Posted by vidyamaana on 2023-08-18 08:29:00 |
ಬೆಳ್ತಂಗಡಿ: ರೋಗಿಯೊಬ್ಬರನ್ನು ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.
ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
Posted by Vidyamaana on 2023-11-30 13:11:32 |
ನವದೆಹಲಿ: ಚೀನಾದ ಮಕ್ಕಳಲ್ಲಿ ಉಸಿರಾಟ ಸಂಬಂಧಿ ಕಾಯಿಲೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನಗಳಿಗೆ ಅನುಗುಣವಾಗಿ ಕರ್ನಾಟಕ ಸಹಿತ ಐದು ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಆರೋಗ್ಯ ವ್ಯವಸ್ಥೆಗಳನ್ನು ಪರಿಶೀಲಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.ಕರ್ನಾಟಕ, ರಾಜಸ್ಥಾನ, ಗುಜರಾತ್, ಉತ್ತರಾಖಂಡ ಮತ್ತು ತಮಿಳುನಾಡು ರಾಜ್ಯಗಳು ಉಸಿರಾಟದ ಸಮಸ್ಯೆಗಳನ್ನು ನಿರ್ವಹಿಸಲು ತಯಾರಾಗಿರುವಂತೆ ಆಸ್ಪತ್ರೆಗಳು ಮತ್ತು ಆರೋಗ್ಯಸೇವಾ ಸಿಬ್ಬಂದಿಗೆ ನಿರ್ದೇಶನ ನೀಡಿವೆ. ಕರೊನಾ ನಿಯಂತ್ರಣಕ್ಕೆ ಹೊರಡಿಸಲಾದ ಪರಿಷ್ಕೃತ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವಂತೆ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ. ಕರೊನಾ ಸಂದರ್ಭದಲ್ಲಿ ಆದ ತಪುಪಗಳು ಪುನರಾವರ್ತನೆ ಆಗಬಾರದೆಂಬ ಕಾರಣಕ್ಕೆ ರಾಜ್ಯ ಸರ್ಕಾರ ಮುನ್ನೆಚ್ಚರಿಕೆ ವಹಿಸಿದೆ. ರಾಜ್ಯದಲ್ಲಿ ಶೀತಜ್ವರ (ಐಎಲ್ಐ), ಉಸಿರಾಟದ ಸಮಸ್ಯೆ(ಸಾರಿ) ಪ್ರಕರಣಗಳು ಉಲ್ಬಣಿಸಿಲ್ಲ.
ಹೀಗಾಗಿ ಸದ್ಯಕ್ಕಂತೂ ಆತಂಕಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆ ವಹಿಸಬೇಕಿದೆ ಎಂದು ಸರ್ಕಾರ ರಚಿಸಿರುವ ತಾಂತ್ರಿಕ ಸಲಹಾ ಸಮಿತಿ ಸದಸ್ಯರು ವಿಜಯವಾಣಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದೀರ್ಘಾವಧಿ ಹಾಗೂ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಆದ್ಯತೆ ಮೇಲೆ ಮುನ್ನೆಚ್ಚರಿಕೆ ವಹಿಸಬೇಕು. ಜನದಟ್ಟಣೆ ಹಾಗೂ ಶೀತ ಪ್ರದೇಶಕ್ಕೆ ಭೇಟಿ ನೀಡುವುದನ್ನು ನಿಯಂತ್ರಿಸುವುದು ಮತ್ತು ಮಕ್ಕಳು,ವೃದ್ಧರು, ಗರ್ಭಿಣಿಯರು ಸಹ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಆರೋಗ್ಯ ಇಲಾಖೆ ಸ್ಪಷ್ಟ ಎಚ್ಚರಿಕೆ ನೀಡಿದೆ.
ಬುಧವಾರ ಆರೋಗ್ಯ ಸಚಿವರು ಅಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಸೂಚನೆ ನೀಡಲಾಗಿದೆ. ಇನ್ನೊಂದೆಡೆ ಕೇಂದ್ರದ ಅಧಿಕಾರಿಗಳು ವಿಡಿಯೋ ಕಾನ್ಪರೆನ್ಸ್ ಮೂಲಕ ರಾಜ್ಯದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಈ ಬೆಳವಣಿಗೆ ಕುರಿತು ಮಾಹಿತಿ ಹಂಚಿಕೊಂಡ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಚೀನಾ ವೈರಸ್ ಬಗ್ಗೆ ಸಾರ್ವಜನಿಕರು ಆತಂಕಪಡುವುದು ಬೇಡ. ಸರ್ಕಾರ ಈ ಬಗ್ಗೆ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಸಾಧಾರಣವಾಗಿ ನವೆಂಬರ್, ಡಿಸೆಂಬರ್ ಮತ್ತು ಜನವರಿ ತಿಂಗಳಲ್ಲಿ ಚಳಿಗಾಲದ ಕಾರಣಕ್ಕಾಗಿ ಉಸಿರಾಟದ ಸಮಸ್ಯೆ ಪ್ರಕರಣಗಳು ವರದಿಯಾಗಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ, ಇದನ್ನು ಚೀನಾ ವೈರಸ್ಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದರು.
ಎಚ್ಚರಿಕೆ ಕ್ರಮಗಳೇನು?: ಚೀನಾ ವೈರಸ್ ಹಿನ್ನೆಲೆಯಲ್ಲಿ: ಆರೋಗ್ಯ ಇಲಾಖೆ ಆಸ್ಪತ್ರೆಗಳು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಸಾರ್ವ ಜನಿಕರು ಮುಖ್ಯವಾಗಿ ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರಅಥವಾ ಟಿಶ್ಯುವಿನಿಂದ ಮುಚ್ಚಿಕೊಳ್ಳಬೇಕು, ಸಾಬೂನು ಮತ್ತು ಕೈಗಳನ್ನು ಆಗಾಗ್ಗೆ ತೊಳೆದುಕೊಳ್ಳಬೇಕು, ಕೈಗಳಿಂದ ಕಣ್ಣು, ಮೂಗು ಅಥವಾ ಬಾಯಿಯನ್ನು ಅನಗತ್ಯವಾಗಿ ಮುಟ್ಟಿಕೊಳ್ಳಬಾರದು, ಜನ ದಟ್ಟಣೆ ಇರುವ ಸ್ಥಳಗಳಿಗೆ ಭೇಟಿ ನೀಡುವುದನ್ನು ತಪ್ಪಿಸಿ ಮತ್ತು ಅಂತಹ ಸ್ಥಳಗಳಿಗೆ ಭೇಟಿ ನೀಡಿದರೆ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಬೇಕು ಎಂದು ತಿಳಿಸಲಾಗಿದೆ. ಜ್ವರಪೀಡಿತ ವ್ಯಕ್ತಿಯಿಂದ ಕನಿಷ್ಠ ಅಂತರ ಕಾಪಾಡಿಕೊಳ್ಳಬೇಕು. ಸಮರ್ಪಕ ವಾಗಿ ನಿದ್ರೆ ಮಾಡಿ, ದೈಹಿಕವಾಗಿ ಕ್ರಿಯಾಶೀಲರಾಗಿ ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕು, ಸಾಕಷ್ಟು ನೀರು ಕುಡಿಯಬೇಕು, ಪೌಷ್ಟಿಕ ಆಹಾರವನ್ನು ಸೇವಿಸಬೇಕು ಎಂದು ಸಲಹೆ ನೀಡಲಾಗಿದೆ. ಸಾರ್ವಜನಿಕವಾಗಿ ಉಗುಳುವುದು, ಸೀನುವುದು ಮಾಡಬಾರದು. ಯಾವುದೇ ರೋಗ ಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷಿಸದೆ ವೈದ್ಯರಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂಬ ಅಂಶ ಮಾರ್ಗಸೂಚಿಯಲ್ಲಿದೆ.
ಮಾಸ್ಕ್ ಕಡ್ಡಾಯ: ಆಸ್ಪತ್ರೆಯಲ್ಲಿ ವರದಿಯಾಗುವ ಶೀತಜ್ವರ (ಐಎಲ್ಐ) ಮತ್ತು ಉಸಿರಾಟದ ತೊಂದರೆ (ಸಾರಿ) ಪ್ರಕರಣಗಳ ಕುರಿತು ಐಡಿಎಸ್ಪಿ-ಐಎಚ್ಐಪಿ ಪೋರ್ಟಲ್ನಲ್ಲಿ ದಾಖಲಿಸುವಂತೆ ತಿಳಿಸಲಾಗಿದೆ. ಅಗತ್ಯಔಷಧಗಳ ದಾಸ್ತಾನು ಮಾಡಿಕೊಳ್ಳುವಂತೆ ಮತ್ತು ಎಲ್ಲ ಆರೋಗ್ಯ ಸೇವೆಗಳಲ್ಲಿ ಆರೋಗ್ಯ ಕಾರ್ಯಕರ್ತರನ್ನು ಬಳಸಿಕೊಳ್ಳುವಂತೆ, ವೈದ್ಯರು, ಶುಶ್ರೂಷಕರು ಸೇರಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವಂತೆ ಸೂಚಿಸಲು ನಿರ್ಧರಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ಆರೋಗ್ಯ ಸಂಸ್ಥೆಗಳಲ್ಲಿ ಕೋವಿಡ್ ಪ್ರಕರಣಗಳನ್ನು ನಿರ್ವಹಿಸಲು ಗೊತ್ತುಪಡಿಸಿದ ಎಲ್ಲ ಆಸ್ಪತ್ರೆಗಳು ತಕ್ಷಣವೇ ವೈದ್ಯಕೀಯ ಮೂಲಸೌಕರ್ಯ, ವೈದ್ಯಕೀಯ ಮತ್ತು ಅರೆವೈದ್ಯಕೀಯ ಮಾನವಶಕ್ತಿ, ಆಮ್ಲಜನಕ ಹಾಸಿಗೆಗಳು, ಪ್ರತ್ಯೇಕ ಹಾಸಿಗೆಗಳು, ವೆಂಟಿಲೇಟರ್ಗಳು, ಪಿಎಸ್ಎ ಪ್ಲಾಂಟ್ಗಳು, ಎಲ್ಎಂಒ ಪ್ಲಾಂಟ್ಗಳ ಸಂಪನ್ಮೂಲಗಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಿಳಿಸಲಾಗಿದೆ.
ಆಮ್ಲಜನಕ ಸಿಲಿಂಡರ್ಗಳು, ಔಷಧಗಳು, ಪಿಪಿಇ ಕಿಟ್ಗಳು, ಪರೀಕ್ಷಾ ಕಿಟ್ಗಳು ಮತ್ತು ಲ್ಯಾಬ್ ಸೌಲಭ್ಯಗಳು, ಆಂಬ್ಯುಲೆನ್ಸ್ ಸೇರಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳು ವಂತೆಯೂ ಸೂಚಿಸಲು ಸಭೆಯಲ್ಲಿ ತಿಳಿಸಲಾಗಿದೆ. ಕೋವಿಡ್, ಇನ್ಪೂಯೇನ್ಝಾ ವೈರಸ್, ಅಡೆನೋ ವೈರಸ್ ಸೇರಿ ಯಾವುದೇ ಸೋಂಕು ಮಾದರಿಗಳನ್ನು ಹತ್ತಿರದ ಪ್ರಯೋಗಾಲಯಗಳಿಗೆ ಕಳುಹಿಸಬೇಕು ಹಾಗೂ ರಾಜ್ಯದ ಎಲ್ಲ ವೈರಾಣುಸಂಶೋಧನೆ ಮತ್ತು ರೋಗಪತ್ತೆ ಪ್ರಯೋಗಾಲಯಗಳು ಐಎಚ್ಐಪಿ ಪೋರ್ಟಲ್ನಲ್ಲಿ ಪರೀಕ್ಷಾ ವರದಿ ದಾಖಲಿಸಲು ಸೂಚಿಸಲಾಗಿದೆ.
ಮುನ್ನೆಚ್ಚರಿಕೆ ಕ್ರಮಗಳು
ನಿಯಮಿತವಾಗಿ ಕೈಗಳನ್ನು ತೊಳೆಯಿರಿ
ಮಾಸ್ಕ್ ಸರಿಯಾಗಿ ಬಳಸಿ
ಸೋಂಕಿತ ವ್ಯಕ್ತಿಗಳೊಂದಿಗೆ ನಿಕಟ ಸಂಪರ್ಕ ತಪ್ಪಿಸಿ
ನಿಮ್ಮ ಸುತ್ತಲೂ ಶುದ್ಧ, ಉತ್ತಮ ವಾತಾವರಣ ಇರಲಿ
ಪರೀಕ್ಷೆ ಮಾಡಿಕೊಂಡು, ವೈದ್ಯರ ಸಲಹೆಯನ್ನು ತೆಗೆದುಕೊಳ್ಳಿ.
ಅನಾರೋಗ್ಯದಿಂದ ಬಳಲುತ್ತಿದ್ದರೆ, ರೋಗಲಕ್ಷಣಗಳನ್ನು ಹೊಂದಿದ್ದರೆ ಮನೆಯಲ್ಲೇ ಇರಿ
Posted by Vidyamaana on 2024-05-16 07:36:18 |
ನವದೆಹಲಿ, ಮೇ.16: ನಾನು ಯಾವತ್ತೂ ಹಿಂದು- ಮುಸ್ಲಿಂ ಅಂತ ಭೇದ ಮಾಡಿಲ್ಲ. ಹಾಗೊಂದ್ವೇಳೆ, ಹಿಂದು – ಮುಸ್ಲಿಂ ಭೇದ ಮಾಡಿದರೆ, ಸಾರ್ವಜನಿಕ ಜೀವನದಲ್ಲಿ ಇರುವುದಕ್ಕೆ ಯೋಗ್ಯನಲ್ಲ ಎಂದು ಭಾವಿಸುತ್ತೇನೆ. ಇದು ನನ್ನ ಸಂಕಲ್ಪ ಎಂದು ಪ್ರಧಾನಿ ನರೇಂದ್ರ ಮೋದಿ ಸಂದರ್ಶನ ಒಂದರಲ್ಲಿ ಹೇಳಿರುವ ವಿಡಿಯೋವನ್ನು ಮೋದಿ ತನ್ನ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ರಾಜಸ್ಥಾನದ ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಜನರ ಬಳಿಯಿರುವ ಚಿನ್ನದ ಸಂಪತ್ತನ್ನು ಹೆಚ್ಚು ಮಕ್ಕಳಿದ್ದವರಿಗೆ ಹಂಚುತ್ತದೆ ಎಂದು ಹೇಳಿರುವುದು ಮೋದಿ ಮುಸ್ಲಿಮರನ್ನು ಟಾರ್ಗೆಟ್ ಮಾಡಿದ್ದಾರೆ ಎಂಬ ರೀತಿ ಬಿಂಬಿತವಾಗಿತ್ತು. ಮಂಗಳವಾರ ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಇತ್ತೀಚೆಗೆ ನ್ಯೂಸ್ 18 ವಾಹಿನಿಗೆ ನೀಡಿದ್ದ ಸಂದರ್ಶನದ ತುಣುಕನ್ನು ಮೋದಿ ತನ್ನ ಟ್ವಿಟರ್ ನಲ್ಲಿ ಹಂಚಿದ್ದು, ಅದರಲ್ಲಿ ನಾನೆಂದೂ ಹಿಂದು –ಮುಸ್ಲಿಂ ಎಂದು ಭೇದ ಮಾಡಿಲ್ಲ. ನಾನೆಂದಿಗೂ ತುಷ್ಟೀಕರಣ ರಾಜಕೀಯ ಮಾಡಲ್ಲ. ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಎನ್ನುವುದೇ ನನ್ನ ನಂಬಿಕೆ ಎಂದು ಹೇಳಿದ್ದಾರೆ.
Posted by Vidyamaana on 2023-06-16 23:14:10 |
ಪುತ್ತೂರು: ತುರ್ತು ಕಾಮಗಾರಿ ನಿಮಿತ್ತ 110/33/11ಕೆವಿ ಪುತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಕಬಕ, ಕೆದಿಲ ಮತ್ತು ನಗರ ಫೀಡರ್ನಲ್ಲಿ ಜೂ.17ರಂದು ಪೂರ್ವಾಹ್ನ ಗಂಟೆ 10ರಿಂದ ಅಪರಾಹ್ನ 2ರ ವರೆಗೆ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದುದರಿಂದ 110/33/11 ಕೆ.ವಿ ಮತ್ತೂರು ವಿದ್ಯುತ್ ಕೇಂದ್ರದಿಂದ ಹೊರಡುವ ಈ ಮೇಲೆ ತಿಳಿಸಿದ ಫೀಡರ್ನಿಂದ ವಿದ್ಯುತ್ ಸರಬರಾಜಾಗುವ ನಗರ, ಕಬಕ, ಕೊಡಿಪ್ಪಾಡಿ, ಬನ್ನೂರು, ಬಲ್ನಾಡು, ನವನಗರ, ವಿವೇಕಾನಂದ ಕಾಲೇಜು ಪರಿಸರ, ಪಡ್ಡಾಯೂರು ಗ್ರಾಮದ ವಿದ್ಯುತ್ ಬಳಕೆದಾರರು ಗಮನಿಸಿ ಸಹಕರಿಸಬೇಕೆಂದು ಮೆಸ್ಕಾಂ, ನಗರ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ತಿಳಿಸಿದ್ದಾರೆ.
Posted by Vidyamaana on 2024-03-07 08:57:44 |
ಪುತ್ತೂರು : ಪೆರುವಾಜೆ -ಪಾಲ್ತಾಡಿ-ಕೊಳ್ತಿಗೆ ಗ್ರಾಮದ ವ್ಯಾಪ್ತಿಗೆ ಸಂಬಂಧಪಟ್ಟ ಕಾಪುತಕಾಡು ಶ್ರೀರಾಜಗುಳಿಗ ಸಾನಿಧ್ಯದ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ದೈವದಕೋಲವು ಮಾ.9 ರಂದು ನಡೆಯಲಿದೆ.
ಮಾ.9 ರಂದು ಬೆಳಿಗ್ಗೆ 8ಕ್ಕೆ ದೇವತಾ ಪ್ರಾರ್ಥನೆ ,ಸ್ಥಳ ಶುದ್ದಿ ,ಶ್ರೀ ಮಹಾಗಣಪತಿ ಹೋಮ ನಡೆಯಲಿದೆ.
ಸಂಜೆ 6 ಗಂಟೆಗೆ ದೈವಕ್ಕೆ ಎಣ್ಣೆ ವೀಳ್ಯ ಕೊಡುವುದು ,ರಾತ್ರಿ 7 ರಿಂದ ಶ್ರೀರಾಜಗುಳಿಗ ದೈವದ ನರ್ತನ ಸೇವೆ ,ಪ್ರಸಾದ ವಿತರಣೆ,ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀ ರಾಜಗುಳಿಗ ಸೇವಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
Posted by Vidyamaana on 2024-01-05 15:03:39 |
ಬೆಂಗಳೂರು : ಆರ್ಥಿಕ ಇಲಾಖೆಯ ಅನುಮತಿ ಪಡೆದುಕೊಳ್ಳದೆ ರಾಜ್ಯದಲ್ಲಿನ ವಿಶ್ವವಿದ್ಯಾಲಯಗಳಲ್ಲಿ ಭರ್ತಿ ಮಾಡಿರುವ ಹುದ್ದೆಗಳಿಗೆ ವೇತನಾನುದಾನ ನೀಡದಿರಲು ಸರ್ಕಾರ ನಿರ್ಧರಿಸಿದೆ.ರಾಜ್ಯದಲ್ಲಿ 41 ಸರ್ಕಾರಿ ವಿವಿಗಳಿದ್ದು, ಕೆಲವು ವಿವಿಗಳ ಕುಲಪತಿಗಳು ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆದುಕೊಳ್ಳದೆ ತಮ್ಮ ನಿವೃತ್ತಿ ಅವಧಿಯ ಕೊನೆ ಕ್ಷಣದಲ್ಲಿ ಭರ್ತಿ ಮಾಡಿದ ಪ್ರಕರಣಗಳಿವೆ.ಆರ್ಥಿಕ ಇಲಾಖೆ ಈ ಮೊದಲೇ ಎಚ್ಚರಿಕೆ ನೀಡಿದ್ದರೂ ನೇಮಕಾತಿ ಮಾಡಿಕೊಳ್ಳಲಾಗಿದೆ.
ಅನುಮತಿ ಪಡೆದುಕೊಳ್ಳದೆ ಭರ್ತಿ ಮಾಡಿದ ಹುದ್ದೆಗಳನ್ನು ಮಂಜೂರಾದ ಹುದ್ದೆಗಳೆಂದು ಪರಿಗಣಿಸಲಾಗುವುದಿಲ್ಲ. ಈ ಹುದ್ದೆಗಳ ಭರ್ತಿಗೆ ಸಹಮತ ನೀಡುವುದಿಲ್ಲವೆಂದು ಆರ್ಥಿಕ ಇಲಾಖೆಯಿಂದ ವಿವಿಗಳಿಗೆ ಸೂಚನೆ ನೀಡಲಾಗಿದೆ. ಈ ಹುದ್ದೆಗಳಿಗೆ ವಿವಿಯ ಆರ್ಥಿಕ ಸಂಪನ್ಮೂಲದಿಂದ ಮಾತ್ರ ವೇತನ ನೀಡಬೇಕಾಗುತ್ತದೆ. ಆರ್ಥಿಕ ಇಲಾಖೆ ನೀಡುವ ವೇತನಾನುನುದಾನ ಬಳಕೆ ಸಾಧ್ಯವಿರುವುದಿಲ್ಲ.
ಆರ್ಥಿಕ ಇಲಾಖೆ ಅನುಮತಿ ಪಡೆದುಕೊಳ್ಳದೆ ಭರ್ತಿ ಮಾಡಿದ ಹುದ್ದೆಗಳಿಗೆ ವೇತನಾನುದಾನ ನೀಡಲು ವಿವಿಗಳು ಅನುದಾನ ಕೋರಿ ಪ್ರಸ್ತಾವನೆ ಸಲ್ಲಿಸುತ್ತಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿದ ಆರ್ಥಿಕ ಇಲಾಖೆ ಪರಿಶೀಲಿಸಿದಾಗ ಅನುಮತಿ ಪಡೆದುಕೊಳ್ಳದೆ ನೇಮಕಾತಿ ನಡೆಸಿರುವುದು ಕಂಡುಬಂದಿದೆ.ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಸಾಮಾನ್ಯ ವಿವಿ, ವೈದ್ಯಕೀಯ ವಿವಿ, ಕೃಷಿ ವಿವಿಗಳು ಆಡಳಿತ ಮಂಡಳಿಯ ಅನುಮೋದನೆ ಪಡೆದು ತಮ್ಮ ಹಂತದಲ್ಲಿ ಅನುಮೋದನೆ ಪಡೆದುಕೊಂಡ ಹುದ್ದೆಗಳ ವಿವರ, ಸರ್ಕಾರದ ಆದೇಶ ನೀಡಿರುವ ಕುರಿತಾದ ಮಾಹಿತಿ ಸಲ್ಲಿಸುವಂತೆ ಸೂಚಿಸಲಾಗಿದೆ.
Posted by Vidyamaana on 2023-09-08 09:08:42 |
ಬೆಂಗಳೂರು : ಕರ್ನಾಟಕದ ಈ 8 ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದ್ದು, ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ.ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬೀದರ್, ಕಲಬುರಗಿ, ವಿಜಯಪುರ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗಲಿದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇನ್ನುಳಿದಂತೆ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯಪುರದಲ್ಲಿ ಸಾಧಾರಣ ಮಲೆಯಾಗಲಿದೆ, ಸೆಪ್ಟೆಂಬರ್ 13ರ ನಂತರ ಮುಂಗಾರು ಚುರುಕುಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.