Posted by vidyamaana on 2024-06-30 21:58:04 |
ಉಪ್ಪಿನಂಗಡಿ: ಕಡಬ ತಾಲ್ಲೂಕು ಕೊಯಿಲ ಗ್ರಾಮದ ಕೆಮ್ಮಾರ ಎಂಬಲ್ಲಿ ಭಾನುವಾರ ಮನೆಯೊಳಗೆ ಬೆಂಕಿ ಹೊತ್ತಿಕೊಂಡು ಮನೆಯ ಒಳ ಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮನೆ ಭಾಗಶಃ ಹಾನಿಗೊಂಡಿದ್ದು, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೆಮ್ಮಾರ ಶಾಲೆ ಬಳಿಯ ನಿವಾಸಿ ದಿ.ಇಬ್ರಾಹಿಂ ಎಂಬುವರ ಪುತ್ರ ಅಬ್ದುಲ್ ರಹಿಮಾನ್ ಅವರ ಮನೆಯಲ್ಲಿ ಅವಘಡ ಸಂಭವಿಸಿದೆ.
ಮನೆಯ ಮಾಸ್ಟರ್ ಬೆಡ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯೊಳಗೆ ಆವರಿಸಿದೆ. ಮನೆಯೊಳಗೆ ಇದ್ದ ಕಪಾಟು, ಮಂಚ, ಕಿಟಕಿ, ಬಾಗಿಲು, ಫ್ರಿಜ್, ವಾಷಿಂಗ್ ಮೆಸಿಷಿನ್, ಬಟ್ಟೆಗಳು, ಗೃಹೋಪಯೋಗಿ ವಸ್ತುಗಳು, ಆಹಾರ ಸಾಮಗ್ರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಬೆಂಕಿಯ ತಾಪಕ್ಕೆ 2 ಕಡೆ ಗೋಡೆ ಬಿರುಕು ಬಿಟ್ಟಿದೆ. ಬೆಂಕಿ ಕಾಣಿಸಿಕೊಂಡ ಕೋಣೆಯಲ್ಲಿ ಗ್ರಾನೈಟ್ ಮತ್ತು ಅಡುಗೆ ಕೋಣೆಯಲ್ಲಿ ನೆಲದ ಟೈಲ್ಸ್ ಸಿಡಿದಿದೆ. ಇದರಿಂದಾಗಿ ಸುಮಾರು ₹ 35 ಲಕ್ಷ ನಷ್ಟ ಉಂಟಾಗಿದೆ ಎಂದು ಅಬ್ದುಲ್ ರಹಿಮಾನ್ ಅವರು ಕಂದಾಯ ಇಲಾಖೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮನೆಯಲ್ಲಿ ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ಮಾತ್ರ ಇದ್ದು, ಮನೆಯೊಳಗೆ ಹೊಗೆ ತುಂಬುವುದನ್ನು ಗಮನಿಸಿ ಮನೆಯಿಂದ ಹೊರ ಬಂದು ಬೊಬ್ಬೆ ಹಾಕಿ ಪಕ್ಕದ ಮನೆಯವರನ್ನು ಕರೆದಿದ್ದಾರೆ. ಪಕ್ಕದ ಮನೆಯವರು ಸ್ಥಳೀಯರಿಗೆ ಕರೆ ಮಾಡಿದ್ದಾರೆ. ಅಬ್ದುಲ್ ರಹಿಮಾನ್, ಪತ್ನಿ, ಮಕ್ಕಳು ಪತ್ನಿಯ ತವರು ಮನೆಗೆ ಹೋಗಿದ್ದರು. ವರ್ಷದ ಹಿಂದೆ ಮನೆ ನಿರ್ಮಿಸಲಾಗಿತ್ತು.
ಬೆಂಕಿ ಅವಘಡದ ಮಾಹಿತಿ ತಿಳಿದ ಸಾಮಾಜಿಕ ಕಾರ್ಯಕರ್ತರಾದ ಸಲೀಕತ್, ಅಬೂಬಕ್ಕರ್, ರಿಯಾಝ್, ಜುನೈದ್ ಮನೆಯೊಳಗೆ ಪ್ರವೇಶಿಸಿ
ವಿದ್ಯುತ್ ಸಂಪರ್ಕ, ಗ್ಯಾಸ್ ಸಂಕರ್ಪ ಕಡಿತಗೊಳಿಸಿದರು. ಪುತ್ತೂರಿನಿಂದ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು.
ಘಟನಾ ಸ್ಥಳಕ್ಕೆ ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಸ್, ಸದಸ್ಯ ನಝೀರ್ ಪೂರಿಂಗ, ಆತೂರು ಬದ್ರಿಯಾ ಮಸೀದಿ ಖತೀಬ್ ಜುನೈದ್ ಜಿಫ್ರಿ ತಂಙಳ್ ಭೇಟಿ ನೀಡಿದರು. ಕೊಯಿಲ ಗ್ರಾಮಕರಣಿಕ ಶೇಷಾದ್ರಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ನಾನು ಕೋಣೆಯೊಂದರಲ್ಲಿ ಕೆಲಸದಲ್ಲಿ ನಿರತಳಾಗಿದ್ದೆ. ತುಂತುರು ಮಳೆಯಾಗುತ್ತಿತ್ತು. ಭಾರಿ ಸಿಡಿಲಿನ ಶಬ್ದ ಕೇಳಿಸಿತ್ತು. ಸ್ವಲ್ಪ ಹೊತ್ತಿನ ಬಳಿಕ ಮನೆಯೊಳಗೆ ಹೊಗೆ ತುಂಬತೊಡಗಿತು. ಮನೆಯಿಂದ ಹೊರ ಬರುವುದಕ್ಕೂ ದಾರಿ ಕಾಣುತ್ತಿರಲಿಲ್ಲ ಎಂದು ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ತಿಳಿಸಿದರು.
ಉಪ್ಪಿನಂಗಡಿ ಸಮೀಪದ ಕೆಮ್ಮಾರದಲ್ಲಿ ಮನೆ ಭಾಗಶಃ ಬೆಂಕಿಗೆ ಆಹುತಿಯಾಗಿದ್ದು ಕಂದಾಯ ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು
Posted by Vidyamaana on 2024-04-04 12:02:54 |
ನವದೆಹಲಿ : ಲೋಕಸಭೆ ಚುನಾವಣೆಗೆ ತಮ್ಮ ಮಗನಿಗೆ ಟಿಕೆಟ್ ಕೈತಪ್ಪಿರುವ ಹಿನ್ನೆಲೆಯಲ್ಲಿ ಬಂಡಾಯವೆದ್ದಿರುವ ಬಿಜೆಪಿಯ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಪಕ್ಷೇತರವಾಗಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.ಈ ಹಿನ್ನೆಲೆಯಲ್ಲಿ ಅವರು ನಿನ್ನೆ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಲು ದೆಹಲಿಗೆ ತೆರಳಿದರು.ಆದರೆ ಅಮಿತ್ ಶಾ ಅವರು ಈಶ್ವರಪ್ಪ ಅವರ ಭೇಟಿಯನ್ನು ನಿರಾಕರಿಸಿದ ಹಿನ್ನೆಲೆಯಲ್ಲಿ ಇದೀಗ ಅವರು ವಾಪಸ್ ಆಗಿದ್ದಾರೆ.ಅಮಿತ್ ಶಾ ಬೇಟಿಗೆ ಸಮಯ ಸಿಗದ ಕಾರಣ ಇದೀಗ ಈಶ್ವರಪ್ಪ ದೆಹಲಿಯಿಂದ ಬೆಂಗಳೂರಿಗೆ ವಾಪಸ್ ಆಗುತ್ತಿದ್ದಾರೆ. ಬೆಳಗ್ಗೆ 6 10ರ ಫ್ಲೈಟ್ ಗೆ ಕೆ ಎಸ್ ಈಶ್ವರಪ್ಪ ಪ್ರಯಾಣ ಬೆಳೆಸಿದ್ದಾರೆ ಎಂದು ತಿಳಿದುಬಂದಿದೆ. ಇವಳೆ ಸುದ್ದಿಗಾರನಿಗೆ ಮಾತನಾಡಿದ ಅವರು ಲೋಕಸಭಾ ಚುನಾವಣೆಯಲ್ಲಿ ಬಿ ವೈ ರಾಘವೇಂದ್ರ ಸೋಲಲಿ ಎಂಬ ಪರೀಕ್ಷೆ ಅಮಿತ್ ಶಾ ಅವರಿಗೆ ಇರಬಹುದು ಎಂದು ತಿಳಿಸಿದರು.
Posted by Vidyamaana on 2023-08-14 02:58:39 |
ಪುತ್ತೂರು ಶಾಸಕ ಅಶೋಕ್ ಕುಮಾರ್ ಅವರು ಆಗಸ್ಟ್ 14 ರಂದು
ಬೆಳಗ್ಗೆ 10:00 ವಿದ್ಯಾ ರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯ 12 ನೇ ವರ್ಷದ ಸ್ಥಾಪಕರ ದಿನಾಚರಣೆ
ಬೆಳಗ್ಗೆ 11:00 ಗಂಟೆಗೆ ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ನಿ. ಬ್ಯಾಂಕಿನ ಪುತ್ತೂರು ಶಾಖಾ ಕಟ್ಟಡದಲ್ಲಿ ಹೊಸ ಎಟಿಎಂ ಉದ್ಘಾಟನೆ
ಮದ್ಯಾಹ್ನ 3:00 ಗಂಟೆಗೆ ಲಯನ್ಸ್ ಕ್ಲಬ್ ತಾಲೂಕ್ ಒಕ್ಕೂಟ ಸಂಘ ಸಂಸ್ಥೆಯಿಂದ ಆಟಿದ ಕೂಟ ಕಾರ್ಯಕ್ರಮದ ಲ್ಲಿ ಭಾಗವಹಿಸಲಿದ್ದಾರೆ
Posted by Vidyamaana on 2023-07-14 03:02:36 |
ವಿಟ್ಲ: ಪರಿಯಲ್ಲಡ್ಕ – ಸಾರಡ್ಕ ರಸ್ತೆಯ ಕೂರೇಲು ಎಂಬಲ್ಲಿ ಪಿಕಪ್ ರಸ್ತೆಯಿಂದ ಮನೆಯ ಮೇಲೆ ಬಿದ್ದಿದ್ದು, ಮನೆಯ ಒಳಗೆ ಮಹಿಳೆ ಸಿಲುಕಿ ಹಾಕಿಕೊಂಡಿದ್ದಾರೆ.ಕೂರೇಲು ಮಧ್ಯದ ಅಂಗಡಿಯ ಸಮೀಪದಲ್ಲಿ ರಸ್ತೆಯಿಂದ ಕೆಳಗಿದ್ದ ಮನೆಗೆ ಜು.14 ರ ಬೆಳಗ್ಗಿನ ಜಾವ ಚಾಲಕ ನಿಯಂತ್ರಣ ತಪ್ಪಿದ ಪಿಕಪ್ ಮನೆಯ ಮೇಲೆ ಬಿದ್ದಿದೆಅಪಘಾತದಿಂದ ಹಂಚಿನ ಮನೆ ಸಂಪೂರ್ಣ ಹಾನಿಯಾಗಿದೆ. ಪಿಕಪ್ ಕೋಳಿ ಸಾಗಟ ನಡೆಸುತಿತ್ತು. ಅಪಘಾತದಿಂದ ನೂರಾರು ಕೋಳಿಗಳು ಸತ್ತಿದೆ. ಅಪಘಾತ ನಡೆದಾಗ ಮನೆಯ ಒಳಗೆ ಮಹಿಳೆ ಮಲಗಿದ್ದರು, ಮಹಿಳೆಗೆ ಗಂಭೀರ ಗಾಯವಾದ ಪರಿಸ್ಥಿಯಲಿದ್ದಾರೆ.ಪಿಕಪ್ ವಾಹನವನ್ನು ತೆರವು ಮಾಡಡೆ, ಮಹಿಳೆಯನ್ನು ಹೊರಗೆ ತೆಗೆಯಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.
ಸ್ಥಳದಲ್ಲಿ ವಿಟ್ಲ ಪೊಲೀಸರು, ತುರ್ತು ಸೇವಾ ವಾಹನ ಬೀಡು ಬಿಟ್ಟಿದ್ದು, ಕ್ರೇನ್ ಬಳಸಿ ವಾಹನ ಮೇಲೆತ್ತುವ ಕಾರ್ಯಾಚರಣೆ ನಡೆಯುತ್ತಿದೆ.
Posted by Vidyamaana on 2024-03-13 22:45:58 |
ಶಿವಮೊಗ್ಗ : ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಇದೀಗ ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಗೊಳಿಸಿದ್ದು ಸದ್ಯ ಬಿಜೆಪಿಯ ಹಲವು ಹಾಲಿ ಸಂಸದರಿಗೆ ಟಿಕೆಟ್ ಕೈತಪ್ಪಿದೆ. ಅದರಂತೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರ ಮಗ ಕಾಂತೇಶ್ ಗೆ ಕೂಡ ಈ ಬಾರಿ ಟಿಕೆಟ್ ದೊರಕಿಲ್ಲ.ಇದರಿಂದ ಸಿಡಿದೆದ್ದ ಕೆಎಸ್ ಈಶ್ವರಪ್ಪ ಕರ್ನಾಟಕದಲ್ಲಿ ಕುಟುಂಬದ ಕೈಯಲ್ಲಿ ಪಕ್ಷವೊಂದು ಸಿಕ್ಕಾಕೊಂಡಿದೆ.ಅದನ್ನು ರಕ್ಷಿಸಬೇಕಿದೆ ಎಂದು ಪರೋಕ್ಷವಾಗಿ ಬಿಎಸ್ ಯಡಿಯೂರಪ್ಪ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಒಂದು ಕುಟುಂಬದ ಕೈಯಲ್ಲಿ ಪಕ್ಷ ಸಿಕ್ಕಾಕೊಂಡಿದೆ.ಕುಟುಂಬದ ಕೈಯಿಂದ ಪಕ್ಷ ರಕ್ಷಿಸಬೇಕೆಂಬ ಒತ್ತಾಯವಿದೆ ಎಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿಕೆ ನೀಡಿದರು.ಕರ್ನಾಟಕದಲ್ಲಿ ಬೇರೆ ಯಾರು ಲಿಂಗಾಯತ ನಾಯಕರೆಲ್ವಾ? ಎಂದು ಕಿಡಿ ಕಾರಿದ್ದಾರೆ.ಬಿಎಸ್ ಯಡಿಯೂರಪ್ಪ ಪಟ್ಟು ಹಿಡಿದು ಶೋಭಾ ಕರಂದ್ಲಾಜೆ ಹಾಗೂ ಬಸವರಾಜ ಬೊಮ್ಮಾಯಿಗೆ ಪಟ್ಟು ಹಿಡಿದು ಟಿಕೆಟ್ ಕೊಡಿಸಿದ್ದಾರೆ.ನನ್ನ ಮಗ ಕೆಇ ಕಾಂತೇಶ್ ಗೆ ಯಾಕೆ ಟಿಕೆಟ್ ಕೊಡಿಸಲಿಲ್ಲ? ನಾನು 40 ವರ್ಷ ನಿಷ್ಠೆಯಿಂದ ಪಕ್ಷಕ್ಕಾಗಿ ಕೆಲಸ ಮಾಡಿದ್ದೇನೆ ಸಿಟಿ ರವಿ, ನಳಿನ ಕುಮಾರ್ ಕಟೀಲ್, ಪ್ರತಾಪ್ ಸಿಂಹ, ನನಗೆ ಸೇರಿದಂತೆ ನನ್ನ ಪುತ್ರನಿಗೆ ಅನ್ಯಾಯವಾಗಿದೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಅಪೇಕ್ಷೆ ಪಡುವವರಲ್ಲಿ ನಾನು ಒಬ್ಬ. ನೀವು ಮತ್ತೆ ನರೇಂದ್ರ ಮೋದಿಯವರಿಗೆ ಬೆಂಬಲ ಕೊಡಿ ನಾವು ಚುನಾವಣೆಗೆ ನಿಲ್ಲಿಸಿ ಲೋಕಸಭೆ ಚುನಾವಣೆಯಲ್ಲಿ ಗೆಲ್ಲಿಸುತ್ತೇವೆ ಎಂದು ಬೆಂಬಲಿಗರು ತಿಳಿಸಿದ್ದಾರೆ. 15 ರಂದು ಶುಕ್ರವಾರ ಸಂಜೆ 5:00 ಗಂಟೆಗೆ ಶಿವಮೊಗ್ಗದ ಬಣಜಾರ ಭವನದಲ್ಲಿ ಎಲ್ಲಾ ಸಮಾಜದ ಪ್ರಮುಖರು ಹಿರಿಯರು ಹಿತೈಷಿಗಳು ಈ ಸಭೆಯಲ್ಲಿ ಸೇರಲಿದ್ದಾರೆ. ಅವರೆಲ್ಲರ ಸಲಹೆ ಮೇಲೆ ನಾನು ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.
Posted by Vidyamaana on 2024-03-23 21:53:57 |
ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಇಲಾಖೆಯ ಆಯುಕ್ತ ಮನ್ಸೂರ್ ಆಲಿ 25 ಲಕ್ಷ ರೂ. ಲಂಚ ಸ್ವೀಕರಿಸುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಮಂಗಳೂರು ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಮನ್ಸೂರ್ ಅಲಿಯನ್ನು ಲಂಚ ಪಡೆಯುತ್ತಿರುವಾಗಲೇ ಬಂಧಿಸಿದ್ದಾರೆ.
ಟಿಡಿಆರ್ ಕ್ಲಿಯರೆನ್ಸ್ ಮಾಡುವ ವಿಚಾರದಲ್ಲಿ ಬ್ರೋಕರ್ ಸಲೀಂ ಎಂಬವನ ಸಹಕಾರದೊಂದಿಗೆ ಮನ್ಸೂರ್ ಅಲಿ ಲಂಚ ಸ್ವೀಕರಿಸುತ್ತಿದ್ದರು. ಲೋಕಾಯುಕ್ತ ಡಿವೈಎಸ್ಪಿ ಡಿವೈಎಸ್ಪಿ ಚೆಲುವರಾಜ್, ಇನ್ಸ್ಪೆಕ್ಟರ್ ಗಳಾದ ಅಮಾನುಲ್ಲಾ, ಸುರೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
ಬಿಲ್ಡರ್ ಒಬ್ಬರು ಮಂಗಳೂರು ತಾಲೂಕು ಕುಡುಪು ಗ್ರಾಮದ ಸರ್ವೇ ನಂ. 57/ಪಿ ರಲ್ಲಿ ಒಟ್ಟು 10.8 ಎಕ್ರೆ ಜಮೀನನ್ನು ಖರೀದಿಸಿದ್ದು ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಬರುವ ಪಚ್ಚನಾಡಿ ಮತ್ತು ಕುಡುಪು ಗ್ರಾಮಗಳ ಸುತ್ತಮುತ್ತ ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಘನತ್ಯಾಜ್ಯ ನಿರ್ವಹಣೆಯ ಘಟಕವನ್ನು ಭವಿಷ್ಯದಲ್ಲಿ ವಿಸ್ತರಿಸುವ ಉದ್ದೇಶದಿಂದ ಸದ್ರಿ ಜಮೀನನ್ನು ಟಿ.ಡಿ.ಆರ್ ನಿಯಮದಡಿ 20ea ಮಾಡುವ ಬಗ್ಗೆ ಮಂಗಳೂರು ಮಹಾನಗರ ಪಾಲಿಕೆಯೊಂದಿಗೆ ಫಿರ್ಯಾದಿದಾರರಿಗೆ ಹಾಗೂ ಜಮೀನಿನ ಈ ಹಿಂದಿನ ಮಾಲಕರಿಗೆ ಪತ್ರ ವ್ಯವಹಾರವಾಗಿತ್ತು. ಅದರಂತೆ ಸದ್ರಿ ಜಮೀನು 2024 ಜನವರಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಹೆಸರಿಗೆ ನೋಂದಣಿಯಾಗಿತ್ತು.
ಬಳಿಕ ಮಹಾನಗರ ಪಾಲಿಕೆಯ ಆಯುಕ್ತರು ಸದ್ರಿ ಜಮೀನಿನ ಟಿ.ಡಿ.ಆರ್ ನೀಡಲು ಮುಡಾ ಆಯುಕ್ತರಿಗೆ ಫೆಬ್ರವರಿ ತಿಂಗಳಲ್ಲಿ ಪತ್ರ ಕಳುಹಿಸಿದ್ದು, ಮುಡಾ ಆಯುಕ್ತರಾದ ಮನ್ಸೂರ್ ಆಲಿರವರು ಸದ್ರಿ ಫೈಲ್ ಅನ್ನು ಪೆಂಡಿಂಗ್ ಇಟ್ಟಿದ್ದರು. ಈ ಬಗ್ಗೆ ಬಿಲ್ಡರ್ ಮುಡಾ ಆಯುಕ್ತ ಮನ್ಸೂರ್ ಆಲಿ ಬಳಿ ಹೋಗಿ ಮಾತನಾಡಿದಾಗ 25 ಲಕ್ಷ ರೂ. ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.
Posted by Vidyamaana on 2023-03-16 04:02:52 |
ಪುತ್ತೂರು: ನ್ಯಾಷನಲ್ ಮಿಷನ್ ಕರ್ನಾಟಕ ಇದರ ಶೈಕ್ಷಣಿಕ ಅಭಿಯಾನದ ಅಂಗವಾಗಿ ಮಾ.18ರಂದು ಸಂಜೆ ಉಳ್ಳಾಲದ ಹಾಜ್ರತ್ ಮೈದಾನದಲ್ಲಿ ಮೆಸೇಜ್ -2 ಅಹ್ಲನ್ ರಮಝಾನ್ ಕಾರ್ಯಕ್ರಮ ನಡೆಯಲಿದೆ ಎಂದು ನ್ಯಾಷನಲ್ ಮಿಷನ್ ಕರ್ನಾಟಕದ ರಾಜ್ಯ ಉಪಾಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ , ಸೈಯದ್ ಸ್ವಾದಿಕಲಿ ಶಿಹಾಬ್ ತಂಙಳ್ ಪಾಣಕ್ಕಾಡ್, ಶೈಖುನಾ ಶೈಖುಲ್ ಜಾಮಿಯಾ, ಅಲಿಕುಟ್ಟಿ ಮುಸ್ಲಿಯಾರ್ ಮತ್ತಿತರರ ಧಾರ್ಮಿಕ, ಸಾಮಾಜಿಕ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪುತ್ತೂರಿನಿಂದ ಒಂದು ಸಾವಿರಕ್ಕೂ ಮಿಕ್ಕಿ ಜನರು ಭಾಗವಹಿಸುವ ನಿರೀಕ್ಷೆಯಿದ್ದು, ಅಂದು ಸಂಜೆ 4 ಗಂಟೆಗೆ ದರ್ಬೆ ಬೈಪಾಸ್ ಪತ್ರಾವು ವೃತ್ತದಿಂದ ವಾಹನ ಹೊರಡಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಂಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ, ಪುತ್ತೂರು ರೇಂಜ್ನ ಕೋಶಾಧಿಕಾರಿ ಎಲ್.ಟಿ. ಅಬ್ದುರಝಾಕ್ ಹಾಜಿ, ಎಸ್ಕೆಎಸ್ಸೆಸ್ಸೆಫ್ ಯುಎಇ ಕಾರ್ಯಾಧ್ಯಕ್ಷ ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ, ಪುತ್ತೂರು ವಲಯ ಅಧ್ಯಕ್ಷ ಹಾಜಿ ಬಾತೀಶ ಪಾಟ್ರಕೋಡಿ ಉಪಸ್ಥಿತರಿದ್ದರು.