Posted by vidyamaana on 2024-03-23 10:38:46 |
ಬೆಳ್ತಂಗಡಿ : ತುಮಕೂರಿನಲ್ಲಿ ಕಾರಿಗೆ ಬೆಂಕಿ ಹಚ್ಚಿ ಕೆರೆಗೆ ತಳ್ಳಿದ ಪ್ರಕರಣದಲ್ಲಿ ಮೂವರು ಸಾವನ್ನಪ್ಪಿದ ಸಂಬಂಧಪಟ್ಟಂತೆ ಆರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಐದು ಜನರನ್ನು ಕೋರಾ ಪೊಲೀಸರು ಮಾ.22 ರಂದು ರಾತ್ರಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ತುಮಕೂರಿಗೆ ಕಳೆದ ಹನ್ನೊಂದು ದಿನದ ಹಿಂದೆ ವ್ಯವಹಾರ ಸಂಬಂಧ ಮದಡ್ಕದ ರಫೀಕ್ ಎಂಬವರ ಮಾಲೀಕತ್ವದ ಎಸ್ ಪ್ರೆಸ್ ಕಾರಿನಲ್ಲಿ ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾಸ್ ನಿವಾಸಿ ಆಟೋ ಚಾಲಕ ಸಾಹುಲ್ ಹಮೀದ್(45) , ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಇಸಾಕ್(56) , ಶಿರ್ಲಾಲು ಗ್ರಾಮದ ಸಿದ್ದಿಕ್(34) ಮೂವರು ಬಾಡಿಗೆ ಮಾಡಿಕೊಂಡು ಹೋಗಿದ್ದರು ಎಂದು ಗುರುತಿಸಿದ್ದಾರೆ.
ಇನ್ನು ಮೂರು ಜನ ಮೃತರೆಲ್ಲಾ ನಕಲಿ ಚಿನ್ನದ ದಂಧೆಯ ಆಸೆಗೆ ಬಲಿಯಾಗಿದ್ದಾರೆ ಅನ್ನೋದು ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ ಕಡಿಮೆ ಚಿನ್ನವನ್ನು ಬೆಲೆಗೆ ನೀಡುತ್ತೇವೆ ಎಂದು ಸುಳ್ಳು ಹೇಳಿ ಮೂವರನ್ನು ಕರೆಸಿ ಹಣ ದೋಚುವ ಪ್ಲ್ಯಾನ್ ಮಾಡಿ ಕರೆಸಿಕೊಂಡು ನಂತರ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ.
ಪ್ರಕರಣದ ಪ್ರಮುಖ ರೂವಾರಿ ತುಮಕೂರಿನ ಸ್ವಾಮಿ ಮತ್ತು ಇತರ ಐದು ಜನ ಸೇರಿ ಒಟ್ಟು ಆರು ಜನರನ್ನು ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಕೋರಾ ಪೊಲೀಸ್ ಠಾಣೆಯಲ್ಲಿ ಮಾ.22 ರಂದು ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದು. ಇನ್ನು ಮೂವರ ಶವ ಸಂಪೂರ್ಣವಾಗಿ ಸುಟ್ಟಿರುವ ಕಾರಣ ಗುರುತು ಪತ್ತೆಹಚ್ಚಲು ಡಿಎನ್ಎ ಪರೀಕ್ಷೆ ಬಳಿಕ ಮನೆಮಂದಿಗೆ ಶವ ಬಿಟ್ಟು ಕೊಡಲಿದ್ದಾರೆ. ಡಿಎನ್ಎ ವರದಿ ಬರಲು ಸುಮಾರು ಒಂದು ವಾರ ಬೇಕಾಗುತ್ತದೆ ಎಂದು ಪೊಲೀಸರು ಮನೆಯವರಿಗೆ ತಿಳಸಿದ್ದಾರೆ.
Posted by Vidyamaana on 2023-06-13 02:18:12 |
ಮಡಿಕೇರಿ ಜೂ.12 : ಮಡಿಕೇರಿ ಹೊರವಲಯದ ಉಡೋತ್ ಮೊಟ್ಟೆಯ ಪಪ್ಪೀಸ್ ಪ್ಲಾಂಟೇಷನ್ನಲ್ಲಿ ಸುಮಾರು 32 ಮೀಟರ್ ಉದ್ದದ 2 ಮೀಟರ್ ಅಗಲದ 78 ಅಡಿ ಎತ್ತರದಲ್ಲಿರುವ ಗ್ಲಾಸ್ ಸ್ಕೈ ವಾಕ್ ಬ್ರಿಡ್ಜ್ ಪ್ರವಾಸಿಗರ ಗಮನ ಸೆಳೆಯುತ್ತಿದೆ.
ಸುಮಾರು 5 ಟನ್ ಬಾರ ಹೊರುವ ಸಾಮರ್ಥ್ಯದ ಈ ಸೇತುವೆಯಲ್ಲಿ ಒಮ್ಮೆಗೆ 40-50 ಮಂದಿ ನಿಂತು ಪ್ರಕೃತಿಯ ಸೌಂದರ್ಯ ಸವಿಯಬಹುದು. ಇದು ಕರ್ನಾಟಕದ ಮೊದಲ ಉದ್ದದ ಗ್ಲಾಸ್ ಸೇತುವೆಯಾಗಿದ್ದು, ವಿರಾಜಪೇಟೆ ಕ್ಷೇತ್ರದ ಶಾಸಕ ಹಾಗೂ ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು.
ನಂತರ ಮಾತನಾಡಿದ ಪೊನ್ನಣ್ಣ, ಕೊಡಗು ಪ್ರಕೃತಿ ದತ್ತವಾದ ನಿಸರ್ಗಕ್ಕೆ ಧಕ್ಕೆಯಾಗದ ವಿಚಾರವನ್ನು ಹೊರತುಪಡಿಸಿ ಅಭಿವೃದ್ಧಿ ಪಡಿಸಬೇಕು ಎಂದರು.
ಈ ಅಪರೂಪದ ಯೋಜನೆಯಿಂದ ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಾಗಲಿದೆ. ಜೊತೆಗೆ ಅವಲಂಬಿತರಿಗೆ ಉದ್ಯೋಗವಕಾಶ ದೊರೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮ ನಿರೂಪಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ತೆನ್ನಿರಾ ಮೈನಾ, ಭಾರತದ ಸ್ಟ್ರಾಟ್ ಲ್ಯಾಂಡ್ ದಕ್ಷಿಣದ ಕಾಶ್ಮೀರ ಎಂದು ಕರೆಸಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ಇಂತಹ ಒಂದು ಅದ್ಭುತ ಯೋಜನೆ ಸ್ಥಾಪಿತವಾಗಿರುವುದು ಪ್ರವಾಸೋದ್ಯಮಕ್ಕೆ ಅಶೋದಯಕ ಬೆಳವಣಿಗೆ ಎಂದು ತಿಳಿಸಿದರು.ಟಿಕೆಟ್ ಕೌಂಟರನ್ನು ಮಡಿಕೇರಿ ನಗರಸಭೆ ಮಾಜಿ ಅಧ್ಯಕ್ಷ ಹೆಚ್.ಎಂ.ನಂದಕುಮಾರ್, ಪ್ಲೆಂಟೇಷನ್ನ ವಾಕ್ ಪಾಟ್ಅನ್ನು ಕೇಕಡ ಗಣಪತಿ ಹಾಗೂ ದೇವಯ್ಯ ಉದ್ಘಾಟಿಸಿದರು. ಫೋಟೋ ಪಾಯಿಂಟನ್ನು ಉದ್ಯಾಮಿ ಗ್ರೀನ್ ಲ್ಯಾಂಡ್ ಶರಿನ್ ಉದ್ಘಾಟಿಸಿದರು.
ಈ ಸಂದರ್ಭ ಓಂಕಾರೇಶ್ವರ ದೇವಾಲಯದ ಮಾಜಿ ಅಧ್ಯಕ್ಷ ಪುಲಿಯಂಡ ಜಗದೀಶ್, ತುಳುವೆರ ಒಕ್ಕೂಟದ ಜಿಲ್ಲಾ ಖಜಾಂಚಿ ಪ್ರಭುರೈ, ಬೆಟ್ಟಗೇರಿ ಗ್ರಾ.ಪಂ ಸದಸ್ಯ ಗೋಪಾಲ, ಪ್ರಮುಖರಾದ ಮುಂಜಂದಿರ ಚಿಕ್ಕು ಕಾರ್ಯಪ್ಪ, ಅಜ್ಜಿಕುಟೀರ ನರೇನ್ ಕಾರ್ಯಪ್ಪ, ಮಿದೇರಿರ ನವೀನ್ ಹಾಜರಿದ್ದರು.
Posted by Vidyamaana on 2023-09-09 14:51:49 |
ಬೆಳ್ತಂಗಡಿ : ಯುವಕನೊಬ್ಬನಿಗೆ ಮನೆಯಲ್ಲಿರುವ ವೇಳೆ ಹೃದಯಾಘಾತವಾಗಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ಕಿರ್ನಡ್ಕದಲ್ಲಿ ನಡೆದಿದೆ.
ಕಿರ್ನಡ್ಕ ನಿವಾಸಿ ಕಿಟ್ಟಣ್ಣ ನಾಯ್ಕ ಮತ್ತು ವೇದಾವತಿ ದಂಪತಿಗಳ ಪುತ್ರ ಪ್ರದೀಪ್ (25)ಗೆ ಹೃದಯಾಘಾತವಾದ ಘಟನೆ ಸೆಪ್ಟೆಂಬರ್ 8 ರಂದು ರಾತ್ರಿ ನಡೆದಿದೆ. ತಕ್ಷಣ ಉಜಿರೆ ಖಾಸಗಿ ಆಸ್ಪತ್ರೆಗೆ ಸಾಧಿಸಿದರು ಬದುಕುಳಿಯಲಿಲ್ಲ.
ಮೃತರಿಗೆ ಸಹೋದರಿ ಪದ್ಮಾವತಿ, ಸಹೋದರ ನಿತೇಶ್ ಹಾಗೂ ಬಂಧುಬಳಗವನ್ನು ಅಗಲಿದ್ದಾರೆ.
Posted by Vidyamaana on 2023-12-20 20:33:26 |
ಪುತ್ತೂರು: ಸುಳ್ಯ, ಕುಶಾಲನಗರ, ಹಾಸನದಲ್ಲಿ ಚಿನ್ನಾಭರಣದ ಮಳಿಗೆ ಹೊಂದಿರುವ ಪುತ್ತೂರಿನ ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ನಲ್ಲಿ 2024ನೇ ಜ.15ರ ತನಕ ನಡೆಯುವ ವಜ್ರಾಭರಣಗಳ ಪ್ರದರ್ಶನ ಹಾಗೂ ಮಾರಾಟ ’ಗ್ಲೋ ಫೆಸ್ಟ್’ ಗೆ ಡಿ.18ರಂದು ಚಾಲನೆ ನೀಡಲಾಯಿತು. 2ಸಾವಿರಕ್ಕೂ ಮಿಕ್ಕಿ ವಿನ್ಯಾಸದ ಕಣ್ಮನ ಸೆಳೆಯುವ ವಜ್ರಾಭರಣಗಳ ಸಂಗ್ರಹದ ಗ್ಲೋ ಫೆಸ್ಟ್ ಅನ್ನು ಪ್ರತಿ ವರ್ಷದಂತೆ ನಾಲ್ವರು ಸಾಧಕ ಮಹಿಳೆಯರು ಉದ್ಘಾಟಿಸಿದರು.
ಸುಮಾರು ಮೂರು ತಲೆಮಾರುಗಳಿಂದ ಜಿ.ಎಲ್ ಆಚಾರ್ಯ ಜ್ಯುವೆಲ್ಲರ್ಸ್ನ ಗ್ರಾಹಕರಾಗಿರುವ ಭಜನಾ ಸಂಕೀರ್ತಣೆ ಸಹಿತ ಹಲವು ಧಾರ್ಮಿಕ ಕಾರ್ಯದಲ್ಲಿ ಸೇವೆ ನೀಡುತ್ತಿರುವ ವಿಜಯ ಆರ್ ನಾಯಕ್, ನಗರಸಭೆಯ ನಿಕಟಪೂರ್ವ ಉಪಾಧ್ಯಕ್ಷೆ ಮತ್ತು ಹಲವಾರು ಸಂಘ ಸಂಸ್ಥೆಗಳಲ್ಲಿ ತೊಡಗಿಕೊಂಡಿರುವ ವಿದ್ಯಾ ಆರ್ ಗೌರಿ, ಪ್ರಗತಿ ಪರ ಕೃಷಿಕರಾಗಿರುವ ಸೀಮಾ ಆಳ್ವ, ಇನ್ನರ್ವೀಲ್ ಕ್ಲಬ್ನಲ್ಲಿ ತೊಡಗಿಸಿಕೊಂಡಿರುವ ನ್ಯಾಯವಾದಿ ಸೀಮಾನಾಗರಾಜ್ ಅವರು ಜೊತೆಯಾಗಿ ಗ್ಲೋ ಫೆಸ್ಟ್ ಅನ್ನು ಉದ್ಘಾಟಿಸಿದರು.
ಎಲ್ಲರಿಗೂ ಕೈಗೆಟಕುವ ಆಭರಣ ಇಲ್ಲಿದೆ:
ನಗರಸಭೆ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ ಅವರು ಮಾತನಾಡಿ ದಕ್ಷಿಣ ಕನ್ನಡ ಮಾತ್ರವಲ್ಲ ದೇಶ ವಿದೇಶಕ್ಕೆ ಹೆಸರುವಾಸಿಯಾಗಿರುವ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಮಳಿಗೆ ಅತ್ಯುತ್ತಮ ದರ, ಗುಣಮಟ್ಟ ಹಾಗು ವಿಭಿನ್ನ ಶೈಲಿಯ ಚಿನ್ನಾಭರಣಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದೆ. ಇವತ್ತು ಗ್ಲೋ ಫೆಸ್ಟ್ ಮೂಲಕ ಕೈಗೆಟಕುವ ದರದಲ್ಲೂ ವಜ್ರದ ಆಭರಣ ಸಿಗುತ್ತದೆ ಎಂಬ ಅರಿವನ್ನು ಗ್ರಾಹಕರಿಗೆ ಪರಿಚಯಿಸಿದ್ದಾರೆ ಎಂದರು.
ಗುಣಮಟ್ಟ, ನಂಬಿಕೆಯಲ್ಲಿ ಜಿ.ಎಲ್.ಆಚಾರ್ಯ ಪ್ರಸಿದ್ದಿ:
ನ್ಯಾಯವಾದಿ ಸೀಮಾ ನಾಗರಾಜ್ ಅವರು ಮಾತನಾಡಿ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಸಂಸ್ಥೆಯಲ್ಲಿ ಚಿನ್ನದ ಗುಣಮಟ್ಟ ಮತ್ತು ನಂಬಿಕೆಯಲ್ಲಿ ಪ್ರಸಿದ್ಧಿ ಪಡೆದಿದೆ. ಇಲ್ಲಿನ ಸಿಬ್ಬಂದಿಗಳ ನಗುಮೊಗದ ಸೇವೆ ಗ್ರಾಹಕರಿಗೆ ಆಭರಣ ಖರೀದಿಸುವಲ್ಲಿ ಪ್ರೋತ್ಸಾಹ ನೀಡುತ್ತಿದೆ. ಇಲ್ಲಿನ ಚಿನ್ನದ ಹೂಡಿಕೆಗೆ ಸಂಬಂಧಿಸಿ ಇರುವ ಸ್ವರ್ಣ ನಿಧಿ ಯೋಜನೆ ತುಂಬಾ ಪ್ರಯೋಜವಾಗಿದೆ. ನಾವು ನಾಲ್ಕು ಜನ ಮಕ್ಕಳು ನಮ್ಮ ಮದುವೆ ಆಭರಣ ಇಲ್ಲೇ ಖರೀದಿಸಿದ್ದು, ನನ್ನ ಗಂಡನ ಮನೆಯವರೂ ಕೂಡಾ ಹಲವು ವರ್ಷಗಳಿಂದ ಜಿ.ಎಲ್. ಸಂಸ್ಥೆಯ ಗ್ರಾಹಕರಾಗಿರುವುದು ನಂಬಿಕೆ ವಿಶ್ವಾಸಕ್ಕೆ ದೊಡ್ಡ ಹೆಜ್ಜೆಯಾಗಿದೆ ಎಂದರು.
ನಮ್ಮ ಕುಟುಂಬವೇ ಜಿ.ಎಲ್. ಗ್ರಾಹಕರು:
ಪ್ರಗತಿಪರ ಕೃಷಿಕರಾಗಿರುವ ಸೀಮಾ ಆಳ್ವ ಅವರು ಮಾತನಾಡಿ 40 ವರ್ಷಗಳ ಹಿಂದೆಯೇ ನಾವು ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ನ ಗ್ರಾಹಕರಾಗಿದ್ದೇವೆ. ನನ್ನ ತಾಯಿಯ ವಿವಾಹಕ್ಕೂ ಇಲ್ಲಿಂದಲೇ ಚಿನ್ನಾಭರಣ ಖರೀದಿ ಮಾಡಿದ್ದರು. ನಮ್ಮ ಕುಟುಂಬವೇ ಇಲ್ಲಿನ ಗ್ರಾಹಕರು ಎಂದರು.
40 ವರ್ಷಗಳೀಂದ ನಾವು ಜಿ.ಎಲ್.ಗ್ರಾಹಕರು:
ಧಾರ್ಮಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ವಿಜಯ ನಾಯಕ್ ಅವರು ಮಾತನಾಡಿ ನಾನು ವರ್ಷಕ್ಕೆ ಮೂರು ಸಲ ಜಿ.ಎಲ್.ಆಚಾರ್ಯ ಜ್ಯುವಲ್ಲರ್ಸ್ಗೆ ಬರುತ್ತೇನೆ. ನನ್ನ ಮೊಮ್ಮಕ್ಕಳ ಹುಟ್ಟಿದ ಹಬ್ಬ ಸಹಿತ ಹಲವು ಸಂದರ್ಭದಲ್ಲಿ ಇಲ್ಲಿಂದಲೇ ಆಭರಣ ಖರೀದಿಸುತ್ತಿದ್ದೇನೆ. ಕಳೆದ 40 ವರ್ಷಗಳಿಂದಲೂ ನಮ್ಮ ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ ಚಿನ್ನದ ಸಂಬಂಧ ಉತ್ತಮವಾಗಿದೆ ಎಂದ ಜಿ.ಎಲ್. ಗ್ಲೋ ಫೆಸ್ಟ್ಗೆ ಶುಭ ಹಾರೈಸಿದರು.
ವಜ್ರ ದುಬಾರಿ ಎಂಬ ಭಾವನೆ ಕ್ರಮೇಣ ಕಡಿಮೆಯಾಗಿದೆ
ಜಿ.ಎಲ್.ಆಚಾರ್ಯ ಜ್ಯುವೆಲ್ಲರ್ಸ್ನ ಆಡಳಿತ ಮಂಡಳಿತ ಅಧ್ಯಕ್ಷ ಜಿ.ಎಲ್.ಬಲರಾಮ ಆಚಾರ್ಯ ಅವರು ಮಾತನಾಡಿ ಕಳೆದ 11 ವರ್ಷಗಳಿಂದ ಪ್ರತಿ ವರ್ಷ ಡಿಸೆಂಬರ್ ತಿಂಗಳಲ್ಲಿ ಗ್ಲೋ ಫೆಸ್ಟ್ ಎಂಬ ವಜ್ರಾಭರಣಗಳ ಪ್ರದರ್ಶನ ಮತ್ತು ಮಾರಾಟ ಆಯೋಜಿಸುತ್ತೇವೆ. ವರ್ಷದಿಂದ ವರ್ಷಕ್ಕೆ ಗ್ರಾಹಕರು ಹೆಚ್ಚಿನ ಸ್ಪಂಧನೆ ಲಭ್ಯವಾಗಿದೆ. ವಜ್ರ ಎಂಬುದು ಬಹಳ ದುಬಾರಿ, ಕೈಗೆ ಎಟಕ್ಕದು ಎಂಬ ಭಾವನೆ ಇವತ್ತು ಕ್ರಮೇಣ ಕಡಿಮೆ ಆಗಿದೆ. ಇವತ್ತು ಅತ್ಯಂತ ಸಣ್ಣ ವಜ್ರಗಳನ್ನು ಪೋಣಿಸಿ ಆಭರಣ ಮಾಡುವ ತಂತ್ರಜ್ಞಾನವಿದೆ. ಇದರಿಂದ ಸಾಮಾನ್ಯ ಗ್ರಾಹಕರಿಗೂ ವಜ್ರ ಖರೀದಿಗೆ ಸಾಧ್ಯವಾಗಿದೆ. ಇದರೊಂದಿಗೆ ಮದುಮಗಳ ಶೃಂಗಾರಕ್ಕೆ ಬೇಕಾದ ಎಲ್ಲಾ ಆಭರಣಗಳು ನಮ್ಮಲ್ಲಿ ವಿಭಿನ್ನ ಶೈಲಿಯಲ್ಲಿದೆ. ಗ್ಲೋ ಫೆಸ್ಟ್ನಲ್ಲಿ ಆಕರ್ಷಕ ರಿಯಾಯಿತಿ ದರ ನೀಡುತ್ತಿದ್ದೇವೆ. ಗ್ರಾಹಕರು ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದರು. ಜಿ.ಎಲ್.ಬಲರಾಮ ಆಚಾರ್ಯ ಸ್ವಾಗತಿಸಿ, ಬಲರಾಮ ಆಚಾರ್ಯ ಅವರ ಪತ್ನಿ ರಾಜಿ ಬಲರಾಮ ಆಚಾರ್ಯ, ಸಂಸ್ಥೆಯ ಆಡಳಿತ ನಿರ್ದೇಶಕರಾದ ಸುದನ್ವ ಆಚಾರ್ಯ, ಲಕ್ಷ್ಮೀಕಾಂತ್ ಆಚಾರ್ಯ, ವೇದಾ ಲಕ್ಷ್ಮೀಕಾಂತ್ ಆಚಾರ್ಯ ಅತಿಥಿಗಳನ್ನು ಗೌರವಿಸಿದರು. ಸಂಸ್ಥೆಯ ಸಿಬ್ಬಂದಿಗಳು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಎಲ್ಲಾ ವಯೋಮಿತಿಯ ಗ್ರಾಹಕರಿಗೆ ತಕ್ಕಂತೆ ವಜ್ರಾಭರಣಗಳ ಆಯ್ಕೆ ಲಭ್ಯವಿದೆ. ಮಕ್ಕಳ, ಮಹಿಳೆಯರ ಹಾಗೂ ಪುರುಷರ ಅಭಿರುಚಿಗೆ ತಕ್ಕಂತೆ ವಿನ್ಯಾಸಗೊಳಿಸಿರುವ ವಜ್ರಾಭರಣಗಳ ಸಂಗ್ರಹವಿದ್ದು ಗ್ರಾಹಕರಿಗೆ ಆಹ್ಲಾದಕರ ಖರೀದಿಯ ವಾತಾವರಣ ಕಲ್ಪಿಸಲಾಗಿದೆ. ಗ್ಲೋ ಫೆಸ್ಟ್ನಲ್ಲಿ ವಜ್ರಾಭರಣ ಖರೀದಿ ಮೇಲೆ ಪ್ರತಿ ಕ್ಯಾರೆಟ್ ಗೆ ರೂ.6,ಸಾವಿರದ ವರೆಗೆ ರಿಯಾಯಿತಿ, ಆಯ್ದ ವಜ್ರಾಭರಣಗಳ ಪ್ರತಿ ಖರೀದಿ ಮೇಲೆ ರೂ. 7ಸಾವಿರದ ವರೆಗೆ ರಿಯಾಯಿತಿ ನೀಡಲಾಗುವುದು. ಗ್ಲೋ ವಜ್ರಾಭರಣಗಳ ಸಂಗ್ರಹಕ್ಕೆ ಬೈ ಬ್ಯಾಕ್ ಮತ್ತು ಎಕ್ಸೇಜೆಂಜ್ ಗ್ಯಾರಂಟಿಯನ್ನು ಸಂಸ್ಥೆ ದೃಡೀಕರಿಸುತ್ತದೆ. ಗ್ಲೋ ಫೆಸ್ಟ್ನಲ್ಲಿ ಗ್ರಾಹಕರಿಗೆ ವಜ್ರಾಭರಣಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಾಗುವುದು. ಈ ಆಫರ್ ಪುತ್ತೂರು ಹಾಗೂ ಸುಳ್ಯ ಮಳಿಗೆಗಳಲ್ಲಿ ಮಾತ್ರ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Posted by Vidyamaana on 2023-07-31 15:58:06 |
ಪುತ್ತೂರು: ಮನೆಯನ್ನು ಟಾರ್ಗೆಟ್ ಮಾಡಿ, ಹೊಂಚು ಹಾಕಿ ಸಂಚು ರೂಪಿಸಿ, ಕನ್ನ ಹಾಕುವ ಹೊರರಾಜ್ಯದ ಕಳ್ಳರ ತಂಡ ಪುತ್ತೂರಿಗೆ ಎಂಟ್ರಿ ನೀಡಿದೆ! ಹಾಗಾಗಿ ನಿಮ್ಮ ಮನೆಗೆ ಬೀಗ ಹಾಕಿ, ಹೊರಗಡೆ ಹೋಗುವಾಗ ಎಚ್ಚರ ವಹಿಸಿ.
ಅರೆ! ಹೊರರಾಜ್ಯದ ಕಳ್ಳರ ಗುಂಪು ನಮ್ಮ ಮನೆಯೊಳಗೆ ಹೇಗೆ ಬರುವುದು? ನಮ್ಮ ಮನೆಯೊಳಗೆ ಏನಿದೆ ಎಂದು ಅವರಿಗೆ ತಿಳಿಯುವುದಾದರೂ ಹೇಗೆ? ಎಂಬಿತ್ಯಾದಿ ಪ್ರಶ್ನೆ ನಿಮ್ಮ ಮನದೊಳಗೆ ಮೂಡಬಹುದು. ಹೀಗೆಂದು ಹೇಳಿ, ಕಳ್ಳರ ತಂಡವನ್ನು ಉಪೇಕ್ಷೆ ಮಾಡದಿರಿ. ಕಾರಣ, ಪುತ್ತೂರು ಪೇಟೆಯಲ್ಲಿ ಹಾಡಹಗಲೇ ಮನೆಯೊಂದಕ್ಕೆ ನುಗ್ಗಿರುವ ಕಳ್ಳರು, ಸ್ವಲ್ಪದರಲ್ಲೇ ಎಸ್ಕೇಪ್ ಆಗಿದ್ದಾರೆ.
ಇಲ್ಲಿ ಗಮನಿಸಬೇಕಾದ ವಿಷಯವೇನೆಂದರೆ, ಕಳ್ಳರು ಒಂದು ಸಣ್ಣ ಸುಳಿವನ್ನು ಬಿಟ್ಟುಹೋಗಿಲ್ಲ. ಹೆಚ್ಚೇಕೆ, ಕಳ್ಳರ ಕೈಬೆರಳಿನ ಗುರುತೂ ಪತ್ತೆಯಾಗಿಲ್ಲ. ಹಾಗೆಂದು ಬಂಗಲೆಯಂತಹ ಮನೆ ಪೂರ್ತಿ ತಡಕಾಡಿದ್ದಾರೆ. ಕೈಗೆ ಸಿಕ್ಕ ಸಣ್ಣ ಪುಟ್ಟ ವಸ್ತುಗಳನ್ನು ದೋಚಿದ್ದಾರೆ. ಮಾತ್ರವಲ್ಲ, ಮನೆಯಲ್ಲಿ ಕೃತ್ಯದ ಸಚಿತ್ರ ಮಾಹಿತಿ ನೀಡಬೇಕಿದ್ದ ಸಿಸಿ ಕ್ಯಾಮರಾದ ಇಡೀಯ ಸೆಟ್ಟನ್ನೇ ಹೊತ್ತೊಯ್ದಿದ್ದಾರೆ. ಅಚ್ಚರಿ ಪಡಬೇಕಾದ ವಿಚಾರವೇನೆಂದರೆ, ಮನೆಯ ಬಾಗಿಲನ್ನು ಗ್ಯಾಸ್ ಕಟ್ಟರಿನಂತಹ ಆಯುಧದಿಂದ ತುಂಡರಿಸಿ ಒಳ ನುಗ್ಗುತ್ತಾರೆ ಎನ್ನುವುದು. ಸೋಮವಾರ ಮನೆಯೊಳಗೆ ನುಗ್ಗಿದ ಕಳ್ಳರು, ಮಾಡಿರುವ ರಾದ್ಧಾಂತ ನೋಡಿದರೆ – ಪ್ರೊಫೆಷನಲ್ ಕಳ್ಳರು ಎನ್ನುವುದು ಸ್ಪಷ್ಟ.
ಆದ್ದರಿಂದ ಮನೆಯಿಂದ ಹೊರ ಹೋಗುವಾಗ ಸ್ಥಳೀಯರ ಗಮನಕ್ಕೆ ತನ್ನಿ. ಒಂದು ದಿನ ಮನೆ ಬಿಟ್ಟು ಹೋಗುತ್ತೀರಿ ಎಂದರೆ, ಸ್ಥಳೀಯ ಪೊಲೀಸ್ ಠಾಣೆಯ ಗಮನಕ್ಕೆ ತನ್ನಿ. ಇನ್ನು, ಬೆಲೆಬಾಳುವ ಚಿನ್ನಾಭರಣಗಳನ್ನು ಸೇಫ್ ಲಾಕರಿನಲ್ಲೋ, ಬ್ಯಾಂಕ್ ಲಾಕರಿನಲ್ಲೋ ಇಡುವುದನ್ನು ಮಾತ್ರ ಮರೆಯದಿರಿ.
ಸ್ಥಳೀಯರ ಸಹಕಾರ!!??:
ಹೊರರಾಜ್ಯದ ಕಳ್ಳರಿಗೆ ನಮ್ಮ ಮನೆಯ ಮಾಹಿತಿ ತಿಳಿಯುವುದಾದರೂ ಹೇಗೆ ಎನ್ನುವ ಯಕ್ಷಪ್ರಶ್ನೆ ಎಲ್ಲರಲ್ಲೂ ಸಹಜವಾಗಿ ಮೂಡುತ್ತದೆ. ಉತ್ತರ ಸುಲಭವೇ ಇದೆ. ಹೊರರಾಜ್ಯದ ಕಳ್ಳರು, ಸ್ಥಳೀಯರ ನೆರವು ಪಡೆದುಕೊಳ್ಳದೇ ಏಕಾಏಕೀ ನುಗ್ಗಲು ಸಾಧ್ಯವೇ ಇಲ್ಲ. ಏಕೆಂದರೆ, ಮನೆಯವರು ಎಷ್ಟು ಹೊತ್ತಿಗೆ ಹೊರಹೋಗುತ್ತಾರೆ, ಪುನಃ ಎಷ್ಟು ಹೊತ್ತಿಗೆ ಹಿಂದಿರುಗಿ ಬರುತ್ತಾರೆ ಎನ್ನುವ ಸ್ಪಷ್ಟ ಮಾಹಿತಿ ಅವರಲ್ಲಿರುತ್ತದೆ. ಅದು ಹಾಡಹಗಲೇ ಆದರೂ ಸರಿ, ಸ್ಥಳೀಯರಿಗೆ ಸಂದೇಹವೇ ಬಾರದ ರೀತಿಯಲ್ಲಿ ಕನ್ನ ಹಾಕುತ್ತಾರೆ. ಮನೆಯ ಬಾಗಿಲು ಎಷ್ಟೇ ಗಟ್ಟಿಯಾಗಿರಲಿ, ಅದನ್ನು ಮುರಿಯುವ ಆಯುಧಗಳು ಅವರಲ್ಲಿರುತ್ತವೆ ಎನ್ನುವುದು ಸೋಮವಾರದ ಘಟನೆಯಿಂದ ಸಾಬೀತಾಗಿದೆ. ಇಷ್ಟೇಲ್ಲಾ ಯೋಜನೆ ರೂಪಿಸಬೇಕಾದರೆ, ಸ್ಥಳೀಯರ ಸಹಕಾರ ಖಂಡಿತಾ ಪಡೆದುಕೊಂಡಿರಲೇಬೇಕು ಅಲ್ಲವೇ?
ಹೈಫೈ ಕಳ್ಳರು:
ಜನಸಂಖ್ಯೆ ಹೆಚ್ಚಿರುವ ಪ್ರದೇಶವನ್ನೇ ಆಯ್ಕೆ ಮಾಡಿಕೊಳ್ಳುವ ಕಳ್ಳರು, ಸ್ಥಳೀಯರ ಗಮನಕ್ಕೂ ಬಾರದಂತೆ ಕೃತ್ಯ ಎಸಗಿ ಕಣ್ಮರೆಯಾಗುತ್ತಾರೆ. ಪೇಟೆಯಲ್ಲಿ ಹತ್ತಿರತ್ತಿರ ಮನೆಗಳಿದ್ದರೂ, ಪಕ್ಕದ ಮನೆಯಲ್ಲೇನೂ ನಡೆಯುತ್ತಿದೆ ಎನ್ನುವುದು ತಿಳಿಯುವುದೇ ಇಲ್ಲ. ಅಂದರೆ ಪೇಟೆಯ ಲೋಪಗಳನ್ನು ತಮ್ಮ ಕೃತ್ಯಕ್ಕೆ ಬಳಸಿಕೊಳ್ಳುವ ತಂಡವಿದು. ಈ ತಂಡ ಕಾರಿನಲ್ಲೇ ತಿರುಗಾಡುತ್ತಾ, ಯಾರಿಗೂ ಸಂದೇಹ ಬಾರದಂತೆ ಕಾರ್ಯಾಚರಿಸುತ್ತದೆ ಎನ್ನುವುದು ಸೋಮವಾರದ ಘಟನೆಯಿಂದ ತಿಳಿದುಬಂದಿದೆ.
Posted by Vidyamaana on 2023-07-17 04:13:00 |
ಉಡುಪಿ: ಕರ್ನಾಟಕ ಸರಕಾರದ ಉಚಿತ ಯೋಜನೆಗಳಾದ ಗೃಹ ಜ್ಯೋತಿ ಮತ್ತು ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಸಾರ್ವಜನಿಕ ಜಾಲತಾಣ ಗಳಲ್ಲಿ ನಕಲಿ ಅಪ್ಲಿಕೇಷನ್ ಗಳು ಕಾರ್ಯಾಚರಿಸುತ್ತಿದ್ದು, ಈ ಬಗ್ಗೆ ಜಾಗೃತೆ ವಹಿಸುವಂತೆ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದೆ.ಈ ರೀತಿಯ ನಕಲಿ ಅಪ್ಲಿಕೇಷನ್ಗಳನ್ನು ಸಾರ್ವಜನಿಕರು ತಮ್ಮ ಮೊಬೈಲ್ ನಲ್ಲಿ ಇನ್ಸ್ಟಾಲ್ ಮಾಡಿಕೊಳ್ಳಬಾರದು ಮತ್ತು ಸೈಬರ್ ಕಳ್ಳರು ಮೆಸೇಜ್ ಮೂಲಕ ಹಾಗೂ ವಾಟ್ಸಾಪ್ ಮೂಲಕ ಈ ಬಗ್ಗೆ ನೀಡುವ ಯಾವುದೇ ಲಿಂಕ್ನ್ನು ಬಳಸಬಾರದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ್ ಹಾಕೇ ಮಚ್ಚೀಂದ್ರ ತಿಳಿಸಿದ್ದಾರೆ.
ಈ ರೀತಿಯಾದ ಲಿಂಕ್ ಕ್ಲಿಕ್ ಮಾಡಿದಾಗ ನಿಮ್ಮ ವೈಯಕ್ತಿಕ ಮಾಹಿತಿಗಳು ಸೋರಿಕೆಯಾಗಬಹುದು. ಯಾವುದೇ ಹೆಲ್ಪ್ ಡೆಸ್ಕ್ನಿಂದ ಕರೆ ಮಾಡಿ ನೀವು ಈ ಯೋಜನೆಗೆ ಆಯ್ಕೆಯಾಗಿದ್ದಿರಿ, ನಿಮ್ಮ ವೈಯುಕ್ತಿಕ ವಿವರಗಳನ್ನು ನೀಡುವಂತೆ ತಿಳಿಸಿದ್ದಲ್ಲಿ ಕೂಡ ಯಾವುದೇ ಮಾಹಿತಿ ನೀಡಬಾರದು.ಸಾರ್ವಜನಿಕರು ಇಂತಹ ನಕಲಿ ಅಪ್ಲಿಕೇಷನ್ ಗಳ ಮೂಲಕ ತಮ್ಮ ವೈಯಕ್ತಿಕ ಆಧಾರ್, ಪ್ಯಾನ್ ಕಾರ್ಡ್ ಮಾಹಿತಿ ನೀಡಿ ಮೋಸ ಹೋಗಬಾರದು. ಈ ಯೋಜನೆಗಳಿಗೆ ಸಂಬಂಧಿಸಿದಂತೆ ಸರಕಾರವು ಇದುವರೆಗೂ ಯಾವುದೇ ಅಂಡ್ರಾಯ್ಡ್ ಅಪ್ಲಿಕೇಷನ್ ಅನ್ನು ಬಿಡುಗಡೆ ಮಾಡಿರುವುದಿಲ್ಲ. ಈ ಯೋಜನೆ ಗಳ ನೋಂದಣಿಗಾಗಿ ಸೇವಾ ಸಿಂಧು ಪೋರ್ಟಲ್ಗೆ ಭೇಟಿ ನೀಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Posted by Vidyamaana on 2023-02-16 15:01:32 |
ಪುತ್ತೂರು: ಹೊಸ ರಸ್ತೆಯ ಕಾಮಗಾರಿ ನಡೆಸುವಾಗ, ಹಳೆಯ ರಸ್ತೆಯನ್ನು ಹಾಳು ಮಾಡಬಾರದು ಎನ್ನುವುದು ಎಲ್ಲರಿಗೂ ತಿಳಿದಿರುವ ಸಂಗತಿ. ಇಂತಹ ಕನಿಷ್ಠ ಜ್ಞಾನವೂ ಇಲ್ಲದ ಆಡಳಿತದ ವೈಖರಿಗೆ ಸಾಕ್ಷಿಯಾಗಿ ನಿಂತಿದೆ ನಾಣಿಲ ಜಂಕ್ಷನ್.
ಬೈತಡ್ಕ - ನಾಣಿಲ - ಗುಜ್ಜರ್ಮೆ ರಸ್ತೆಯನ್ನು ಇತ್ತೀಚೆಗೆ ಅಭಿವೃದ್ಧಿಗೊಳಿಸಲಾಯಿತು. ಈ ಮೂರು ರಸ್ತೆಗಳು ಸೇರುವ ಜಂಕ್ಷನ್ ಅನ್ನು ಬಿಟ್ಟು, ಉಳಿದಂತೆ ಮೂರು ಪ್ರದೇಶದ ರಸ್ತೆಗಳಿಗೂ ಕಾಂಕ್ರೀಟಿಕರಣ ಮಾಡಲಾಯಿತು. ಹೀಗೆ ಕಾಂಕ್ರೀಟಿಕರಣ ಮಾಡುವಾಗ, ಕಾಂಕ್ರೀಟ್ ಮಿಕ್ಸ್ ಮಾಡಲು ಬಳಸಿದ್ದು ಮಾತ್ರ ಜಂಕ್ಷನ್ನಲ್ಲಿದ್ದ ಡಾಂಬರು ರಸ್ತೆಯನ್ನು!
ಡಾಂಬರು ರಸ್ತೆಯನ್ನು ಕಾಂಕ್ರೀಟ್ ಮಿಕ್ಸ್ ಮಾಡಲು ಬಳಸಿದ್ದೇ ಮೊದಲ ತಪ್ಪು. ಹೋಗಲಿ ಬಿಡಿ. ಕೆಲಸವಾದ ಬಳಿಕವಾದರೂ, ಕಾಂಕ್ರೀಟ್ನ ತುಣುಕುಗಳನ್ನು ಡಾಂಬರು ರಸ್ತೆಯಿಂದ ತೆರವು ಮಾಡಬೇಕಲ್ಲವೇ? ಅದೂ ಮಾಡಿಲ್ಲ. ಆದ್ದರಿಂದ ದ್ವಿಚಕ್ರ ವಾಹನ ಸವಾರರು ಈ ರಸ್ತೆಯಿಂದ ಸಾಗಲು ಇನ್ನಿಲ್ಲದ ಹರಸಾಹಸ ಪಡುತ್ತಿದ್ದಾರೆ.
ಮೂರು ರಸ್ತೆ ಸೇರುವ ಜಾಗದಲ್ಲಿ ಸಣ್ಣ ವೃತ್ತ ಇದೆ. ಈ ವೃತ್ತದ ಸುತ್ತಮುತ್ತ ಸುಮಾರು 100 ಮೀಟರ್ ಅಂತರದಲ್ಲಿ ಈ ಡಾಂಬರು ರಸ್ತೆ ಹರಡಿದೆ. ಉಳಿದೆಲ್ಲವೂ ಕಾಂಕ್ರೀಟಿಕರಣ ಆಗಿದೆ. ಈ 100 ಮೀಟರ್ ಡಾಂಬರು ರಸ್ತೆಯನ್ನು ಹಾಳುಮಾಡಿದ ಶ್ರೇಯಸ್ಸು ಆಡಳಿತಕ್ಕೆ, ಗುತ್ತಿಗೆದಾರರಿಗೆ ಸಲ್ಲುತ್ತದೆ!
ಸ್ಥಳೀಯರು ಮೌನ:
2022ರ ಅಕ್ಟೋಬರ್ 27ರಂದು ಈ ಕಾಂಕ್ರೀಟ್ ರಸ್ತೆಯನ್ನು ಉದ್ಘಾಟನೆ ಮಾಡಲಾಗಿದೆ. ಘಟಾನುಘಟಿ ನಾಯಕರು ಸ್ಥಳಕ್ಕೆ ಆಗಮಿಸಿದ್ದರೂ ಕೂಡ. ಅಲ್ಲಿಂದ ಇಲ್ಲಿವರೆಗೆ ಅಂದರೆ ಸುಮಾರು 4 ತಿಂಗಳುಗಳ ಕಾಲ ಡಾಂಬರು ರಸ್ತೆ ದೈನವೀ ಸ್ಥಿತಿಯಲ್ಲೇ ಇದೆ. ಸ್ಥಳೀಯರು, ದ್ವಿಚಕ್ರ ಸವಾರರು ಇದೇ ರಸ್ತೆಯಲ್ಲಿ ಹರಸಾಹಸ ಪಟ್ಟುಕೊಂಡು ಹೋಗುತ್ತಿದ್ದಾರೆ. ಆದರೆ ಯಾರೂ ಕೂಡ, ಇದನ್ನು ಸರಿಪಡಿಸಿ ಎಂದು ಆಗ್ರಹ ಪಡಿಸಿಲ್ಲ. ಆದ್ದರಿಂದ ಡಾಂಬರು ರಸ್ತೆ ಇನ್ನೂ ಹಾಗೇ ಉಳಿದುಕೊಂಡಿದೆ. ಚೆನ್ನಾಗಿದ್ದ ರಸ್ತೆಯನ್ನು ಹಾಳುಗೆಡವಿದರ ಬಗ್ಗೆ ಪ್ರಶ್ನಿಸುವ ಗೋಜಿಗೆ ಹೋಗದ ಸ್ಥಳೀಯರ ಮೌನವೇ, ಸಮಸ್ಯೆ ಪರಿಹಾರಕ್ಕೆ ದೊಡ್ಡ ತೊಡಕಾಗಿದೆ ಎಂಬ ವಿಶ್ಲೇಷಣೆಗಳು ಕೇಳಿಬಂದಿವೆ.