Posted by vidyamaana on 2023-11-07 04:42:13 |
ಪುತ್ತೂರು: ಪುತ್ತೂರಿನ ನಗರದಲ್ಲಿ ತಲವಾರ್ ನಲ್ಲಿ ಕಡಿದು ಕಲ್ಲೇಗ ಟೈಗರ್ಸ್ ನ ಪ್ರಮುಖ ನಾಯಕನನ್ನು ಹತ್ಯೆ ಮಾಡಿದ ಘಟನೆ ಇದೀಗ ನಡೆದಿದೆ.
ಟೈಗರ್ಸ್ ನ ಮುಖ್ಯಸ್ಥ ಅಕ್ಷಯ್ ಕಲ್ಲೇಗ ಅವರನ್ನು ಹತ್ಯೆಗೀಡಾದ ಯುವಕ. ಈತ ಪುತ್ತೂರಿನ ನಗರದಲ್ಲಿ ಇದ್ದಾಗ ತಂಡಯೊಂದು ಆಗಮಿಸಿ ಯದ್ವಾತದ್ವ ತಲವಾರ್ ನಲ್ಲಿ ದಾಳಿ ನಡೆಸಿ, ಹತ್ಯೆ ಮಾಡಿದೆ. ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
Posted by Vidyamaana on 2023-09-05 15:31:58 |
ಮುಂಬೈ: ಅಕ್ಟೋಬರ್ 5ರಿಂದ ತವರಿನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕೂಟಕ್ಕೆ ಭಾರತ ತಂಡವನ್ನು ಅಂತಿಮಗೊಳಿಸಲಾಗಿದೆ. 15 ಜನರ ತಂಡವನ್ನು ಆಯ್ಕೆ ಮಾಡಿದ್ದು, ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸಲಿದ್ದಾರೆ.
ಪುರುಷರ ಕ್ರಿಕೆಟ್ ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಅವರು ತಂಡದ ಆಯ್ಕೆ ಬಗ್ಗೆ ಪ್ರಕಟಿಸಿದರು.
ಏಷ್ಯಾ ಕಪ್ ನಲ್ಲಿ ಆಡುತ್ತಿರುವ ತಂಡವೇ ಬಹುತೇಕ ಅಂತಿಮವಾಗಿದೆ. ವಿಶ್ವಕಪ್ ಗೆ 15 ಜನರ ತಂಡ ಪ್ರಕಟಿಸಬೇಕಾದ ಕಾರಣ 17 ಜನರ ಏಷ್ಯಾ ಕಪ್ ತಂಡದಲ್ಲಿದ್ದ ಯುವ ಆಟಗಾರರಾದ ತಿಲಕ್ ವರ್ಮಾ ಮತ್ತು ಕನ್ನಡಿಗ ಪ್ರಸಿಧ್ ಕೃಷ್ಣ ವಿಶ್ವಕಪ್ ಕೂಟಕ್ಕೆ ಸ್ಥಾನ ಪಡೆದಿಲ್ಲ.
ಕನ್ನಡಿಗ ಕೆ.ಎಲ್ ರಾಹುಲ್ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ಯಶಸ್ವಿಯಾಗಿದ್ದಾರೆ. ಕಳೆದ ಐಪಿಎಲ್ ವೇಳೆ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕೆಎಲ್ ರಾಹುಲ್ ಹಲವು ತಿಂಗಳ ಚೇತರಿಕೆಯ ಬಳಿಕ ಏಷ್ಯಾ ಕಪ್ ಗೆ ಆಯ್ಕೆಯಾಗಿದ್ದರು. ಆದರೆ ಸರಿಯಾಗಿ ಫಿಟ್ ಆಗದ ಕಾರಣ ಮೊದಲೆರಡು ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.ವಿಕೆಟ್ ಕೀಪರ್ ಕೋಟಾದಲ್ಲಿ ಕೆಎಲ್ ರಾಹುಲ್ ಮತ್ತು ಎಡಗೈ ಆಟಗಾರ ಇಶಾನ್ ಕಿಶನ್ ಆಯ್ಕೆಯಾಗಿದ್ದಾರೆ. ಏಷ್ಯಾ ಕಪ್ ಗೆ ಬ್ಯಾಕಪ್ ಆಟಗಾರನಾಗಿದ್ದ ಸಂಜು ಸ್ಯಾಮ್ಸನ್ ರನ್ನು ವಿಶ್ವಕಪ್ ನಿಂದ ಕೈಬಿಡಲಾಗಿದೆ.
ಬ್ಯಾಟಿಂಗ್ ವಿಭಾಗದಲ್ಲಿ ನಾಯಕ ರೋಹಿತ್ ಶರ್ಮಾ, ಅನುಭವಿ ವಿರಾಟ್ ಕೊಹ್ಲಿ ಜೊತೆಗೆ ಶುಭಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ಸೂರ್ಯಕುಮಾರ್ ಯಾದವ್ ಆಯ್ಕೆಯಾಗಿದ್ದಾರೆ. ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡದ ಹೊರತಾಗಿಯೂ ಸೂರ್ಯ ವಿಶ್ವಕಪ್ ಸ್ಕ್ಯಾಡ್ ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಆಲ್ ರೌಂಡರ್ ಗಳಾಗಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್ ಮತ್ತು ಅಕ್ಷರ್ ಪಟೇಲ್ ಆಯ್ಕೆಯಾಗಿದ್ದಾರೆ.
ತಂಡದಲ್ಲಿ ಸ್ಪಿನ್ನರ್ ಗಳಾಗಿ ಕುಲದೀಪ್ ಯಾದವ್ ಸ್ಥಾನ ಪಡೆದಿದ್ದಾರೆ. ಉಳಿದಂತೆ ರವೀಂದ್ರ ಜಡೇಜಾ ಮತ್ತು ಅಕ್ಷರ್ ಪಟೇಲ್ ಅವರು ಸ್ಪಿನ್ನರ್ ಗಳಾಗಿದ್ದಾರೆ. ಏಷ್ಯಾಕಪ್ ನಲ್ಲಿ ಸ್ಥಾನ ಪಡೆಯದ ಅನುಭವಿ ಸ್ಪಿನ್ನರ್ ಗಳಾದ ಯುಜುವೇಂದ್ರ ಚಾಹಲ್ ಮತ್ತು ರವಿಚಂದ್ರನ್ ಅಶ್ವಿನ್ ಅವರಿಗೆ ವಿಶ್ವಕಪ್ ಗೂ ಅವಕಾಶ ಸಿಕ್ಕಿಲ್ಲ.
ವೇಗದ ಬೌಲಿಂಗ್ ವಿಭಾಗದಲ್ಲಿ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್ ಮತ್ತು ಮೊಹಮ್ಮದ್ ಶಮಿ ಇದ್ದಾರೆ.
ವಿಶ್ವಕಪ್ ಗೆ ಭಾರತ ತಂಡ
ರೋಹಿತ್ ಶರ್ಮಾ (ನಾ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಮತ್ತು ಮೊಹಮ್ಮದ್ ಸಿರಾಜ್.
Posted by Vidyamaana on 2024-03-26 08:11:30 |
ಬಂಟ್ವಾಳ : ಈ ನೆಲದ ಸಾಮರಸ್ಯ ಸೌಹಾರ್ದತೆಯ ಪರಂಪರೆಗೆ ಸಾಕ್ಷಿಯಾಗಬಲ್ಲ ವಿನೂತನ ಕಾರ್ಯಕ್ರಮವೊಂದು ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಪಾಟ್ರಕೋಡಿ ಜುಮಾ ಮಸೀದಿ ವಠಾರದಲ್ಲಿ ಭಾನುವಾರ ನಡೆಯಿತು.
ಬಂಟ್ವಾಳ ತಾಲೂಕಿನ ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಆಡಳಿತ ಸಮಿತಿ ವತಿಯಿಂದ ಪಾಟ್ರಕೋಡಿ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಹಿಂದು - ಮುಸ್ಲಿಂ - ಕ್ರೈಸ್ತ ಧರ್ಮದ ನೂರಾರು ಮಂದಿ ಕೂಡುವಿಕಯ ಸೌಹಾರ್ದ ಇಫ್ತಾರ್ ಸಂಗಮ ಇಲ್ಲಿನ ಶಾಂತಿ ಸೌಹಾರ್ದತೆಗೆ ಸಾಕ್ಷಿಯಾಯಿತು.
ಪರಸ್ಪರ ಮತಭೇದ ಮರೆತು ನಾವೆಲ್ಲರೂ ಒಂದೇ ತತ್ವ-ಸತ್ಯ ಸಾರಲು ಮಸೀದಿ - ದೈವಸ್ಥಾನ ಪ್ರಮುಖರು ಮುಂದಾಗಿರುವುದು
ನಿಜಕ್ಕೂ ಇದೊಂದು ಅಪರೂಪದ ಕಾರ್ಯಕ್ರಮ. ಹಿಂದು ಮತ್ತು ಮುಸ್ಲಿಂ ಭಾಂದವರ ಅಪೂರ್ವ ಸಂಗಮ. ಕೋಮುಭಾವನೆ ಕೆರಳಿಸಿ, ಮತೀಯ ಸಂಘರ್ಷ ಸೃಷ್ಠಿಸಿ ಸಮಾಜ ಒಡೆಯುವ ಶಕ್ತಿಗಳ ನಡುವೆ ಇಂತಹ ಕಾರ್ಯಕ್ರಮಗಳು ಅನಿವಾರ್ಯವೇ ಸರಿ.
ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದಲ್ಲಿ ಇತ್ತೀಚೆಗೆ ಬ್ರಹ್ಮಕಲಶೋತ್ಸವ ನಡೆದಿತ್ತು. ಬ್ರಹ್ಮಕಲಶೋತ್ಸವಕ್ಕೆ ಹೊರೆಕಾಣಿಕೆ ಬರುವ ಸಂದರ್ಭ ಪರಿಸರದ ಮಸೀದಿ ವ್ಯಾಪ್ತಿಯ ಮುಸ್ಲಿಂ ಭಾಂದವರು ಅಲ್ಲಲ್ಲಿ ರಸ್ತೆಯಂಚಿನಲ್ಲಿ ನಿಂತು ಹೊರೆಕಾಣಿಕೆ ಮೆರವಣಿಗೆಯಲ್ಲಿ ಸಾಗುತ್ತಿದ್ದವರಿಗೆ ಶರಬತ್ತು ಹಂಚಿ ಹೊರೆ ಕಾಣಿಕೆ ನೀಡುವ ಮೂಲಕ ಮೆರವಣಿಗೆಯ ಯಶಸ್ವಿಗೆ ಸಹಕರಿಸಿ ಸಾಮರಸ್ಯ ಮೆರೆದಿದ್ದರು. ಅಲ್ಲದೆ ಮುಸ್ಲಿಂ ಮುಖಂಡರು ಅಲ್ಲಲ್ಲಿ ಬ್ರಹ್ಮ ಕಲಶೋತ್ಸವಕ್ಕೆ ಶುಭ ಕೋರಿ ಬ್ಯಾನರ್ ಅಳವಡಿಸಿದ್ದರು.
ಈ ಸೌಹಾರ್ದತೆಯ ವಾತಾವರಣ, ಮಾನವೀಯತೆ, ಬಂಧುತ್ವವನ್ನು ಕಂಡ ದೈವಸ್ಥಾನದ ಆಡಳಿತ ಸಮಿತಿಯವರು ಮುಸ್ಲಿಂ ಭಾಂದವರ ಮನೆ ಮನೆಗೆ ಹೋಗಿ ಬ್ರಹ್ಮಕಲಶೋತ್ಸವದ ಆಮಂತ್ರಣ ನೀಡಿ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸುವಂತೆ ಆಹ್ವಾನಿಸಿದ್ದರು.
ಇದರಿಂದ ಪ್ರೇರಿತರಾದ ಮುಸ್ಲಿಂ ಭಾಂದವರೂ ಬ್ರಹ್ಮಕಲಶೋತ್ಸವದಲ್ಲಿ ಭಾಗವಹಿಸುವ ಮೂಲಕ ಭಾವೈಕ್ಯತೆಯ ವಾತಾವರಣ ಸೃಷ್ಠಿಯಾಗಿತ್ತು. ಇಂತಹ ಸೌಹಾರ್ದತೆಯ ವಾತಾವರಣ ಮತ್ತು ಬ್ರಹ್ಮಕಲಶೋತ್ಸವದಲ್ಲಿ ಮೆರೆದ ಸಾಮರಸ್ಯದ ಸವಿನೆನಪು ಶಾಶ್ವತವಾಗಿರಿಸಬೇಕು ಎಂಬ ದೃಷ್ಠಿಯಿಂದ ಇದೀಗ ದೈವಸ್ಥಾನದ ಆಡಳಿತ ಸಮಿತಿಯವರು ಮಸೀದಿಯಲ್ಲಿ ಇಫ್ತಾರ್ ಕೂಟ ಆಯೋಜಿಸುವ ಮೂಲಕ ಪರಸ್ಪರ ಮಾನವೀಯತೆಯ ಸಂದೇಶ ಸಾರಿದ್ದಾರೆ. ದೈವಸ್ಥಾನ ಮತ್ತು ಮಸೀದಿಯ ಈ ಕಾರ್ಯ ಇತರೆಡೆಗಳಿಗೆ ಮಾದರಿಯಾಗಿದೆ.
ಈ ಸೌಹಾರ್ದ ಇಫ್ತಾರ್ ಕೂಟದಲ್ಲಿ ಮಸೀದಿ ಖತೀಬ್ ಖಲಂದರ್ ಶಾಫಿ ಬಾಖವಿ, ಕೆದಿಲ ಶ್ರೀ ಉಳ್ಳಾಕ್ಲು ಧೂಮಾವತಿ ಮಲರಾಯ ದೈವಸ್ಥಾನದ ಅದ್ಯಕ್ಷ ಕೃಷ್ಣ ಭಟ್, ಉಪಾಧ್ಯಕ್ಷ ಪರಮೇಶ್ವರ ನಾವಡ, ಕೋಶಾಧಿಕಾರಿ ಚೆನ್ನಪ್ಪ ಗೌಡ, ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಜನಾರ್ದನ ಕುಲಾಲ್, ಕಾರ್ಯದರ್ಶಿ ಚರಣ್ ಕುಲಾಲ್, ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಹಾಜಿ ಆದಂ ಕುಂಞಿ, ಕೆದಿಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ, ಮಾಜಿ ಉಪಾಧ್ಯಕ್ಷ ಉಮೇಶ್ ಮುರುವ, ಮಾಜಿ ಸದಸ್ಯ ರಾಬರ್ಟ್ ಲಸ್ರಾದೋ, ಎನ್.ಎಸ್.ಯು.ಐ ರಾಜ್ಯ ಉಪಾಧ್ಯಕ್ಷ ಫಾರೂಕ್ ಬಯಬೆ, ಮಸೀದಿ ಕೋಶಾಧಿಕಾರಿ ಹಮೀದ್ ಹಾಜಿ ಕೋಡಿ, ಪೂರ್ವಾದ್ಯಕ್ಷರುಗಳಾದ ಮುಹಮ್ಮದ್ ಮಾಸ್ಟರ್, ಕೆ.ಎಸ್. ಯೂಸುಫ್, ಉಮ್ಮರ್ ಹಾಜಿ ಕರಿಮಜಲು, ಪ್ರಮುಖರಾದ ವಿಶ್ವನಾಥ ಶೆಟ್ಟಿ, ಬಾಲಕೃಷ್ಣ ಗೌಡ, ಚೆನ್ನಪ್ಪ ಕಂಪ, ಮಸೀದಿ ಆಡಳಿತ ಸಮಿತಿ ಸದಸ್ಯರು, ಗೌಸಿಯಾ ಯಂಗ್ ಮೆನ್ಸ್ ನಾ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
ಇದೇ ವೇಳೆ ಮಸೀದಿ ವತಿಯಿಂದ ದೈವಸ್ಥಾನದ ಅದ್ಯಕ್ಷ ಸಹಿತ ಪ್ರಮುಖರನ್ನು ಸನ್ಮಾನಿಸಲಾಯಿತು. ಅದೇ ರೀತಿ ದೈವಸ್ಥಾನದ ವತಿಯಿಂದ ಮಸೀದಿ ಅಧ್ಯಕ್ಷ, ಕಾರ್ಯದರ್ಶಿ, ಖತೀಬರ ಸಹಿತ ದೈವಸ್ಥಾನಕ್ಕೆ ಸ್ಥಳದಾನ ಮಾಡಿದ ದಿ. ಪಕ್ರಬ್ಬ ಹಾಜಿ ಅವರ ಪುತ್ರ ಹಮೀದ್ ಹಾಜಿ, ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ ಉಚಿತವಾಗಿ ಆಟೋ ಸೇವೆಯನ್ನು ನೀಡಿದ ರಿಕ್ಷಾ ಚಾಲಕ ಅಶ್ರಫ್ ಅವರನ್ನು ಸನ್ಮಾನಿಸಲಾಯಿತು.
ಮಸೀದಿ ಅಧ್ಯಕ್ಷ ಬಾತಿಶ್ ಪಾಟ್ರಕೋಡಿ ಸ್ವಾಗತಿಸಿ, ಕಾರ್ಯದರ್ಶಿ ತಶ್ರೀಫ್ ವಂದಿಸಿದರು. ಕೆ.ಎ.ಶರೀಫ್ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು
Posted by Vidyamaana on 2024-01-03 21:52:57 |
ಪುತ್ತೂರು: ಹುಬ್ಬಳ್ಳಿಯಲ್ಲಿ ರಾಮಭಕ್ತರನ್ನು ಬಂಧಿಸಿರುವ ಪೊಲೀಸ್ ಇಲಾಖೆಯ ವಿರುದ್ಧ ಹಾಗೂ ಕಾಂಗ್ರೆಸ್ ಸರಕಾರ ಹಿಂದೂ ವಿರೋಧಿ ಧೋರಣೆಯನ್ನು ಖಂಡಿಸಿ ಬುಧವಾರ ಇಲ್ಲಿನ ದರ್ಬೆ ವೃತ್ತದಲ್ಲಿ ಹಿಂದೂ ಜಾಗರಣಾ ವೇದಿಕೆ ಪುತ್ತೂರು ಜಿಲ್ಲೆ ವತಿಯಿಂದ ಜ.3ರಂದು ಬೃಹತ್ ಪ್ರತಿಭಟನೆ ನಡೆಯಿತು.
ಬೃಹತ್ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಬಜರಂಗದಳ ಪ್ರಾಂತ ಸಂಯೋಜಕ ಮುರಳೀಕೃಷ್ಣ ಹಸಂತಡ್ಕ, ರಾಮನ ಕೆಲಸ ಮಾಡುವವರನ್ನು ಹತ್ತಿಕ್ಕುವ
ಪ್ರಯತ್ನ ಸಿದ್ಧರಾಮಯ್ಯ ಸರಕಾರ ಮಾಡಿದರೆ ಲಂಕೆಯ ಉದಾಹರಣೆಯ ಮೂಲಕ ಸರಕಾರಕ್ಕೆ ಪ್ರತಿ ಉತ್ತರ ನೀಡಬೇಕಾಗಬಹುದು ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಏಜೆಂಟರ ಮೂಲಕ ಅಧಿಕಾರಿಗಳನ್ನು ನೇಮಿಸುವ ಕಾರ್ಯ ಒಂದೆಡೆಯಾದರೆ, ಇನ್ನೊಂದೆಡೆ ಅಲ್ಪಸಂಖ್ಯಾತರ ಓಟಿಗೋಸ್ಕರ ಹಿಂದೂಗಳನ್ನು, ರಾಮಭಕ್ತರನ್ನು ಧಮನಿಸುವ ಕಾರ್ಯ ನಡೆಸುತ್ತಿದೆ. ದೇಶದಲ್ಲಿ ರಾಮನ ನಾಡು ನಿರ್ಮಾಣವಾಗುತ್ತಿದೆಯೇ ಹೊರತು ರಾವಣನ ನಾಡು ನಿರ್ಮಾಣ ಆಗುತ್ತಿಲ್ಲ ಎಂಬುದನ್ನು ಸಿದ್ಧರಾಮಯ್ಯನವರು ಅರ್ಥ ಮಾಡಿಕೊಳ್ಳಬೇಕು. ರಾಷ್ಟ್ರ ಮಂದಿರ ನಿರ್ಮಾಣವಾಗುತ್ತಿರುವ ಈ ಕಾಲಘಟ್ಟದಲ್ಲಿ ಸಂಭ್ರಮದಿಂದ ಇರಬೇಕಾದ ಅಸಂಖ್ಯಾತ ಹಿಂದೂಗಳ ಮಾನಸಿಕ ಸ್ಥೆರ್ಯವನ್ನು ಕುಗ್ಗಿಸುವ ಕೆಲಸ ನಡೆಯುತ್ತಿದೆ. ಸಿದ್ಧರಾಮಯ್ಯನವರಿಗೆ ತಾಕತ್ತಿದ್ದರೆ ರಾಮರಾಜ್ಯ ನಿರ್ಮಾಣದ ಕನಸು ತಡೆಯಲಿ ಎಂದು ಸವಾಲು ಎಸೆದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕನಸು ನನಸಾಗುತ್ತಿರುವ ಸಂದರ್ಭದಲ್ಲಿ 32 ವರ್ಷಗಳ ಹಿಂದೆ ರಾಮ ಮಂದಿರಕ್ಕಾಗಿ ಹೋರಾಟ ಮಾಡಿದವರನ್ನು ಬಂಧಿಸುವ ಕೆಲಸ ಸಿದ್ದರಾಮಯ್ಯ ಸರಕಾರದಿಂದ ಆಗುತ್ತಿದೆ. ಈ ಮೂಲಕ ಹಿಂದೂಗಳ ಮಾನಸಿಕ ಧೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿರುವುದನ್ನು ನಾವು ಖಂಡಿಸುತ್ತೇವೆ. ಸೀತೆ ರಾಮನ ಜತೆಗೂಡಿ ರಾವಣನನ್ನು ಹೇಗೆ ಧ್ವಂಸ ಮಾಡಿದ್ದಾರೆ ಅದೇ ರೀತಿಯ ಉತ್ತರ ನೀಡಲು ಮಾತೆಯರು ಸೀತೆಯರಾಗಿ ಸರಕಾರವನ್ನು ಧ್ವಂಸ ಮಾಡಬೇಕಾಗಬಹುದು ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಚಂದ್ರಶೇಖರ ರಾವ್ ಬಪ್ಪಳಿಗೆ ಮಾತನಾಡಿ, 30 ವರ್ಷಗಳ ಹಿಂದೆ ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಹೋರಾಟವನ್ನು ನಡೆಸಿದ ರಾಮಭಕ್ತರ ಮೇಲೆ ಸಿದ್ದರಾಮಯ್ಯ ಸರಕಾರ ಪುನಃ ಕೇಸು ಹಾಕಿ ಬಂಧಿಸಲು ಮುಂದಾಗುತ್ತಿದ್ದು, ಇನ್ನಷ್ಟು ರಾಮಭಕ್ತರನ್ನು ಬಂಧನ ಮಾಡಲಿ. ಪರಿಣಾಮ ಹಿಂದೂ ಸಮಾಜಕ್ಕೆ ಮತ್ತಷ್ಟು ಶಕ್ತಿ ಬರಲಿದೆ ಎಂಬುದನ್ನು ಸಿದ್ಧರಾಮಯ್ಯ ಅರ್ಥ ಮಾಡಿಕೊಳ್ಳಲಿ ಎಂದು ಹೇಳಿದ ಅವರು, 30 ವರ್ಷ ಅಯೋಧ್ಯೆಯ ಕರಸೇವೆಯಲ್ಲಿ ಪಾಲ್ಗೊಂಡ ವಿಚಾರವನ್ನು ಎಳೆ ಎಳೆಯಾಗಿ ತೆರೆದಿಟ್ಟರು.
ಪ್ರತಿಭಟನೆಯನ್ನುದ್ದೇಶಿಸಿ ಡಾ.ಸುರೇಶ್ ಪುತ್ತೂರಾಯ ಮಾತನಾಡಿದರು. ವಿಶ್ವ ಹಿಂದೂ ಪರಿಷತ್ ಮುಖಂಡ ಮೋಹನದಾಸ್ ಕಾಣಿಯೂರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರತಿಭಟನಾ ಸಭೆಯಲ್ಲಿ ನಗರಸಭೆ ನಿಕಟಪೂರ್ವ ಅಧ್ಯಕ್ಷ ಜೀವಂಧರ್ ಜೈನ್, ಬಿಜೆಪಿ ಹಿರಿಯ ಮುಖಂಡರಾದ ಗೋಪಾಲಕೃಷ್ಣ ಹೇರಳೆ, ಅಪ್ಪಯ್ಯ ಮಣಿಯಾಣಿ, ರಾಜೇಶ್ ಬನ್ನೂರು, ರಾಧಾಕೃಷ್ಣ ಬೋರ್ಕರ್, ನಗರಸಭೆ ಸದಸ್ಯ ಜಗನ್ನಿವಾಸ ರಾವ್, ಆರ್.ಸಿ ನಾರಾಯಣ, ಶಶಿಕುಮಾರ್ ಬಾಲ್ಯೂಟ್ಟು, ಸತೀಶ್ ನಾಯ್ಕ, ವಿಹಿಂಪದ ಡಾ. ಪ್ರಸನ್ನ ಭಟ್, ಶ್ರೀಧರ್ ತೆಂಕಿಲ, ಸೀತಾರಾಮ ರೈ ಕೆದಂಬಾಡಿಗುತ್ತು,, ಮಹಿಳಾ ಬಿಜೆಪಿಯ ಗೌರಿ ಬನ್ನೂರು, ಜಯಶ್ರೀ ಶೆಟ್ಟಿ, ನಿಶಾಂತ್, ಮೀನಾಕ್ಷಿ ಶಾಂತಿಗೋಡು, ದೀಕ್ಷಾ ಪೈ, ಹರಿಣಿ ಪುತ್ತೂರಾಯ, ಸತೀಶ್ ಮತ್ತಿತರರು ಉಪಸ್ಥಿತರಿದ್ದರು. ಅಜಿತ್ ರೈ ಹೊಸಮನೆ ಸ್ವಾಗತಿಸಿದರು. ದಿನೇಶ್ ಪಂಜಿಗ ಕಾರ್ಯಕ್ರಮ ನಿರೂಪಿಸಿದರು.
Posted by Vidyamaana on 2023-06-20 04:29:42 |
ಪುತ್ತೂರು: ಕಾರು ಹಾಗೂ ಆ್ಯಕ್ಟೀವಾ ನಡುವೆ ನಡೆದ ಅಪಘಾತದಲ್ಲಿ ಸವಾರ ಮೃತಪಟ್ಟ ಘಟನೆ ಕಲ್ಲರ್ಪೆಯಲ್ಲಿ ಮಂಗಳವಾರ ಬೆಳಿಗ್ಗೆ ನಡೆದಿದೆ.
ನೈತ್ತಾಡಿ ಮೂಲದ ನಿವಾಸಿಯಾಗಿರುವ ಇಸ್ಮಾಯಿಲ್ . ಅಡಿಕೆ ವ್ಯಾಪಾರಸ್ಥರಾಗಿರುವ ಇವರು, ಅಜ್ಜಿಕಟ್ಟೆ ಜಮಾತ್ ಕಮಿಟಿ ಸದಸ್ಯರಾಗಿದ್ದಾರೆ.
ಮಂಗಳವಾರ ಬೆಳಿಗ್ಗೆ ಸುಮಾರು 7 ಗಂಟೆಯ ಹೊತ್ತಿಗೆ ಅಪಘಾತ ಸಂಭವಿಸಿದ್ದು, ಸವಾರ ಗಂಭೀರ ಗಾಯಗೊಂಡಿದ್ದರು. ಅವರನ್ನು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯುವ ಹಾದಿಯಲ್ಲಿ ಕೊನೆಯುಸಿರೆಳೆದಿದ್ದಾರೆ.ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಹಾಗೂ ಓರ್ವ ಪುತ್ರ ಸಹೋದರ ಸಹೋದರಿಯರನ್ನು ಅಗಲಿದ್ದಾರೆ.
Posted by Vidyamaana on 2024-01-23 13:20:30 |
ಪುತ್ತೂರು: ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ ನ ದಶಮಾನೋತ್ಸವದ ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆ ಸೋಮವಾರ ಸ್ವಸಹಾಯ ಟ್ರಸ್ಟ್ ಕಚೇರಿಯಲ್ಲಿ ನಡೆಯಿತು.
ಸಭೆಯಲ್ಲಿ ದಶಮಾನೋತ್ಸವದ ಅಂಗವಾಗಿ ಪ್ರತೀ ತಿಂಗಳು ಒಂದು ಕಾರ್ಯಕ್ರಮ ನಡೆಸುವುದರ ಜತೆಗೆ ಪ್ರತೀ ವಲಯದಲ್ಲೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಕುರಿತು ತೀರ್ಮಾನಿಸಲಾಯಿತು.ವೇದಿಕೆಯಲ್ಲಿ ಒಕ್ಕಲಿಗ ಟ್ರಸ್ಟ್ ನ ಡಿ.ವಿ.ಮನೋಹರ, ಎ.ವಿ.ನಾರಾಯಣ, ದಿವ್ಯಪ್ರಸಾದ್ ಎ.ಎಮ್., ವಸಂತ ವೀರಮಂಗಲ, ಜಿನ್ನಪ್ಪ ಗೌಡ ಮಳವೇಲು, ಪದ್ಮಯ್ಯ ಗೌಡ ವಾರಣಾಸಿ, ವೆಂಕಪ್ಪ ಗೌಡ, ಶ್ರೀಧರ ಗೌಡ ಕಣಜಾಲು ಉಪಸ್ಥಿತರಿದ್ದರು.
Posted by Vidyamaana on 2024-04-01 16:39:12 |
ಪುತ್ತೂರು : ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವಕ್ಕೆ ಇಂದು ಗೊನೆ ಮುಹೂರ್ತ ನಡೆಯಿತು.ಬೆಳಿಗ್ಗೆ ಪೂರ್ವ ಶಿಷ್ಟಸಂಪ್ರದಾಯದಂತೆ ದೇವಳದ ಸತ್ಯಧರ್ಮ ನಡೆಯಲ್ಲಿ ಪ್ರಾರ್ಥನೆ ಮಾಡಿ ಬಳಿಕ ವಾದ್ಯದೊಂದಿಗೆ ತೆರಳಿ ಗೊನೆ ಮುಹೂರ್ತ ನೆರವೇರಿಸಲಾಯಿತು.