Posted by vidyamaana on 2024-06-30 19:51:42 |
ಬಂಟ್ವಾಳ : ತಾಲೂಕಿನ ವಿವಿಧ ಕಡೆಗಳಿಗೆ ತೆರಳಿ ಮಳೆಹಾನಿ ಬಗ್ಗೆ ವೀಕ್ಷಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಜಿಲ್ಲೆಯಲ್ಲಿಯೇ ಖ್ಯಾತಿ ಪಡೆದಿರುವ ಕಲ್ಲಡ್ಕದ ಯಾಸೀರ್ ಅವರ ಅಪರೂಪದ ವಸ್ತುಗಳ ಸಂಗ್ರಹವಿರುವ ಕಲ್ಲಡ್ಕ ಮ್ಯೂಸಿಯಂಗೆ ಭೇಟಿ ನೀಡಿದರು.ಹಿಂದಿನ ಕಾಲದ ವಸ್ತುಗಳು, ನಾಣ್ಯ, ಪತ್ರಿಕೆಗಳ ಸಂಗ್ರಹವನ್ನು ವೀಕ್ಷಿಸಿ ರೋಮಾಂಚನಗೊಂಡ ಅವರು ಯಾಸೀರ್ ಅವರ ವಸ್ತುಗಳ ಸಂಗ್ರಹಣ ಕೌಶಲ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅತ್ಯಂತ ಸಾವಕಾಶವಾಗಿ ಪ್ರತಿಯೊಂದು ವಸ್ತುಗಳನ್ನು ಕುತೂಹಲದಿಂದ ವೀಕ್ಷಿಸಿ ಅವುಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ಮೊಡಂಕಾಪುವಿನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದರು. ಇಲ್ಲಿನ ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಎಲ್ಲರಿಗೂ ಕೈಕುಲುಕಿ ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಮಕ್ಕಳಿಂದ ಅಂಬೇಡ್ಕರ್ ಬಗ್ಗೆ ಹಾಡು ಹಾಡಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಗಮನ ಸೆಳೆದರು. ತಹಸೀಲ್ದಾರ್ ಅರ್ಚನಾ ಭಟ್, ವಿದ್ಯಾರ್ಥಿ ನಿಲಯ ಮೇಲ್ವಿಚಾರಕರು ಜೊತೆಗಿದ್ದರು.
Posted by Vidyamaana on 2023-10-14 12:10:54 |
ಮಂಗಳೂರು: ಬೆಂಗಳೂರಿನ ಗುತ್ತಿಗೆದಾರರೊಬ್ಬರ ಮನೆಯಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದ 42 ಕೋಟಿ ರೂಪಾಯಿ ನಗದು ಕಮಿಷನ್ ನೀಡಲು ತಂದಿಟ್ಟಿದ್ದ ಹಣ ಎಂಬ ಮಾಹಿತಿ ಇದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರಿನಲ್ಲಿ ಅಂಬಿಕಾಪತಿ ಎಂಬ ಗುತ್ತಿಗೆದಾರನ ಮನೆಗೆ ಐಟಿ ದಾಳಿ ಆಗಿದೆ. ಕೆಲ ದಿನಗಳ ಹಿಂದೆ 600 ಕೋಟಿ ರೂ. ಬಾಕಿ ಹಣವನ್ನು ಸರ್ಕಾರ ಬಿಡುಗಡೆ ಮಾಡಿತ್ತು. ಈಗ ಅಲ್ಲಿ ಸಿಕ್ಕಿರುವುದು ಕಮಿಷನ್ ಹಣ ಎಂಬ ಮಾಹಿತಿ ಸಿಕ್ಕಿದೆ. ರಾಜ್ಯದಲ್ಲಿ ಇವತ್ತು ಎಟಿಎಂ ಸರ್ಕಾರ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ.
ಇದು ತೆಲಂಗಾಣದ ಚುನಾವಣೆಗೆ ಸಂಗ್ರಹಿಸಲಾದ ಹಣ ಎನ್ನಲಾಗುತ್ತಿದೆ. ಕೆಲವು ಅಧಿಕಾರಿಗಳೇ ಈ ಹಿಂದೆ ರಾಜ್ಯಪಾಲರಿಗೆ ಕಮಿಷನ್ ಬಗ್ಗೆ ದೂರು ಕೊಟ್ಟಿದ್ದರು. ನಾವು ಚುನಾವಣೆ ಹೊತ್ತಲ್ಲೇ ಇದು ಎಟಿಎಂ ಸರಕಾರ ಅಂದಿದ್ದೆವು ಎಂದರು.
ರಾಜ್ಯದಲ್ಲಿ ಆಡಳಿತ ಹಳಿ ತಪ್ಪಿದೆ ಅನ್ನೋದಕ್ಕೆ ಸಾಕ್ಷಿ ಇದು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವುದೇ ಕೆಲಸಕ್ಕೆ ಹಿಂಜರಿಯಲ್ಲ. ಈಗಾಗಲೇ ಎರಡು ಗುತ್ತಿಗೆದಾರರು ಇವರ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಐಟಿಯವರು ಯಾರ ಒತ್ತಡದಿಂದಲೂ ದಾಳಿಗಳನ್ನು ಮಾಡುವುದಿಲ್ಲ. ಗುತ್ತಿಗೆದಾರರಿಗೆ ಅನುದಾನ ಬಿಡುಗಡೆಯಾದ ಬೆನ್ನಲ್ಲೇ ಹಣ ಸಿಕ್ಕಿರೋದು ಅನುಮಾನ ಹುಟ್ಟಿಸಿದೆ ಎಂದರು.
ಇದೊಂದು ಭ್ರಷ್ಟಾಚಾರಿಗಳ ಬೆಂಗಾವಲಿಗಿರುವ ಕಲೆಕ್ಷನ್ ಮತ್ತು ಎಟಿಎಂ ಸರ್ಕಾರ. ಸುಳ್ಳು ಹೇಳಿ, ಭರವಸೆ ಕೊಟ್ಟು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂದ ಅವರು, ಇಡೀ ಕರ್ನಾಟಕ ಕತ್ತಲೆಯಲ್ಲಿದೆ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ರೈತರಿಗೆ ವಿದ್ಯುತ್ ಇಲ್ಲ, ನಿದ್ದೆಗೆಟ್ಟರೂ ರೈತರಿಗೆ ಕರೆಂಟ್ ಇಲ್ಲ ಎಂದು ಕಿಡಿ ಕಾರಿದರು.
Posted by Vidyamaana on 2023-12-09 20:01:00 |
ಉಳ್ಳಾಲ, ಡಿ.9: ಸೋಮೇಶ್ವರ ಸೋಮನಾಥ ದೇವಸ್ಥಾನದಲ್ಲಿ ಅನ್ನ ಪ್ರಸಾದ ಸ್ವೀಕರಿಸಿ ಸಮುದ್ರದಲ್ಲಿ ನೀರಾಟಕ್ಕಿಳಿದ ಆರು ಮಂದಿ ಪಿಯು ವಿದ್ಯಾರ್ಥಿಗಳಲ್ಲಿ ಇಬ್ಬರು ನೀರುಪಾಲಾದ ಘಟನೆ ಇಂದು ಮಧ್ಯಾಹ್ನ ನಡೆದಿದೆ.
ಸೋಮೇಶ್ವರದ ಪರಿಜ್ಞಾನ ಪಿಯು ಕಾಲೇಜಿನ ದ್ವಿತೀಯ ಪಿಯು ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಾದ ಮಂಜೇಶ್ವರ, ಕುಂಜತ್ತೂರು ಅಡ್ಕ ನಿವಾಸಿ ಯಶ್ವಿತ್ (17) ಮತ್ತು ಕುಂಜತ್ತೂರು ಮಜಲ್ ನಿವಾಸಿ ಯುವರಾಜ್(17) ಸಮುದ್ರ ಪಾಲಾದವರು. ಶನಿವಾರ ಮಧ್ಯಾಹ್ನ ನಂತರ ಯಶ್ವಿತ್ ಮತ್ತು ಯುವರಾಜ್ ಸೇರಿ ಒಟ್ಟು ಆರು ವಿದ್ಯಾರ್ಥಿಗಳು ಸೋಮನಾಥ ದೇವಸ್ಥಾನದಲ್ಲಿ ಅನ್ನ ಪ್ರಸಾದ ಸ್ವೀಕರಿಸಿ ಸಮೀಪದ ಕಡಲ ಕಿನಾರೆಯಲ್ಲಿ ನೀರಾಟಕ್ಕಿಳಿದಿದ್ದಾರೆ. ಈ ವೇಳೆ ಯಶ್ವಿತ್ ಮತ್ತು ಯುವರಾಜನ್ನ ಕಡಲಿನ ರಕ್ಕಸ ಅಲೆಗಳು ಎಳೆದು ಹೋಗಿವೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಮತ್ತು ಈಜು ತಜ್ಞರು ಭೇಟಿ ನೀಡಿದ್ದು ನೀರು ಪಾಲಾದ ವಿದ್ಯಾರ್ಥಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಉಳ್ಳಾಲ ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Posted by Vidyamaana on 2024-05-16 20:27:47 |
ಚೆನ್ನೈ: ಪಾರಿಸ್ ಕಾರ್ನರ್ನಲ್ಲಿರುವ ಜನಪ್ರಿಯ ದೇವಸ್ಥಾನದ ಅರ್ಚಕರ ಮೇಲೆ ಅತ್ಯಾಚಾರದ ಆರೋಪ ಕೇಳಿಬಂದಿದೆ.
ಟಿವಿ ನಿರೂಪಕಿಯೊಬ್ಬರು ತನ್ನ ಮೇಲೆ ಅತ್ಯಾಚಾರ ನಡೆದಿರುವುದರ ಬಗ್ಗೆ ವಿರುಗಂಬಾಕ್ಕಂ (Virugambakkam) ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅತ್ಯಾಚಾರದ ಆರೋಪದ ಮೇಲೆ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಸದ್ಯಕ್ಕೆ ಇಬ್ಬರ ವಿಚಾರಣೆಯನ್ನು ನಡೆಸಲಾಗುತ್ತಿದೆ.
ಮಹಿಳೆ ನೀಡಿದ ದೂರಿನ ಪ್ರಕಾರ, ‘ಅರ್ಚಕ ಕಾರ್ತಿಕ್ ಮುನುಸಾಮಿ 2022ರ ಕೊನೆಯಲ್ಲಿ ಮತ್ತು 2023ರ ಆರಂಭದಲ್ಲಿ ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ. ತೀರ್ಥಕ್ಕೆ ಅಮಲು ಬರುವ ಔಷಧಿ ಹಾಕಿ ಅದನ್ನು ನೀಡಿದ ಬಳಿಕ ಅತ್ಯಾಚಾರ ನಡೆಸಿದ್ದಾರೆ. ಈ ಬಗ್ಗೆ ಅವರೊಂದಿಗೆ ಜಗಳವಾಡಿದ ನಂತರ ಆತ ನನಗೆ ತಾಳಿ ಕಟ್ಟಿ ಮದುವೆಯಾಗುವ ಮೂಲಕ ಒಟ್ಟಿಗೆ ಜೀವನ ಪ್ರಾರಂಭಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಮದುವೆಯಾಗಬೇಕೆಂದು ನಿನ್ನ ಹೊಟ್ಟೆಯಲ್ಲಿರುವ ಭ್ರೂಣವನ್ನು ಗರ್ಭಪಾತ ಮಾಡುವಂತೆ ಒತ್ತಾಯಿಸಿದರು. ಆದರೆ, ಹಣಕ್ಕಾಗಿ ಇನ್ನೊಬ್ಬ ಪುರುಷನೊಂದಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿ ಈಗ ಹಿಂಸೆ ನೀಡುತ್ತಿದ್ದಾರೆ ಎಂದು ಆ ಮಹಿಳೆ ದೂರು ನೀಡಿದ್ದಾರೆ
Posted by Vidyamaana on 2023-10-07 18:04:41 |
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ರಾಜ್ಯ ಪ್ರವಾಸಕ್ಕೆ ಅನುಮತಿ ನಿರಾಕರಿಸಲಾಗಿದೆ. ತಮ್ಮ ರಾಜ್ಯ ಪ್ರವಾಸ ಕುರಿತು ಸೆಪ್ಟೆಂಬರ್ ಆರಂಭದಲ್ಲಿಯೇ ಪಕ್ಷಕ್ಕೆ ಔಪಚಾರಿಕವಾಗಿ ಪ್ರಸ್ತಾಪಿಸಿದ್ದರೂ ಸಹ ಇಲ್ಲಿಯವರೆಗೂ ಪಕ್ಷದ ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ.
ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾಗಿರುವ ಯಡಿಯೂರಪ್ಪ ರಾಜ್ಯಾದ್ಯಂತ ಪ್ರವಾಸ ಮಾಡುವುದಾಗಿ ಸಾರ್ವಜನಿಕವಾಗಿ ಘೋಷಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಅವರು ಎಲ್ಲಾ 30 ಜಿಲ್ಲೆಗಳಿಗೆ ಭೇಟಿ ನೀಡಿ ಜಿಲ್ಲಾ ಮತ್ತು ತಾಲೂಕು ನಾಯಕರನ್ನು ಭೇಟಿ ಮಾಡಲು ಪ್ರಸ್ತಾಪಿಸಿದ್ದರು. ಆ ಮೂಲಕ ಸುಮಾರು ಏಳು ತಿಂಗಳಲ್ಲಿ ಲೋಕಸಭೆ ಚುನಾವಣೆಗೆ ಅವರನ್ನು ಪ್ರೋತ್ಸಾಹಿಸಲು ಉದ್ದೇಶಿಸಿದರು.
ಯಡಿಯೂರಪ್ಪ ವಿರುದ್ಧ ಬಿಜೆಪಿಯಲ್ಲಿ ಆಂತರಿಕ ಅಘೋಷಿತ ಶೀತಲ ಸಮರ ಇದೆ. ಅದೇ ಕಾರಣದಿಂದ ಪಕ್ಷದ ವರಿಷ್ಠರಿಂದ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ ಎಂದು ಮೂಲಗಳು ಹೇಳುತ್ತವೆ. ಆದಾಗ್ಯೂ, ಬಿಎಸ್ ವೈ ಹೊರಗೆ ಹೋಗಿ ಪ್ರಚಾರ ಮಾಡಿದರೆ ಮಾತ್ರ ಬಿಜೆಪಿ ಉಳಿದು ಹೆಚ್ಚಿನ ಸ್ಥಾನಗಳನ್ನು ಮರುಪಡೆಯುತ್ತದೆ. ವಿಶೇಷವಾಗಿ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಪಕ್ಷ ಅನುಮತಿ ನೀಡದಿದ್ದರೆ ಏನು ಮಾಡಲು ಸಾಧ್ಯ ಎಂದು ಅವರ ಆಪ್ತರೊಬ್ಬರು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದರು.
ಸತತ ಮೂರನೇ ವರ್ಷ ಯಡಿಯೂರಪ್ಪ ಅವರು ರಾಜ್ಯಾದ್ಯಂತ ಪ್ರವಾಸಕ್ಕೆ ತೆರಳಲು ಪ್ರಯತ್ನಿಸುತ್ತಿದ್ದಾರೆ ಆದರೆ ಪಕ್ಷವು ಅವರನ್ನು ಕಾಯುವಂತೆ ಕೇಳಿದೆ. ಪ್ರವಾಸದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಪಕ್ಷವು ಹಲವು ಕೆಲಸಗಳಲ್ಲಿ ನಿರತವಾಗಿದೆ, ಯಡಿಯೂರಪ್ಪ ಅವರು ಶೀಘ್ರದಲ್ಲೇ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. ಈ ಮಧ್ಯೆ ಯಡಿಯೂರಪ್ಪ ಅವರ ಪುತ್ರ ಬಿ ವೈ ವಿಜಯೇಂದ್ರ ಅವರ ಹೆಸರು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಕೇಳಿಬರುತ್ತಿದ್ದು, ಅದಾದ ನಂತರ ಯಡಿಯೂರಪ್ಪ ತಮ್ಮ ಪ್ರವಾಸವನ್ನು ಪ್ರಾರಂಭಿಸಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಆದರೆ ಕೆಲವು ಭ್ರಷ್ಟ ವ್ಯಕ್ತಿಗಳೊಂದಿಗೆ ವಿಜಯೇಂದ್ರ ಅವರ ಸಂಪರ್ಕದ ವಿಷಯವನ್ನು ಎತ್ತುತ್ತಿರುವ ಯಡಿಯೂರಪ್ಪ ಅವರನ್ನು ವಿರೋಧಿಸುವ ಗುಂಪು ಅದಕ್ಕೆ ಅಡ್ಡಗಾಲು ಹಾಕುತ್ತಿದೆ ಎನ್ನಲಾಗುತ್ತಿದೆ.
ಯಡಿಯೂರಪ್ಪ ಅವರ ಸಹಾಯಕರಲ್ಲಿ ಒಬ್ಬರಾಗಿದ್ದ ಉಮೇಶ್ ಮೇಲೆ ಇಡಿ ದಾಳಿ ನಡೆಸಿದಾಗ ಇದು ಬಹಿರಂಗವಾಗಿದೆ. ಯಡಿಯೂರಪ್ಪನವರ ವಿರೋಧಿ ಗುಂಪು ಕೂಡ ಅವರ ಮತ್ತೊಬ್ಬ ಪುತ್ರ ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿಸಲು ಪ್ರಯತ್ನಿಸುತ್ತಿದೆ. ಆದರೆ, ವಿಜಯೇಂದ್ರಗೆ ಉನ್ನತ ಹುದ್ದೆ ಸಿಕ್ಕರೆ ಸಂತಸ ತರಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.ಒಮ್ಮೆ ವಿಜಯೇಂದ್ರ ಪಕ್ಷದ ರಾಜ್ಯಾಧ್ಯಕ್ಷರಾದ ನಂತರ 2019 ರಲ್ಲಿ ಮಾಡಿದಂತೆ ರಾಜ್ಯಾದ್ಯಂತ ಪಕ್ಷದ ಪರ ಪ್ರಚಾರ ಕೈಗೊಳ್ಳುವುದು ಯಡಿಯೂರಪ್ಪ ಅವರ ಕರ್ತವ್ಯ ಎಂದು ಪಕ್ಷದ ಮೂಲಗಳು ಸೂಚಿಸಿವೆ.
Posted by Vidyamaana on 2023-08-14 03:17:04 |
ಬೆಳ್ತಂಗಡಿ: ಅನಾರೋಗ್ಯದಿಂದ ಬಳಲಿ ಚಿಕಿತ್ಸೆ ಪಡೆದು ಮನೆಯಲ್ಲಿದ್ದ ಯುವತಿ ಲೋ ಬಿಪಿ ಆಗಿ ಹೃದಯಾಘಾತಗಾಗಿ ಮೃತಪಟ್ಟ ಘಟನೆ ಆ 13 ರಂದು ನಡೆದಿದೆ.
ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಗಂಡಿಬಾಗಿಲು ಜಾತಿಮಾರು ನಿವಾಸಿ ರಾಜು ದೇವಾಡಿಗ ಮತ್ತು ಸರೋಜ ದಂಪತಿಗಳ ಮಗಳು ಸುಮಾ (19) ಮೃತಪಟ್ಟ ಯುವತಿಯಾಗಿದ್ದಾಳೆ.
ಮಂಗಳೂರಿನ ಎಜೆ ಆಸ್ಪತ್ರೆಯಲ್ಲಿ ಮೊದಲ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡುತಿದ್ದ ವಿದ್ಯಾರ್ಥಿನಿ ಸುಮ ಮನೆಗೆ ಬಂದಿದ್ದಳು. ಆಗಸ್ಟ್ 9 ರಂದು ಅನಾರೋಗ್ಯದ ಕಾರಣದಿಂದ ಸ್ಥಳೀಯ ಆಸ್ಪತ್ರೆಗೆ ತೆರಳಿ ಮಾತ್ರೆಗಳನ್ನು ಪಡೆದು ಮನೆಗೆ ತೆರಳಿದ್ದಳು. ನಂತರ ಆಗಸ್ಟ್11 ರಂದು ಮತ್ತೆ ಅನಾರೋಗ್ಯ ಜಾಸ್ತಿಯಾದ ಕಾರಣ ಮಂಗಳೂರು ಆಸ್ಪತ್ರೆಗೆ ಚಿಕಿತ್ಸೆಗೆ ಹೋಗಿದ್ದು ಗುಣಮುಖವಾಗಿರುವ ಕಾರಣ ತನ್ನ ಅಕ್ಕನ ಮನೆ ಬಳ್ಳಮಂಜಕ್ಕೆ ತೆರಳಿದ್ದು. ಆಗಸ್ಟ್ 13 ರಂದು ಸಂಜೆ ಮತ್ತೆ ಅಸ್ವಸ್ಥಗೊಂಡಿದ್ದು ಮಂಗಳೂರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಲೋ ಬಿಪಿ ಉಂಟಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
Posted by Vidyamaana on 2024-01-07 08:52:13 |
ಬೆಂಗಳೂರು : ಅಯೋಧ್ಯೆಯಲ್ಲಿ ಜನವರಿ 22 ರಂದು ರಾಮ ಮಂದಿರ ಉದ್ಘಾಟನೆಗೊಳ್ಳಲಿದೆ.ಅಂದು ಶ್ರೀ ರಾಮನ ವಿಗ್ರಹ ಪ್ರತಿಷ್ಟಾಪನೆ ಆಗಲಿದ್ದು ಅದೇ ಸಮಯದಲ್ಲಿ ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ.ಜನವರಿ 22 ರಂದು ಮಧ್ಯಾಹ್ನ 12 ಗಂಟೆ 29 ನಿಮಿಷ 8 ಸೆಕೆಂಡ್ ನಿಂದ 12 ಗಂಟೆ 32 ನಿಮಿಷಗಳವರೆಗೆ ಮಹಾಮಂಗಳಾರತಿ ಹಾಗೂ ವಿಶೇಷ ಪೂಜೆ ನೆರವೇರಿಸುವಂತೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದರು.ಆ ಸಮಯದಲ್ಲಿ ಶ್ರೀ ರಾಮ ವಿಗ್ರಹ ಪ್ರತಿಷ್ಟಾಪನೆ ನಡೆಯಲಿದೆ.