Posted by vidyamaana on 2024-07-23 07:07:38 |
ಪುತ್ತೂರು: ರಾಜ್ಯದಲ್ಲಿ ತುಳು ಭಾಷೆಯನ್ನು ೨ನೇ ಅಧಿಕೃತ ರಾಜ್ಯಭಾಷೆಯಾಗಿ ಘೋಷಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಶೀಘ್ರದಲ್ಲೇ ಈ ಪ್ರಯತ್ನ ಕೈಗೂಡುವ ವಿಶ್ವಾಸವಿದೆ ಎಂದು ಶಾಸಕ ಅಶೋಕ್ ರೈ ಹೇಳಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಕನ್ನಡ ಸಾಹಿತ್ಯ ಪರಿಷತ್ ಪುತ್ತೂರು ತಾಲೂಕು ಘಟಕ ಮತ್ತು ರೋಟರಿ ಕ್ಲಬ್ ಪುತ್ತೂರು ಯುವ ಇವರ ಸಹಯೋಗದಲ್ಲಿ ಪುತ್ತೂರಿನ ರೋಟರಿ ಮನೀಷಾ ಸಭಾಂಗಣದಲ್ಲಿ ಶನಿವಾರ ನಡೆದ ಪತ್ರಿಕಾ ದಿನಾಚರಣೆ - ಉಪನ್ಯಾಸ- ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಶ್ಚಿಮ ಬಂಗಾಳ ಸೇರಿದ ಅನೇಕ ರಾಜ್ಯಗಳಲ್ಲಿ ೨ನೇ ರಾಜ್ಯಭಾಷೆ ಘೋಷಣೆ ಸಂದರ್ಭ ಯಾವೆಲ್ಲ ಮಾನದಂಡ ಅನುಸರಿಸಲಾಗಿದೆ ಎಂಬುದರ ಅಧ್ಯಯನ ನಡೆಸಿ ವರದಿ ತಯಾರಿಸಲಾಗಿದೆ. ಇದನ್ನು ಸರಕಾರ ಪರಿಶೀಲಿಸಿ ಶೀಘ್ರದಲ್ಲೇ ತುಳು ಭಾಷೆಯನ್ನು ೨ನೇ ಅಧಿಕೃತ ರಾಜ್ಯಭಾಷೆಯನ್ನಾಗಿ ಘೋಷಣೆ ಮಾಡುವ ಸಂಬAಧ ಸಂಪುಟದಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡ ಮೇಲೆ ಗೆಜೆಟ್ ನೋಟಿಫೀಕೇಶನ್ ಹೊರಡಿಸಲಾಗುವುದು. ಅದೇ ರೀತಿ ತುಳು ಭಾಷೆಯನ್ನು ಸಂವಿಧಾನದ ೮ನೇ ಪರಿಚ್ಛೇದದಲ್ಲಿ ಸೇರಿಸುವ ವಿಚಾರದಲ್ಲೂ ಕೇಂದ್ರದ ಮೇಲೆ ರಾಜ್ಯದಿಂದ ಒತ್ತಡ ತರುವ ಕೆಲಸ ಮಾಡಲಾಗುತ್ತದೆ. ಪುತ್ತೂರಿನಲ್ಲಿ ಸರಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸರಕಾರದ ಮೇಲೆ ಒತ್ತಡ ಹೇರುತ್ತಿದ್ದೇನೆ. ಮುಂದಿನ ಬಜೆಟ್ನಲ್ಲಿ ಘೋಷಣೆಯ ಆಶಾವಾದ ಇದೆ ಎಂದವರು ಹೇಳಿದರು.
ಸೋಷಿಯಲ್ ಮೀಡಿಯಾದ ಅಬ್ಬರದ ನಡುವೆಯೇ ಜನ ಪತ್ರಿಕೆ ಓದುವುದು ಕಡಿಮೆ ಮಾಡಿಲ್ಲ. ಪತ್ರಿಕಾ ರಂಗದಲ್ಲಿ ಪ್ರಾಮಾಣಿಕತೆ ಬೇಕು. ಅದಿರುವ ಕಾರಣವೇ ದಕ್ಷಿಣಕನ್ನಡದ ಪತ್ರಕರ್ತರು ಎಲ್ಲಿ ಹೋದರೂ ಛಾಪು ಮೂಡಿಸುತ್ತಾರೆ ಎಂದು ಹೇಳಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ದೇಶದಲ್ಲಿ ತುರ್ತು ಪರಿಸ್ಥಿತಿಯ ಸಂದರ್ಭ ಅಭಿವ್ಯಕ್ತಿ ಸ್ವಾತಂತ್ರö್ಯ ಮತ್ತು ಪತ್ರಿಕಾ ಸ್ವಾತಂತ್ರö್ಯ ದಮನ ಮಾಡಲಾಗಿತ್ತು. ಆಗ ಧೀಮಂತ ಪತ್ರಿಕೆಗಳು ಭೂಗತರಾಗಿದ್ದುಕೊಂಡೇ ಪತ್ರಿಕೆ ನಡೆಸಿ ಜನಜಾಗೃತಿ ಮೂಡಿಸಿದ್ದರು. ದೇಶ ಕಟ್ಟುವಲ್ಲಿ ಪತ್ರಿಕೆಗಳ ಪಾತ್ರ ಬಹಳಷ್ಟು ದೊಡ್ಡದು. ಸೋಷಿಯಲ್ ಮೀಡಿಯಾದಿಂದ ಉಪಯೋಗವಿದೆಯಾದರೂ ಅಷ್ಟೇ ಕೆಟ್ಟದೂ ಇದೆ ಎಂದರು.
ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರ ಉಪನ್ಯಾಸ ನೀಡಿದರು. ಮಾಧ್ಯಮ ವರದಿ ಇವತ್ತು ಪ್ರತಿಯೊಬ್ಬರ ಕೈಗೂ ಬಂದಿದೆ. ಜಗತ್ತಿನಲ್ಲಿ ಜೀವರಕ್ಷಕ ಔಷಧಿ ಮೊದಲ ಸ್ಥಾನದಲ್ಲಿದ್ದರೆ, ೨ನೇ ಸ್ಥಾನದಲ್ಲಿ ಮುದ್ರಣ ಮಾಧ್ಯಮಗಳಿವೆ. ಇಷ್ಟಾದರೂ ಮಾಧ್ಯಮಗಳು ಕೆಲವೊಂದು ಅಪವಾದಗಳನ್ನು ಕೂಡ ಎದುರಿಸುತ್ತಿವೆ. ಆರೋಪಿಯೊಬ್ಬನನ್ನು ನ್ಯಾಯಾಲಯ ವಿಚಾರಣೆ ನಡೆಸುವ ಮೊದಲೇ ಮಾಧ್ಯಮಗಳು ವಿಚಾರಣೆ ನಡೆಸಿ ತಪ್ಪಿತಸ್ಥನೆಂದು ಘೋಷಿಸುವುದು ಆತಂಕಕಾರಿ ಬೆಳವಣಿಗೆ. ಅದೇ ರೀತಿ ಪೀತ ಪತ್ರಿಕೋದ್ಯಮದ ಬಗ್ಗೆಯೂ ಜಾಗೃತಿ ಅಗತ್ಯ ಎಂದರು. ಪ್ರತಿಯೊಬ್ಬ ಪತ್ರಕರ್ತರಿಗೂ ವೃತ್ತಿಪರತೆ ಮತ್ತು ನೈತಿಕತೆ ಅಗತ್ಯವಾಗಿ ಬೇಕು ಎಂದವರು ನುಡಿದರು. ಮಾಹಿತಿ ಎಂಬುದು ನೀರಿನ ಥರ. ಕಡಿಮೆಯಾದರೂ ಕಷ್ಟ, ಜಾಸ್ತಿಯಾದರೂ ಕಷ್ಟ. ಇದನ್ನು ಪತ್ರಕರ್ತರು ಅರ್ಥಮಾಡಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಶೇಟ್ ಎಲೆಕ್ಟ್ರಾನಿಕ್ಸ್ ಸಂಸ್ಥೆ ಕೊಡುಗೆಯಾಗಿ ನೀಡಿದ ಸಿಸಿ ಕ್ಯಾಮೆರಾವನ್ನು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಪತ್ರಕರ್ತರಿಗೆ ಹಸ್ತಾಂತರ ಮಾಡಿದರು.
ಪತ್ರಿಕಾ ವಿತರಕರಾದ ವಿಶ್ವನಾಥ್ ಪುತ್ತೂರು ಅವರನ್ನು ಶಾಸಕರು ಪತ್ರಕರ್ತರ ಸಂಘದ ಪರವಾಗಿ ಸನ್ಮಾನಿಸಿದರು. ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ಪತ್ರಕರ್ತರ ಸಂಘದ ಸದಸ್ಯರ ಮಕ್ಕಳಾದ ಹಷೇಂದ್ರ ಪ್ರಸಾದ್, ಮಹೇಶ್ ಪ್ರಸಾದ್, ದೀಪ್ತಿ ಭಟ್, ಎ.ಯು. ಅವನೀಶ್ ಕುಮಾರ್, ಸಮ್ಯಕ್, ಸಿಹಾ ಶಮ್ರಾ, ಪುಣ್ಯಶ್ರೀ ಪಿ. ಅವರನ್ನು ಸಂಘದ ಪರವಾಗಿ ಮಾಜಿ ಶಾಸಕ ಸಂಜೀವ ಮಠಂದೂರು ಸನ್ಮಾನಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಸಿದ್ಧಿಕ್ ನೀರಾಜೆ, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್,ಮಾಜಿ ಶಾಸಕಿ ಶಕುಂತಲಾ ಟಿ ಶೆಟ್ಟಿ,ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷೆ ಅಶ್ವನಿಕೃಷ್ಣ, ಎಸೋಸಿಯೇಶನ್ ಆಫ್ ಸಿವಿಲ್ ಎಂಜಿನಿರ್ಸ್ (ಎಸಿಸಿಇ-ಐ) ಪುತ್ತೂರು ಸೆಂಟರ್ ಅಧ್ಯಕ್ಷರಾದ ಪ್ರಮೋದ್ ಕುಮಾರ್ ಕೆ.ಕೆ.ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀನಿವಾಸ ನಾಯಕ್ ಇಂದಾಜೆ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಸುಧಾಕರ ಸುವರ್ಣ, ಕಾರ್ಯಕಾರಿ ಸಮಿತಿ ಸದಸ್ಯ ಮೇಘಾ ಪಾಲೆತ್ತಾಡಿ ಮತ್ತು ರೋಟರಿ ಯುವ ಸಂಸ್ಥೆಯ ಕಾರ್ಯದರ್ಶಿ ವಚನಾ ಜಯರಾಂ,ಪ್ರಧಾನ ಕಾರ್ಯದರ್ಶಿ ಶಶಿಧರ ರೈ ಕುತ್ಯಾಳ, ಕೋಶಾಧಿಕಾರಿ ಸಂಶುದ್ದೀನ್ ಸಂಪ್ಯ,ಕಾರ್ಯಕಾರಿ ಸಮಿತಿ ಸದಸ್ಯರಾದ ಐ. ಬಿ. ಸಂದೀಪ್,ಕುಮಾರ್,ಪ್ರಸಾದ್ ಬಲ್ನಾಡ್, ಸಂಘದ ಕಾರ್ಯದರ್ಶಿ ಅಜಿತ್ ಕುಮಾರ್, ಸದಸ್ಯರಾದ ಅನಿಶ್ ಕುಮಾರ್ ಮರೀಲ್,ಶರತ್, ರಾಜೇಶ್ ಪಟ್ಟೆ, ಪಾರೂಕ್ ಶೇಕ್ , ಮತ್ತಿತ್ತರರು ಉಪಸ್ಥಿತರಿದ್ದರು.
Posted by Vidyamaana on 2023-10-03 13:42:04 |
ಕಾಸರಗೋಡು: ಸ್ಕೂಟರ್ ಮತ್ತು ಖಾಸಗಿ ಬಸ್ಸು ನಡುವೆ ಉಂಟಾದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದ್ದ ಸವಾರನೋರ್ವ ಮೃತಪಟ್ಟಿದ್ದಾರೆ ಉಪ್ಪಳ ಸೊಂಕಾಲ್ ನ ಇಬ್ರಾಹಿಂ ಖಲೀಲ್ (23) ಮೃತ ಪಟ್ಟವರು.
Readmore...
ಪಡೀಲ್ ಕೆಪುಳು ಬಳಿ ಬೈಕ್ ಸ್ಕೂಟರ್ ನಡುವೆ ನಡೆದ ಅಪಘಾತದ ಸಿ ಸಿ ಟಿವಿ ದೃಶ್ಯ!
ಅ 01 ರಂದು ಭಾನುವಾರ ರಾತ್ರಿ ಕುಂಬಳೆ ಭಾಸ್ಕರ ನಗರದಲ್ಲಿ ಅಪಘಾತ ನಡೆದಿತ್ತು. ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದ ಖಲೀಲ್ ಅ 03 ರಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಜೊತೆಗಿದ್ದ ಉಪ್ಪಳ ಮಣಿಮುಂಡದ ಮುಹಮ್ಮದ್ ಮಾಝ್ ಗಾಯಗೊಂಡಿದ್ದು, ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ
Posted by Vidyamaana on 2024-02-03 17:37:33 |
ದುಬೈ: ಶಾರ್ಜಾದ ಅಲ್ ಬತ್ತೆಯ್ಯ ಪಾರ್ಕ್ ನಲ್ಲಿ ನಡೆಯುವ ಮಹಬ್ಬ ಫ್ಯಾಮಿಲಿ ಫೆಸ್ಟ್ -24ಕ್ಕೆ
ನಫೀಸ್ ಗ್ರೂಪ್ ನ ಚೈರ್ಮನ್ ಜನಾಬ್ ಅಬುಸ್ವಾಲಿ ಹಾಜಿ ಅವರಿಗೆ ಆಮಂತ್ರಣ ನೀಡಿ ಆಹ್ವಾನಿಸಲಾಯಿತು.
ಜನಾಬ್ ಅಬುಸ್ವಾಲಿ ಹಾಜಿ ಅವರ ದುಬೈ ನಿವಾಸದಲ್ಲಿ ಕೆ.ಸಿ.ಎಫ್. ನಾಯಕರು ಊರಿನ ಹಾಗೂ ದುಬೈಯಲ್ಲಿರುವ ಎಲ್ಲಾ ಉದ್ಯಮಿಯವರಿಗೆ ಆಮಂತ್ರಣ ಪತ್ರಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಯು.ಎ.ಇ ಕರ್ನಾಟಕ ಕಲ್ಚರಲ್ ಫೌಂಡೇಶನಿನ ದಶಮಾನೋತ್ಸವ ಪ್ರಯುಕ್ತ ಫೆಬ್ರವರಿ 11ರಂದು ಮಹಬ್ಬ ಫ್ಯಾಮಿಲಿ ಫೆಸ್ಟ್ -24 ನಡೆಯಲಿದೆ.
ಕೆ.ಸಿ.ಎಫ್ ಯು.ಎ.ಇ ಮಹಬ್ಬ ಸ್ವಾಗತ ಸಮಿತಿ ಅಧ್ಯಕ್ಷ ಝಐನುದ್ದೀನ್ ಹಾಜಿ ಬೆಳ್ಳಾರೆ,
ಕೆ.ಸಿ.ಎಫ್ ಯು.ಎ.ಇ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೂಸಹಾಜಿ ಬಸರ, ಕೆ.ಸಿ.ಎಫ್ ಮಹಬ್ಬ ಸ್ವಾಗತ ಸಮಿತಿ ಕೋಶಾಧಿಕಾರಿ ಶುಕೂರ್ ಹಾಜಿ ಉಳ್ಳಾಲ, ಉದ್ಯಮಿಗಳಾದ ಜನಾಬ್ ಅಬುಸ್ವಾಲಿ ಹಾಜಿ, ಜನಾಬ್ ಮನ್ಸೂರ್ ಆಝದ್, ಜನಾಬ್ ಮಮ್ತಾಜ್ ಆಲಿ, ಬ್ಯಾರಿ ಕಲ್ಚರಲ್ ಫೋರಂ ಅಧ್ಯಕ್ಷ ಡಾಕ್ಟರ್ ಯೂಸುಫ್, ಜನಾಬ್ ಲತೀಫ್ ಮುಲ್ಕಿ, ಜನಾಬ್ ಇಬ್ರಾಹಿಂ ಹಾಜಿ ಗಡಿಯಾರ್, ಜನಾಬ್ ಅಬ್ದುಲ್ ಸಮದ್ ಹಾಜಿ, ಜನಾಬ್ ಜಾವೀದ್ ಹಾಜಿ, ಖಯಿರತ್ ಅಲ್ ಶಮ್ಸ್ ಕಾಂಟ್ರಾಕ್ಟ್ಯಿಂಗ್ ಕಂಪನಿ ದುಬೈ ಇದರ ಮಾಲೀಕ ಜನಾಬ್ ಆಶ್ರಫ್ ಶಾ ಮಂತೂರ್ ಉಪಸ್ಥಿತರಿದ್ದರು.
Posted by Vidyamaana on 2023-06-22 16:36:08 |
ಮಂಗಳೂರು : ಜೆಡಿಎಸ್ ಗೆ ಇತ್ತೀಚೆಗೆ ರಾಜೀನಾಮೆ ನೀಡಿದ್ದ ಸುಮತಿ ಹೆಗ್ಡೆ ನಿನ್ನೆ ನಡೆದ ಎಸ್.ಡಿ.ಪಿ. ಐ ಪಕ್ಷದ ಸಂಸ್ಥಾಪನಾ ದಿನಾಚರಣೆ ಸಂಬಂಧಿಸಿದ ನಾಯಕರ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಎಸ್.ಡಿ.ಪಿ.ಐಗೆ ಸೇರ್ಪಡೆಗೊಂಡಿದ್ದು, ಇಂದು ಎಸ್.ಡಿ.ಪಿ.ಐ ಸೇರ್ಪಡೆ ನಿರ್ಧಾರದಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ.ಈ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು, ಈ ವಿಚಾರವಾಗಿ ಅವರು ಪ್ರತಿಕ್ರಿಯಿಸಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ 15ನೇ ಸಂಸ್ಥಾಪನಾ ದಿನಾಚರಣೆಯ ಪ್ರಯುಕ್ತ ನಡೆದ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದು, ಆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ, ಕಾರ್ಯಕ್ರಮಗಳನ್ನು ನೋಡಿ ನನಗೆ ಖುಷಿಯಾದ ಕಾರಣ ಆ ಪಕ್ಷಕ್ಕೆ ಸೇರ್ಪಡೆಗೊಳ್ಳಲು ನಿರ್ಧರಿಸಿದ್ದು ನಿಜ.
ಆದರೇ ನನ್ನ ಈ ನಿರ್ಧಾರದ ಬಗ್ಗೆ ನನ್ನ ಮನೆಯವರಿಗೆ, ಕುಟುಂಬಸ್ಥರಿಗೆ ತಿಳಿದಾಗ ಅದಕ್ಕೆ ಅವರೆಲ್ಲರೂ ತೀವ್ರ ವಿರೋಧ ವ್ಯಕ್ತಪಡಿಸಿದ ಕಾರಣ ಎಸ್.ಡಿ.ಪಿ.ಐ ಸೇರ್ಪಡೆ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ಅವರು ತಿಳಿಸಿದ್ದಾರೆ
Posted by Vidyamaana on 2024-02-17 21:17:57 |
ಕ್ಯಾಲಿಫೋರ್ನಿಯಾ: ಕೇರಳ ಮೂಲದ ಕುಟುಂಬವೊಂದರ ಸದಸ್ಯರು ಅಮೆರಿಕದ ಕ್ಯಾಲಿಫೋರ್ನಿಯಾದ ಮನೆಯಲ್ಲಿ ಶವಗಳಾಗಿ ಪತ್ತೆಯಾಗಿದ್ದಾರೆ. ಮೃತರನ್ನು ಆನಂದ್ ಸುಜಿತ್ ಹೆನ್ರಿ (42), ಅವರ ಪತ್ನಿ ಅಲೈಸ್ ಪ್ರಿಯಾಂಕಾ (40) ಹಾಗೂ 4 ವರ್ಷದ ಅವಳಿ ಮಕ್ಕಳಾದ ನೋಹ್ ಮತ್ತು ನೀತನ್ ಎಂದು ಗುರುತಿಸಲಾಗಿದೆ. ಇದು ಕೊಲೆ- ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ.
ಮನೆಯಲ್ಲಿ ಯಾರೂ ಫೋನ್ ಕರೆಗಳಿಗೆ ಸ್ಪಂದಿಸದ ಕಾರಣ ಅನುಮಾನಗೊಂಡ ಕುಟುಂಬದ ಸಂಬಂಧಿಕರು, ಪರಿಶೀಲನೆ ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ ಪೊಲೀಸರು ಸ್ಥಳಕ್ಕೆ ತೆರಳಿದಾಗ ಮೃತದೇಹಗಳು ಪತ್ತೆಯಾಗಿವೆ.
ಇಂಡಿಯನ್- ಅಮೆರಿಕನ್ ದಂಪತಿ ಆನಂದ್ ಮತ್ತು ಅಲೈಸ್ ಅವರು ತಮ್ಮ ಸ್ನಾನದ ಕೋಣೆಯಲ್ಲಿ ಗುಂಡೇಟಿನ ಗಾಯದಿಂದ ಮೃತಪಟ್ಟಿದ್ದಾರೆ. ಅವರ ಇಬ್ಬರು ಮಕ್ಕಳ ಶವಗಳು ಬೆಡ್ ರೂಂನಲ್ಲಿ ಪತ್ತೆಯಾಗಿವೆ. ಅವರ ಸಾವಿನ ಕುರಿತಾದ ತನಿಖೆ ಇನ್ನೂ ನಡೆಯುತ್ತಿದೆ.
"ಮನೆಗೆ ಆಗಮಿಸಿದ ಪೊಲೀಸರಿಗೆ ಒಳಗಿನಿಂದ ಯಾವುದೇ ಸ್ಪಂದನೆ ಬಂದಿರಲಿಲ್ಲ. ಅವರು ಮನೆಯ ಹೊರಗಿನ ಭಾಗಗಳನ್ನು ತಪಾಸಣೆ ನಡೆಸಿದರು. ಯಾರೂ ಬಲವಂತವಾಗಿ ಪ್ರವೇಶಿಸಿದ ಸುಳಿವು ಇರಲಿಲ್ಲ. ಚಿಲಕ ಹಾಕದ ಕಿಟಕಿಯನ್ನು ಕಂಡ ಪೊಲೀಸರು, ಮನೆ ಒಳಗೆ ಪ್ರವೇಶಿಸಿದರು. ಅಲ್ಲಿ ಒಳಗೆ ನಾಲ್ವರ ಶವಗಳು ಕಂಡುಬಂದಿವೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
9 ಎಂಎಂ ಪಿಸ್ತೂಲು ಮತ್ತು ಲೋಡೆಡ್ ಮ್ಯಾಗಜಿನ್ ಬಾತ್ರೂಂನಲ್ಲಿ ದೊರಕಿವೆ. 2020ರಲ್ಲಿ 2.1 ಮಿಲಿಯನ್ ಡಾಲರ್ಗೆ ಈ ಮನೆಯನ್ನು ದಂಪತಿ ಖರೀದಿಸಿದ್ದರು.
ಇದು ಕೊಲೆ- ಆತ್ಮಹತ್ಯೆ ಪ್ರಕರಣದಂತೆ ಕಂಡುಬರುತ್ತಿದೆ. ಆದರೆ ಯಾವುದೇ ಇತರೆ ಸಾಧ್ಯತೆಗಳನ್ನು ತಳ್ಳಿ ಹಾಕಲು ಸಾಧ್ಯವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುಟುಂಬ ಕೇರಳ ಮೂಲದ್ದಾಗಿದ್ದು, ಕಳೆದ 9 ವರ್ಷಗಳಿಂದ ಅಮೆರಿಕದಲ್ಲಿ ವಾಸವಿತ್ತು. ಆನಂದ್ ಸಾಫ್ಟ್ವೇರ್ ಎಂಜಿನಿಯರ್ ಆಗಿದ್ದು, ಅವರ ಪತ್ನಿ ಅಲೈಸ್ ಸೀನಿಯರ್ ಅನಾಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಎರಡು ವರ್ಷಗಳ ಹಿಂದೆ ಅವರು ನ್ಯೂಜೆರ್ಸಿಯಿಂದ ಸ್ಯಾನ್ ಮಾಟೆಯೊ ಕೌಂಟಿಗೆ ಸ್ಥಳಾಂತರವಾಗಿದ್ದರು.
ಕೋರ್ಟ್ ದಾಖಲೆಗಳ ಪ್ರಕಾರ, ಪತ್ನಿಯಿಂದ ವಿಚ್ಛೇದನ ಪಡೆಯಲು ಆನಂದ್ 2016ರಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಬೇರ್ಪಡುವಿಕೆಯನ್ನು ಕೋರ್ಟ್ ಮಾನ್ಯ ಮಾಡಿರಲಿಲ್ಲ. ಇದರ ಬಳಿಕ ಅವರಿಗೆ ಅವಳಿ ಮಕ್ಕಳು ಜನಿಸಿದ್ದರು.
ಮೆಟಾದಲ್ಲಿ ಕೆಲಸ ಮಾಡುತ್ತಿದ್ದ ಆನಂದ್, ಕಳೆದ ವರ್ಷದ ಜೂನ್ನಲ್ಲಿ ಅದರಿಂದ ಹೊರಬಂದು, ಲಾಜಿಟ್ಸ್ ಎನ್ನುವ ಸ್ವಂತ ಕೃತಕ ಬುದ್ಧಿಮತ್ತೆಯ ಕಂಪೆನಿಯನ್ನು ಹುಟ್ಟುಹಾಕಿದ್ದರು.
Posted by Vidyamaana on 2023-10-24 20:22:36 |
ಬಂಟ್ವಾಳ, ಅ.24: ಕೆಲಸದ ಆಳುವಿನ ಬಗ್ಗೆ ಇರಿಸಿದ್ದ ಅತಿಯಾದ ನಂಬಿಕೆಯೇ ಮಾಲಕನಿಗೆ ಮುಳುವಾಗಿದೆ. ಬಿಲ್ಡರ್ ಆಗಿದ್ದ ವ್ಯಕ್ತಿಯೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದ ವ್ಯಕ್ತಿಯೇ ಲಕ್ಷಾಂತರ ರೂಪಾಯಿ ನಗದು ಹಾಗೂ ಅಪಾರ ಪ್ರಮಾಣದ ಚಿನ್ನಾಭರಣ ಕಳವುಗೈದ ಘಟನೆ ನಡೆದಿದೆ.
ಬಂಟ್ವಾಳ ತಾಲೂಕಿನ ಪುದು ಗ್ರಾಮದ ಕೋಡಿಮಜಲು ನಿವಾಸಿ ಇಮಾದ್ ಬಿಲ್ಡರ್ ಸಂಸ್ಥೆಯ ಮಾಲಕ ಮೊಹಮ್ಮದ್ ಝಫರುಲ್ಲಾ ಎಂಬವರ ಮನೆಯ ಕಪಾಟಿನಲ್ಲಿ ಇರಿಸಲಾಗಿದ್ದ ಚಿನ್ನಾಭರಣ ಸಹಿತ ಲಕ್ಷಾಂತರ ರೂ. ಹಣವನ್ನು ಮನೆಯ ಕೆಲಸದಾತನೇ ಕದ್ದುಕೊಂಡು ಹೋಗಿರುವುದಾಗಿ ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಸುಮಾರು 27,50,000 ರೂ. ನಗದು ಹಾಗೂ 4,96,000 ರೂ. ಮೌಲ್ಯದ ವಿವಿಧ ಬಗೆಯ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ ಎಂದು ಝಫರುಲ್ಲಾ ತಿಳಿಸಿದ್ದಾರೆ.
ಇಮಾದ್ ಬಿಲ್ಡರ್ ಮಾಲಕ ಮೊಹಮ್ಮದ್ ಝಫರುಲ್ಲಾ ಎಂಬವರ ಜೊತೆ ಸುಮಾರು 8 ತಿಂಗಳ ಹಿಂದೆ ಕಟ್ಟಡ ಕಾಮಗಾರಿಯ ಕೆಲಸಕ್ಕೆ ಸೇರಿಕೊಂಡಿದ್ದ ಮಂಜೇಶ್ವರ ಮೂಲದ ಆಲಿ ಎಂಬಾತನ ಬಗ್ಗೆ ಸಂಶಯ ಉಂಟಾಗಿದೆ. ಆಲಿಗೆ ಫರಂಗಿಪೇಟೆ ಎಂಬಲ್ಲಿನ ಹುಡುಗಿಯ ಜೊತೆ ವಿವಾಹವಾಗಿದ್ದು, ಮಾಲಕರ ವಿಶ್ವಾಸ ಗಳಿಸಿ ಮನೆಗೇ ಬಂದು ಹೋಗುತ್ತಿದ್ದ. ಅಲ್ಲದೆ, ಝಫರುಲ್ಲಾ ಅವರ ಸಹಾಯಕನಾಗಿ ದುಡಿಯುತ್ತಿದ್ದ. ಹೀಗಾಗಿ ಆಲಿಯಲ್ಲಿ ಮನೆಗೆ ಅಗತ್ಯ ಸಾಮಾಗ್ರಿಗಳನ್ನು ಕಳುಹಿಸಿಕೊಡುತ್ತಿದ್ದರು. ಆದರೆ ಈತನ ಮೇಲಿರಿಸಿದ್ದ ಅತೀ ವಿಶ್ವಾಸವೇ ಮಾಲಕರಿಗೆ ಮುಳುವಾಗಿ ಪರಿಣಮಿಸಿದೆ.
ಅ.18 ರಂದು ಮನೆ ಮಂದಿ ಎಲ್ಲರೂ ಮನೆಗೆ ಬೀಗ ಹಾಕಿ ಮಂಗಳೂರಿನ ಜಪ್ಪುವಿನ ತಮ್ಮನ ಮನೆಗೆ ಹೋಗಿದ್ದರು. ಮನೆಗೆ ಬೀಗ ಹಾಕಿದ ನಂತರ, ತನ್ನ ವಿಶ್ವಾಸದ ಕೆಲಸದಾಳು ಬಳಿ ಕೀಯನ್ನು ನೀಡಿದ್ದರು. ಮರುದಿನ 19ರಂದು ಕಟ್ಟಡ ಕಾಮಗಾರಿ ವಿಚಾರಕ್ಕೆ ಮಾಲಕ ಮೊಹಮ್ಮದ್ ಅವರು ಈತನಿಗೆ ಪೋನ್ ಮಾಡಿದಾಗ ಪೋನ್ ಸ್ವಿಚ್ ಆಫ್ ಆಗಿತ್ತು.
ಆದರೆ ಈ ವಿಚಾರವನ್ನು ಸೀರಿಯಸ್ ಆಗಿ ತೆಗೆದುಕೊಂಡಿರದ ಮಾಲಕರು ಅ.20 ರಂದು ಅಗತ್ಯ ಕೆಲಸಕ್ಕಾಗಿ ಬೆಂಗಳೂರಿಗೆ ತೆರಳಿದ್ದರು.
ಕೆಲಸದ ಒತ್ತಡದ ನಡುವೆ ಅ.23 ರಂದು ಊರಿಗೆ ವಾಪಾಸು ಆಗಿದ್ದು ರಾತ್ರಿ ಸುಮಾರು 8 ಗಂಟೆಗೆ ಕೋಡಿಮಜಲಿನ ಮನೆಗೆ ಬಂದಿದ್ದರು. ಕೀ ಕೊಡುವಂತೆ ಆತನಿಗೆ ಪೋನ್ ಮಾಡಿದಾಗ ಆಲಿ ಫೋನ್ ಆಫ್ ಆಗಿಯೇ ಇತ್ತು. ಸಂಶಯದಿಂದ ಮನೆಯ ಹಿಂಬದಿಯ ಕಿಟಕಿಯಲ್ಲಿ ಇಣುಕಿ ನೋಡಿದಾಗ ಕೋಣೆಯ ಬಾಗಿಲು ತೆರದುಕೊಂಡಿತ್ತು, ಕಪಾಟಿನ ಲಾಕರ್ ಮುರಿದು ಅದರಲ್ಲಿದ್ದ ಸೊತ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು ಕಂಡುಬಂದಿತ್ತು.
ಕೂಡಲೇ ಗ್ರಾಮಾಂತರ ಪೋಲಿಸರಿಗೆ ದೂರು ನೀಡಿದ್ದು ಪೋಲೀಸರ ಸಮಕ್ಷಮದಲ್ಲಿ ಮನೆಯ ಬಾಗಿಲು ಮುರಿದು ನೋಡಿದಾಗ ಮೊಹಮ್ಮದ್ ಅವರು ಕಪಾಟಿನಲ್ಲಿರಿಸಿದ್ದ ರೂ. 25 ಲಕ್ಷ ಹಾಗೂ ಅವರ ತಂದೆಯ ಕಪಾಟಿನಲ್ಲಿರಿಸಿದ್ದ ರೂ.2,50,000 ಹಾಗೂ 4,96,000 ರೂ. ಮೌಲ್ಯದ 24 ಗ್ರಾಂ ತೂಕದ ಬ್ರಾಸ್ಲೆಟ್, 16 ಗ್ರಾಂ ತೂಕದ ಎರಡು ಚಿನ್ನದ ಉಂಗುರ, 40 ಗ್ರಾಂ ತೂಕದ ಚಿನ್ನದ ಬಲೆಗಳು, 8 ಗ್ರಾಂ ತೂಕದ ಚಿನ್ನದ ಬೆಂಡೋಲೆ, 32 ಗ್ರಾಂ ತೂಕದ ಚಿನ್ನದ ಮಾಲೆ, 4 ಗ್ರಾಂ ತೂಕದ ಚಿನ್ನದ ಸರ ಕಳವು ಮಾಡಿದ್ದಾರೆ. ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ ಹರೀಶ್ ಹಾಗೂ ಬೆರಳಚ್ಚು ತಜ್ಞರು, ಶ್ವಾನದಳದವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
Posted by Vidyamaana on 2023-07-30 01:53:26 |
ಕಡಬ: ಸರಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಗೆ ನ ಉಚಿತವಾಗಿ ನೋಂದಣಿಗೆ ಸರಕಾರ ಆದೇಶ ನೀಡಿರುವುದರಿಂದ ಗ್ರಾಮ ಒನ್ ಕೇಂದ್ರಗಳು ಸಂಕಷ್ಟಕ್ಕೆ ಒಳಗಾಗಿದೆ ಈ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಕಡಬ ತಾಲೂಕಿನ ಗ್ರಾಮ ಒನ್ ಫ್ರಾಂಚೈಸಿನ ನಿರ್ವಾಹಕರು ಕಡಬ ತಹಸೀಲ್ದಾರ್ ಮೂಲಕ ಜು.24ರಂದು ಸರಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಕಡಬ ತಾಲೂಕಿನ ಸುಮಾರು 20 ಗ್ರಾಮ್ ಒನ್ ಫ್ರಾಂಚೈಸಿ ನಿರ್ವಾಹಕರು ಮನವಿ ನೀಡಿದ್ದು, ನಾವು ಒಂದು ವರುಷದ ಹಿಂದೆ ಗ್ರಾಮ ಒನ್ ಕೇಂದ್ರಗಳನ್ನು ಬಂಡವಾಳ ಹೂಡಿಕೆ ಮಾಡಿ ಆರಂಭಿಸಿರುತ್ತೇವೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನವರು ಗ್ರಾಮ ಪಂಚಾಯತ್ಗಳಿಗೆ ಕಳುಹಿಸಿದ ಸುತ್ತೋಲೆಯಲ್ಲೂ ಗ್ರಾಮ ಒನ್ ಕೇಂದ್ರಗಳಿಗೆ ಬೇಕಾದ ವ್ಯವಸ್ಥೆಗಳನ್ನು ಮಾಡಿ ಕೊಡಬೇಕಾಗಿ ತಿಳಿಸಲಾಗಿದೆ. ಆದರೆ ಸರಕಾರದಿಂದ ನಮ್ಮ ದ ಕೇಂದ್ರಗಳಿಗೆ ಯಾವುದೇ ರೀತಿಯ ಸೌಲಭ್ಯಗಳನ್ನು ಒದಗಿಸಿರುವುದಿಲ್ಲ. ಕೇವಲ ಐಡಿ ಮಾತ್ರ ಕೊಟ್ಟು ನಮ್ಮ ಮೂಲಕ ಕೆಲಸ ಮಾಡಿಸಿಕೊಳ್ಳುತ್ತಿದ್ದಾರೆ. ನಮಗೆ ಸರಿಯಾದ ಕಮಿಷನ್ ಕೂಡ ಸಿಗುತ್ತಿಲ್ಲ. ಈ ಮೊದಲು ಉಚಿತವಾಗಿ ಆಯುಷ್ಮಾನ್ ಭಾರತ್ ಆರೋಗ್ಯ ಕಾರ್ಡ್ ಮಾಡಿಸಿಕೊಡುವಂತೆ ಜಿಲ್ಲಾ ಸಂಯೋಜಕರು ನಮಗೆ ತಿಳಿಸಿ, ಇದಕ್ಕೆ ಸಂಭಾವನೆ ಇದೆ ಎಂದು ಎಲ್ಲರಿಗೂ ದೂರವಾಣಿ ಮುಖಾಂತರ ತಿಳಿಸಿದ್ದರು. ಆದರೆ ಅದಕ್ಕೆ ಸರಿಯಾದ ಕಮಿಷನ್ ಅಥವಾ ಯಾವುದೇ ರೀತಿಯ ಸಂಭಾವನೆಯನ್ನು ಇಲ್ಲಿಯವರೆಗೆ ನೀಡಿರುವುದಿಲ್ಲ. ಹಲವು ಕ್ಯಾಂಪ್ಗಳನ್ನು ಮಾಡಿ ಸಾವಿರಾರು ರೂ ಖರ್ಚು ಮಾಡಿ ನಷ್ಟ ಅನುಭವಿಸಿರುತ್ತೇವೆ. ಅದಕ್ಕೆ ಮಾಡಿದ ಖರ್ಚು ಕೂಡ ನಮಗೆ ಕೊಟ್ಟಿಲ್ಲ. ಇದೀಗ ಸರಕಾರದ ವತಿಯಿಂದ ಗೃಹಲಕ್ಷ್ಮಿ ಯೋಜನೆಯನ್ನು ಉಚಿತವಾಗಿ ಮಾಡಿಕೊಡಬೇಕೆಂದು ಒತ್ತಡ ಹಾಕುತ್ತಿದ್ದಾರೆ.ನಾವು ನೀಡುವ ಸೇವೆಗಳಿಗೆ ಹಣವನ್ನು ಅದೇ ದಿನ ಜಮಾ ಮಾಡಬೇಕು. ಎಲ್ಲವನ್ನೂ ಉಚಿತವಾಗಿ ಮಾಡಿಕೊಟ್ಟರೆ ನಮ್ಮ ಗ್ರಾಮ ಒನ್ ಕೇಂದ್ರದ ಖರ್ಚು ವೆಚ್ಚಗಳನ್ನು ಯಾರು ಕೊಡುವುದು ನಮ್ಮ ಜೀವನೋಪಾಯಕ್ಕೆ ನಾವು ಏನು ಮಾಡಬೇಕು. ತಿಂಗಳ ಖರ್ಚು ಕೊಠಡಿ ಬಾಡಿಗೆ ವಿದ್ಯುತ್ ಬಿಲ್, ಇಂಟರ್ನೆಟ್ ಬಿಲ್ ಪ್ರಿಂಟ್ ಪೇಪರ್ ಮತ್ತು ಇತರ ಖರ್ಚುಗಳನ್ನು ಭರಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ.
ಗ್ರಾಮಒನ್ ಐಡಿ ಪಡೆದುಕೊಂಡು ಸೈಬರ್ ಸೆಂಟರ್ಗಳಿಂದ ದುರುಪಯೋಗ:
ಈ ನಡುವೆ ಕೆಲವು ಸೇವಾ ಕೇಂದ್ರದ ಹೆಸರಿನಲ್ಲಿ ಅನಧಿಕೃತವಾಗಿ ಸೇವಾ ಸಿಂಧು ಐಡಿಯಲ್ಲಿ ಕೆಲಸ ಮಾಡಿಕೊಂಡು ಹಣ ಮಾಡುತ್ತಿದ್ದಾರೆ. ನಾವು ಎಲ್ಲವನ್ನು ಸಹಿಸಿಕೊಂಡು ವಿಧೇಯತೆಯಿಂದ ಕೆಲಸ ಮಾಡುತ್ತಿದ್ದರೂ, ಅದನ್ನು ಸಹಿಸಲಾಗದೆ ಕೆಲವರು ಗ್ರಾಮ್ ಒನ್ ನಾಗರಿಕ ಸೇವಾ ಕೇಂದ್ರದ ವಿರೋಧಿಗಳು ನಮ್ಮ ವಿರುದ್ದ ವಿವಿಧ ರೀತಿಯ ಷಡ್ಯಂತರಗಳನ್ನು ಮಾಡಿ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಈ ಸಮಸ್ಯೆಗಳನ್ನು ನಿಭಾಯಿಸಿಕೊಂಡು ಕೆಲಸ ಮಾಡಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಅವರ ಮನವಿಯಲ್ಲಿ ಸರಕಾರವನ್ನು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಕಡಬ ತಾಲೂಕಿನ ಗ್ರಾಮಒನ್ ಪ್ರಾಂಚೈಸಿ ನಿರ್ವಾಹಕರು ಉಪಸ್ಥಿತರಿದ್ದರು, ಉಪ ತಹಸೀಲ್ದಾರ್ ಮನೋಹರ್ ಕೆ.ಟಿ. ಮನವಿ ಸ್ವೀಕರಿಸಿದರು