Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23
ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”
ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.
ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.
ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.
ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!
ಡಾ. ಶಿವರಾಮ ಭಟ್ ಗುರು:
ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ. ಶಿವರಾಮ ಭಟ್ ಎಂದು ನಂಬಿದ್ದರು.
ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!
ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.
Posted by Vidyamaana on 2023-09-29 11:28:59 |
ಪುತ್ತೂರು : ತೋಡಾರು ಶಂಸುಲ್ ಉಲಮಾ ಅರಬಿಕ್ ಕಾಲೇಜಿನ ಸಂತತಿ ಬಪ್ಪಳಿಗೆ ನೂರುಲ್ ಹುದಾ ಮದ್ರಸದ ಹಳೆ ವಿದ್ಯಾರ್ಥಿ ಪಟ್ಟಿಕ್ಕಾಡ್ ಜಾಮಿಆಃ ನೂರಿಯದಲ್ಲಿ 2022 ನೇ ಸಾಲಿನ ಫಿಕ್ಹ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಫೈಝಿ ಅಲ್ ಮಅಬರಿ ಪದವಿ ಪಡೆದ ಮುಹಮ್ಮದ್ ಶಫೀಕ್ ರನ್ನು ಬಪ್ಪಳಿಗೆಯಲ್ಲಿ ನಡೆದ ಮೀಲಾದ್ ಸಮಾರಂಭದಲ್ಲಿ ಅದ್ದೂರಿಯಾಗಿ ಸನ್ಮಾನಿಸಲಾಯಿತು.
ಸ್ಥಳೀಯ ಸಾಮಾಜಿಕ ಸೇವಾ ಸಂಘಟನೆಯಾದ *BGF ಬಪ್ಪಳಿಗೆ ಗ್ಲೋಬಲ್ ಫ್ರೆಂಡ್ಸ್* ಈ ಸನ್ಮಾನವನ್ನು ಜಮಾಅತರ ಪರವಾಗಿ, ಮಸೀದಿ ವಠಾರದಲ್ಲಿ ನಡೆದ ಮೀಲಾದ್ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿತ್ತು.
ಶಾಲು ಹೊದಿಸಿ,ಐದು ಸಾವಿರ ರೂಪಾಯಿಯನ್ನೊಳಗೊಂಡ ನಗದು, ಸನ್ಮಾನ ಫಲಕ ಹಾಗೂ ಅಮೂಲ್ಯ ಗ್ರಂಥಗಳನ್ನು ನೀಡಿ ಯುವ ವಿದ್ವಾಂಸನನ್ನು ಸಂಘಟಕರು ಸನ್ಮಾನಿಸಿದರು.ಈ ಸಂದರ್ಭದಲ್ಲಿ ಜಮಾಅತ್ ಸಮಿತಿ ಪದಾಧಿಕಾರಿಗಳು, ಅನ್ಸಾರುಲ್ ಇಸ್ಲಾಂ ಯುವಕ ಸಮಿತಿ ಕಾರ್ಯಕರ್ತರು, ಬಪ್ಪಳಿಗೆ ಈದ್ ಮಿಲಾದ್ ಸಮಿತಿಯ ಸಾರಥಿಗಳು, ಮಸೀದಿ ಮದ್ರಸದ ಉಸ್ತಾದರು ಹಾಗೂ ಜಮಾಅತ್ ಬಾಂಧವರು ಉಪಸ್ಥಿತರಿದ್ದರು.
ಹಿರಿಯ ವಿದ್ವಾಂಸರಾಗಿದ್ದ ಮರ್ಹೂಂ ಅಬ್ದುಲ್ ಖಾದಿರ್ ಫೈಝಿ ಬಪ್ಪಳಿಗೆ ಹಾಗೂ ಝೈನಬ ದಂಪತಿಗಳ ಗಂಡು ಮಕ್ಕಳಲ್ಲಿ ಕಿರಿಯವರೇ ಮುಹಮ್ಮದ್ ಶಫೀಕ್.
ಮಕ್ಕಳಿಗೆ ಬೇಕಾದ ಧಾರ್ಮಿಕ ಮತ್ತು ಲೌಕಿಕ ವಿದ್ಯಾಭ್ಯಾಸಗಳೆರಡನ್ನೂ ನೀಡಿ ಜೀವನದ ಉತ್ತಮ ದಾರಿಯನ್ನು ಕಂಡುಕೊಳ್ಳುವಲ್ಲಿ ಮಕ್ಕಳಿಗೆ ಸರಿಯಾದ ದಾರಿ ತೋರುವಲ್ಲಿ ಮರ್ಹೂಂ ಅಬ್ದುಲ್ ಖಾದರ್ ಫೈಝಿ ಉಸ್ತಾದರು ಯಶಸ್ವಿಯಾಗಿದ್ದಾರೆ.ಗಂಡು ಮಕ್ಕಳ ಪೈಕಿ ಮೂರು ಮಂದಿ ವಿದೇಶ ಉದ್ಯೋಗದಲ್ಲಿದ್ದು ಕಿರಿಯ ಮಗನಾದ ಶಫೀಕ್ ನನ್ನು ಓರ್ವ ಧಾರ್ಮಿಕ ವಿದ್ವಾಂಸ(ಆಲಿಂ)ನನ್ನಾಗಿ ಮಾಡಬೇಕೆಂದು ನನ್ನ ಆಸೆ ಎಂದು ಬಪ್ಪಳಿಗೆ ಮದ್ರಸದ ಒಂದನೇ ತರಗತಿಗೆ ದಾಖಲು ಮಾಡುವಾಗ ಹೇಳಿದ್ದರು.
ಮದ್ರಸದ ಒಂದನೇ ತರಗತಿಯಲ್ಲಿ ಆತೂರು ಕುದ್ಲೂರಿನ ನಝೀರ್ ಮದನಿ ಉಸ್ತಾದರು ಅಧ್ಯಾಪಕರಾಗಿದ್ದು, ಒಂದನೇ ತರಗತಿಯ ಅಂತಿಮ ಪರೀಕ್ಷೆಯಲ್ಲಿ
ತ್ರಪ್ತಿ ದಾಯಕ ಅಂಕಗಳು ಶಫೀಕ್ ಪಡೆದಿಲ್ಲ ಎಂಬ ಮಾಹಿತಿಯನ್ನು ಅವರು ಅಂದು ಮದ್ರಸಾ ಮುಖ್ಯೋಪಾಧ್ಯಾಯರಾಗಿದ್ದ ನನ್ನ ಗಮನಕ್ಕೆ ತಂದಾಗ ಮರ್ಹೂಂ ಫೈಝಿ ಉಸ್ತಾದರಿಗೆ ಈ ಮಾಹಿತಿಯನ್ನು ನಾನು ತಿಳಿಸಿ,ಇನ್ನೊಂದು ವರ್ಷ ಒಂದನೇ ತರಗತಿಯಲ್ಲೇ ಕಲಿಯುವುದಾದರೆ ಮುಂದಿನ ಭವಿಷ್ಯ ಒಳ್ಳೆಯ ದಾಗಲಿದೆ ಎಂದಾಗ ,ಅವನ ಹಿತಕ್ಕಾಗಿ ನೀವು ಕೈಗೊಳ್ಳುವ ಎಲ್ಲಾ ಕ್ರಮಗಳಿಗೆ ನಾನು ಬದ್ಧ ಎಂದರು.
ಅಲ್ಲಿಂದ ಮತ್ತೆ ಪ್ರಾರಂಭವಾಯಿತು,ಶಫೀಕನ ಕಲಿಕೆಯ ಛಲ.ಮುಂದಿನ ಎಲ್ಲಾ ತರಗತಿಗಳಲ್ಲೂ ಪ್ರಥಮನಾಗಿ,ಹತ್ತನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ರೇಂಜ್ ಮಟ್ಟದಲ್ಲಿಯೇ ಉನ್ನತ ಸಾಧನೆಗೈದು, ಉತ್ತಮ ನಡವಳಿಕೆಯ ವಿದ್ಯಾರ್ಥಿ ಯಾಗಿ ಗುರುಹಿರಿಯರ ಸಂಪೂರ್ಣ ತೃಪ್ತಿ ಗಳಿಸಿದ್ದ.
ಹತ್ತನೇ ತರಗತಿಯ ಬಳಿಕ ತಂದೆಯ ಅಭಿಲಾಷೆಯಂತೆ ಜಾಮಿಆಃ ನೂರಿಯಾದ ಸಂತತಿಯಾಗಿ ,ಧರ್ಮ ಪ್ರಬೋಧನೆಯ ಕುಡಿಯಾಗಬೇಕೆಂದು ಪ್ರತಿಷ್ಠಿತ ತೋಡಾರು ಶಂಸುಲ್ ಉಲಮಾ ಅರಬಿಕ್ ಕಾಲೇಜಿನಲ್ಲಿ ಪ್ರವೇಶಾತಿ ಪಡೆದ.(ವಿದ್ಯಾರ್ಥಿಯಾಗಿದ್ದ ಈ ಮಗನೇ ತಂದೆಯ ಜನಾಝ ನಮಾಝಿಗೆ ನೇತ್ರತ್ವವನ್ನು ನೀಡಿದ್ದರು.)ಕಾಲೇಜಿನ ಅಧ್ಯಯನ ವರ್ಷಗಳನ್ನು
ಪ್ರತಿಭಾನ್ವಿತನಾಗಿ ಪೂರೈಸಿ, ಜಾಮಿಆಃ ನೂರಿಯಾದಲ್ಲಿ ಸೇರಿ, ಅಧ್ಯಯನಕ್ಕೆ ಫಿಖ್ಹ್ ವಿಭಾಗವನ್ನು ಆಯ್ಕೆ ಮಾಡಿ,ಅಂತಿಮ ಪರೀಕ್ಷೆಯಲ್ಲಿ ಘಟಾನುಘಟಿ ವಿದ್ಯಾರ್ಥಿ ಗಳೆಡೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಮಹ್ಬರಿ ಫೈಝಿ ಪಟ್ಟ ಅಲಂಕರಿಸಿ ಬಪ್ಪಳಿಗೆಗೆ ಕೀರ್ತಿ ತಂದ ಶಫೀಕ ರನ್ನು ಅಭಿನಂದಿಸಿ ಈ ಸನ್ಮಾನವನ್ನು ನೀಡಲಾಯಿತು.
ಪ್ರಸ್ತುತ ಶಫೀಕ್ ಫೈಝಿಯವರು ಕಿನ್ಯದ ವಾದೀ ತೈಬ ಅಕಾಡೆಮಿಯಲ್ಲಿ ಮುದರ್ರಿಸರಾಗಿ ಸೇವೆ ಸಲ್ಲಿಸುತ್ತಿದ್ದು,ಮುಂದಿನ ಜೀವನ ಇನ್ನಷ್ಟು ಬೆಳಗಿ ಅವರ ವಿದ್ವತ್ ಸಂಪತ್ತು ಸಮುದಾಯಕ್ಕೆ ಬೆಳಕಾಗಲಿ...ಆಮೀನ್
Posted by Vidyamaana on 2024-07-06 13:28:18 |
ಶಿವಮೊಗ್ಗದ ಲಯನ್ ಸಫಾರಿ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಎರಡು ಕಾರುಗಳ ನಡುವೆ ಭೀಕರ ಅಪಘಾತವಾಗಿದ್ದು, ಎರಡು ಕಾರುಗಳು ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೆ ಮೂವರು ಸಾವನ್ನಪ್ಪಿದ್ದರೆ.ಮೂವರ ಸ್ಥಿತಿ ಗಂಭೀರವಾಗಿದೆ.ಅಪಘಾತದಲ್ಲಿ ಮೂವರು ದಾರುಣವಾಗಿ ಸಾವನಪ್ಪಿದ್ದು ಮೂವರ ಸ್ಥಿತಿ ಗಂಭೀರವಾಗಿದೆ.
Posted by Vidyamaana on 2023-12-31 16:45:19 |
ನವದೆಹಲಿ: ಅಯೋಧ್ಯೆ ರಾಮ ಮಂದಿರ ಟ್ರಸ್ಟ್ನ ಹೆಸರಿನಲ್ಲಿ ಕೆಲವರು ಯಾವುದೇ ಅನುಮೋದನೆ ಪಡೆಯದೆ ಹಣ ವಸೂಲಿ ಮಾಡುತ್ತಿದ್ದಾರೆ. ಈ ಸಂಬಂಧ ಉತ್ತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರಕ್ಕೆ ದೂರು ನೀಡಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ಭಾನುವಾರ ಹೇಳಿದೆ.ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಟ್ರಸ್ಟ್ ಹೆಸರಿನಲ್ಲಿ ಜನರನ್ನು ಮೋಸ ಮಾಡಲು ಪ್ರಯತ್ನಿಸಲಾಗುತ್ತಿದೆ. ಅವರ ಬಲೆಗೆ ಬೀಳದಂತೆ ವಿಎಚ್ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಜನರನ್ನು ಎಚ್ಚರಿಸಿದ್ದಾರೆ. ಅಲ್ಲದೇ ಉತ್ತರ ಪ್ರದೇಶ ಪೊಲೀಸರಿಗೆ ನೀಡಿದ ದೂರಿನ ಪ್ರತಿಯನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ. ಅದರ ಪ್ರತಿಯನ್ನು ಸಿಎಂ ಆದಿತ್ಯನಾಥ್ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ಟ್ಯಾಗ್ ಮಾಡಿದ್ದಾರೆ.ಎಚ್ಚರ! ಕೆಲವರು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ನಕಲಿ ಗುರುತಿನ ಚೀಟಿ ಮೂಲಕ ಜನರನ್ನು ವಂಚಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬನ್ಸಾಲ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಬಗ್ಗೆ ತಕ್ಷಣದ ಕ್ರಮ ಕೈಗೊಳ್ಳುವಂತೆ ನಾವು ಉತ್ತರ ಪ್ರದೇಶ ಡಿಜಿಪಿ, ಲಖನೌ ವಲಯ ಐಜಿಗೆ ಔಪಚಾರಿಕ ದೂರು ನೀಡಿದ್ದೇವೆ ಎಂದು ಬನ್ಸಾಲ್ ಮತ್ತೊಂದು ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಅಯೋಧ್ಯೆಯಲ್ಲಿ ಜನವರಿ 22 ರಂದು ನಡೆಯುವ ರಾಮನ ಮೂರ್ತಿ ಪ್ರತಿಷ್ಠಾಪನೆ ಸಮಾರಂಭಕ್ಕೆ ಹಣವನ್ನು ಸಂಗ್ರಹಿಸಲು ಯಾರಿಗೂ ಅನುಮತಿ ನೀಡಲಾಗಿಲ್ಲ ಎಂದು ವಿಎಚ್ಪಿ ಇತ್ತೀಚೆಗೆ ಹೇಳಿತ್ತು.
ಶ್ರೀರಾಮ ದೇಗುಲದಲ್ಲಿ ಮಹಾಮಸ್ತಕಾಭಿಷೇಕ ಸಮಾರಂಭಕ್ಕೆ ನಿಧಿ ಸಂಗ್ರಹಿಸಲು, ಪ್ರತ್ಯೇಕ ಸಮಿತಿ ರಚಿಸಲು ಮತ್ತು ರಶೀದಿಗಳನ್ನು ಮುದ್ರಿಸಲು ಯಾರಿಗೂ ಅನುಮತಿ ನೀಡಲಾಗಿಲ್ಲ ಎಂದು ವಿಎಚ್ಪಿ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ ಹೇಳಿದ್ದಾರೆ.
Posted by Vidyamaana on 2024-06-07 11:35:43 |
ಬೆಂಗಳೂರು : ಮೈಸೂರಿನಲ್ಲಿ ದಾಖಲಾದ ಅಪಹರಣ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ಹೊಳೆನರಸೀಪುರ ಶಾಸಕ ಎಚ್ಡಿ ರೇವಣ್ಣ ಅವರ ಪತ್ನಿ ಭವಾನಿ ಸಲ್ಲಿಸಿದ್ದ ಮಧ್ಯಂತರ ಜಾಮೀನು ಅರ್ಜಿಯನ್ನು ಹೈಕೋರ್ಟ್ ನೀಡಿದೆ. ಹೈಕೋರ್ಟ್ ಏಕ ಸದ್ಯಸ ಪೀಠ ಈ ಆದೇಶವನ್ನು ನೀಡಿದೆ.
Posted by Vidyamaana on 2024-03-18 16:34:09 |
ನವದೆಹಲಿ : ಸುಪ್ರೀಂಕೋರ್ಟ್ನಲ್ಲಿ ಚುನಾವಣಾ ಬಾಂಡ್ ಪ್ರಕರಣದ ವಿಚಾರಣೆ ವೇಳೆ ಸಿಜೆಐ ಡಿ.ವೈ.ಚಂದ್ರಚೂಡ್ ಮತ್ತು ವಕೀಲ ಮ್ಯಾಥ್ಯೂಸ್ ನೆಡುಂಪರಾ ನಡುವೆ ವಾಗ್ವಾದ ನಡೆಯಿತು. ಅವರ ಬಿಸಿಯಾದ ವಾಗ್ವಾದದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಚಾರಣೆಯ ಸಮಯದಲ್ಲಿ, ವಕೀಲ ಮ್ಯಾಥ್ಯೂಸ್ ನೆಡುಂಪರಾ ಅವರು ಚುನಾವಣಾ ಬಾಂಡ್ ಪ್ರಕರಣದ ಸಂಪೂರ್ಣ ತೀರ್ಪನ್ನ ನಾಗರಿಕರ ಬೆನ್ನ ಹಿಂದೆ ನೀಡಲಾಗಿದೆ ಎಂದು ಹೇಳಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಡಿ.ವೈ.ಚಂದ್ರಚೂಡ್, ನನ್ನ ಮೇಲೆ ಕೂಗಾಡಬೇಡಿ ಎಂದು ಹೇಳಿದರು.
"ನನ್ನ ಮೇಲೆ ಕೂಗಾಡಬೇಡಿ. ನೀವು ಅರ್ಜಿಯನ್ನ ಸಲ್ಲಿಸಲು ಬಯಸಿದರೆ, ಸಲ್ಲಿಸಿ. ನಾವು ನಿಮ್ಮ ಮಾತನ್ನು ಕೇಳುವುದಿಲ್ಲ" ಎಂದು ಸಿಜೆಐ ಡಿ.ವೈ ಚಂದ್ರಚೂಡ್ ಹೇಳಿದರು. ಆದ್ರೆ, ಅದರ ನಂತ್ರವೂ ವಕೀಲರು ತಮ್ಮ ಮಾತು ಮುಂದುವರೆಸಿದ್ದು, ಆಗ ನ್ಯಾಯಾಮೂರ್ತಿಗಳು ನಿಮಗೆ ನ್ಯಾಯಾಂಗ ನಿಂದನೆ ನೋಟಿಸ್ ಬೇಕೇ.? ಎಂದು ಗರಂ ಆದರು. ಸಧ್ಯ ಈ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
Posted by Vidyamaana on 2023-08-23 04:01:32 |
ಬಂಟ್ವಾಳ, ಆಗಸ್ಟ್ 22: ವಿಟ್ಲ ಪರಿಶಿಷ್ಟ ವರ್ಗದ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಿಂದ ತಪ್ಪಿಸಿಕೊಂಡಿದ್ದ ಇಬ್ಬರು ಬಾಲಕರನ್ನು ಪೊಲೀಸರು ಪುತ್ತೂರಿನಲ್ಲಿ ಪತ್ತೆ ಮಾಡಿದ್ದಾರೆ.
ನಿನ್ನೆ ಬೆಳಗ್ಗೆ ಹಾಸ್ಟೆಲಿನಿಂದ ದೀಕ್ಷಿತ್ (15) ಮತ್ತು ಗಗನ್ (14) ಎಂಬ ಇಬ್ಬರು ವಿದ್ಯಾರ್ಥಿಗಳು ಶಾಲೆಗೆಂದು ತೆರಳಿದ್ದರು. ಸಂಜೆ 4.30ಕ್ಕೆ ಹಾಸ್ಟೆಲಿಗೆ ಮರಳದೇ ಇದ್ದುದರಿಂದ ಇತರ ಮಕ್ಕಳಲ್ಲಿ ಕೇಳಿದಾಗ, ಅವರಿಬ್ಬರು ಶಾಲೆಗೆ ಬಂದಿಲ್ಲ ಎನ್ನುವುದು ತಿಳಿದುಬಂದಿತ್ತು. ಮಕ್ಕಳಿಬ್ಬರು ಶಾಲೆಗೆ ಬಾರದೆ ಎಲ್ಲಿ ಹೋಗಿದ್ದಾರೆಂದು ಗಾಬರಿಗೊಂಡ ಶಾಲೆಯ ವಾರ್ಡನ್ ಸೇರಿದಂತೆ ಇತರ ಸಿಬಂದಿ ಅಕ್ಕ ಪಕ್ಕದಲ್ಲಿ ಹುಡುಕಾಟ ನಡೆಸಿದ್ದಾರೆ.
ಆನಂತರ ವಿಟ್ಲ ಠಾಣೆಯಲ್ಲಿ ಇಬ್ಬರು ಬಾಲಕರ ನಾಪತ್ತೆ ಬಗ್ಗೆ ದೂರು ದಾಖಲಿಸಲಾಗಿತ್ತು. ಬಾಲಕರಿಬ್ಬರು ನಿನ್ನೆ ರಾತ್ರಿ ಪುತ್ತೂರು ಬಸ್ ನಿಲ್ದಾಣದಲ್ಲಿದ್ದಾಗ ಪತ್ತೆಯಾಗಿದ್ದಾರೆ. ಸಾರ್ವಜನಿಕರು ಬಾಲಕರಿಬ್ಬರನ್ನು ನೋಡಿ ಪ್ರಶ್ನೆ ಮಾಡದಾಗ, ಚಿತ್ರದುರ್ಗಕ್ಕೆ ಹೋಗಬೇಕು, ಹಣ ಇಲ್ಲದೆ ಬಸ್ ನಿಲ್ದಾಣದಲ್ಲಿ ಉಳಿದುಕೊಂಡಿದ್ದೇವೆ ಎಂದು ತಿಳಿಸಿದ್ದರು. ಬಳಿಕ ಪುತ್ತೂರು ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ಪೊಲೀಸರು ಬಾಲಕರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ನಿಜ ವಿಚಾರ ತಿಳಿಸಿದ್ದಾರೆ.
ಆಗಸ್ಟ್ 21ರ ಬೆಳಗ್ಗೆ ಹಾಸ್ಟೆಲಿನಿಂದ ವಿಟ್ಲಕ್ಕೆ ಅಲ್ಲಿಂದ ಪುತ್ತೂರಿಗೆ ಬಸ್ಸಿನಲ್ಲಿ ಆಗಮಿಸಿದ್ದಾರೆ. ಪುತ್ತೂರು ತಲುಪಿದಾಗ, ಚಿತ್ರದುರ್ಗಕ್ಕೆ ಹೋಗುವ ಬಸ್ಸಿಗೆ ತೆರಳಲು ಕೈಯಲ್ಲಿ ಕಾಸಿಲ್ಲದಾಗಿತ್ತು. ಹಾಗಾಗಿ ನಿಲ್ದಾಣದಲ್ಲಿಯೇ ಕುಳಿತುಕೊಂಡಿದ್ದರು. ಮನೆಯವರನ್ನು ನೋಡುವುದಕ್ಕಾಗಿ ಚಿತ್ರದುರ್ಗಕ್ಕೆ ಹೊರಟಿದ್ದೇವೆಂದು ಪೊಲೀಸರಲ್ಲಿ ತಿಳಿಸಿದ್ದಾರೆ. ಇಬ್ಬರು ಬಾಲಕರನ್ನೂ ಪೋಷಕರಿಗೆ ಮಾಹಿತಿ ನೀಡಿ ಮತ್ತೆ ಹಾಸ್ಟೆಲಿಗೆ ಸೇರಿಸಲಾಗಿದೆ.