Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23
ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”
ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.
ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.
ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.
ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!
ಡಾ. ಶಿವರಾಮ ಭಟ್ ಗುರು:
ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ. ಶಿವರಾಮ ಭಟ್ ಎಂದು ನಂಬಿದ್ದರು.
ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!
ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.
Posted by Vidyamaana on 2023-05-15 13:48:30 |
ಪುತ್ತೂರು : ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡರ ವಿರುದ್ಧ ಅವಹೇಳನಕಾರಿ ಬರಹದೊಂದಿಗೆ ಭಾವಚಿತ್ರ ಲಗತ್ತಿಸಿ ಬ್ಯಾನರ್ ಅಳವಡಿಸಿದ ಪುತ್ತೂರು ಬಸ್ಸು ನಿಲ್ದಾಣದ ಬಳಿ ಪ್ರಕರಣದಲ್ಲಿ ಇಬ್ಬರನ್ನು ಪುತ್ತೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ನರಿಮೊಗರು ಗ್ರಾಮದ ಸಹೋದರರಾದ ವಿಶ್ವನಾಥ್ ಹಾಗೂ ಮಾಧವ ಪೊಲೀಸ್ ವಶದಲ್ಲಿರುವವರು. ಪುತ್ತೂರು ಕೆ.ಎಸ್ಆರ್.ಟಿಸಿ ಬಸ್ಸು ನಿಲ್ದಾಣದ ಎದುರು ಅರಣ್ಯ ಇಲಾಖೆಯ ಆವರಣ ಗೋಡೆ ಬಳಿ ಅವಹೇಳನಕಾರಿ ಬ್ಯಾನರ್ ಅಳವಡಿಸಲಾಗಿತ್ತು.
ಪುತ್ತೂರು ನಗರಸಭಾ ಆಯುಕ್ತ ಮಧು ಎಸ್ ಮನೋಹರ್ ನೀಡಿದ ದೂರಿನಂತೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅದರಲ್ಲಿ “ಬಿಜೆಪಿ ಹೀನಾಯವಾಗಿ ಸೋಲಲು ಕಾರಣಕರ್ತರಾದ ನಿಮಗೆ ಭಾವಪೂರ್ಣ ಶ್ರಧ್ಧಾಂಜಲಿ “ ಎಂದು ನಳಿನ್ ಕುಮಾರ್ ಕಟೀಲು ಹಾಗೂ ಡಿ.ವಿ ಸದಾನಂದ ಗೌಡ ಎಂದು ಬರೆಯಲಾಗಿತ್ತು. ಆ ಬ್ಯಾನರ್ ಗೆ ಚಪ್ಪಲಿ ಹಾರವನ್ನು ಹಾಕಿರುವ ಬಗ್ಗೆಯೂ ಸಾಮಾಜಿಕ ಜಾಲತಾಣದಲ್ಲಿ ದೂರು ನೀಡಲಾಗಿತ್ತು.
Posted by Vidyamaana on 2023-09-26 20:55:03 |
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡ್ರಗ್ಸ್ ದಂಧೆ ಹೆಚ್ಚಳವಾಗುತ್ತಿದ್ದು, ಈಗಾಗಲೇ ಹಲವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಕಾಲೇಜು ವಿದ್ಯಾರ್ಥಿಗಳು ಕೂಡ ಸೇರಿದ್ದಾರೆ. ಇದೀಗ ಮಂಗಳೂರು ನಗರದ ಬೆಂದೂರ್ ವೆಲ್ ಪರಿಸರದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ವಿದ್ಯಾರ್ಥಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ನಗರದ ಕಾಲೋಜುವೊಂದರ ಪದವಿ ವಿದ್ಯಾರ್ಥಿಯಾಗಿರುವ ಸುಳ್ಯ ತಾಲೂಕಿನ ಅಜ್ಜಾವರ ಗ್ರಾಮದ ಲುಕ್ಮಾನುಲ್ ಹಕೀಂ (22) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 1 ಲಕ್ಷ 25 ಸಾವಿರ ಮೌಲ್ಯದ 25 ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಇದರ ಜೊತೆಗೆ ಮೊಬೈಲ್ ಫೋನ್, ಡಿಜಿಟಲ್ ತೂಕ ಮಾಪನ ಸೇರಿದಂತೆ ಒಟ್ಟು 1 ಲಕ್ಷ 60 ಸಾವಿರ ಮೌಲ್ಯದ ವಸ್ತುಗಳನ್ನು ಕೂಡ ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾದಕವಸ್ತು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು, ಮಂಗಳೂರು ನಗರದ ಬೆಂದೂರ್ ವೆಲ್ ಪರಿಸರದಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈ ಡ್ರಗ್ಸ್ ಮಾರಾಟ ಪ್ರಕರಣದಲ್ಲಿ ಇನ್ನು ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಸದ್ಯ ಆರೋಪಿ ವಿರುದ್ಧ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡ್ರಗ್ಸ್ ದಂಧೆ ವಿರುದ್ಧ ಪೊಲೀಸರಿಂದ ಜಾಗೃತಿ
ನಗರದಲ್ಲಿ ಡ್ರಗ್ಸ್ ದಂಧೆ ಹೆಚ್ಚಳವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸಿಸಿಬಿ ಪೊಲೀಸರು, ಡ್ರಗ್ಸ್ ಮುಕ್ತ ಮಂಗಳೂರನ್ನಾಗಿಸಲು ಅಖಾಡಕ್ಕಿಳಿದಿದ್ದಾರೆ. ವಿದ್ಯಾರ್ಥಿಗಳು ಕೂಡ ಮಾದಕ ಲೋಕದಲ್ಲಿ ತೇಲಾಡುತ್ತಿರುವುದರಿಂದ ಶಾಲಾ ಕಾಲೇಜುಗಳಲ್ಲಿ ಪೊಲೀಸರು ಜಾಗೃತಿ ಮೂಡಿಸುತ್ತಿದ್ದಾರೆ.
Posted by Vidyamaana on 2023-09-16 08:21:20 |
ದುಬೈ: ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಸೆ 15 ರಂದು ದುಬೈಗೆ ಭೇಟಿ ನೀಡಿದ್ದು, ಈ ಸಂದರ್ಭ ಅಲ್ಲಿರುವ ಪುತ್ತೂರಿನವರನ್ನು ಭೇಟಿಯಾದರು.
ದುಬೈಯ ಜುಮೈರಾ ತಾಜ್ ಹೊಟೇಲಿನಲ್ಲಿ ಶಾಸಕರಿಗೆ ಆತ್ಮೀಯ ಸ್ವಾಗತ ನೀಡಿ, ಅಭಿನಂದಿಸಿದರು.
ಬಳಿಕ ನಡೆದ ಸೌಹಾರ್ದ ಭೇಟಿಯಲ್ಲಿ ಮಾತನಾಡಿದ ಅಶೋಕ್ ರೈ, ಚುನಾವಣೆ ಸಂದರ್ಭ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಹಕರಿಸಿದ ದುಬೈನಲ್ಲಿ ನೆಲೆಸಿರುವ ನಮ್ಮೂರಿನ ಯುವಕರ ಸಹಕಾರ ಅವಿಸ್ಮರಣೀಯ. ನಮ್ಮೂರಿನ ಜನಪರ ಕೆಲಸಗಳಿಗೆ ಸದಾ ನಿಮ್ಮ ಬೆಂಬಲ ಮುಂದೆಯೂ ಬೇಕು ಎಂದ ಅವರು, ದುಬೈಯ ಪುತ್ತೂರಿಗರಿಗೆ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಸ್ತಾಫಾ ಕೋಡಿಂಬಾಡಿ, ಖಲೀಲ್ ಬಿ.ಎಚ್., ಅಜಿತ್ ಕೋಡಿಂಬಾಡಿ, ಅನ್ಸಾರ್ ಬಿ.ಎಚ್., ಸಿನಾನ್ ಮೊದಲಾದವರು ಉಪಸ್ಥಿತರಿದ್ದರು.
Posted by Vidyamaana on 2023-10-22 11:50:11 |
ವದೆಹಲಿ: ಯುದ್ಧಪೀಡಿತ ಗಾಜಾಗೆ ಜಗತ್ತಿನಾದ್ಯಂತ ನೆರವಿನ ಮಹಾಪೂರ ಹರಿದು ಬರುತ್ತಿದ್ದು, ಇಂದು ಭಾರತವು ಮಾನವೀಯ ಆಧಾರದ ಮೇಲೆ ವೈದ್ಯಕೀಯ ಅಗತ್ಯಗಳು ಮತ್ತು ವಿಪತ್ತು ಪರಿಹಾರ ವಸ್ತುಗಳನ್ನು ಕಳುಹಿಸಿಕೊಟ್ಟಿದೆ.. ಯುದ್ಧದ ಪರಿಣಾಮ ಲಕ್ಷಾಂತರ ನಾಗರಿಕರು ನಿರ್ಗತಿಕರಾಗಿದ್ದು, ತನ್ನ ಮಿತ್ರ ಅಮೆರಿಕದ ಮನವಿ ಮೇರೆಗೆ ಅಲ್ಲಿನ ಜನರಿಗೆ ನೆರವು ಒದಗಿಸಲು ಇಸ್ರೇಲ್ ಒಪ್ಪಿಕೊಂಡಿದೆ.
ಭಾರತ ಕಳುಹಿಸಿಕೊಟ್ಟಿರುವ ಅಗತ್ಯ ವಸ್ತುಗಳಲ್ಲಿ ಜೀವ ಉಳಿಸುವ ಔಷಧಿಗಳು, ಶಸ್ತ್ರಚಿಕಿತ್ಸಾ ವಸ್ತುಗಳು, ಟೆಂಟ್ಗಳು, ಮಲಗುವ ಚೀಲಗಳು, ಟಾರ್ಪೌಲಿನ್ಗಳು, ನೈರ್ಮಲ್ಯ ಉಪಯುಕ್ತತೆಗಳು ಮತ್ತು ಇತರ ಅಗತ್ಯ ವಸ್ತುಗಳ ಜೊತೆಗೆ ನೀರು ಶುದ್ಧೀಕರಣ ಮಾತ್ರೆಗಳನ್ನು ಒಳಗೊಂಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಎಕ್ಸ್ ಮೂಲಕ ತಿಳಿಸಿದ್ದಾರೆ.
ಗಾಜಾವನ್ನು ಸಂಪೂರ್ಣ ವಶಕ್ಕೆ ಪಡೆದಿರುವುದಾಗಿ ಇಸ್ರೇಲ್ ಘೋಷಣೆ ಮಾಡಿದ್ದು, ನೀರು, ವಿದ್ಯುತ್, ಇಂಧನ ಮತ್ತು ಆಹಾರ ಪೂರೈಕೆಯನ್ನು ಸ್ಥಗಿತಗೊಳಿಸಿದ್ದು, ದೀರ್ಘಕಾಲ ಕೊರತೆಯನ್ನು ಸೃಷ್ಟಿಸುತ್ತಿದೆ. ಇಸ್ರೇಲ್ ನಿಯಂತ್ರಣಕ್ಕೆ ಒಳಗಾಗದ ರಫಾ ಗಡಿ ಒಂದೇ ಗಾಜಾಗೆ ಇರುವ ಏಕೈಕ ಮಾರ್ಗವಾಗಿದೆ. ತಮ್ಮ ಮಿತ್ರ ದೇಶವಾಗಿರುವ ಯುನೈಟೆಡ್ ಸ್ಟೇಟ್ಸ್ ಮನವಿಯ ಮೇರೆಗೆ ಈಜಿಪ್ಟ್ನಿಂದ ಗಾಜಾಗೆ ನೆರವು ಸಾಗಿಸಲು ಇಸ್ರೇಲ್ ಅನುಮತಿಸಿದೆ. ಭಾರತ ಕಳುಹಿಸಿಕೊಟ್ಟಿರುವ ಅಗತ್ಯ ವಸ್ತುಗಳು ರಫಾ ಗಡಿಯ ಮೂಲಕ ಗಾಜಾಗೆ ತಲುಪಲಿದೆ.
ವಿಶ್ವಸಂಸ್ಥೆಯ ವಿವಿಧ ಏಜೆನ್ಸಿಗಳಿಂದ ಬಂದ ನೆರವನ್ನು ಗಾಜಾಗೆ ತಲುಪಿಸುವ ಜವಾಬ್ದಾರಿಯನ್ನು ಈಜಿಪ್ಟಿನ ರೆಡ್ ಕ್ರೆಸೆಂಟ್ ಕಚೇರಿಯು ಹೊತ್ತಿದೆ. ನಿನ್ನೆ ಇಪ್ಪತ್ತು ಟ್ರಕ್ಗಳು ಈಜಿಪ್ಟಿನ ಟರ್ಮಿನಲ್ ಅನ್ನು ಪ್ರವೇಶಿಸಿದ್ದವು. ಪ್ಯಾಲೆಸ್ತೀನ್ ಕಡೆಯ 36 ಖಾಲಿ ಟ್ರೇಲರ್ಗಳು ಟರ್ಮಿನಲ್ಗೆ ಪ್ರವೇಶಿಸಿ ಈಜಿಪ್ಟಿನ ಕಡೆಗೆ ಹೋಗಿ, ನೆರವನ್ನು ಲೋಡ್ ಮಾಡಿಕೊಂಡು ರಫಾ ಗಡಿಯ ಮೂಲಕ ಗಾಜಾಗೆ ತೆರಳಿದವು. ವಿಶ್ವಸಂಸ್ಥೆಯ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸಹ ಶುಕ್ರವಾರ ಈಜಿಪ್ಟ್ ಕ್ರಾಸಿಂಗ್ ಬದಿಗೆ ಭೇಟಿ ನೀಡಿ ನೆರವು ವಿತರಣೆಯ ಸಿದ್ಧತೆಗಳನ್ನು ಮೇಲ್ವಿಚಾರಣೆ ಮಾಡಿದರು. ಇವು ಕೇವಲ ಟ್ರಕ್ಗಳಲ್ಲ, ಜೀವರಕ್ಷಕಗಳು ಎಂದು ಮಾಧ್ಯಮಗಳಿಗೆ ಇದೇ ಸಂದರ್ಭದಲ್ಲಿ ತಿಳಿಸಿದರು.
ಅ.7ರ ದಾಳಿಗೆ ಪ್ರತಿಯಾಗಿ ಇಸ್ರೇಲ್ ನಡೆಸುತ್ತಿರುವ ದಾಳಿಗೆ ಗಾಜಾ ಸಂಪೂರ್ಣ ನಲುಗಿ ಹೋಗಿದೆ. ವೆಸ್ಟ್ ಬ್ಯಾಂಕ್ನಲ್ಲೂ ಇಸ್ರೇಲ್ ರಕ್ಷಣಾ ಪಡೆಗಳು ದಾಳಿ ನಡೆಸುತ್ತಿವೆ. ಇಸ್ರೇಲ್ ನಡೆಸಿದ ಬಾಂಬ್ ದಾಳಿಯಲ್ಲಿ ಈವರೆಗೂ 4300ಕ್ಕೂ ಅಧಿಕ ಮಂದಿ ಪ್ಯಾಲೆಸ್ತೀನ್ನಲ್ಲಿ ಮೃತಪಟ್ಟಿದ್ದಾರೆ. ಅದರಲ್ಲಿ ಹೆಚ್ಚಿನವರು ನಾಗರಿಕರು ಎಂದು ಹಮಾಸ್ ನಡೆಸುವ ಆರೋಗ್ಯ ಸಚಿವಾಲಯ ತಿಳಿಸಿದೆ.
ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧವೂ ಎರಡು ವಾರಗಳನ್ನು ಪೂರೈಸಿ ಮೂರನೇ ವಾರಕ್ಕೆ ಕಾಲಿಟ್ಟಿದ್ದರೂ ಕದನ ಕಾರ್ಮೋಡ ಮಾತ್ರ ತಿಳಿಯಾಗಿಲ್ಲ. ಈಜಿಪ್ಟ್ನಲ್ಲಿ ನಡೆದ ಶಾಂತಿ ಶೃಂಗಸಭೆಯಲ್ಲಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಅವರು ಮಾನವೀಯ ಕದನ ವಿರಾಮಕ್ಕಾಗಿ ಒತ್ತಾಯಿಸಿದ್ದಾರೆ. ಆದರೂ ಇಸ್ರೇಲ್ ಮಾತ್ರ ಗಾಜಾ ಮೇಲಿನ ತನ್ನ ದಾಳಿಯನ್ನು ಮಾತ್ರ ಮುಂದುವರಿಸಿದೆ
Posted by Vidyamaana on 2024-05-18 15:10:08 |
ಕಾರವಾರ: ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ ನೀಡಿದ್ದಾರೆ. ಮೆಣಸಿನಪುಡಿಗೆ ಬಳಸುವ ಕೀಟನಾಶಕ ಎಥಿಲಿನ್ ಆಕ್ಸೈಡ್ ಪ್ರಮಾಣ ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಕಂಡು ಬಂದಿದೆ. ಮಸಲಾ ಪದಾರ್ಥದಲ್ಲಿ ಎಥಿಲಿನ್ ಆಕ್ಸೈಡ್ ಪ್ರಮಾಣ ಕೇವಲ ಶೇ.0.01ರಷ್ಟು ಇರಬೇಕು.ಆದರೆ ಎವರೆಸ್ಟ್ ಚಿಕನ್ ಮಸಾಲಾದಲ್ಲಿ ಶೇ.3.93ರಷ್ಟು ಪ್ರಮಾಣದಲ್ಲಿದ್ದು ಇದು ಆರೋಗ್ಯದ ಮೇಲೆ ಪರಿಣಾಮ ಬೀರಲಿರುವ ಹಿನ್ನಲೆಯಲ್ಲಿ ಇದರ ಬಳಕೆಯನ್ನು ಕೂಡಲೇ ನಿಲ್ಲಿಸುವಂತೆ ಉತ್ತರ ಕನ್ನಡ ಜಿಲ್ಲೆ ಆಹಾರ ಸುರಕ್ಷತಾ ಅಧಿಕಾರಿ ರಾಜಶೇಖರ್ ಮನವಿ ಮಾಡಿದ್ದಾರೆ.
Posted by Vidyamaana on 2024-07-02 22:10:24 |
ವಿಟ್ಲ: ಮೆಹಂದಿಗೆ ಪ್ರಾಚೀನ ಕಾಲದ ಇತಿಹಾಸ ಇದ್ದು ಅದೊಂದು ಕೈಯಿಂದ ಕೈಯಲ್ಲಿ ಅರಳುವ ಅದ್ಬುತ ಕಲೆಯಾಗಿದೆ. ವಿದ್ಯಾರ್ಥಿನಿಯರು, ಯುವತಿಯರು ಹಾಗೂ ಗೃಹಣಿಯರು ಮೆಹಂದಿ ಬಿಡಿಸುವುದು ಕಲಿಯುವ ಮೂಲಕ ಕುಟುಂಬಕ್ಕೆ ಆರ್ಥಿಕ ನೆರವಾಗಬಹುದು ಎಂದು ವಿಟ್ಲದ ದಂತ ವೈದ್ಯೆ ಡಾ. ಕೌಲತ್ ಬಿ.ಎಂ. ಹೇಳಿದರು.
ವಿಟ್ಲ ಸ್ಕೂಲ್ ರೋಡಿನ ಮೋತಿ ಸಿಟಿ ಕಟ್ಟಡದಲ್ಲಿ ಇತ್ತೀಚಿಗೆ ಆರಂಭಗೊಂಡ ದಿ ನ್ವಾಲೇಜ್ ಹಬ್ ಟ್ಯೂಷನ್ ಆ್ಯಂಡ್ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ ನಲ್ಲಿ ಮೆಹಂದಿ ತರಗತಿಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.