Posted by vidyamaana on 2023-06-29 12:19:28 |
ಪುತ್ತೂರು: ಹೊಸ ಉದ್ಯಮವೊಂದರ ಉದ್ಘಾಟನಾ ಕಾರ್ಯಕ್ರಮ ಮುಗಿಸಿ ಹಿಂದಿರುಗಿ ಬರುವಾಗ ಅರುಣ್ ಕುಮಾರ್ ಪುತ್ತಿಲ ಹೆರಿಗೆಗೆ ದಾಖಲಾಗಿದ್ದ ಗರ್ಭಿಣಿ ಮೃತಪಟ್ಟ ಮನೆಗೆ ತೆರಳಿ ಸಾಂತ್ವನ ಹೇಳಿದರು.
ಕಾರ್ಯಕ್ರಮ ಮುಗಿಸಿ ಬರುವಾಗ ರಸ್ತೆಯಲ್ಲಿ ಜನ ಸೇರಿದ್ದನ್ನು ನೋಡಿ ವಿಚಾರಿಸಿದಾಗ ಮೃತಪಟ್ಟ ಬಗ್ಗೆ ತಿಳಿದುಬಂದಿದ್ದು, ನಂತರ ಮನೆಗೆ ತೆರಳಿ ಸಾಂತ್ವನ ಹೇಳಿದರು.
ಶೇಕಮಲೆ ಬೊಳ್ಳಾಡಿ ಇಬ್ರಾಹಿಂ ಎಂಬವರ ಪತ್ನಿ 9 ತಿಂಗಳ ಗರ್ಭಿಣಿ ಹಸೀನಾ (29) ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಾಗಿದ್ದರು. ಜೂ.28 ರಂದು ಹೆರಿಗೆ ಸಂದರ್ಭ ಹೃದಯಾಘಾತದಿಂದ ನಿಧನರಾದರು.
ಹೆರಿಗೆಯಲ್ಲಿ ಮಗು ಜೀವಂತವಾಗಿದ್ದು, ಎಜೆ ಆಸ್ಪತ್ರೆಯ ವೈದ್ಯರಿಗೆ ಕರೆ ಮಾಡಿ ಅರುಣ್ ಪುತ್ತಿಲರು ಮಗುವಿನ ಆರೋಗ್ಯ ವಿಚಾರಿಸಿದರು.
ಈ ಹಿಂದೆಯೂ ಅಪಘಾತ ನಡೆದ ಸಂದರ್ಭ ಧರ್ಮ ನೋಡದೆ ತನ್ನದೇ ಕಾರಿನಲ್ಲಿ ರಕ್ತದ ಮಡುವಿನಲ್ಲಿದ್ದ ಗಾಯಳುಗಳನ್ನು ಹಾಕಿಕೊಂಡು ಹೋದ ಉದಾಹರಣೆಯೂ ಇದೆ. ಅವರ ಕಾರಿನಲ್ಲಿ ಅಪಘಾತಗೊಂಡ ಮುಸ್ಲಿಂ ಮಗುವೊಂದು ಮೃತಪಟ್ಟಿದೆ.
ಮೊನ್ನೆಯಷ್ಟೇ ಮಂಗಳೂರಿನಿಂದ ಬರುತಿದ್ದಾಗ ರಸ್ತೆ ಬದಿಯ ಚರಂಡಿಗೆ ಬಿದ್ದಿದ್ದ ಕಾರನ್ನು ಮೇಲೆತ್ತಲು ಸಹಾಯ ಮಾಡಿದ್ದರು.
Posted by Vidyamaana on 2023-08-25 15:26:30 |
ಪುತ್ತೂರು : 2021ರಲ್ಲಿ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಜಾತ್ರೋತ್ಸವ ವೇಳೆ ಅಧ್ಯಕ್ಷರ ನೇಮಕಾತಿಯ ವಿಚಾರದಲ್ಲಿ ನಡೆದ ಹಲ್ಲೆ ಮತ್ತು ಬೆದರಿಕೆ ವಿಚಾರದಲ್ಲಿ ದಾಖಲಾದ ಪ್ರಕರಣವನ್ನು ನ್ಯಾಯಲಯ ಖುಲಾಸೆಗೊಳಿಸಿ ಆದೇಶಿಸಿದೆ.
ಅರುಣ್ ಕುಮಾರ್ ಪುತ್ತಿಲ, ಅಶೋಕ್ ಕುಮಾರ್ ಪುತ್ತಿಲ, ಶ್ರೀಕಾಂತ್ ಆಚಾರ್ ಹಿಂದಾರ್ ದೋಷಮುಕ್ತರೆಂದು ನ್ಯಾಯಾಲಯ ಆದೇಶ ನೀಡಿದೆ.
ವಕೀಲರಾದ ದೇವಾನಂದ ಕೆ, ಚಿನ್ಮಯ್ ರೈ ಈಶ್ವರಮಂಗಲ,ಹರಿಣಿ ವಾದಿಸಿದರು.
2021ರಲ್ಲಿ ಮುಂಡೂರು ಶ್ರೀ ಮೃತ್ಯುಂಜಯೇಶ್ವರ ದೇವಸ್ಥಾನದ ಜಾತ್ರೋತ್ಸವ ವೇಳೆ ಅಧ್ಯಕ್ಷರ ನೇಮಕಾತಿಯ ವಿಚಾರದಲ್ಲಿ ಹಲ್ಲೆ ನಡೆಸಿದ್ದಾರೆಂದು ತಾಲೂಕು ರೈತ ಮೋರ್ಚಾ ಅಧ್ಯಕ್ಷ ಸುರೇಶ್ ಕಣ್ಣರಾಯ ರವರು ದೂರು ನೀಡಿದ್ದು, ನಳಿನೀ ಲೋಕಪ್ಪ ಗೌಡ ಮತ್ತು ಲೋಕಪ್ಪ ಗೌಡ ಮುಖ್ಯ ಸಾಕ್ಷಿದಾರರಾಗಿದ್ದರು.
ಇದು ಸತ್ಯ ಮತ್ತು ನ್ಯಾಯಕ್ಕೆ ಸಂದ ಗೌರವ ಎಂದು ಅರುಣ್ ಕುಮಾರ್ ಪುತ್ತಿಲ ಪ್ರತಿಕ್ರಿಯಿಸಿದ್ದಾರೆ.
Posted by Vidyamaana on 2024-02-10 16:51:16 |
ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 370 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ. ಎನ್ಡಿಎ ಒಕ್ಕೂಟವು 400ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ವಿಜಯಪತಾಕೆ ಹಾರಿಸಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.ಮೂರನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ರಚನೆ ಮಾಡುವ ಬಗ್ಗೆ ವಿಶ್ವಾಸ ಇದೆ ಎಂದಿರುವ ಅಮಿತ್ ಶಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಲೋಕಸಭೆ ಚುನಾವಣೆಯಲ್ಲಿ ಯಾರಿಗೆ ಗೆಲುವು ಸಿಗಲಿದೆ ಅನ್ನೋದ್ರ ಬಗ್ಗೆ ಯಾವುದೇ ಸಸ್ಪೆನ್ಸ್ ಆಗಿ ಉಳಿದಿಲ್ಲ. ಕಾಂಗ್ರೆಸ್ಗೆ ಕೂಡ ಅದು ಅರ್ಥ ಆಗಿದೆ. ಲೋಕಸಭೆ ಚುನಾವಣೆ ಒಳಗಾಗಿಯೇ ನಾವು ದೇಶದಾದ್ಯಂತ ಸಿಎಎ (Citizenship Amendment) Act, 2019 ಜಾರಿಗೆ ತರುತ್ತೇವೆ. 2019ರಲ್ಲಿ ಸಿಎಎ (ತಿದ್ದುಪಡಿ) ಮಸೂದೆ ಅಂಗೀಕಾರಗೊಂಡಿದೆ. ಕೊಟ್ಟ ಮಾತಿನಂತೆ ಲೋಕಸಭೆ ಚುನಾವಣೆ ಒಳಗಾಗಿ ಜಾರಿಗೆ ತರುತ್ತೇವೆ.
ಸಿಎಎ ವಿಚಾರದಲ್ಲಿ ನಮ್ಮ ಮುಸ್ಲಿಂ ಸಹೋದರರನ್ನು ಮಿಸ್ ಲೀಡ್ ಮಾಡಲಾಗುತ್ತಿದೆ. ಇದು ಭಾರತದಲ್ಲಿರುವ ಮುಸ್ಲಿಮರ ಪೌರತ್ವವನ್ನು ಕಿತ್ತುಕೊಳ್ಳುವುದಕ್ಕಾಗಿ ನಾವು ಜಾರಿಗೆ ತರುತ್ತಿಲ್ಲ. ಇದರ ಉದ್ದೇಶ ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಕಿರುಕುಳಕ್ಕೆ ಒಳಗಾಗಿ ಭಾರತದಲ್ಲಿ ಆಶ್ರಯ ಪಡೆದುಕೊಂಡವರಿಗೆ ನೀಡುತ್ತಿರುವ ಪೌರತ್ವ ಅಷ್ಟೇ. ಇದರಲ್ಲಿ ದೇಶದಲ್ಲಿರುವ ನಾಗರಿಕರ ಪೌರತ್ವವನ್ನು ಕಿತ್ತುಕೊಳ್ಳುತ್ತಿಲ್ಲ ಎಂದು ಭರವಸೆ ನೀಡಿದ್ದಾರೆ.
ಏನಿದು ಪೌರತ್ವ ಕಾಯ್ದೆ..?
ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನವೇ ಪೌರತ್ವ (ತಿದ್ದುಪಡಿ) ಕಾಯ್ದೆ (Citizenship Act, 2019) ಜಾರಿಗೆ ಸಂಬಂಧಿಸಿ ಅಧಿಸೂಚನೆ ಹೊರಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪೌರತ್ವ ತಿದ್ದುಪಡಿ ಮಸೂದೆಯನ್ನು 2019ರಲ್ಲಿ ಸಂಸತ್ ಅಂಗೀಕರಿಸಿದೆ.
ಈ ಮಸೂದೆಯು ಪಾಕಿಸ್ತಾನ, ಅಫ್ಘಾನಿಸ್ತಾನ, ಬಾಂಗ್ಲಾದೇಶದಲ್ಲಿ ಧಾರ್ಮಿಕ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ಬಂದ ಹಿಂದೂಗಳು, ಸಿಖ್ಖರು, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಇಲ್ಲಿನ ಪೌರತ್ವ ನೀಡುವುದನ್ನು ಪ್ರತಿಪಾದಿಸುತ್ತದೆ. ಮುಸ್ಲಿಂಮರನ್ನು ಈ ಕಾಯ್ದೆಯಿಂದ ದೂರ ಇಡಲಾಗಿದೆ. 2014 ಡಿಸೆಂಬರ್ 31ರ ಮೊದಲು ಭಾರತಕ್ಕೆ ವಲಸೆ ಬಂದ ಮುಸ್ಲಿಮೇತರ ವಲಸಿಗರಿಗೆ ಭಾರತದ ಪೌರತ್ವ ನೀಡಲು ಅವಕಾಶ ಮಾಡಿಕೊಡುತ್ತದೆ.
ಮಸೂದೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಅಂಗೀಕಾರ ಆಗುತ್ತಿದ್ದಂತೆಯೇ ದೇಶದಾದ್ಯಂತ ಭಾರೀ ಪ್ರತಿಭಟನೆಗಳು ನಡೆದಿವೆ. ಇದೇ ಕಾರಣಕ್ಕೆ ಕಾನೂನಿನ ಅಧಿನಿಯಮವನ್ನು ಇಲ್ಲಿಯವರೆಗೆ ತಿಳಿಸಿಲ್ಲ. ನಿಯಮ ಜಾರಿಗೊಳಿಸುವ ವಿಚಾರದಲ್ಲಿ ಭಾರತ ಸರ್ಕಾರ ಪದೇ ಪದೆ ಮುಂದೂಡಿಕೆ ಮಾಡುತ್ತಿದೆ. ಇದೀಗ ಕೇಂದ್ರ ಸರ್ಕಾರ ಅದಕ್ಕೆ ಅಂತಿಮ ಟಚ್ ನೀಡಲು ನಿರ್ಧರಿಸಿದ್ದು, ಆನ್ಲೈನ್ ಪೋರ್ಟಲ್ ಕೂಡ ತಯಾರಿ ಮಾಡಿಕೊಂಡಿದೆ ಎಂದು ತಿಳಿದುಬಂದಿದೆ.
ಭಾರತ ಪೌರತ್ವ ಪಡೆದುಕೊಳ್ಳೋದು ಸಂಪೂರ್ಣ ಆನ್ಲೈನ್ ಪ್ರಕ್ರಿಯೆ ಆಗಿರಲಿದ್ದು, ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು ಎನ್ನಲಾಗಿದೆ
Posted by Vidyamaana on 2024-03-02 04:26:28 |
ಪುತ್ತೂರು : ಇಲ್ಲಿನ ಕೊಂಬೆಟ್ಟಿನಲ್ಲಿರುವ ಜಿ ಎಲ್ ಟ್ರೇಡ್ ಸೆಂಟರ್ ನ ಪ್ರಭು ಚರುಂಬುರಿ ಮಳಿಗೆಯಲ್ಲಿ ಶುಕ್ರವಾರ ತಡರಾತ್ರಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ. ಅಂಗಡಿಯಲ್ಲಿದ್ದ ಸಾಮಾಗ್ರಿಗಳು ಸುಟ್ಟು ಕರಕಲಾಗಿವೆ.
ತಕ್ಷಣ ಸ್ಥಳಕ್ಕೆ ಅಗ್ನಿಶಾಮಕ ದಳ ಆಗಮಿಸಿ ಬೆಂಕಿ ನಂದಿಸಿದೆ. ಅದೃಷ್ಟವಶಾತ್ ಯಾವುದೇ ರೀತಿಯಾದಂತಹ ಪ್ರಾಣಾಪಾಯ ಸಂಭವಿಸಿಲ್ಲ. ಅದರೆ ಘಟನೆಯಿಂದ ತೀವ್ರ ನಷ್ಟವಾಗಿದೆ.
Posted by Vidyamaana on 2023-07-08 13:47:02 |
ಕೊಟ್ಟಿಗೆಹಾರ: ಚಾರ್ಮಾಡಿ ಘಾಟಿಯಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು ಅದರಲ್ಲಿ ಖಾಸಗಿ ವಾಹನದಲ್ಲಿ ಬಂದಿದ್ದ ಧರ್ಮಸ್ಥಳದಿಂದ ಬೆಂಗಳೂರಿಗೆ ಸಾಗುತ್ತಿದ್ದ ಗರ್ಭಿಣಿ ಮಹಿಳೆ ಚೈತ್ರಾ ಎಂಬವರು ಹೆರಿಗೆ ನೋವು ಕಾಣಿಸಿಕೊಂಡು ಅಸ್ವಸ್ಥಗೊಂಡರು. ಶುಕ್ರವಾರ ಚಾರ್ಮಾಡಿ ಘಾಟ್ ನಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಅಸ್ವಸ್ಥತೆಗೊಂಡಿದ್ದರಿಂದ ಸ್ಥಳದಲ್ಲಿದ್ದ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರೀಪ್ ಅವರು ಅವರ ಅಂಬುಲೆನ್ಸ್ ನಲ್ಲಿ ವಾಹನ ದಟ್ಟಣೆಯಲ್ಲೂ ಸೈರನ್ ಹಾಕಿ ಮೂಡಿಗೆರೆ ಆಸ್ಪತ್ರೆಗೆ ತಂದು ದಾಖಲು ಮಾಡಿದರು.ಇದರಿಂದ ಗರ್ಭಿಣಿ ಮಹಿಳೆಯನ್ನು ತುರ್ತು ಸಮಯದಲ್ಲಿ ಪ್ರಾಣ ಉಳಿಸಿದಂತಾಯಿತು ಎಂದು ಕುಟುಂಬದವರು ಆರೀಫ್ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಿದರು.
Posted by Vidyamaana on 2023-06-04 10:45:05 |
ಪುತ್ತೂರು: ಚುನಾವಣೆಯಲ್ಲಿ ಗೆದ್ದೇ ಬಿಡುತ್ತೇವೆ ಎಂದು ಬಿಜೆಪಿಗರು ಹೇಳಿಕೊಂಡು ತಿರುಗಾಡಿದ್ದೇ ಬಂತು. ಆದರೆ ಚುನಾವಣಾ ಫಲಿತಾಂಶ ಬಿಜೆಪಿ ನಾಯಕರ ಲೆಕ್ಕಾಚಾರವನ್ನು ಉಲ್ಟಾ – ಪಲ್ಟಾ ಮಾಡಿತು. ಇದರ ಪರಿಣಾಮವೋ ಎಂಬಂತೆ – ಬಿಜೆಪಿಯ ಭದ್ರಕೋಟೆ ಪುತ್ತೂರಿನಲ್ಲಿ ಬಿಜೆಪಿ ನಾಯಕರು ಬಾಗಿಲು ಭದ್ರ ಪಡಿಸಿ ಮಖಾಡೆ ಮಲಗಿಕೊಂಡಿದ್ದಾರೆಯೇ!?
ಇಂತಹದ್ದೊಂದು ಸಂದೇಹ ಎಲ್ಲರಲ್ಲೂ ಕಾಡುತ್ತಿದೆ. ಹಾಗಾದರೆ ಬಿಜೆಪಿ ಮುಖಂಡರು ಈಗ ಎಲ್ಲಿದ್ದಾರೆ?
ಚುನಾವಣೆ ಮುಗಿದೊಡನೆ ಮನೆಗೆ ಹೋಗಿ ತಮ್ಮ ತೋಟ, ಮನೆ, ವ್ಯವಹಾರದಲ್ಲಿ ಮಗ್ನರಾದರೆ? ರಾಜಕೀಯದ ಸಹವಾಸವೇ ಬೇಡ ಎಂದು ಮುಖ ತಿರುಗಿಸಿ ಕುಳಿತುಕೊಂಡಿದ್ದಾರೆಯೇ? ಮಕ್ಕಳ, ಮೊಮ್ಮಕ್ಕಳ ಶಾಲಾ – ಕಾಲೇಜು ದಾಖಲಾತಿಯಲ್ಲಿ ಬ್ಯುಸಿಯಾದರೆ? ವಿಪಕ್ಷ ಸ್ಥಾನವನ್ನು ಕಳೆದುಕೊಂಡದ್ದಕ್ಕೆ ಮುಖಭಂಗವಾಯಿತೇ? ಹೀಗೆ ನಾನಾ ಸಂದೇಹಗಳು…
ಕಾರಣವಿಷ್ಟೇ, ಚುನಾವಣಾ ನಂತರದಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ನಾನಾ ರೀತಿಯ ಬೆಳವಣಿಗೆಗಳು ಘಟಿಸುತ್ತಿವೆ. ಈ ಯಾವುದೇ ಘಟನೆಗಳ ಬಗ್ಗೆ ಬಿಜೆಪಿ ನಾಯಕರು ತುಟಿ ಪಿಟಿಕ್ ಎನ್ನುತ್ತಿಲ್ಲ. ಸ್ಥಳಕ್ಕೆ ಭೇಟಿ ನೀಡಿ, ಸಾಂತ್ವನದ ಮಾತಂತೂ ಮೊದಲೇ ಇಲ್ಲ. ಆದ್ದರಿಂದ ಜನಸಾಮಾನ್ಯರಿಗೆ ಈ ಮೇಲಿನ ಪ್ರಶ್ನೆಗಳು ತಲೆಯೊಳಗೆ ಸುಳಿದಾಡಲು ಶುರುವಾಗಿವೆ.
“ಬಿಜೆಪಿ ವಿಪಕ್ಷ ಸ್ಥಾನದಲ್ಲಿರಬೇಕು…” ಎನ್ನುವ ಮಾತು ಸಾಮಾನ್ಯವಾಗಿ ಚಾಲ್ತಿಯಲ್ಲಿದೆ. ಕಾರಣ, ಪ್ರತಿಭಟನೆ, ಹೋರಾಟಗಳಲ್ಲಿ ಬಿಜೆಪಿ ನಾಯಕರು ಸದಾ ಮುಂದು. ಆಡಳಿತ ಪಕ್ಷದ ಅಥವಾ ಆಡಳಿತ ಶಾಸಕರ ಕಾರ್ಯವೈಖರಿಯ ಲೋಪದೋಷಗಳನ್ನು ಪತ್ತೆಹಚ್ಚಿ, ಅವುಗಳನ್ನು ಜನರ ಬಳಿಗೆ ಕೊಂಡೊಯ್ಯುವುದರಲ್ಲಿ ಬಿಜೆಪಿ ನಾಯಕರು ಎತ್ತಿದ ಕೈ. ಎಷ್ಟೋ ಸಂದರ್ಭಗಳಲ್ಲಿ ಕಾಂಗ್ರೆಸ್ ನಾಯಕರಿಗೆ ಇಂತಹ ಕಾರ್ಯವೈಖರಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗದ ಸಂದರ್ಭವೂ ಇದೆ. ಸರಿಯಾದ ಪ್ರತಿಕ್ರಿಯೆ ನೀಡಲೂ ಸಾಧ್ಯವಾಗದ ಪ್ರಸಂಗ ಇದೆ. ಆದರೆ ಈ ಬಾರಿ ಮಾತ್ರ ಹೀಗೇಕೆ…?
ಬಿಜೆಪಿ ಅಭ್ಯರ್ಥಿಯಾಗಿದ್ದ ವರು ಚುನಾವಣೆ ಬಳಿಕ ಒಂದೆರಡು ಕಾಣಿಸಿಕೊಂಡದ್ದು ಬಿಟ್ಟರೆ ಮತ್ತೆಲ್ಲೂ ಪತ್ತೆಯೇ ಇಲ್ಲ. ಮಾಜಿ ಶಾಸಕರು ಪ್ರತಿಭಟನೆಯಲ್ಲಿ ಘೋಷಣೆ ಕೂಗಿದ್ದೇ ಕೊನೆ. ಪಕ್ಷದ ಮುಂಚೂಣಿಯಲ್ಲಿ ಗುರುತಿಸಿಕೊಳ್ಳಬೇಕಾಗಿದ್ದ ನಾಯಕರು, ತೆರೆಮರೆಗೆ ಸರಿದು ಬಿಟ್ಟರೆ ಪಕ್ಷವನ್ನು ಮುನ್ನಡೆಸುವವರಾರು? ಈ ನಾಲ್ವರನ್ನು ಬಿಟ್ಟು ಉಳಿದವರು ಏಕಾಏಕೀ ಮುನ್ನೆಲೆಗೆ ಬಂದು, ಪಕ್ಷವನ್ನು ಮುನ್ನಡೆಸಲು ಸಾಧ್ಯವೇ? ಖಂಡಿತಾ ಸಾಧ್ಯವಿಲ್ಲ. ಹಾಗಾದರೆ ಇವರುಗಳು ಮುನ್ನೆಲೆಗೆ ಬಂದು, ಕಾರ್ಯಕರ್ತರಿಗೆ ಧೈರ್ಯ ತುಂಬಿ, ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ವಿಫಲವಾಗಿದ್ದೇಕೆ?
ಪುತ್ತೂರು ಬಿಜೆಪಿಯ ಭದ್ರಕೋಟೆ ಎಂದೇ ಹೇಳಲಾಗುತ್ತಿದೆ. ಇಂತಹ ಭದ್ರಕೋಟೆಯನ್ನು ಅಶೋಕ್ ಕುಮಾರ್ ರೈ ಅವರು ಸಲೀಸಾಗಿ ಬೇಧಿಸಿಬಿಟ್ಟರು. ಕ್ಷೇತ್ರ ಕೈತಪ್ಪಿ ಹೋಯಿತು ಎಂದು ಬಿಜೆಪಿ ನಾಯಕರು ಸುಮ್ಮನೆ ಕುಳಿತುಕೊಂಡು ಬಿಟ್ಟರೆ, ವಿಪಕ್ಷ ಸ್ಥಾನದ ಜವಾಬ್ದಾರಿಯನ್ನು ನಿಭಾಯಿಸುವವರಾರು? ವಿಪಕ್ಷ ಸ್ಥಾನವೂ ಬಹಳ ದೊಡ್ಡ ಜವಾಬ್ದಾರಿಯಲ್ಲವೇ? ಆಡಳಿತ ಪಕ್ಷದ ಕುಂದು ಕೊರತೆಗಳನ್ನು ಬೊಟ್ಟು ಮಾಡಿ ತೋರಿಸದೇ ಇದ್ದರೆ, ಮುಂದಿನ ಬಾರಿ ಚುನಾವಣೆಯನ್ನು ಹೇಗೆ ಎದುರಿಸುತ್ತಾರೆ? ಜನರ ಬಳಿಗೆ ಹೇಗೆ ಹೋಗುತ್ತಾರೆ?
ಪುತ್ತಿಲಗೆ ವಿಪಕ್ಷ ಸ್ಥಾನವೇ?
ಪುತ್ತೂರಿನಲ್ಲಿ ವಿಪಕ್ಷ ಸ್ಥಾನವನ್ನು ಅರುಣ್ ಕುಮಾರ್ ಪುತ್ತಿಲ ಅವರಿಗೆ ಬಿಟ್ಟುಕೊಟ್ಟಂತಾಗಿದೆ. ಎಲ್ಲೆಡೆ ಓಡಾಟ ನಡೆಸುತ್ತಿದ್ದಾರೆ, ಜನರ ಬಳಿಗೆ ಹೋಗಿ ಮಾತನಾಡಿಸುತ್ತಿದ್ದಾರೆ, ಸಂಕಷ್ಟದ ಸಂದರ್ಭಗಳಲ್ಲಿ ಜನರ ಜೊತೆ ನಿಂತುಕೊಳ್ಳುತ್ತಿದ್ದಾರೆ. ಅವರ ದೈನಂದಿನ ದಿನಚರಿಯನ್ನು ಈಗ ಇನ್ನೂ ಪರಿಣಾಮಕಾರಿಯಾಗಿ ಮಾಡುತ್ತಿದ್ದಾರೆ. ಹಾಗೆಂದು ಅರುಣ್ ಕುಮಾರ್ ಪುತ್ತಿಲ ಅವರು ವಿಪಕ್ಷ ಸ್ಥಾನದ ಜವಾಬ್ದಾರಿಯನ್ನು ನಿಭಾಯಿಸಲು ಸಾಧ್ಯವೇ ಎನ್ನುವ ಪ್ರಶ್ನೆ ತಲೆಎತ್ತುತದೆ. ಕಾರಣ, ಪುತ್ತಿಲ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕ್ಕಿದ್ದರು. ಅವರಿಗೆ ಪಕ್ಷದ ಸ್ಥಾನಮಾನವಿಲ್ಲ. ಆದರೂ, ಪೊಲೀಸ್ ದೌರ್ಜನ್ಯದ ಸಂದರ್ಭ, ಹಲ್ಲೆ – ಜಗಳದ ಸಂದರ್ಭ, ಎದುರು ನಿಂತು ಮಾತನಾಡಿದ್ದು ಅರುಣ್ ಕುಮಾರ್ ಪುತ್ತಿಲ ಮಾತ್ರ. ಆದರೆ ಈ ಎಲ್ಲಾ ಜವಾಬ್ದಾರಿಗಳನ್ನು ಒಂದು ರಾಷ್ಟ್ರೀಯ ಪಕ್ಷವಾಗಿ ಬಿಜೆಪಿ ನಿಭಾಯಿಸಬೇಕಿತ್ತಲ್ಲವೇ? ಯಾಕೆ ಕೈಕಟ್ಟಿ ಸುಮ್ಮನೆ ಕುಳಿತುಕೊಂಡು ಬಿಟ್ಟಿದೆ?
Posted by Vidyamaana on 2023-08-03 12:40:38 |
ಉಡುಪಿ: ಮಣಿಪಾಲ ಡಿಸಿ ಕಚೇರಿ ರಸ್ತೆಯಲ್ಲಿ ರೀಲ್ಸ್ ಶೋಕಿಗಾಗಿ ಯದ್ವಾ ತದ್ವಾ ಸ್ಕೂಟರ್ ಚಲಾಯಿಸಿ ಇತರೆ ವಾಹನ ಸವಾರರಿಗೆ ತೊಂದರೆ ನೀಡಿದ್ದ ಯುವಕ ನನ್ನು ಮತ್ತು ಸ್ಕೂಟರ್ ವಶಕ್ಕೆ ಪಡೆದು ಮಣಿಪಾಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.ಪರ್ಕಳ ನಿವಾಸಿ ಆಶಿಕ್(19) ದ್ವಿಚಕ್ರ ವಾಹನದಲ್ಲಿ ಅಪಾಯಕಾರಿ ರೀಲ್ಸ್ ಮಾಡುತ್ತಿದ್ದ ಯುವಕ.
ಆಶಿಕ್ ಯದ್ವಾ ತದ್ವಾ ಸ್ಕೂಟಿ ಓಡಿಸಿ ಹುಚ್ಚಾಟ ಮೆರೆದಿರುವ ವಿಡಿಯೋವೊಂದು ಬುಧವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸ್ಕೂಟಿ ಉಡುಪಿಯ ನೋಂದಣಿ ಸಂಖ್ಯೆ ಹೊಂದಿದ್ದು ವಿಡಿಯೋದಲ್ಲಿ ಮಣಿಪಾಲದ ಡಿಸಿ ಆಫೀಸ್ ರಸ್ತೆ ಹಾಗೂ ಉಡುಪಿಯ ಭಾಗದ ರಸ್ತೆಯಲ್ಲಿ ಯದ್ವಾ ತದ್ವಾವಾಗಿ ಸಂಚರಿಸಿರುವುದು ಕಂಡು ಬಂದಿದೆ. ಒಂದು ಕಡೆ ಹೋಗುವ ಭರದಲ್ಲಿ ಕಾರಿಗೆ ಡಿಕ್ಕಿ ಹೊಡೆಯುವ ಸಂದರ್ಭವೂ ಎದುರಾಗಿರುವುದು ವಿಡಿಯೋದಲ್ಲಿ ಕಾಣಬಹುದು.