Posted by vidyamaana on 2024-03-23 10:38:46 |
ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.
ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.
Posted by Vidyamaana on 2023-09-18 21:07:30 |
ಪುತ್ತೂರು : 2023-24ನೇ ಸಾಲಿನ ಕಂಬಳ ವೇಳಾಪಟ್ಟಿಯಂತೆ ಇದೇ ನ.11ರಂದು ಗುರುಪುರ ಕಂಬಳದೊಂದಿಗೆ ಜೋಡುಕರೆ ಕಂಬಳ ಋತು ಆರಂಭಗೊಳ್ಳಲಿದೆ. 22 ಕಂಬಳಗಳು ವೇಳಾಪಟ್ಟಿಯಂತೆ ನಡೆಯಲಿದೆ. ಕೋಟಿ ಚೆನ್ನಯ ಜೋಡುಕರೆ ಕಂಬಳ 2024ರ ಜ .27ರಂದು ನಡೆಯಲಿದೆ. ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಳ ಮಾ.23ರಂದು ನಡೆಯಲಿದೆ.
Posted by Vidyamaana on 2023-10-08 08:49:37 |
ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಇಂದು ಮಹತ್ವದ ಪರಾಮರ್ಶೆ ಸಭೆ ನಡೆದಿದೆ. ಸ್ವಾತಂತ್ರ್ಯ ದಿನಾಚರಣೆಗೆ ಕೆಂಪುಕೋಟೆಯಲ್ಲಿ ಪ್ರಧಾನಿ ಮೋದಿ ಮಾಡಿದ ಘೋಷಣೆಗಳು ಹಾಗೂ ಯೋಜನೆ ಅನುಷ್ಠಾನ ಕುರಿತು ಪರಾಮರ್ಶೆ ಸಭೆ ನಡೆಸಲಾಗಿದೆ. ಪ್ರಮುಖವಾಗಿ ವಸತಿ ಮತ್ತು ಇಂಧನ ಸೌಲಭ್ಯಗಳ ಒದಗಿಸುವ ಯೋಜನೆ ಕುರಿತು ಚರ್ಚಿಸಲಾಗಿದೆ.ಇದೇ ವೇಳೆ ಬಡ ಹಾಗೂ ಮಧ್ಯಮ ವರ್ಗದ ಮನೆಗಳಿಗೆ ಸೋಲಾರ್ ಒದಗಿಸುವ ಯೋಜನೆ ಕುರಿತು ಪರಾಮರ್ಶೆ ನಡೆಸಿದ್ದಾರೆ.
ಅಸಿಡಿಟಿಯ ಎದೆ ಉರಿಯನ್ನು ಮತ್ತು ಎದೆ ನೋವಿನ ಉರಿಯನ್ನು ಐಡೆಂಟಿಫೈ ಮಾಡೋದು ತುಂಬಾ ಸುಲಭ:ಡಾ ಜೆ.ಸಿ.ಅಡಿಗ
ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆ ಮೇಲೆ ಧ್ವಜಾರೋಹಣ ನೆರವೇರಿಸಿದ್ದ ಪ್ರಧಾನಿ ಮೋದಿ ದೇಶವನ್ನುದ್ಧೇಶಿ ಭಾಷಣ ಮಾಡಿದ್ದರು. ಈ ವೇಳೆ ಕೆಲ ಘೋಷಣೆಗಳನ್ನು ಮಾಡಿದ್ದರು. ಮಧ್ಯಮ ವರ್ಗದ ಕುಟುಂಬಗಳಿಗೆ ಮನೆ ಒದಿಗಿಸುವ ಕುರಿತು ಘೋಷಿಸಿದ್ದರು. ಇದೀಗ ಮಧ್ಯಮ ವರ್ಗದ ಕುಟುಂಬಗಳಿಗೆ ಮನೆ ಕನಸು ನನಸಾಗಿಸಲು ಮೋದಿ ಯೋಜನೆಗಳ ಪರಾಮರ್ಶೆ ನಡೆಸಿದ್ದಾರೆ.ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸೋಲಾರ್ ಸೌಲಭ್ಯ ಯೋಜನೆಯನ್ನು ಮೋದಿ ಘೋಷಿಸಿದ್ದರು. ಈ ಕುರಿತು ಮೋದಿ ಚರ್ಚಿಸಿದ್ದಾರೆ. ಯೋಜನೆ ಪ್ರತಿಯೊಬ್ಬ ಫಲಾನುಭವಿಗೆ ಯಾವುದೇ ಸಮಸ್ಯೆಗಳಿಲ್ಲದೆ ತಲುಪಬೇಕು. ಸರಳ ಹಾಗೂ ಸುಲಭವಾಗಿ ಸೌಲಭ್ಯವನ್ನು ಅರ್ಹ ಫಲಾನುಭವಿಗಳು ಪಡೆಯುವಂತಾಗಬೇಕು ಎಂದು ಮೋದಿ ಸೂಚಿಸಿದ್ದಾರೆ
Posted by Vidyamaana on 2024-01-05 16:39:03 |
ಮಂಗಳೂರು: ಮದುವೆ ನಡೆಯುತ್ತಿದ್ದ ವೇಳೆ ಏಕಾಏಕಿ ಕಲ್ಯಾಣ ಮಂಟಪಕ್ಕೆ (Wedding Function) ಬಂದ ಯುವತಿಯೊಬ್ಬಳು ವರ ತನಗೆ ಮದುವೆಯಾಗುವುದಾಗಿ ಮೋಸ ಮಾಡಿದ್ದಾನೆ ಎಂದು ಜಗಳವಾಡಿದ ಘಟನೆ ಮಂಗಳೂರಿನಲ್ಲಿ (Mangaluru) ನಡೆದಿದೆ.ಕಲ್ಯಾಣ ಮಂಟಪಕ್ಕೆ ಬಂದು ಗಲಾಟೆ ಮಾಡಿದ ಯುವತಿಯನ್ನು ಇಂದು ಮದುವೆಯಾಗುತ್ತಿರುವ ವರನ ಮಾಜಿ ಪ್ರೇಯಸಿ ಎಂದು ಹೇಳಲಾಗ್ತಿದ್ದು, ತನ್ನನ್ನು ಬಿಟ್ಟು ಬೇರೊಬ್ಬ ಯುವತಿಯ ಜೊತೆಗೆ ಮದುವೆಯಾಗುತ್ತಿರುವುದನ್ನು ಪ್ರಶ್ನಿಸಿ ಆಕೆ ಗಲಾಟೆ ಮಾಡಿದ್ದಾಳೆ ಎಂದು ತಿಳಿದು ಬಂದಿದೆ.ಅಂದ ಹಾಗೆ ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಬೀರಿ ಬಳಿ ನಡೆದಿದ್ದು, ಕೇರಳ ಮೂಲದ ಅಕ್ಷಯ್ ಎಂಬಾತನ ಮದುವೆ ಮಂಗಳೂರು ಮೂಲದ ಯುವತಿ ಜೊತೆ ನಡೆಯುತ್ತಿದ್ದಾಗ ಮೈಸೂರು ಮೂಲದ ಮಾಜಿ ಪ್ರೇಯಸಿ ಕಲ್ಯಾಣ ಮಂಟಪಕ್ಕೆ ಎಂಟ್ರಿಕೊಟ್ಟು ತನಗೆ ಅನ್ಯಾಯವಾಗಿದೆ, ನ್ಯಾಯ ಬೇಕು ಎಂದು ಆಗ್ರಹ ಮಾಡಿದ್ದಾಳೆ.ಕೇರಳದ ಕೊಝಿಕ್ಕೋಡ್ ಮೂಲದ ಅಕ್ಷಯ್ ಒಂದೂವರೆ ವರ್ಷದ ಹಿಂದೆ ಮೈಸೂರಿನ ಯುವತಿಯನ್ನು ಶಾದಿ ಡಾಟ್ ಕಾಮ್ ಮೂಲಕ ಪರಿಚಯ ಮಾಡಿಕೊಂಡಿದ್ದನು. ನಂತರ ವಿವಾಹವಾಗುವುದಾಗಿ ನಂಬಿಸಿ ಆಕೆಯನ್ನು ಅಲ್ಲಿಲ್ಲಿ ಸುತ್ತಾಡಿಸಿ ದೈಹಿಕ ಸಂಪರ್ಕ ನಡೆಸಿದ್ದಾನೆ. ನಂತರ ಆತ ವರಸೆ ಬದಲಾಯಿಸಿದ್ದು, ಆಕೆಯನ್ನು ಬಿಟ್ಟು ಬೇರೊಬ್ಬ ಯುವತಿಯ ಜೊತೆ ಮದುವೆಗೆ ಮುಂದಾಗಿದ್ದಾನೆ.ಅಂದಹಾಗೆ ಸಂತ್ರಸ್ತ ಯುವತಿ ಕಳೆದ ಡಿಸೆಂಬರ್ 26 ರಂದು ಅಕ್ಷಯ್ ವಿರುದ್ಧ ಕೇರಳದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಪ್ರಕರಣ ಸಂಬಂಧ ಅರೋಪಿ ಅಕ್ಷಯ್ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿತ್ತು. ಈ ನಡುವೆ ಮಂಗಳೂರನ ಯುವತಿ ಜೊತೆ ಅಕ್ಷಯ್ಗೆ ವಿವಾಹ ನಿಶ್ಚಯವಾಗಿದೆ.ಅಕ್ಷಯ್ಗೆ ಕರ್ನಾಟಕ-ಕೇರಳ ಗಡಿಭಾಗ ಬೀರಿಯ ಖಾಸಗಿ ಹಾಲ್ನಲ್ಲಿ ಮದುವೆ ನಡೆಯುತ್ತಿರುವ ವಿಚಾರ ತಿಳಿದ ಬೆನ್ನಲ್ಲೇ ಉಳ್ಳಾಲ ಪೊಲೀಸರೊಂದಿಗೆ ಹಾಲ್ಗೆ ಆಗಮಿಸಿದ ಯುವತಿ ಕಲ್ಯಾಣ ಮಂಟಪದ ಮುಂಭಾಗದಲ್ಲಿ ಹೈಡ್ರಾಮ ನಡೆಸಿದ್ದಾಳೆ. ನಂತರ ಪೊಲೀಸರೇ ಆಕೆಯನ್ನು ಹಾಲ್ ಬಳಿಯಿಂದ ಕೇರಳದ ಮಂಜೇಶ್ವರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.ಈ
ಮಧ್ಯೆ, ಆರೋಪಿಯನ್ನು ಅರೆಸ್ಟ್ ಮಾಡಿ ಅಂದರೆ ನನ್ನನ್ನೇ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಯುವತಿ ಆಕ್ರೋಶ ಹೊರಹಾಕಿದ್ದಾಳೆ. ನಂತರ ಅಕ್ಷಯ್ ಮಂಗಳೂರು ಯುವತಿಗೆ ತಾಳಿ ಕಟ್ಟಿದ್ದಾನೆ ಎಂದು ತಿಳಿದು ಬಂದಿದೆ.
Posted by Vidyamaana on 2024-04-11 16:20:02 |
ಕಡಬ: ಹಿಂದಿನ 40 ವರ್ಷಗಳಲ್ಲಿ ಜಿಲ್ಲೆಗೆ ಕಾಂಗ್ರೆಸ್ ಸಂಸದರು ನೀಡಿರುವ ಕೊಡುಗೆ ಹಾಗೂ ನಂತರದ 33 ವರ್ಷ ಬಿಜೆಪಿ ಸಂಸದರು ನೀಡಿರುವ ಕೊಡುಗೆಗಳನ್ನು ತುಲನೆ ಮಾಡಿದರೆ ಜಿಲ್ಲೆಯ ಅಭಿವೃದ್ಧಿ ವಿಚಾರ ಅರ್ಥವಾಗುತ್ತದೆ. ಬುದ್ದಿವಂತರ ಜಿಲ್ಲೆ ಅಭಿವೃದ್ಧಿ ಕಡೆ ಹೆಜ್ಜೆ ಹಾಕಬೇಕಾಗಿದ್ದು, ಇದಕ್ಕಾಗಿ ಮತದಾರರು ಕಾಂಗ್ರೆಸನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಹೇಳಿದರು.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಲಂಕಾರಿನಲ್ಲಿ ನಡೆದ ಚುನಾವಣಾ ಸಭೆಯಲ್ಲಿ ಮಾತನಾಡಿದರು.
ಚುನಾವಣೆ ಪ್ರಾರಂಭವಾದಾಗಿನಿಂದ ಬಿಜೆಪಿ ಸಂಸದರ ಸಾಧನೆ ಬಗ್ಗೆ ಕೇಳುತ್ತಿದ್ದೇವೆ. ಆದರೆ ಇದುವರೆಗೆ ಯಾರೂ ಇದಕ್ಕೆ ಉತ್ತರಿಸಿಲ್ಲ ಎಂದರು. ನಾವೂ ಮೌನವಾದರೆ ಜಿಲ್ಲೆ ಅಭಿವೃದ್ಧಿಯಲ್ಲಿ ಇದೇ ರೀತಿ ಹಿಂದೆ ಬೀಳಲಿದೆ. ಹಾಗಾಗಿ ಪ್ರಚೋದನೆಯ ಮಾತುಗಳಿಗೆ ಒಳಗಾಗದೇ, ಜಾಗೃತರಾಗಿ ಮತ ಚಲಾಯಿಸಬೇಕು. ಈ ಬಾರಿ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಗೆಲ್ಲುವುದು ನಿಶ್ಚಿತ ಎಂದರು.
ಜಿಲ್ಲೆಯಲ್ಲಿ ಬಿಜೆಪಿ ಸೋಲುತ್ತದೆ ಎನ್ನುವುದು ಬಿಜೆಪಿಗರಿಗೆ ಸ್ಪಷ್ಟವಾಗಿ ಅರಿವಾಗಿದೆ. ಅದಕ್ಕಾಗಿ ಅಪಪ್ರಚಾರದ ಮಾರ್ಗ ಹಿಡಿದಿದ್ದಾರೆ. ಮುಂದಿನ ದಿನ ಅಪಪ್ರಚಾರ ಇನ್ನೂ ಹೆಚ್ಚಾಗಬಹುದು. ಎದೆಗುಂದದೇ ಪ್ರಚಾರ ಕಾರ್ಯದಲ್ಲಿ ತೊಡಗಿಕೊಳ್ಳಿ ಎಂದರು
Posted by Vidyamaana on 2023-06-07 07:11:52 |
ಪುತ್ತೂರು: ಹಕ್ಕುಪತ್ರ ಪಡೆದುಕೊಂಡಿರುವ ಎಲ್ಲರಿಗೂ ಮನೆ ನಿವೇಶನ ನೀಡುವಂತೆ ಶಾಸಕರಾದ ಅಶೋಕ್ ರೈ ಅಧಿಕಾರಿಗೆ ಸೂಚನೆಯನ್ನು ನೀಡಿದ್ದಾರೆ.. ೬ ರಂದು ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆದ ಅಧಿಕಾರಿಗಳ ಸಭೆಯನ್ನು ಶಾಸಕರು ಈ ಆದೇಶವನ್ನು ಹೊರಿಡಿಸಿದ್ದಾರೆ, ಈ ಮೂಲಕ ಕಳೆದ ೭ ವರ್ಷಗಳಿಂದ ಇತ್ಯರ್ಥವಾಗದೆ ಇದ್ದ ಸಮಸ್ಯೆಯನ್ನು ಇತ್ಯರ್ಥಪಡಿಸಿದ್ದಾರೆ.
ಕೋಡಿಂಬಡಿ ಗ್ರಾಮದ ಅರ್ಬಿ-ಕೂರ್ನಡ್ಕದಲ್ಲಿ ಕೋಡಿಂಬಡಿ ಗ್ರಾಪಂ ಗ್ರಾಮದ ಮನೆ ರಹಿತರಿಗೆ ನಿವೇಶನವನ್ನು ಕಾಯ್ದಿರಿಸಿತ್ತು. ೨೦೧೪-೧೫ ನೇ ಸಾಲಿನಲ್ಲಿ ಕೋಡಿಂಬಾಡಿ ಗ್ರಾಮಪಂಚಾಯತ್ ಅರ್ಬಿಯಲ್ಲಿದ್ದ ೧.೩೪ ಎಕ್ರೆ ಸ್ಥಳದಲ್ಲಿ ೨೯ ಮಂದಿ ಫಲಾನುಭವಿಗಳಿಗೆ ನಿವೇಶನವನ್ನು ಗುರುತಿಸಿ ಅವರಿಗೆ ಹಕ್ಕುಪತ್ರವನ್ನು ನೀಡಿತ್ತು. ಆದರೆ ನಿವೇಶನ ಪಡೆದುಕೊಂಡಿದ್ದ ಫಲಾನುಭವಿಗಳು ಮನೆ ಕಟ್ಟುವಲ್ಲಿ ಸಮಸ್ಯೆ ಉಂಟಾಗಿತ್ತು. ನಿವೇಶನಕ್ಕಾಗಿ ಕಾಯ್ದಿರಿಸಿದ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಎಂಬ ತಕರಾರು ಇದ್ದ ಕಾರಣ ಏಳು ವರ್ಷಗಳಿಂದ ಆ ಜಾಗದಲ್ಲಿ ಮನೆ ನಿರ್ಮಾಣಮಾಡಲು ಫಲಾನುಭವಿಗಳಿಗೆ ಕಾನೂನಿನ ತೊಡಕಾಗಿತ್ತು. ಕೋಡಿಂಬಡಿ ಗ್ರಾಪಂ ಈ ವಿಚಾರದಲ್ಲಿ ನಿರ್ಣಯಮಾಡಿದ್ದರೂ ಮನೆ ನಿರ್ಮಾಣ ಮಾಡಲು ಸಾಧ್ಯವೇ ಆಗಿರಲಿಲ್ಲ.
ಶಾಸಕರಿಗೆ ದೂರು ನೀಡಿದ ಗ್ರಾಪಂ ಸದಸ್ಯ
ಉಪ್ಪಿನಂಗಡಿಯಲ್ಲಿ ಜೂ. ೬ ರಂದು ನಡೆದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ್ದ ಕೋಡಿಂಬಾಡಿ ಗ್ರಾಪಂ ಸದಸ್ಯ ಜಯಪ್ರಕಾಶ್ ಬದಿನಾರುರವರು ಕೋಡಿಂಬಾಡಿ ಗ್ರಾಮದಲ್ಲಿ ನಿವೇಶನಕ್ಕಾಗಿ ಕಾಯ್ದಿರಿಸಿದ ಜಾಗದ ಸಮಸ್ಯೆಯ ಬಗ್ಗೆ ಶಾಸಕರ ಗಮನಕ್ಕೆ ತಂದರು. ಈ ವಿಚಾರವಾಗಿ ಅರಣ್ಯ ಇಲಾಖೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದ ಶಾಸಕರು ನಿವೇಶನದಲ್ಲಿ ಯಾರೆಲ್ಲಾ ಹಕ್ಕುಪತ್ರ ಪಡೆದುಕೊಂಡಿದ್ದಾರೋ ಅವರೆಲ್ಲರೂ ಆ ಜಾಗದಲ್ಲಿ ಮನೆ ನಿರ್ಮಾಣ ಮಾಡುವಂತೆ ಆದೇಶವನ್ನು ನೀಡಿದರು. ಮನೆ ಕಟ್ಟುವ ಜಾಗದಲ್ಲಿ ಮರಗಳಿದ್ದರೆ ಆ ಮರಗಳನ್ನು ಕಡಿಯುವಲ್ಲಿ ಇಲಾಖೆ ಕ್ರಮಕೈಗೊಳ್ಳುತ್ತದೆ. ಮನೆ ನಿವೇಶನ ಹೊರತುಪಡಿಸಿ ಉಳಿದ ಜಾಗದಲ್ಲಿರುವ ಮರಗಳನ್ನು ಉಳಿಸಿ ಸದ್ರಿ ೧. ೩೪ ಎಕ್ರೆಯಲ್ಲಿ ೨೯ ಮಂದಿಗೆ ನಿವೇಶನದ ಹಕ್ಕುಪತ್ರ ನೀಡಲಾಗಿದ್ದು ಅವೆಲ್ಲರೂ ಆ ಜಾಗದಲ್ಲಿ ಮನೆ ನಿರ್ಮಾಣ ಮಾಡುವಲ್ಲಿ ಕ್ರಮಕೈಗೊಳ್ಳಬೇಕು, ಅಲ್ಲಿ ಯಾವುದೇ ತಕರಾರಿದ್ದರೂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಇತ್ಯರ್ಥಪಡಿಸಿ ಬಡವರಿಗೆ ನೀಡಿರುವ ನಿವೇಶನದಲ್ಲಿ ಬಡವರು ಮನೆ ನಿರ್ಮಾಣ ಮಾಡಿಕೊಳ್ಳುವಲ್ಲಿ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಹುಟ್ಟೂರಿನ ಸಮಸ್ಯೆ ಇತ್ಯರ್ಥಪಡಿಸಿದ ಶಾಸಕರು
ಶಾಸಕರಾದ ಅಶೋಕ್ ರೈಯವರ ಗ್ರಾಮವೇ ಆಗಿರುವ ಕೋಡಿಂಬಾಡಿಯಲ್ಲಿ ಕಳೆದ ೭ ವರ್ಷಗಳಿಂದ ಇದ್ದ ಸಮಸ್ಯೆಯನ್ನು ಇತ್ಯರ್ಥಪಡಿಸುವ ಮೂಲಕ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಕ್ಕುಪತ್ರ ಪಡೆದ ೨೯ ಕುಟುಂಬಸ್ಥರು ಕಳೆದ ಏಳು ವರ್ಷಗಳಿಂದ ಮನೆ ನಿರ್ಮಾಣ ಮಾಡಲು ಸಾಧ್ಯವಾಗದೆ ನೊಂದುಕೊಂಡಿದ್ದರು.
ರಾಜಕೀಯ ದುರುದ್ದೇಶದಿಂದ ನಿವೇಶನದಲ್ಲಿ ಮನೆ ನಿರ್ಮಾಣ ಮಾಡದಂತೆ ಬಿಜೆಪಿಯ ಕೆಲವರು ಅಡ್ಡಿಪಡಿಸಿದ್ದರು. ಕಾಂಗ್ರೆಸ್ ಅವಧಿಯಲ್ಲಿ ಹಕ್ಕುಪತ್ರ ನೀಡಲಾಗಿದೆ ಎಂದು ಆ ಜಾಗವನ್ನು ಅರಣ್ಯ ಇಲಾಖೆಗೆ ಸೇರಿದ್ದು ಎಂದು ಹೇಳುವ ಮೂಲಕ ಹಕ್ಕುಪತ್ರ ಪಡೆದವರಿಗೆ ಮನೆ ಕಟ್ಟಲು ಅಡ್ಡಿ ಮಾಡಲಾಗಿತ್ತು. ಇದೀಗ ಎಲ್ಲಾ ಸಮಸ್ಯೆಯೂ ಇತ್ಯರ್ಥವಾಗಿದೆ. ಮುಂದಿನ ದಿನಗಳಲ್ಲಿ ಹಕ್ಕುಪತ್ರ ಪಡೆದುಕೊಂಡಿರುವ ೨೯ ಮಂದಿಗೂ ಅಲ್ಲಿ ಮನೆ ನಿರ್ಮಾಣಕ್ಕೆ ಅನುವು ಮಾಡಿಕೊಡಲಾಗುವುದು. ಸಮಸ್ಯೆ ಇತ್ಯರ್ಥಪಡಿಸಿದ ಶಾಸಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ
ಜಯಪ್ರಕಾಶ್ ಬದಿನಾರ್, ಗ್ರಾಪಂ ಸದಸ್ಯರು ಕೋಡಿಂಬಾಡಿ