಕ್ರಿಯಾ ಯೋಜನೆಗೆ ಸಂಬಂಧಿಸಿದಂತೆ 2024-25ನೆ ಸಾಲಿನ ಶೈಕ್ಷಣಿಕ ಮಾರ್ಗದರ್ಶಿಯನ್ನು ಶಾಲಾ ಶಿಕ್ಷಣ ಇಲಾಖೆಯು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
ಈ ನಡುವೆ ಕೇಂದ್ರವು ಶಾಲೆಗೆ ಸೇರಲು 6 ವರ್ಷ ಕಡ್ಡಾಯವಾಗಿರಬೇಕು ಎಂದು ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಇದರ ನಡುವೆಯೂ ಪ್ರಸಕ್ತ ವರ್ಷದ ಶೈಕ್ಷಣಿಕ ಮಾರ್ಗಸೂಚಿಯಲ್ಲಿ ಜೂ.1ಕ್ಕೆ ಆರು ವರ್ಷಗಳು ತುಂಬಿರಬೇಕು ಎಂಬ ನಿಯಮವನ್ನು ಸಡಿಲಿಸಿದ್ದು, ತಿದ್ದುಪಡಿಯನ್ನೇ ಮಾರ್ಗಸೂಚಿಯಲ್ಲಿ ಪ್ರಕಟಿಸಲಾಗಿದೆ.
Posted by Vidyamaana on 2024-01-03 16:28:18 |
ಈಶ್ವರಮಂಗಲ: ಪುತ್ತೂರು-ಸುಳ್ಯ-ಕೇರಳ ಗಡಿಭಾಗದ ಆನೆಗುಂಡಿ ರಕ್ಷಿತಾರಣ್ಯದಿಂದ ಒಂಟಿ ಸಲಗ ಜ.3ರ ಬುಧವಾರ ಮುಂಜಾನೆ ಕುಮಾರ್ ಪೆರ್ನಾಜೆ ಎಂಬವರ ತೋಟಕ್ಕೆ ನುಗ್ಗಿ ಬಾಳೆ ಗಿಡ ಹಾನಿ ಮಾಡಿದ್ದು, ಹಲಸು ಮರದ ಕೊಂಬೆಗಳನ್ನು ಮುರಿದು ತಿಂದಿದೆ.ಈಗಾಗಲೇ , ಮೂರೂರು, ಬೆಳ್ಳಿಪ್ಪಾಡಿ ಹಾಗೂ ಪಂಜಿಕಲ್ಲು ಪರಿಸರದಲ್ಲಿ ಕೃಷಿಕರ ತೋಟಗಳಿಗೆ ದಾಳಿ ನಡೆಸಿ ಒಂಟಿ ಸಲಗ ಒಂದು ಗುಂಪಿನಿಂದ ಬೇರ್ಪಟ್ಟು ಕನಕಮಜಲು ಮುಗೇರಿನಿಂದ ಪೆರ್ನಾಜೆಗೆ ಬಂದು ಹಾನಿಗೊಳಿಸಿ ಪುನಃ ಮುಗೇರಿನ ಕಡೆಗೆ ತೆರಳಿದೆ.ಒಂಟಿ ಸಲಗ ಮತ್ತೆ ಮತ್ತೆ ಜನನಿಬಿಡ ಪ್ರದೇಶಗಳಿಗೆ ದಾಳಿ ಮಾಡುತ್ತಿದ್ದು, ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಈಗಾಗಲೇ ಈ ಆನೆಯನ್ನು ಹಿಡಿದು ಬೇರೆಡೆಗೆ ಸಾಗಿಸುವ ಕೆಲಸ ಆಗಬೇಕೆಂದು ಕೃಷಿಕರು ಆಗ್ರಹಿಸುತ್ತಾರೆ.
ಒಂಟಿ ಸಲಗ ಇನ್ನಷ್ಟು ಕೃಷಿ ಹಾನಿಗೊಳಿಸುವ ಸಾಧ್ಯತೆ ಇದ್ದು, ಕೃಷಿಕರು ರಾತ್ರಿ ತೋಟಕ್ಕೆ ಹೋಗದಂತೆ ಎಚ್ಚರದಿಂದಿದ್ದು, ಪ್ರಾಣ ಹಾನಿಯಾಗದಂತೆ ಜಾಗೃತೆ ವಹಿಸುವಂತೆ ಅರಣ್ಯ ಇಲಾಖೆಯವರು ಸಲಹೆ ನೀಡಿದ್ದಾರೆ.
Posted by Vidyamaana on 2023-08-29 01:48:42 |
ಮಂಗಳೂರು; ಕೆರೆಯಲ್ಲಿ ಮುಳುಗಿ ಯುವಕ ಸಾವನ್ನಪ್ಪಿರುವ ಘಟನೆ ಉಳ್ಳಾಲದ ತಲಪಾಡಿಯಲ್ಲಿ ನಡೆದಿದೆ.ದುರ್ಗಿಪಳ್ಳ ನಿವಾಸಿ ಹರೀಶ ಯಾನೆ ಹರಿ ಪ್ರಸಾದ್ ಆಚಾರ್ಯ (36) ದುರ್ದೈವಿ.ಅವಿವಾಹಿತರಾಗಿದ್ದ ಹರಿಪ್ರಸಾದ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ವಿಪರೀತ ಕುಡಿತ ಚಟ ಹೊಂದಿದ್ದರಂತೆ.ಕಳೆದ ನಾಲ್ಕು ದಿವಸಗಳಿಂದ ಮನೆಗೂ ಹೋಗಿರಲಿಲ್ಲ ಎನ್ನಲಾಗಿದೆ.ಹರಿಪ್ರಸಾದ್ ಯುವರಾಜ್ ಯಾನೆ ಮುನ್ನ ಲೋಹಿತ್, ನವೀನ್ ದೇವಾಡಿಗ, ನಿತೇಶ್ ಉಚ್ಚಿಲ್ ಎಂಬವರೊಂದಿಗೆ ಸಮೀಪದ ಖಾಸಗಿ ಲೇ ಔಟ್ ನಲ್ಲಿರುವ ಕೆರೆಗೆ ಸ್ನಾನಕ್ಕೆ ತೆರಳಿದ್ದ ಸಂದರ್ಭ ಅಕಸ್ಮತ್ ಆಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಮೃತದೇಹವನ್ನು ಮೇಲಕ್ಕೆತ್ತಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ