Posted by vidyamaana on 2023-08-18 08:29:00 |
ಬೆಳ್ತಂಗಡಿ: ರೋಗಿಯೊಬ್ಬರನ್ನು ಕೊಂಡುಹೋಗುತ್ತಿರುವ ವೇಳೆ ಟುಫಾನ್ ಅಂಬುಲೆನ್ಸ್ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ವಗ್ಗ ಬಳಿ ಆಗಸ್ಟ್ 18 ರಂದು ನಡೆದಿದೆ.
ಬೆಳ್ತಂಗಡಿಯಿಂದ ಮಂಗಳೂರಿಗೆ ರೋಗಿಯೊಬ್ಬರನ್ನು ಕೊಂಡೊಯ್ಯುತ್ತಿರುವ ವೇಳೆ ಬಂಟ್ವಾಳದ ವಗ್ಗ ಬಳಿ ಅಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ವೇಳೆ ಚಾಲಕ ಮಡಂತ್ಯಾರ್ ಮಾಲಾಡಿ ನಿವಾಸಿ ಶಬೀರ್ ಎಂಬವರು ಗಂಭೀರ ಗಾಯಗೊಂಡಿದ್ದು ತಕ್ಷಣ ಅವರನ್ನು ತುಂಬೆ ಖಾಸಗಿ ಆಸ್ಪತ್ರೆಗೆ ಕೊಂಡು ಹೋದರೂ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
Posted by Vidyamaana on 2023-12-25 20:23:26 |
ಬಾಲಿವುಡ್ ಜಗತ್ತಿನಲ್ಲಿ 80 ಹಾಗೂ 90ರ ದಶಕಗಳಲ್ಲಿ ಬಹುಬೇಡಿಕೆಯ ಸ್ಟಾರ್ ನಟರಾಗಿದ್ದವರ ಕಥೆಯಿದು. ಅವರಿನ್ನೂ ಆಗತಾನೇ ಇಂಡಸ್ಟ್ರಿಗೆ ಬಂದ ದಿನಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳನ್ನು ಮಾಡಿಕೊಂಡು ಜೀವನೋಪಾಯಕ್ಕಾಗಿ ಭಾರಿ ಕಷ್ಟಪಡುತ್ತಿದ್ದರು. ಅದರೆ, ಇಂದು ಬಾಲಿವುಡ್ನ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಅವರ ಹೆಸರೂ ಕೂಡ ಕಾಣಿಸುತ್ತಿದೆ.ಅವರು ಯಾರು ಬಲ್ಲಿರೇನು?
ಈ ಸ್ಟಾರ್ ನಟರ ಇಂದಿನ ಒಟ್ಟೂ ಅಸ್ತಿಯ ಮೌಲ್ಯ ಬರೋಬ್ಬರಿ 134 ಕೋಟಿ ರೂಪಾಯಿಗಳು. ಪ್ರತಿ ವರ್ಷ ಸಿನಿಮಾ ಹಾಗು ಬಿಸಿನೆಸ್ಗಳಿಂದ 12 ಕೋಟಿಗೂ ಹೆಚ್ಚು ಸಂಪಾದನೆ ಮಾಡುತ್ತಾರಂತೆ. ಒಂದು ಸಿನಿಮಾಗೆ ಈಗ 2-4 ಕೋಟಿ ರೂಪಾಯಿಗಳವರೆಗೆ ಸಂಭಾವನೆ ಪಡೆಯುವ ಇವರು, ಸ್ಟಾರ್ ಆಗಿದ್ದ ಕಾಲದಲ್ಲಿ ಅಂದಿನ ಲೆಕ್ಕದಲ್ಲಿ ಚೆನ್ನಾಗಿಯೇ ಸಂಪಾದಿಸುತ್ತಿದ್ದರು. ಇವರು ಬ್ರಾಂಡ್ ಎಂಡಾರ್ಸ್ಮೆಂಟ್ಗೆ 55 ಲಕ್ಷ ರೂ ಚಾರ್ಜ್ ಮಾಡುತ್ತಾರೆ. ಇನ್ನು ಮುಂಬೈನ ಜುಹುದಲ್ಲಿ ಐಷಾರಾಮಿ ಬಂಗಲೆ ಹೊಂದಿದ್ದು, ಇದರ ಮೌಲ್ಯ 30 ಕೋಟಿ ರೂಪಾಯಿಗಳು.
ಕಳೆದ ನಾಲ್ಕು ದಶಕಗಳಿಂದ ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಆದರೆ ಈ ಹಂತವನ್ನು ತಲುಪಲು ಅವರ ಪಟ್ಟ ಪಾಡು ಅಂತಿಂಥದಲ್ಲ. ಕಳೆದ ದಿನವಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ ಈ ಬಾಲಿವುಡ್ ನಟ. ಹಾಗಿದ್ದರೆ ಇವರು ಯಾರು? ಅವರು ಬೇರಾರೂ ಅಲ್ಲ, ಬೇಟಾ (Beta)ಖ್ಯಾತಿಯ ಅನಿಲ್ ಕಪೂರ್.ಮುಂಬೈಗೆ ಬಂದ ಹೊಸದರಲ್ಲಿ ನಟ ಅನಿಲ್ ಕಪೂರ್ ಹಾಗೂ ಅವರ ಕುಟುಂಬಕ್ಕೆ ವಾಸಿಸಲು ಸ್ವಂತ ಮನೆ ಕೂಡ ಇರಲಿಲ್ಲ. ಇ ಟೈಮ್ಸ್ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ಮುಂಬೈನ ಪೃಥ್ವಿರಾಜ್ ಕಪೂರ್ ಅವರ ಗ್ಯಾರೇಜ್ನಲ್ಲಿ ಅನಿಲ್ ಕಪೂರ್ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದರು ಎನ್ನಲಾಗಿದೆ. ವೃತ್ತಿಜೀವನದ ಆರಂಭದಲ್ಲಿ ಮನೆಯ ಖರ್ಚುಗಳನ್ನು ನಿಭಾಯಿಸಲೆಂದು ಸಣ್ಣಪುಟ್ಟ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದ ಅನಿಲ್, 1979 ರಲ್ಲಿ ಹಮಾರೆ ತುಮ್ಹಾರೆ ಮೂಲಕ ತಮ್ಮ ವೃತ್ತಿಜೀವನವನ್ನು ಶುರು ಮಾಡಿದರು. ಬಳಿಕ, 1980 ರಲ್ಲಿ ತೆಲುಗು ಚಿತ್ರ ವಂಶ ವೃಕ್ಷಂನಲ್ಲಿ ಕೆಲಸ ಮಾಡಿದರು.1983 ರಲ್ಲಿ ಅನಿಲ್ ಕಪೂರ್ ಅವರ ವೋ ಸಾತ್ ದಿನ್ ಚಿತ್ರ ಬಿಡುಗಡೆಯಾಯಿತು. ಇದರಲ್ಲಿ ಅವರು ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಬಳಿಕ, ಅನಿಲ್ ಕಪೂರ್ ಹಿಂತಿರುಗಿ ನೋಡಲೇ ಇಲ್ಲ. ಬೇಟಾ, ಮಿಸ್ಟರ್ ಇಂಡಿಯಾ, ಮೇರಿ ಜಂಗ್, ಕರ್ಮ, ತೇಜಾಬ್, ಕಸಂ, ರಾಮ್ ಲಖನ್, ಹಮಾರಾ ದಿಲ್ ಆಪ್ಕೆ ಪಾಸ್ ಹೈ, ಲಾಡ್ಲಾ, ಮತ್ತು ನಾಯಕ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಜತೆಗೆ, ಹಾಲಿವುಡ್ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.ನಟ ಅನಿಲ್ ಕಪೂರ್ ಸಿನಿಮಾ ಪಟ್ಟಿಯಲ್ಲಿ ಸ್ಲಮ್ ಡಾಗ್ ಮಿಲಿಯನೇರ್ ಮತ್ತು ಮಿಷನ್ ಇಂಪಾಸಿಬಲ್ ಹಾಗೂ ಘೋಸ್ಟ್ ಪ್ರೋಟೋಕಾಲ್ ಸಹ ಸೇರಿವೆ. ಈ ಸಿನಿಮಾಗಳ ಮೂಲಕ ಅನಿಲ್ ಕಪೂರ್ ತಮ್ಮ ಹೆಸರನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದ್ದಾರೆ.ನಟ ಅನಿಲ್ ಕಪೂರ್ ದುಬೈನಲ್ಲಿ 2 ಬೆಡ್ ರೂಂ ಅಪಾರ್ಟ್ ಮೆಂಟ್ ಹೊಂದಿದ್ದು, ಲಂಡನ್ ನಲ್ಲಿಯೂ ಒಂದು ಮನೆಯನ್ನು ಹೊಂದಿದ್ದಾರೆ. ಕ್ಯಾಲಿಪೋರ್ನಿಯಾದಲ್ಲೂ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ. ಅನಿಲ್ ಕಪೂರ್ ಅವರು BMW, Bentley,Jaguar, Audi Mercedes Benz S Class ಮುಂತಾದ ದುಬಾರಿ ಮತ್ತು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಒಟ್ಟಿನಲ್ಲಿ, ಅಂದು ಜೀವನೋಪಾಯಕ್ಕೆ ಗ್ಯಾರೇಜ್ ಆಶ್ರಯಿಸಿದ್ದ ನಟ ಇಂದು ಕೋಟ್ಯಾಧಿಪತಿಯಾಗಿ ಬಾಳುತ್ತಿದ್ದಾರೆ.
Posted by Vidyamaana on 2023-07-10 07:10:00 |
ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”
ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.
ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.
ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.
ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!
ಡಾ. ಶಿವರಾಮ ಭಟ್ ಗುರು:
ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ. ಶಿವರಾಮ ಭಟ್ ಎಂದು ನಂಬಿದ್ದರು.
ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!
ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.
Posted by Vidyamaana on 2023-10-05 21:59:37 |
ಪುತ್ತೂರು: ರೈ ಎಸ್ಟೇಟ್ಸ್ ಎಜುಕೇಶನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಇದರ ವತಿಯಿಂದ ಪುತ್ತೂರು ಶಾಸಕರಾದ ಅಶೋಕ್ ರೈ ನೇತೃತ್ವದಲ್ಲಿ ಬೃಹತ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರವರು ಅ. ೭ ರಂದು ಶನಿವಾರ ಬೈಪಾಸ್ ಬಳಿ ಇರುವ ಶಾಸಕರ ಟ್ರಸ್ಟ್ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ ಎಂದು ಟ್ರಸ್ಟ್ನ ಕಾರ್ಯಾಧ್ಯಕ್ಷರಾದ ಸುದೇಶ್ ಶೆಟ್ಟಿ ಶಾಂತಿನಗರ ತಿಳಿಸಿದ್ದಾರೆ.
ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು ಮತ್ತು ಕೆಎಂಸಿ ಆಸ್ಪತ್ರೆ ಡಾ. ಅಂಬೇಡ್ಕರ್ ವೃತ್ತ ಮಂಗಳೂರು ಇವರ ಸಹಯೋಗದಲ್ಲಿ ಶಿಬಿರ ನಡೆಯಲಿದೆ. ನುರಿತ ವೈದ್ಯರುಗಳು ಶಿಬಿರದಲ್ಲಿ ಭಾಗವಹಿಸಲಿದ್ದು ಕೆಲವೊಂದು ಸಣ್ಣಪುಟ್ಟ ಕಾಯಿಲೆಗಳಿಗೆ ಸ್ಥಳದಲ್ಲೇ ಔಷಧವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಭಾಗವಹಿಸುವ ವಿಭಾಗಗಳು
ಸಾಮಾನ್ಯ ರೋಗ, ಹೃದಯ ರೋಗ, ಕಣ್ಣಿನ ವಿಭಾಗ, ಎಲುಬು ಮತ್ತು ಕೀಲು ರೋಗ, ಗ್ಯಾಸ್ಟೋಎಂಟರಾಲಜಿ ವಿಭಾಗ, ಮೂತ್ರಶಾಸ್ತ್ರ ವಿಭಾಗದ ನುರಿತ ವೈದ್ಯರುಗಳ ಭಾಗವಹಿಸಿ ಸೂಕ್ತ ಚಿಕಿತ್ಸೆ ಮತ್ತು ತಪಾಸಣೆಯನ್ನು ನಡೆಸಲಿದ್ದಾರೆ.
ಸೌಲಭ್ಯಗಳು
ಉಚಿತ ಬಿ ಪಿ ಹಾಗೂ ಮಧುಮೇಹ ತಪಾಸಣೆ, ಅಗತ್ಯ ಇರುವವರಿಗೆ ಉಚಿತ ಇಸಿಜಿ ಪರೀಕ್ಷೆ, ಉಚಿತ ಔಷಧ ವಿತರಣೆ, ಮತ್ತು ಉಚಿತ ಓದುವ ಕನ್ನಡಕದ ವಿತರಣೆ ನಡೆಯಲಿದೆ. ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧ ಗಂಟೆಯತನಕ ಶಿಬಿರ ನಡೆಯಲಿದ್ದು ಸಾರ್ವಜನಿಕರು ಪ್ರಯೋಜನವನ್ನು ಪಡೆದುಕೊಳ್ಳುವಂತೆ ಕಾರ್ಯಾಧ್ಯಕ್ಷರು ವಿನಂತಿಸಿದ್ದಾರೆ.
Posted by Vidyamaana on 2023-06-13 06:53:21 |
ಪುತ್ತೂರು: ಪುತ್ತೂರಿನಲ್ಲಿ ಇದೀಗ ‘ಅಶೋಕಣ್ಣಡ ಪನ್ಪೆ” ಎಂಬ ಹೊಸ ಟ್ರೆಂಡ್ ಶುರುವಾಗಿದೆ. ಯಾವುದೇ ಸಮಸ್ಯೆ ಎದುರಾದರೂ, ಜನರು ಅಶೋಕ್ ರೈ ಹೆಸರು ಹೇಳುತ್ತಿದ್ದಾರೆ. ಇಂತಹ ಅನೇಕ ನಿದರ್ಶನಗಳು ನಮ್ಮ ಕಣ್ಣ ಮುಂದೆ ಸಿಕ್ಕಿದೆ. ಇದೀಗ ಕುಡಿಯುವ ನೀರು ಪಡೆಯಲು ಇದೇ ಟ್ರೆಂಡ್ ನಿವಾಸಿಗಳಿಗೆ ಸಹಕಾರಿಯಾಗಿದೆ.
ಪುತ್ತೂರು ನಗರಸಭೆ ವ್ಯಾಪ್ತಿಯ ಪಡ್ನೂರು ಪ್ರದೇಶದಲ್ಲಿ ಕಳೆದ ಕೆಲ ದಿನಗಳಿಂದ ಕುಡಿಯುವ ನೀರಿಗೂ ತಾತ್ವಾರ. ಸರಿಯಾಗಿ ಕುಡಿಯುವ ನೀರೇ ಬರುತ್ತಿಲ್ಲ ಎಂದು ಅಲ್ಲಿನ ನಿವಾಸಿಗಳ ಕೂಗು. ಆದರೆ ನೀರು ಬಿಡುವವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟವರ ಗಮನ ಸೆಳೆದರೂ ಸ್ಪಂದನೆ ಸಿಗದಾಯಿತು.
ಕೊನೆ ಬಾರಿಯೆಂಬಂತೆ ನೀರು ಬಿಡುವವರನ್ನು ಸಂಪರ್ಕಿಸಿದ ಮಹಿಳೆಯೋರ್ವರಿಗೆ ಶೂನ್ಯ ಸ್ಪಂದನೆ ಸಿಕ್ಕಿತು. “ನನ ನಿಕ್ಲೆಡ ಪಂಡ್’ದ್ ದಾಲ ಪ್ರಯೋಜನ ಇಲ್ಲ. ಯಾನ್ ಎಂಎಲ್ಎ ಅಶೋಕಣ್ಣಡನೇ ಪನ್ಪೆ” (ಇನ್ನು ನಿಮ್ಮಲ್ಲಿ ಹೇಳಿ ಪ್ರಯೋಜನವಿಲ್ಲ. ನಾನು ಅಶೋಕಣ್ಣನಲ್ಲಿಯೇ ಹೇಳುತ್ತೇನೆ) ಎಂದು ಮಹಿಳೆ ಉಸುರಿದ್ದರಷ್ಟೇ. ಸಂಜೆ ವೇಳೆಗೇ ನೀರು ಬಂದಿತ್ತು.
ಅಷ್ಟು ಸಮಯದಿಂದ ಬಾರದ ಕುಡಿಯುವ ನೀರು, ಶಾಸಕರ ಹೆಸರು ಹೇಳುತ್ತಿದ್ದಂತೆ ಬಂದದ್ದು ಹೇಗೆ? ಎಲ್ಲರಿಗೂ ಆಶ್ಚರ್ಯವೋ ಆಶ್ಚರ್ಯ. ಹಾಗಾದರೆ ಕುಡಿಯುವ ನೀರಿಗೆ ಕೊರತೆ ಬಂದಿದೆ ಎಂದಲ್ಲ. ನೀರು ಬಿಡುವವರಲ್ಲಿ ಏನೋ ಸಮಸ್ಯೆ ಇದೆ ಎಂದಾಯ್ತು. ಶಾಸಕ ಅಶೋಕ್ ಕುಮಾರ್ ರೈ ಅವರ ಹೆಸರು ಹೇಳುತ್ತಿದ್ದಂತೆ ನೀರು ಆಗಮಿಸಿದೆ.
Posted by Vidyamaana on 2024-05-03 07:21:29 |
ಮಂಗಳೂರು, ಮೇ.2: ರಾಜ್ಯದ ಮುಜರಾಯಿ ಇಲಾಖೆಗೊಳಪಟ್ಟ ಶ್ರೀಮಂತ ದೇಗುಲ ಎಂದು ಹೆಸರಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಎಸ್.ಜೆ. ಯೇಸುರಾಜ್ ಎಂಬವರನ್ನು ನೇಮಕ ಮಾಡಲಾಗಿತ್ತು. ರಾಮನಗರ ಜಿಲ್ಲಾ ಮುಜರಾಯಿ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೇಸುರಾಜ್ ಅವರನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಎಇಓ ಆಗಿ ನೇಮಕ ಮಾಡಿರುವುದು ಚರ್ಚೆಗೂ ಕಾರಣವಾಗಿತ್ತು.
ಯೇಸುರಾಜ್ ಎನ್ನುವ ಹೆಸರಿನ ಕಾರಣಕ್ಕೆ ಅನ್ಯ ಧರ್ಮದವರನ್ನು ಹಿಂದುಗಳ ದೇವಸ್ಥಾನಕ್ಕೆ ನೇಮಕ ಮಾಡಿದ್ದಾರೆಂದು ಹಿಂದು ಸಂಘಟನೆಗಳ ನಾಯಕರು ಆಕ್ಷೇಪಿಸಿದ್ದರು. ಅವರ ಧರ್ಮದ ಹಿನ್ನೆಲೆಯ ಬಗ್ಗೆ ಪ್ರಶ್ನೆಯನ್ನೂ ಮಾಡಿದ್ದರು. ಈ ವಿಚಾರ ಆಕ್ಷೇಪಕ್ಕೆ ಗುರಿಯಾದ ಬೆನ್ನಲ್ಲೇ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ ನೀಡಿದ್ದು, ಯೇಸುರಾಜ್ ಅವರ ಹಿನ್ನೆಲೆ, ಗೋತ್ರಗಳ ದಾಖಲೆಯನ್ನು ಟ್ವಿಟರ್ ನಲ್ಲಿ ಬಿಡುಗಡೆ ಮಾಡಿದ್ದಾರೆ.
Posted by Vidyamaana on 2023-07-14 05:48:30 |
ಪುತ್ತೂರು: ತನ್ನ ಮಾತು, ನಗುವೇ ರೋಗಿಗಳ ಪಾಲಿಗೆ ದಿವ್ಯೌಷಧವಾಗಿ ನೀಡಿದ ಕಾಂಪೌಂಡರ್ ನರಸಿಂಹ ಭಟ್ ಅವರ ನಿಷ್ಕಲ್ಮಷ ಸೇವೆಯನ್ನು ಪರಿಗಣಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ಕಾಂಗ್ರೆಸ್ ಮುಖಂಡ, ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಹೇಳಿದರು.
68 ವರ್ಷಗಳ ಸಾರ್ಥಕ ಸೇವೆಯಿಂದ ನಿವೃತ್ತಿ ಪಡೆದುಕೊಂಡ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರನ್ನು ಅವರ ಮನೆಯಲ್ಲಿ ಸನ್ಮಾನಿಸಿ ಮಾತನಾಡಿದರು.
ಸೇವೆಯಲ್ಲಿ ಶಿಸ್ತು, ಪಾರದರ್ಶಕತೆ ಕಾಯ್ದುಕೊಂಡು ಬಂದವರು ನರಸಿಂಹ ಭಟ್ ಅವರು. ಅವರ ಸೇವೆಯನ್ನು ವಿಶ್ಲೇಷಣೆ ಮಾಡುವುದು ಕಷ್ಟ. ಯಾರೇ ಬಂದರೂ ಅವರ ಕಷ್ಟ- ಸುಖ ವಿಚಾರಿಸುತ್ತಿದ್ದರು. ಔಷಧಿಗೆಂದು ಬಂದವರಿಗೆ ಇವರ ನಗು, ಮಾತೇ ದಿವ್ಯೌಷಧವಾಗಿ ಪರಿಣಮಿಸುತ್ತಿತ್ತು. "ಉಂದೇ ಪೋಲೆ... ನೇಟ್ಟೆ ಕಮ್ಮಿ..." ಎಂದು ಹೇಳಿ ಔಷಧ ನೀಡಿದರೆಂದರೆ, ರೋಗ ವಾಸಿಯಾಯಿತೆಂದೇ ಅರ್ಥ. ಅವರ ಕೈಗುಣದಿಂದಲೇ ಎಷ್ಟೋ ಮಂದಿಯ ರೋಗ ವಾಸಿಯಾಗಿದೆ. ಆದ್ದರಿಂದ ನರಸಿಂಹ ಭಟ್ ಅವರಿಗೆ ಅರ್ಹವಾಗಿ ರಾಜ್ಯೋತ್ಸವ ಪ್ರಶಸ್ತಿ ದೊರಕಬೇಕು ಎಂದು ಹೇಳಿದರು.
ಕಾಂಪೌಂಡ್ರಾ ಹಾಸ್ಯ ಚಟಾಕಿ:
ಡಾ. ಶಿವರಾಂ ಭಟ್ ಅವರ ಕ್ಲಿನಿಕಿಗೆ ಔಷಧಕ್ಕೆಂದು ಬರುವವರಿಗೆ ಕಾಂಪೌಂಡರ್ ಮದ್ದು ನೀಡುತ್ತಿದ್ದರು. ಆ ಬಳಿಕ "ಕಾಂಪೌಂಡ್ರೇ, ಆರೆಗ್ ದಾಯ್ತ ಸೀಕ್?" ಎಂದು ಕೇಳಿದರು. ಎಂದಿನ ನಗುವಿನ ದಾಟಿಯಲ್ಲೇ, "ಸೀಕ್ ದಾಯ್ತವು ಪಂಡ್ದ್ ಡಾಕ್ಟ್ರೇಗ್ಲಾ ಗೊತ್ತಿಜ್ಜಿ, ಎಂಕ್ಲಾ ಗೊತ್ತಿಜ್ಜಿ, ಮರ್ದ್ ದೆತೊನಕ್ಲೆಗ್ಲಾ ಗೊತ್ತಿಜ್ಜಿ..." ಎಂದು ಹಾಸ್ಯ ಚಟಾಕಿ ಹಾರಿಸುತ್ತಿದ್ದರು. ಅವರ ನಗು, ಹಾಸ್ಯದ ಮಾತಿನಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಯಾರೊಂದಿಗೂ ನಿಷ್ಠುರ ಆಗದೇ ಬದುಕು ಸಾಗಿಸಿದ್ದಾರೆ. ಅವರ ನಿಷ್ಕಲ್ಮಷ ಸೇವೆಯಿಂದ ಪುತ್ತೂರಿಗೆ ಮಾತ್ರವಲ್ಲ, ಜಿಲ್ಲೆಯಲ್ಲೇ ಕಾಂಪೌಂಡರ್ ಪರಿಚಯಸ್ಥರು. ಇನ್ನು ಸೇವೆ ನೀಡಲು ಸಾಧ್ಯವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಕಾಂಪೌಂಡರ್ ಸೇವೆ ನೀಡಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವರ ಸೇವೆಯನ್ನು ನಿತ್ಯನಿರಂತರವಾಗಿ ಮಾಡಿಕೊಂಡು ಬಂದವರು. ಅವರಿಗೆ ಇನ್ನಷ್ಟು ನೆಮ್ಮದಿ, ಆರೋಗ್ಯವನ್ನು ದೇವರು ಕರುಣಿಸಲಿ ಎಂದು ಹಾರೈಸಿದರು.
ಪ್ರವೀಣ್ ಅವರು ಕಾಂಪೌಂಡರ್ ಬೆಳೆಸಿದ ಶಿಷ್ಯ. ಅವರೂ ಈ ಕ್ಷೇತ್ರದಲ್ಲಿ ಇನ್ನಷ್ಟು ಬೆಳಗಲಿ. ಕಾಂಪೌಂಡರ್ ಅವರ ಮನೆಯವರಿಗೂ ಅಭಿನಂದನೆ ಸಲ್ಲಬೇಕು ಎಂದರು.
ವಿದ್ಯಮಾನ ವರದಿ ಶ್ಲಾಘನೆ:
ಕಾಂಪೌಂಡರ್ ರಿಟೈರ್ಡ್ ವರದಿಯನ್ನು ಮೊದಲ ಬಾರಿಗೆ ಪ್ರಕಟಿಸಿದ ವಿದ್ಯಮಾನಕ್ಕೆ ಕಾವು ಹೇಮನಾಥ್ ಶೆಟ್ಟಿ ಶ್ಲಾಘನೆ ವ್ಯಕ್ತಪಡಿಸಿದರು. ಕಾಂಪೌಂಡರ್ ನಿವೃತ್ತಿ ಪಡೆದುಕೊಂಡಿದ್ದಾರೆ ಎನ್ನುವ ವಿಷಯವನ್ನು ತಿಳಿಸಿದ ವಿದ್ಯಮಾನದ ವರದಿಯಿಂದ ವಿಷಯ ತಿಳಿಯುವಂತಾಯಿತು ಎಂದರು.
ಕಾಂಪೌಂಡರ್ ಸೇವೆ ನಮಗೆಲ್ಲಾ ಪ್ರೆರಣೆ: ಲ್ಯಾನ್ಸಿ
ಲಯನ್ಸ್ ಪ್ರಾಂತೀಯ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನಸ್ ಮಾತನಾಡಿ, ಕಳೆದ 30 -40 ವರ್ಷಗಳಿಂದ ಕಾಂಪೌಂಡರ್ ಅವರನ್ನು ಕಂಡವನು ನಾನು. ಅವರ ಮುಖ ನೋಡಿದಾಗಲೇ ಅರ್ಧ ರೋಗ ವಾಸಿ ಆಗುತ್ತದೆ. ಕ್ಲಿನಿಕಿಗೆ ಆಗಮಿಸುವ ಅಷ್ಟೂ ಜನರ ಆರೋಗ್ಯ ವಿಚಾರಿಸುವ ಜೊತೆಗೆ, ಮನೆಯವರ ಪರಿಚಯವನ್ನು ಕೇಳಿ ತಿಳಿದುಕೊಳ್ಳುತ್ತಿದ್ದರು. ತನ್ನ ಊರಿನವರ ಮೇಲೆ ಅವರು ಇಟ್ಟಿದ್ದ ಪ್ರೀತಿಗೆ ಇದು ಸಾಕ್ಷಿ. ಅವರು ಮಾಡಿದ ಸೇವೆ ನಮಗೆಲ್ಲ ಪ್ರೇರಣೆ ಎಂದರು.
ಜಿ.ಪಂ. ಮಾಜಿ ಸದಸ್ಯೆ ಅನಿತಾ ಹೇಮನಾಥ್ ಶೆಟ್ಟಿ, ಕಾವು ಹೇಮನಾಥ್ ಶೆಟ್ಟಿ ಅವರ ಮಗಳು ಡಾ. ವಾಸ್ತವಿ ಶೆಟ್ಟಿ,ಪುತ್ತೂರು ಡಯಾಗ್ನೋಸ್ಟಿಕ್ ಮತ್ತು ರಿಸರ್ಚ್ ಸೆಂಟರಿನ ಪ್ರವೀಣ್, ಅನ್ವರ್ ಖಾಸಿಂ, ಕಾವು ಲಯನ್ಸ್ ಕ್ಲಬ್ ಅಧ್ಯಕ್ಷ ದಿವ್ಯನಾಥ್ ಶೆಟ್ಟಿ, ಲಯನ್ಸ್ ರೀಜನಲ್ ಅಂಬಾಸಡರ್ ಗಣೇಶ್ ಶೆಟ್ಟಿ, ನಾಗೇಶ್ ಆಚಾರ್ಯ, ವಿನೋದ್ ಆಚಾರ್ಯ, ಹನೀಫ್ ಪುಣ್ಚಾತ್ತಾರು, ಪ್ರವೀಣ್, ರವಿಪ್ರಸಾದ್ ಶೆಟ್ಟಿ ಹಾಗೂ ಮನೆಯವರು ಉಪಸ್ಥಿತರಿದ್ದರು.