Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23
ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”
ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.
ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.
ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.
ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!
ಡಾ. ಶಿವರಾಮ ಭಟ್ ಗುರು:
ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ. ಶಿವರಾಮ ಭಟ್ ಎಂದು ನಂಬಿದ್ದರು.
ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!
ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.
Posted by Vidyamaana on 2023-08-29 06:30:48 |
ಪುತ್ತೂರು: ಇಲ್ಲಿನ ಅಕ್ಷಯ ಕಾಲೇಜಿನ ಸಾಂಸ್ಕೃತಿಕ ಸಂಘ ಹಾಗೂ ಐಕ್ಯೂಎಸಿ ಸಹಯೋಗದಲ್ಲಿ ಆಗಸ್ಟ್ 30ರಂದು ಬೆಳಿಗ್ಗೆ 10.30ಕ್ಕೆ ಕಾಲೇಜು ಆವರಣದಲ್ಲಿ ಶ್ರಾವಣೋತ್ಸವಂ ಓಣಂ ಆಚರಣೆ ಕಾರ್ಯಕ್ರಮ ನಡೆಯಲಿದೆ.
ಪ್ರಗತಿ ಎಜುಕೇಷನಲ್ ಫೌಂಡೇಷನಿನ ಸ್ಥಾಪಕ ಅಧ್ಯಕ್ಷ ಗೋಕುಲ್’ನಾಥ್ ಪಿ.ವಿ. ಕಾರ್ಯಕ್ರಮ ಉದ್ಘಾಟಿಸುವರು. ಅಕ್ಷಯ ಕಾಲೇಜಿನ ಅಧ್ಯಕ್ಷ ಜಯಂತ್ ನಡುಬೈಲ್ ಅಧ್ಯಕ್ಷತೆ ವಹಿಸುವರು.
ಸಾಂಸ್ಕೃತಿಕ ಸಂಘದ ಸಂಯೋಜಕಿ ದೀಕ್ಷಾ ರೈ, ಐಕ್ಯೂಎಸಿ ಸಂಯೋಜಕ ರಾಕೇಶ್ ಕುಳದಪಾರೆ, ಆಡಳಿತಾಧಿಕಾರಿ ಅರ್ಪಿತ್ ಟಿ.ಎ., ಪ್ರಾಂಶುಪಾಲ ಸಂಪತ್ ಕೆ. ಪಕ್ಕಳ ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
Posted by Vidyamaana on 2023-11-06 14:05:44 |
ಕೊಲಂಬೊ: ಬರ್ತ್ ಡೇ (BirthDay) ಬಂತೆಂದರೆ ಸಾಕು ಮಕ್ಕಳು ಖುಷಿಯಾಗುತ್ತಾರೆ. ಅದರಲ್ಲೂ ಕೇಕ್ ಕಟ್ಟಿಂಗ್, ಸರ್ಪ್ರೈಸ್ ಪಾರ್ಟಿ ಇದ್ದರಂತೂ ಕೇಳೋದೇ ಬೇಡ, ಅವರು ಸಂತಸದಿಂದ ತೇಲಾಡುತ್ತಾರೆ. ಆದರೆ ಬಡತನದಲ್ಲಿ ಹುಟ್ಟಿ ಬೆಳೆದ ಮಕ್ಕಳಿಗೆ ಆ ಭಾಗ್ಯವಿರುವುದಿಲ್ಲ.ಅಂತಹ ಹುಡುಗನೊಬ್ಬನ ಬರ್ತ್ಡೇಯನ್ನು ಸರ್ಪ್ರೈಸ್ ಆಗಿ ಆಚರಿಸಿದ ವಿಡಿಯೊ ಇದೀಗ ವೈರಲ್ (Viral Video) ಆಗಿದೆ. ಮೊದಲ ಬಾರಿ ತನ್ನ ಹುಟ್ಟುಹಬ್ಬವನ್ನು ಆಯೋಜಿಸಿರುವುದನ್ನು ನೋಡಿ ಆ 8ರ ಹರೆಯದ ಬಾಲಕ ಭಾವುಕನಾಗಿದ್ದಾನೆ. ಈ ವಿಡಿಯೊ ನೋಡಿ ಹಲವರು ತಮ್ಮ ಬಾಲ್ಯವನ್ನು ನೆನಪಿಸಿಕೊಂಡಿದ್ದಾರೆ.ವಿಡಿಯೊದಲ್ಲೇನಿದೆ?
ಕೊಲಂಬಿಯಾದ ಹುಡುಗನೊಬ್ಬನ ಬರ್ತ್ ಡೇ ಪಾರ್ಟಿ ಎಲ್ಲರ ಮನ ಕಲುಕಿದ ವಿಡಿಯೋ ಇದು!!
ಕೊಲಂಬಿಯಾದ ಎಬೆಜಿಕೊದ 8 ವರ್ಷದ ಏಂಜೆಲ್ ಡೇವಿಡ್ನ ಕುಟುಂಬದ ಆರ್ಥಿಕ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಹೀಗಾಗಿ ಆತನ ಹುಟ್ಟುಹಬ್ಬವನ್ನು ಆಚರಿಸುತ್ತಿರಲಿಲ್ಲ. ಎಂದಿನಂತೆ ಈ ಬಾರಿಯೂ ಆತನ ಬರ್ತ್ಡೇ ಬಂತು. ಆತನಿಗೆ ಸರ್ಪ್ರೈಸ್ ಕೊಡಲು ಶಿಕ್ಷಕರು, ಸಹಪಾಠಿಗಳು ನಿರ್ಧರಿಸಿದರು. ಅದರಂತೆ ಆತನ ಕ್ಲಾಸ್ ರೂಮ್ ಅನ್ನು ಅವನಿಗೆ ಗೊತ್ತಿಲ್ಲದಂತೆ ಅಲಂಕರಿಸಿದರು. ಎಂದಿನಂತೆ ಶಾಲೆಗೆ ಬಂದ ಡೇವಿಡ್ ತರಗತಿಯ ಬಾಗಿಲಿನಲ್ಲೇ ನಿಂತುಬಿಟ್ಟ. ಯಾವುದನ್ನೂ ಊಹಿಸಿರದ ಅವನು ಬರ್ತ್ಡೇ ಸರ್ಪ್ರೈಸ್ ನೋಡಿ ಭಾವುಕನಾದ. ಕಣ್ಣಿನಲ್ಲಿ ನೀರು ತುಂಬಿ ಬಂತು. ಕೂಡಲೇ ಅವನ ಬಳಿ ತೆರಳಿದ ಸಹಪಾಠಿಗಳು ಪ್ರೀತಿಯಿಂದ ಅಪ್ಪಿಕೊಂಡು ಸಮಾಧಾನ ಮಾಡಿ, ಶುಭಾಶಯ ತಿಳಿಸಿದರು.ಮಕ್ಕಳ ಮುಗ್ಧತೆಗೆ ನೆಟ್ಟಿಗರು ಮನ ಸೋತಿದ್ದಾರೆ. ಈ ಹೃದಯಸ್ಪರ್ಶಿ ವಿಡಿಯೊವನ್ನು ಈಗಾಗಲೇ 20 ಲಕ್ಷಕ್ಕಿಂತ ಅಧಿಕ ಮಂದಿ ವೀಕ್ಷಿಸಿದ್ದಾರೆ. ಡೇವಿಡ್ನ ಮುಗ್ಧತೆ ಜತೆಗೆ ಬರ್ತ್ಡೇ ಸರ್ಪ್ರೈಸ್ ಪಾರ್ಟಿ ಆಯೋಜಿಸಿದ್ದ ಶಿಕ್ಷಕರು, ಸಹಪಾಠಿಗಳಿಗೂ ನೆಟ್ಟಿಗರು ಮೆಚ್ಚುಗೆ ಸೂಚಿಸಿದ್ದಾರೆ. ಮಕ್ಕಳ ಈ ಕಪಟವಿಲ್ಲದೆ ಸ್ವಭಾವದ ಕಾರಣದಿಂದಲೇ ಅವರನ್ನು ದೇವರಿಗೆ ಹೋಲಿಸಲಾಗುತ್ತದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ನೆಟ್ಟಿಗರು ಏನಂದ್ರು?
ವಿಡಿಯೊ ನೋಡಿದ ಒಬ್ಬರಂತೂ ಭಾವುಕರಾಗಿ ʼʼಹೃದಯಸ್ಪರ್ಶಿ ವಿಡಿಯೊ. ಕೆಲವೊಂದು ನಮ್ಮ ಚಿಕ್ಕ ಪುಟ್ಟ ಕೆಲಸಗಳೇ ಇತರರ ಮೇಲೆ ಅಗಾಧವಾದ ಧನಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮಿಂದ ಇತರರಿಗೆ ಸಹಾಯ ಆಗುವುದಿದ್ದರೆ ದಯವಿಟ್ಟು ಮಾಡಿ. ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ಇತರರಿಗೆ ಸಹಾಯಹಸ್ತ ಚಾಚಿʼʼ ಎಂದಿದ್ದಾರೆ. ಅನೇಕರಿಗಂತೂ ಬರ್ತ್ಡೇ ಪಾರ್ಟಿ ಮಾಡಲು ಅಥವಾ ಉಡುಗೊರೆ ಕೊಳ್ಳಲು ಸಾಧ್ಯವಾಗದ ತಮ್ಮ ಬಾಲ್ಯದ ನೆನಪು ಕಾಡಿದೆ.ಈ ಬಗ್ಗೆ ನೆಟ್ಟಿಗರೊಬ್ಬರು ತಮ್ಮ ಅನುಭವವನ್ನು ಹೀಗೆ ಹಂಚಿಕೊಂಡಿದ್ದಾರೆ, ʼʼಈ ಹುಡುಗನ ಭಾವನೆ ನನಗೆ ಅರ್ಥವಾಗುತ್ತದೆ. ನಾನು 6 ವರ್ಷದವನಿದ್ದಾಗ ಬಡತನದ ಬೇಗೆಯಲ್ಲಿ ಬೇಯುತ್ತಿದ್ದೆವು. ನನ್ನ ಬರ್ತ್ಡೇ ದಿನ ಬೆಳಗ್ಗೆ ನಾನು ಅಳುತ್ತಿದ್ದೆ. ಕೇಕ್ ಮತ್ತು ಐಸ್ಕ್ರೀಂ ಕೊಳ್ಳಲು ಸಾಧ್ಯವಿಲ್ಲ ಎನ್ನುವುದೇ ನನ್ನ ಅಳುವಿಗೆ ಕಾರಣವಾಗಿತ್ತುʼʼ ಎಂದು ಹೇಳಿದ್ದಾರೆ. ʼʼಈ ವಿಡಿಯೊ ನೋಡಿ ಕಣ್ಣಂಚು ಒದ್ದೆಯಾಯ್ತುʼʼ ಎಂದಿದ್ದಾರೆ ಮತ್ತೊಬ್ಬರು. ʼʼನನಗೀಗ 50 ವರ್ಷ. ಆದರೂ ಈ ವಿಡಿಯೊ ನೋಡಿ ನನ್ನ ಕಣ್ಣು ತುಂಬಿ ಬಂತುʼʼ ಎಂದು ಇನ್ನೊಬ್ಬ ಭಾವುಕ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ
Posted by Vidyamaana on 2023-09-25 08:12:50 |
ಕಡಬ : ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ನಿಂದ ಕೆಳಗೆ ಬಿದ್ದ ಪರಿಣಾಮ ವ್ಯಕ್ತಿಯೋರ್ವರು ಮೃತಪಟ್ಟು, ಇನ್ನೋರ್ವ ಸಣ್ಣ-ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾದ ಘಟನೆ ಕಡಬದ ಅಂಚೆ ಕಚೇರಿ ಸಮೀಪ ನಡೆದಿದೆ.
ಮೃತ ವ್ಯಕ್ತಿಯನ್ನು ಕಡಬ ತಾಲೂಕಿನ ಗ್ರಾಮದ ಕಳಾರ ಸಮೀಪದ ಕುದ್ಕೋಳಿ ನಿವಾಸಿ, ಕೃಷಿಕ ಅಚ್ಚುತ್ತ ಗೌಡ (63) ಎಂದು ಗುರುತಿಸಲಾಗಿದೆ.ಮೃತರು ಇಂದು ಸಂಜೆ ಕಡಬದಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಮನೆಗೆ ಹೊರಟಿದ್ದ ವೇಳೆ ಅಂಚೆ ಕಛೇರಿ ಸಮೀಪದ ತಿರುವಿನಲ್ಲಿ ಅಚ್ಚುತ್ತ ಗೌಡ ಹಾಗೂ ಬಲ್ಯ ನಿವಾಸಿ ಚಂದ್ರಶೇಖರ ಎಂಬವರು ಬಸ್ಸಿನಿಂದ ರಸ್ತೆಗೆಸೆಯಲ್ಪಟ್ಟಿದ್ದಾರೆ.
ಗಂಭೀರ ಗಾಯಗೊಂಡ ಅಚ್ಚುತ್ತ ಗೌಡರನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಆಂಬ್ಯುಲೆನ್ಸ್ ಮೂಲಕ ಪುತ್ತೂರು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಹಾದಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಚಂದ್ರಶೇಖರ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ಪತ್ನಿ, ನಾಲ್ವರು ಮಕ್ಕಳು, ಸಹೋದರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
Posted by Vidyamaana on 2024-01-25 06:28:39 |
ಪುತ್ತೂರು: ಸ್ಕರಿಯ ಎಂ.ಎ., ಫಾರೂಕ್ ಶೇಖ್ ಮುಕ್ವೆ ಹಾಗೂ ಪ್ರಶಾಂತ್ ರೈ ಸಾರಥ್ಯದ ಬಾಂಧವ್ಯ ಫ್ರೆಂಡ್ಸ್ ಪುತ್ತೂರು ಹಾಗೂ ವಿವಿಧ ಇಲಾಖೆಗಳ ಸಹಭಾಗಿತ್ವದಲ್ಲಿ 7ನೇ ವರ್ಷದ ನಾಕೌಟ್ ಮಾದರಿಯ 16 ತಂಡಗಳ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ ಜ. 21ರಂದು ನೆಹರೂನಗರ ವಿವೇಕಾನಂದ ಕಾಲೇಜು ಮೈದಾನದಲ್ಲಿ ನಡೆಯಿತು.
ಈ ಪಂದ್ಯಾಟದಲ್ಲಿ ಲಾಯರ್ಸ್ ಇಲೆವೆನ್ ತಂಡವನ್ನು ಸೋಲಿಸಿ ಪಿ ಇ ಟಿ ಇಲೆವೆನ್ ತಂಡವು ಚಾಂಪಿಯನ್ನಾಗಿ ಹೊರಹೊಮ್ಮಿತ್ತು. ಲಾಯರ್ಸ್ ಇಲೆವೆನ್ ತಂಡ ರನ್ನರ್ ಪ್ರಶಸ್ತಿ ಪಡೆದುಕೊಂಡರೆ ಮೂರನೇ ಸ್ಥಾನವನ್ನು ವಿವೇಕಾನಂದ ತಂಡ ಮತ್ತು ನಾಲ್ಕನೇ ಸ್ಥಾನವನ್ನು ಸುದ್ದಿ ಇಲೆವೆನ್ ತಂಡ ತಮ್ಮದಾಗಿಸಿಕೊಂಡಿತು. ಪೊಲೀಸ್ ಇಲೆವನ್ ಮತ್ತು ವಿವೇಕಾನಂದ ಕಾಲೇಜು ಇಲೆವನ್ ಮಹಿಳಾ ತಂಡಗಳ ನಡುವೆ ನಡೆದ ಪ್ರದರ್ಶನ ಪಂದ್ಯಾಟದಲ್ಲಿ ವಿವೇಕಾನಂದ ಕಾಲೇಜು ಇಲೆವನ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿ, ಪೊಲೀಸ್ ಇಲೆವೆನ್ ತಂಡ ರನ್ನರ್ ಅಪ್ ಪ್ರಶಸ್ತಿ ಪಡೆದುಕೊಂಡಿತು.
ಪಂದ್ಯಾಟ ಉದ್ಘಾಟಿಸಿ ಮಾತನಾಡಿದ ಡಿವೈಎಸ್ಪಿ ಅರುಣ್ ನಾಗೇಗೌಡ, ಸಂಘಟಕರಿಗೂ ಆಟಗಾರರಿಗೂ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ವಿವಿಧ ಇಲಾಖೆಗಳು ಸಂಘ ಸಂಸ್ಥೆಗಳು ಒಟ್ಟು ಸೇರಿ ಇಂತಹ ಕಾರ್ಯಕ್ರಮ ಆಯೋಜನೆ ಮಾಡಿದರೆ ಇಲಾಖೆಗಳ ಮಧ್ಯ ಬಾಂಧವ್ಯ ಮೂಡಿಸಲು ಸಾಧ್ಯ. ಕ್ರಿಕೆಟ್ ಪಂದ್ಯಾಟದ ಮೂಲಕ ಸಂಘಟಕರು ಒಳ್ಳೆಯ ಕಾರ್ಯಕ್ರಮ ಆಯೋಜನೆ ಮಾಡಿದ್ದೀರಿ. ಇಂತಹ ಕಾರ್ಯಕ್ರಮಗಳು ಇಂದಿನ ಅಗತ್ಯ. ಸಾರ್ವಜನಿಕರಿಗೂ ಇಲಾಖೆಗಳ ಮತ್ತು ಅಧಿಕಾರಿಗಳ ಪರಿಚಯಕ್ಕೆ ಇದು ಸುಲಭ ಎಂದು ಹೇಳಿ ಶುಭ ಹಾರೈಸಿದರು
ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ ಕೃಷ್ಣ ಭಟ್ ಮಾತನಾಡಿ, ಬಾಂಧವ್ಯ ಟ್ರೋಫಿ ವಿವಿಧ ಇಲಾಖೆಗಳೊಂದಿಗೆ ಬಾಂಧವ್ಯವನ್ನು ಬೆಳೆಸಲು ಹಮ್ಮಿಕೊಂಡಿರುವಂತಹ ವಿಶೇಷ ಕಾರ್ಯಕ್ರಮ. ಅದಕ್ಕೆ ಸಂಘಟಕರಿಗೆ ನಾನು ಅಭಿನಂದಿಸುತ್ತೇನೆ ಎಂದು ಹೇಳಿ ಶುಭ ಹಾರೈಸಿದರು.
ನಗರಸಭೆ ಮಾಜಿ ಅಧ್ಯಕ್ಷ ಜೀವಂಧರ್ ಜೈನ್ ಮಾತನಾಡಿ, ಇಲಾಖೆಗಳು ಸೌಹಾರ್ದತೆಯಿಂದ ಕೆಲಸಗಳು ಮಾಡಬೇಕು. ಸರಕಾರಿ ಅಧಿಕಾರಿಗಳು ದಿನನಿತ್ಯದ ಕೆಲಸದ ಒತ್ತಡದ ನಡುವೆ ಒಂದು ದಿನ ಎಲ್ಲಾ ಇಲಾಖೆಗಳು ಒಟ್ಟು ಸೇರಿ ಆಟ ಆಡುವುದು ಉತ್ತಮ ಬೆಳವಣಿಗೆ. ಮುಂದಿನ ಸಮಾಜಮುಖಿ ಕೆಲಸ ಕಾರ್ಯಗಳ ಚಿಂತನೆ ಇಟ್ಟುಕೊಂಡು ಈ ಬಾಂಧವ್ಯ ಟ್ರೋಪಿ ನಡೆಯುತ್ತಿದೆ. ಮುಂದಿನ ವರ್ಷ ವಿಜೃಂಭಣೆಯಿಂದ ನಡೆಯಲಿ ಎಂದು ಹೇಳಿ ಶುಭ ಹಾರೈಸಿದರು.
ಡಾ.ಸುರೇಶ್ ಪುತ್ತೂರಾಯ ಮಾತನಾಡಿ, ಗೆಲುವಿಗಿಂತ ಭಾಗವಹಿಸುವುದೇ ಮುಖ್ಯ ಎಂಬ ಧ್ಯೇಯದೊಂದಿಗೆ ಎಲ್ಲಾ ತಂಡಗಳು ಆಡುತ್ತಿರುವುದು ತುಂಬಾ ಸಂತೋಷದ ವಿಷಯ ಎಂದು ಶುಭ ಹಾರೈಸಿದರು.
ಉದ್ಯಮಿ ಸಹಜ್ ರೈ ಮಾತನಾಡಿ, ಪುತ್ತೂರಿನ ಇತಿಹಾಸದಲ್ಲಿ ವಿವಿಧ ಇಲಾಖೆಗಳನ್ನು ಒಂದೇ ಕಡೆ ಸೇರಿಸಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸುವ ಕಾರ್ಯಕ್ರಮ ಇದ್ರೆ ಬಾಂಧವ್ಯ ಟೋಪಿ ಮಾತ್ರ ಎಂದು ಹೇಳಿ ಶುಭ ಹಾರೈಸಿದರು.
ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪೊಲೀಸ್ ನಿರೀಕ್ಷಕ ಸುನಿಲ್ ಕುಮಾರ್, ಪೊಲೀಸ್ ಉಪನಿರೀಕ್ಷಕಿ ಸೇಸಮ್ಮ, ಸುದ್ದಿ ಸಮೂಹ ಸಂಸ್ಥೆಗಳ ಸಿಇಓ ಸೃಜನ್ ಊರುಬೈಲ್, ಮೆಸ್ಕಾಂ ಇಂಜಿನಿಯರ್ ರಾಮಚಂದ್ರ, ಉದ್ಯಮಿಗಳಾದ ಶಿವರಾಮ ಆಳ್ವ ಮುಖ್ಯ ಅತಿಥಿಗಳಾಗಿ ಆಗಮಸಿ ಶುಭ ಹಾರೈಸಿದರು.
ಸಮಾರೋಪ:
ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ್ ಮಾತನಾಡಿ, ಪಂದ್ಯಾಟದ ಯಶಸ್ಸಿನ ಹಿಂದಿರುವ ಫಾರೂಕ್ ನಮ್ಮ ಸುದ್ದಿಯ ಭಾಗ. ಸ್ಕರಿಯ ಹಾಗೂ ಪ್ರಶಾಂತ್ 7 ವರ್ಷಗಳ ಹಿಂದೆ ಕಾರ್ಯಕ್ರಮದ ಬಗ್ಗೆ ಪ್ರಸ್ತಾಪಿಸಿದಾಗ ಇದು ಸಾಧ್ಯವೇ ಎಂದು ಯೋಚನೆ ಮಾಡಿದ್ದೆವು. ಈ 7 ವರ್ಷಗಳಿಂದ ಪಂದ್ಯ ಅತ್ಯದ್ಭುತವಾಗಿ ನಡೆದುಕೊಂಡು ಬಂದಿದೆ. ಜನರಲ್ಲಿ ಬಾಂಧವ್ಯ ಮೂಡಿಸುವ ಇಂತಹ ಚಿಂತನೆಗೆ ಅಭಿನಂದನೆ ಸಲ್ಲಿಸಬೇಕು. ಪುರುಸೋತಿಲ್ಲದ ಜನರನ್ನು ಮತ್ತು ಸಮಾಜಕ್ಕೆ ಕೊಡುಗೆ ನೀಡುವವರನ್ನು ಕ್ರೀಡೆಯೊಳಗೆ ತಂದು ಬೆರೆಯುವಂತೆ ಮಾಡುವುದು ಅತ್ಯಂತ ಒಳ್ಳೆಯ ಕೆಲಸವಾಗಿದೆ. ಕ್ರೀಡೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿ ಶುಭ ಹಾರೈಸಿದರು
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಕ್ರೀಡೆ ಎಂದರೆ ಮೊದಲು ನೆನಪಾಗುವುದು ಒಲಿಂಪಿಕ್ಸ್. ಇದು ದೇಶ ದೇಶಗಳನ್ನು ಒಂದುಗೂಡಿಸುವ ಕೆಲಸ ಮಾಡಿದೆ. ಒಟ್ಟು ಜನಸಂಖ್ಯೆಯ 60 ಶೇ. ಜನ 40ಕ್ಕಿಂತ ಕೆಳಗಿನವರು. ನಾವು ಕ್ರೀಡೆಯಲ್ಲಿ ತೊಡಗಿಸಿಕೊಂಡು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಹೋಗಲು ಅವಕಾಶ ಇದೆ. ಜೊತೆಗೆ ಪ್ರೀತಿ ವಿಶ್ವಾಸದ, ಬಾಂಧವ್ಯದ ಜೀವನ ನಡೆಸಲು ಕೂಡ ಈ ಕ್ರೀಡೆ ಸಹಕಾರಿಯಾಗಿದೆ. ನಾನು ಕಳೆದ 7 ವರ್ಷಗಳಿಂದಲೂ ಬಾಂಧವ್ಯ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದೇನೆ. ಶಾಸಕನಾಗಿ, ಮಾಜಿ ಶಾಸಕನಾಗಿಯೂ ಬಂದಿದ್ದೇನೆ. ಇಂತಹ ಉತ್ತಮ ಕ್ರೀಡಾಕೂಟ ಆಯೋಜನೆ ಮಾಡಿದ ಸ್ಕರೀಯ, ಫಾರೂಕ್ ಶೇಖ್ ಮತ್ತು ಪ್ರಶಾಂತ್ ಅವರಿಗೆ ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಮೂವರು ಮೊದಲಿಗೆ ಸೇರಿದಾಗ ಇವರು ಏನು ಮಾಡಬಹುದು ಎಂದು ಸ್ವಲ್ಪ ಅಪಸ್ವರ ಇತ್ತು. ಆದರೆ ಇಂದು ಇವರು ಏನು ಮಾಡಬಹುದು ಎನ್ನುವುದು ಗೊತ್ತಾಗಿದೆ ಎಂದು ಹೇಳಿ ಶುಭ ಹಾರೈಸಿದರು.
ಪೊಲೀಸ್ ಉಪನಿರೀಕ್ಷಕರಾದ ಆಂಜನೇಯ ರೆಡ್ಡಿ, ಜಂಬೂರಾಜ್ ಮಹಾಜನ್, ರಾಜೇಶ್, ಉದಯ ರವಿ, ಪ್ರೇಮ ಬೇಕರಿ ಮಾಲಕ ವಿನೋದ್ ಅವರ ಪುತ್ರಿಯರಾದ ಅಮೃತ ಅದ್ಯಾತ, ಬಿಕೆ ಬಿಲ್ಡ್ ಮಾರ್ಟ್ ಮಾಲಕ ಮೊಯ್ದೀನ್, ಮಂಗಳೂರು ಕಟೀಲ್ ಲಾಜಿಸ್ಟಿಕಿನ ಜನಾರ್ದನ ಪೂಜಾರಿ ಅತಿಥಿಯಾಗಿ ಭಾಗವಹಿಸಿದರು.
ಇದೇ ಸಂದರ್ಭ ಶಾಸಕ ಅಶೋಕ್ ಕುಮಾರ್ ರೈ ಹಾಗೂ 400 ಮೀಟರ್ ಹರ್ಡಲ್ಸ್ ನ ರಾಷ್ಟ್ರೀಯ ಕ್ರೀಡಾಪಟು ಅನಘ ಕೆ.ಎ., ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಜುವೆನ್ನಾ ಡ್ಯಾಝಲ್ ಕುಟಿನ್ಹಾ, ರಾಷ್ಟ್ರಮಟ್ಟದ ತ್ರೋಬಾಲ್ ಆಟಗಾರ ಮಹಮ್ಮದ್ ಶಾನ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಪಂದ್ಯಾಟದ್ದುದಕ್ಕೂ ಉಪಾಹಾರ, ಊಟ, ಪಾನೀಯದ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗಿತ್ತು.
ಬಾಂದವ್ಯ ಟ್ರೋಫಿ ಯ ಸಂಘಟಕ ಸ್ಕರಿಯ ಯಂ ಎ ಸ್ವಾಗತಿಸಿ, ಪ್ರಶಾಂತ್ ರೈ ವಂದಿಸಿದರು. ಬಾಲಕೃಷ್ಣ ಪೊರ್ದಾಳ್ ಕಾರ್ಯಕ್ರಮ ನಿರೂಪಿಸಿದರು.
Posted by Vidyamaana on 2023-01-22 04:24:05 |
ಪುತ್ತೂರು: ಮುಂಡೂರು ಗ್ರಾಮದ ಪುತ್ತಿಲ ದಿ. ಕೃಷ್ಣಯ್ಯರವರ ಪತ್ನಿ ಮಂದಾಕಿನಿ (90ವ.)ರವರು ಜ.21ರಂದು ಅಸೌಖ್ಯದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಪುತ್ರರಾದ ಹಿಂದು ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಮುಂಡೂರು ಗ್ರಾ.ಪಂ ಸದಸ್ಯ ಅಶೋಕ್ ಕುಮಾರ್ ಪುತ್ತಿಲ, ಪುತ್ರಿಯರಾದ ವೀಣಾ, ವಿನಯ ಹಾಗೂ ಅನಿತಾರವರನ್ನು ಅಗಲಿದ್ದಾರೆ.
Posted by Vidyamaana on 2023-11-10 13:54:17 |
ಬೆಂಗಳೂರು : 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ (PSI) ನೇಮಕಾತಿ ಅಕ್ರಮ ಹಿನ್ನಲೆಯಲ್ಲಿ, ಈ ಮೊದಲು ನಡೆಸಿದ್ದ ಲಿಖಿತ ಪರೀಕ್ಷೆ, ಆಯ್ಕೆ ಪಟ್ಟಿಯನ್ನು ರದ್ದುಪಡಿಸಿ, ಹೊಸದಾಗಿ ಪರೀಕ್ಷೆ ನಡೆಸಲು ಹಿಂದಿನ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ 269 ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು.ಇದೀಗ ಹೈಕೋರ್ಟ್ ಪಿಎಸ್ಐ ನೇಮಕಾತಿಯ ಮರು ಪರೀಕ್ಷೆಗೆ ಆದೇಶ ಮಾಡಿದೆ. ಈ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದಂತ ಅಭ್ಯರ್ಥಿಗಳಿಗೆ ಬಿಗ್ ಶಾಕ್ ನೀಡಿದೆ.
ರಾಜ್ಯ ಸರ್ಕಾರವು ಪಿಎಸ್ಐ ನೇಮಕಾ ಅಕ್ರಮದ ನಂತ್ರ ಪರೀಕ್ಷೆ, ಆಯ್ಕೆ ಪಟ್ಟಿ ರದ್ದುಪಡಿಸಿದ್ದನ್ನು ಪ್ರಶ್ನಿಸಿ ಅಭ್ಯರ್ಥಿ ಎನ್ ವಿ ಚಂದನ್ ಸೇರಿದಂತೆ ಆಯ್ಕೆ ಪಟ್ಟಿಯಲ್ಲಿದ್ದ 296ಕ್ಕೂ ಹೆಚ್ಚು ಅಭ್ಯರ್ಥಿಗಳು ಕೆಎಸ್ ಸಿಗೆ ಅರ್ಜಿ ಸಲ್ಲಿಸಿದ್ದರು. ಆ ಅರ್ಜಿಯನ್ನು ವಜಾಗೊಳಿಸಿತ್ತು. ಹೀಗಾಗಿ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಮರು ಪರೀಕ್ಷೆ ವಿರೋಧಿಸಿ 296 ಅಭ್ಯರ್ಥಿಗಳು ಸಲ್ಲಿಸಿದ್ದಂತ ಅರ್ಜಿಯನ್ನು ವಿಚಾರಣೆ ನಡೆಸಿದ್ದಂತ ಹೈಕೋರ್ಟ್ ನ್ಯಾಯಪೀಠವು, ಮರು ಪರೀಕ್ಷೆಗೆ ಮಧ್ಯಂತರ ತಡೆಯಾಜ್ಞೆಯನ್ನು ನೀಡಿತ್ತು. ಆ ಬಳಿಕ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ತೀರ್ಪು ಕಾಯ್ದಿರಿಸಿತ್ತು.ನ್ಯಾಯಮೂರ್ತಿ ದಿನೇಶ್ ಕುಮಾರ್ ಅವರ ನೇತೃತ್ವದ ವಿಭಾಗೀಯ ಪೀಠವು ಇಂದು ತನ್ನ ಕಾಯ್ದಿರಿಸಿದ್ದಂತ ತೀರ್ಪನ್ನು ಇಂದು ಪ್ರಕಟಿಸಿದ್ದು, 545 ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿಗೆ ಮರು ಪರೀಕ್ಷೆ ನಡೆಸುವಂತ ಆದೇಶ ಹೊರಡಿಸಿದೆ. ಅಲ್ಲದೇ ಸ್ವತಂತ್ರ ಸಂಸ್ಥೆಯಿಂದ ಮರು ಪರೀಕ್ಷೆ ನಡೆಸುವಂತೆ ಹೈಕೋರ್ಟ್ ಮಹತ್ವದ ಆದೇಶ ಮಾಡಿದೆ.
ಅಂದಹಾಗೇ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಂತ 296ಕ್ಕೂ ಹೆಚ್ಚು ಅಭ್ಯರ್ಥಿಗಳು ಅಕ್ರಮ ಎಸಗಿದವರನ್ನು ಪ್ರತ್ಯೇಕಿಸಿ, ಅಕ್ರಮದಲ್ಲಿ ಭಾಗಿಯಾಗಿರದೇ ಇರುವವರನ್ನು ನೇಮಕಾತಿ ಅಂತಿಮಗೊಳಿಸುವಂತೆ ಕೋರಿದ್ದರು. ಈ ಅರ್ಜಿಗೆ ಹೈಕೋರ್ಟ್ ಮರು ಪರೀಕ್ಷೆ ನಡೆಸುವಂತೆ ಮಹತ್ವದ ತೀರ್ಪನ್ನು ಹೊರಡಿಸಿದೆ.