Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23
ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”
ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.
ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.
ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.
ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!
ಡಾ. ಶಿವರಾಮ ಭಟ್ ಗುರು:
ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ. ಶಿವರಾಮ ಭಟ್ ಎಂದು ನಂಬಿದ್ದರು.
ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!
ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.
Posted by Vidyamaana on 2024-04-18 13:21:16 |
ಬಂಟ್ವಾಳ: ಬಂಟ್ವಾಳ ಬಡ್ಡಕಟ್ಟೆ ಯಲ್ಲಿ ವ್ಯಕ್ತಿಯೋರ್ವರಿಗೆ ಚೂರಿ ಇರಿದು ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಬಂಟ್ವಾಳ ನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ರವಿ ನಾವೂರು ಬಂಧಿತ ಆರೋಪಿ. ಆತ ಎ. 14ರ ರಾತ್ರಿ ಜಕ್ರಿಬೆಟ್ಟು ನಿವಾಸಿ ಪುಷ್ಪರಾಜ್ ಅವರ ಕುತ್ತಿಗೆಯ ಭಾಗಕ್ಕೆ ಚೂರಿಯಿಂದ ಇರಿದು ಪರಾರಿಯಾಗಿದ್ದ.
Posted by Vidyamaana on 2024-03-11 08:44:56 |
ಅಯೋಧ್ಯೆ/ಉಡುಪಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತ ಪಾಂಗಾಳ ಪಾಂಡುರಂಗ ಶಾನುಭಾಗ್ (62) ಅವರು ಮಾ.10ರಂದು ಅಯೋಧ್ಯೆಯ ರಾಮಮಂದಿರದ ಬಳಿ ನಿಧನ ಹೊಂದಿದರು. ಮೃತರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.ಪ್ರತಿಷ್ಠೆಯ ಮಂಡಲಪೂಜೆ ಸಮಾಪನ ಸಂದರ್ಭ ರವಿವಾರ ಬೆಳಗ್ಗೆ ರಾಮನ ದರ್ಶನ ಪಡೆದು, ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರಿಂದ ಕಲಶಾಭಿಷೇಕದ ತೀರ್ಥ ಪ್ರಸಾದ ಸ್ವೀಕರಿಸಿ ಸಂಸ್ಕೃತದಲ್ಲಿಯೇ ಮಾತನಾಡಿದ್ದರು. ಅಪರಾಹ್ನ ಪಲ್ಲಕ್ಕಿ ಉತ್ಸವಕ್ಕೆ ಆಗಮಿಸುವಾಗ ಮಂದಿರದ ಹೊರಭಾಗದ ದ್ವಾರದ ಬಳಿ ಹೃದಯಾಘಾತವಾಯಿತು. ಅವರನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ನಿಧನ ಹೊಂದಿದ್ದರು. ಮುಂದಿನ ವ್ಯವಸ್ಥೆಯನ್ನು ವಿಶ್ವ ಹಿಂದೂ ಪರಿಷತ್ ಪ್ರಮುಖರಾದ ಗೋಪಾಲ್, ಮಾಜಿ ಶಾಸಕ ಕೆ.ರಘುಪತಿ ಭಟ್ ಮಾಡಿದರು.
ಶಾನುಭಾಗ್ ಅವರು ಅಂಧರಾಗಿದ್ದರೂ ಬಾಲ್ಯದಿಂದಲೂ ಆರೆಸ್ಸೆಸ್ ಸಂಪರ್ಕ ಹೊಂದಿ ಜಿಲ್ಲಾ ಬೌದ್ಧಿಕ್ ಪ್ರಮುಖ್ ಸಹಿತ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಶ್ರೀರಾಮ ಮಂದಿನ ನಿರ್ಮಾಣ ಹೋರಾಟಗಳಲ್ಲಿಯೂ ಸಕ್ರಿಯರಾಗಿದ್ದರು. ಸಿಂಡಿಕೇಟ್ ಬ್ಯಾಂಕಿನ ಮಣಿಪಾಲ ಪ್ರಧಾನ ಕಚೇರಿ, ಉಡುಪಿಯ ಕೆಥೋಲಿಕ್ ಸೆಂಟರ್ ಕಚೇರಿಗಳಲ್ಲಿ ಟೆಲಿಫೋನ್ ಆಪರೇಟರ್ ಮತ್ತು ಸಿಬಂದಿ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದರು. ಸಂಸ್ಕೃತ, ರಾಮಾಯಣ, ಮಹಾಭಾರತದಲ್ಲಿ ಅಪಾರವಾದ ಪಾಂಡಿತ್ಯ ಹೊಂದಿದ್ದರು. ಚಿಂತಕರೂ ಆಗಿದ್ದ ಇವರ ನಿಧನಕ್ಕೆ ಪೇಜಾವರ ಶ್ರೀ, ಶಾಸಕರಾದ ಯಶ್ಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ರಘುಪತಿ ಭಟ್, ಲಾಲಾಜಿ ಆರ್. ಮೆಂಡನ್ ಮುಂತಾದವರು ಸಂತಾಪ ಸೂಚಿಸಿದ್ದಾರೆ.
Posted by Vidyamaana on 2023-03-12 04:27:34 |
ಪುತ್ತೂರು : ತಾಲೂಕಿನ ನರಿಮೊಗರು ಗ್ರಾಮದ ಮುಕ್ವೆ ಶ್ರೀ ಉಮಾಮಹೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು 5 ಲಕ್ಷ ರೂ. ದೇಣಿಗೆ ಚೆಕ್ ನ್ನು ಹಸ್ಥಾಂತರಿಸಿದರು.
ಶನಿವಾರ ಕ್ಷೇತ್ರಕ್ಕೆ ಭೇಟಿ ನೀಡಿದ ಮಜಲುಮಾರು ಮುಕ್ವೆ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ನ ಪದಾಧಿಕಾರಿಗಳಿಗೆ ಚೆಕ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಉಪಾಧ್ಯಕ್ಷ ಕೆ.ಯಂ.ಬೆಳಿಯಪ್ಪ ಗೌಡ ಕೆದ್ಕಾರ್, ಸದಸ್ಯರುಗಳಾದ ಗಣೇಶ್ ಭಟ್, ಯಂ.ರವಿ ಮಣಿಯ, ಕೆ.ಗಿರೀಶ್ ರೈ ಮಣಿಯ ಹಾಗೂ ಗ್ರಾಮಾಭಿವೃದ್ಧಿ ಯೋಜನೆಯ ಕೆಮ್ಮಿಂಜೆ ವಲಯಾಧ್ಯಕ್ಷ ಸುಂದರ ಬಲ್ಯಾಯ ಉಪಸ್ಥಿತರಿದ್ದರು.
Posted by Vidyamaana on 2023-06-01 08:12:26 |
ಉಡುಪಿ: ಮಣಿಪಾಲ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹೆರ್ಗದ ಈಶ್ವರ ನಗರದ ಮಹಾಲಸಾ ಎಮರಾಲ್ಡ್ ಅಪಾರ್ಟ್ಮೆಂಟಿನ ಕೊಠಡಿ ಸಂಖ್ಯೆ 302ರಲ್ಲಿ ಅನೈತಿಕ ವೇಶ್ಯಾವಾಟಿಕೆ ನಡೆಸುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ದಾಳಿ ನಡೆಸಲಾಗಿದೆ.ವೇಶ್ಯಾವಟಿಕೆಯಲ್ಲಿ ತೊಡಗಿದವರನ್ನು ವಶಕ್ಕೆ ಪಡೆದು ವಿಚಾರಿಸಿ ಅವರ ವಶದಲ್ಲಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅನೈತಿಕ ಚಟುವಟಿಕೆ ಮಾಡಲು ವ್ಯಕ್ತಿಗಳಿಂದ ಹಣವನ್ನು ಸಂಗ್ರಹಿಸಿ ಕೊಠಡಿಗಳನ್ನು ಒದಗಿಸಿದ ಆರೋಪಿಗಳಾದ ಪಯಾಜ್ ಮತ್ತು ಸಚಿನ್ ದಾಳಿಯ ಸಮಯ ಸ್ಥಳದಿಂದ ಪರಾರಿಯಾಗಿದ್ದಾರೆ. ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Posted by Vidyamaana on 2024-07-02 20:49:13 |
ಕೊಣಾಜೆ , ಜುಲೈ 2: ಜೂನ್ 28 ರಂದು ಹರೇಕಳ ಸಮೀಪ ನಡೆದಿದ್ದ ಟಿಪ್ಪರ್ ಹಾಗೂ ಸ್ಕೂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸ್ಕೂಟರ್ ಸವಾರ ಗಣೇಶ್ ಆಚಾರ್ಯ ( 27) ಮಂಗಳವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಗಣೇಶ್ ಜೂ.28 ರಂದು ಬೆಳಗ್ಗೆ ಹರೇಕಳ ಕಡೆಯಿಂದ ಕೊಣಾಜೆ ಮಾರ್ಗವಾಗಿ ಹೋಗುವ ಸಂದರ್ಭ ಹರೇಕಳ ಗ್ರಾಮ ಪಂಚಾಯತ್ ಕಚೇರಿಯ ಎದುರುಗಡೆ ಅಪಘಾತ ಸಂಭವಿಸಿದೆ.
Posted by Vidyamaana on 2023-06-21 09:50:57 |
ಬೆಂಗಳೂರು : ಕರ್ನಾಟಕ ಹಾಲು ಮಾರಾಟ ಮಹಾಮಂಡಳ (ಕೆಎಂಎಫ್) ಅಧ್ಯಕ್ಷರಾಗಿ ಭೀಮಾ ನಾಯ್ಕ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸಿದ್ದರಾಮಯ್ಯ ಅವರ ಆಪ್ತರಾಗಿರುವ ಮಾಜಿ ಶಾಸಕ ಭೀಮಾ ನಾಯ್ಕ್ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದರು.ನಿರೀಕ್ಷೆಯಂತೆ ಕಾಂಗ್ರೆಸ್ ಶಾಸಕ ಭೀಮಾ ನಾಯ್ಕ್ ಅವರಿಗೆ ಕರ್ನಾಟಕ ಹಾಲು ಮಾರಾಟ ಮಹಾಮಂಡಳ (ಕೆಎಂಎಫ್) ಅಧ್ಯಕ್ಷ ಸ್ಥಾನ ಒಲಿದಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಬಳಿಕ, ಬಾಲಚಂದ್ರ ಜಾರಕಿಹೊಳಿ ಅವರ ಅಧ್ಯಕ್ಷ ಸ್ಥಾನ ತೆರವಾಗಿದ್ದು, ಚುನಾವಣೆ ಮೂಲಕ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲು ತೀರ್ಮಾನಿಸಲಾಗಿತ್ತು. ಆದರೆ, ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕಾಗಿ ಯಾರು ನಾಮಪತ್ರ ಸಲ್ಲಿಸದಿರುವುದರಿಂದ ಭೀಮಾ ನಾಯ್ಕ್ ಅವರು ಅವಿರೋಧವಾಗಿ ಆಯ್ಕೆಯಾದರು.ಒಟ್ಟು 14 ಒಕ್ಕೂಟದ ಪ್ರತಿನಿಧಿಗಳು, ಪಶುಸಂಗೋಪನಾ ಇಲಾಖೆ ನಿರ್ದೇಶಕ, ಸಹಕಾರ ಇಲಾಖೆ ರಿಜಿಸ್ಟಾರ್, ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಒಬ್ಬರು ನಾಮನಿರ್ದೇಶಿತ ಸದಸ್ಯರು ಸೇರಿ ಒಟ್ಟು 18 ಮಂದಿ ಮತದಾನ ಹೊಂದಿದ್ದರು, ಆದ್ರೆ, ಭೀಮಾ ನಾಯ್ಕ್ಗೆ ಎದುರಾಳಿಯಾಗಿ ಯಾರೂ ನಾಮಪತ್ರ ಸಲ್ಲಿಸಿಲ್ಲ. ಇದರಿಂದ ಮತದಾನ ನಡೆಯದೇ ಭೀಮಾ ನಾಯ್ಕ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ ಭೀಮಾ ನಾಯ್ಕ್. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದರು, ಆದರೆ ಸಿದ್ದರಾಮಯ್ಯ ಅವರ ಆಪ್ತರ ಬಣದಲ್ಲಿ ಗುರುತಿಸಿಕೊಂಡಿದ್ದಾರೆ.