Posted by vidyamaana on 2024-06-30 21:58:04 |
ಉಪ್ಪಿನಂಗಡಿ: ಕಡಬ ತಾಲ್ಲೂಕು ಕೊಯಿಲ ಗ್ರಾಮದ ಕೆಮ್ಮಾರ ಎಂಬಲ್ಲಿ ಭಾನುವಾರ ಮನೆಯೊಳಗೆ ಬೆಂಕಿ ಹೊತ್ತಿಕೊಂಡು ಮನೆಯ ಒಳ ಭಾಗ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಮನೆ ಭಾಗಶಃ ಹಾನಿಗೊಂಡಿದ್ದು, ಮನೆಯವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೆಮ್ಮಾರ ಶಾಲೆ ಬಳಿಯ ನಿವಾಸಿ ದಿ.ಇಬ್ರಾಹಿಂ ಎಂಬುವರ ಪುತ್ರ ಅಬ್ದುಲ್ ರಹಿಮಾನ್ ಅವರ ಮನೆಯಲ್ಲಿ ಅವಘಡ ಸಂಭವಿಸಿದೆ.
ಮನೆಯ ಮಾಸ್ಟರ್ ಬೆಡ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮನೆಯೊಳಗೆ ಆವರಿಸಿದೆ. ಮನೆಯೊಳಗೆ ಇದ್ದ ಕಪಾಟು, ಮಂಚ, ಕಿಟಕಿ, ಬಾಗಿಲು, ಫ್ರಿಜ್, ವಾಷಿಂಗ್ ಮೆಸಿಷಿನ್, ಬಟ್ಟೆಗಳು, ಗೃಹೋಪಯೋಗಿ ವಸ್ತುಗಳು, ಆಹಾರ ಸಾಮಗ್ರಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.
ಬೆಂಕಿಯ ತಾಪಕ್ಕೆ 2 ಕಡೆ ಗೋಡೆ ಬಿರುಕು ಬಿಟ್ಟಿದೆ. ಬೆಂಕಿ ಕಾಣಿಸಿಕೊಂಡ ಕೋಣೆಯಲ್ಲಿ ಗ್ರಾನೈಟ್ ಮತ್ತು ಅಡುಗೆ ಕೋಣೆಯಲ್ಲಿ ನೆಲದ ಟೈಲ್ಸ್ ಸಿಡಿದಿದೆ. ಇದರಿಂದಾಗಿ ಸುಮಾರು ₹ 35 ಲಕ್ಷ ನಷ್ಟ ಉಂಟಾಗಿದೆ ಎಂದು ಅಬ್ದುಲ್ ರಹಿಮಾನ್ ಅವರು ಕಂದಾಯ ಇಲಾಖೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಮನೆಯಲ್ಲಿ ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ಮಾತ್ರ ಇದ್ದು, ಮನೆಯೊಳಗೆ ಹೊಗೆ ತುಂಬುವುದನ್ನು ಗಮನಿಸಿ ಮನೆಯಿಂದ ಹೊರ ಬಂದು ಬೊಬ್ಬೆ ಹಾಕಿ ಪಕ್ಕದ ಮನೆಯವರನ್ನು ಕರೆದಿದ್ದಾರೆ. ಪಕ್ಕದ ಮನೆಯವರು ಸ್ಥಳೀಯರಿಗೆ ಕರೆ ಮಾಡಿದ್ದಾರೆ. ಅಬ್ದುಲ್ ರಹಿಮಾನ್, ಪತ್ನಿ, ಮಕ್ಕಳು ಪತ್ನಿಯ ತವರು ಮನೆಗೆ ಹೋಗಿದ್ದರು. ವರ್ಷದ ಹಿಂದೆ ಮನೆ ನಿರ್ಮಿಸಲಾಗಿತ್ತು.
ಬೆಂಕಿ ಅವಘಡದ ಮಾಹಿತಿ ತಿಳಿದ ಸಾಮಾಜಿಕ ಕಾರ್ಯಕರ್ತರಾದ ಸಲೀಕತ್, ಅಬೂಬಕ್ಕರ್, ರಿಯಾಝ್, ಜುನೈದ್ ಮನೆಯೊಳಗೆ ಪ್ರವೇಶಿಸಿ
ವಿದ್ಯುತ್ ಸಂಪರ್ಕ, ಗ್ಯಾಸ್ ಸಂಕರ್ಪ ಕಡಿತಗೊಳಿಸಿದರು. ಪುತ್ತೂರಿನಿಂದ ಬಂದ ಅಗ್ನಿ ಶಾಮಕ ಸಿಬ್ಬಂದಿ ಬೆಂಕಿಯನ್ನು ಸಂಪೂರ್ಣವಾಗಿ ನಂದಿಸಿದರು.
ಘಟನಾ ಸ್ಥಳಕ್ಕೆ ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಸ್, ಸದಸ್ಯ ನಝೀರ್ ಪೂರಿಂಗ, ಆತೂರು ಬದ್ರಿಯಾ ಮಸೀದಿ ಖತೀಬ್ ಜುನೈದ್ ಜಿಫ್ರಿ ತಂಙಳ್ ಭೇಟಿ ನೀಡಿದರು. ಕೊಯಿಲ ಗ್ರಾಮಕರಣಿಕ ಶೇಷಾದ್ರಿ ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ನಾನು ಕೋಣೆಯೊಂದರಲ್ಲಿ ಕೆಲಸದಲ್ಲಿ ನಿರತಳಾಗಿದ್ದೆ. ತುಂತುರು ಮಳೆಯಾಗುತ್ತಿತ್ತು. ಭಾರಿ ಸಿಡಿಲಿನ ಶಬ್ದ ಕೇಳಿಸಿತ್ತು. ಸ್ವಲ್ಪ ಹೊತ್ತಿನ ಬಳಿಕ ಮನೆಯೊಳಗೆ ಹೊಗೆ ತುಂಬತೊಡಗಿತು. ಮನೆಯಿಂದ ಹೊರ ಬರುವುದಕ್ಕೂ ದಾರಿ ಕಾಣುತ್ತಿರಲಿಲ್ಲ ಎಂದು ಅಬ್ದುಲ್ ರಹಿಮಾನ್ ಅವರ ತಾಯಿ ಸಕೀನ ತಿಳಿಸಿದರು.
ಉಪ್ಪಿನಂಗಡಿ ಸಮೀಪದ ಕೆಮ್ಮಾರದಲ್ಲಿ ಮನೆ ಭಾಗಶಃ ಬೆಂಕಿಗೆ ಆಹುತಿಯಾಗಿದ್ದು ಕಂದಾಯ ಇಲಾಖೆ ಅಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿದರು
Posted by Vidyamaana on 2023-10-25 07:20:53 |
ಶೂನ್ಯದಿಂದ ಪ್ರಾರಂಭಿಸಿ ದೈತ್ಯಾಕಾರದ ಕನಸುಗಳನ್ನು ನಂಬಲಾಗದಂತೆ ನನಸಾಗಿಸಿದ ಓರ್ವ ವ್ಯಕ್ತಿಯೇ ಮೂತೇದತ್ ಪಂಜನ್ ರಾಮಚಂದ್ರನ್. ಇವರು 14,000 ಕೋಟಿ ರೂಪಾಯಿ ಮೌಲ್ಯದ ಕಂಪನಿಯಾಗಿ ಬೆಳೆದು ನಿಂತ ಜ್ಯೋತಿ ಲ್ಯಾಬೋರೇಟರೀಸ್ ಲಿಮಿಟೆಡ್ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದಾರೆ.ಬಹುಶಃ ನಿಮಗೆ ಪಂಜನ್ ರಾಮಚಂದ್ರನ್ ಅಂದರೆ ಯಾರು ಎಂದು ತಿಳಿದಿರಲಿಕ್ಕಿಲ್ಲ.
ಆದರೆ ಬಿಳಿ ಬಣ್ಣದ ಉಡುಪುಗಳಲ್ಲಿ ನಿಷ್ಕಳಂಕ ಹೊಳಪು ಮತ್ತು ಬಿಳುಪನ್ನು ನೀಡುವ "ಉಜಾಲಾ ಬ್ಲೂ" ಅಂದರೆ ಥಟ್ಟನೆ ನೀಲಿ ಬಣ್ಣ ಪುಟ್ಟ ಬಾಟಲಿ ನಮ್ಮ ಕಣ್ಣಮುಂದೆ ಹಾದುಹೋಗುತ್ತದೆ. ಇದಲ್ಲದೇ ಜ್ಯೋತಿ ಲ್ಯಾಬೋರೇಟರೀಸ್ ಲಿಮಿಟೆಡ್ ನ ಹಲವು ಉತ್ಪನ್ನಗಳು ಜನಪ್ರಿಯವಾಗಿದೆ.
ಲಕ್ಷಾಂತರ ಯುವ ಉದ್ಯಮಿಗಳಿಗೆ ಉದಾಹರಣೆ
ಜ್ಯೋತಿ ಲ್ಯಾಬೋರೇಟರೀಸ್ ಲಿಮಿಟೆಡ್ ಹುಟ್ಟು ಹಾಕಿದ ರಾಮಚಂದ್ರನ್ ಲಕ್ಷಾಂತರ ಯುವ ಉದ್ಯಮಿಗಳಿಗೆ ಉದಾಹರಣೆಯಾಗಿದ್ದಾರೆ. ಎಂ ಪಿ ರಾಮಚಂದ್ರನ್ ಅವರು ಕೇವಲ 5000 ರೂ ಸಾಲ ಪಡೆದು ವ್ಯವಹಾರ ಪ್ರಾರಂಭಿಸಿ, ತಮ್ಮ ಕಠಿಣ ಪರಿಶ್ರಮ ಮತ್ತು ತೀಕ್ಷ್ಣವಾದ ವ್ಯವಹಾರದ ಚಾತುರ್ಯದಿಂದ ಇಂದು ಬಹುಕೋಟಿ ಕಂಪನಿಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಿದ್ದಾರೆ.ಜ್ಯೋತಿ ಲ್ಯಾಬೋರೇಟರೀಸ್ ಲಿಮಿಟೆಡ್ ಇಂದು ಉಜಾಲಾ ಲಿಕ್ವಿಡ್ ಕ್ಲೋತ್ ವೈಟ್ನರ್ ಮತ್ತು ಮ್ಯಾಕ್ಸೋ(Maxo) ಸೊಳ್ಳೆ ನಿವಾರಕ ಲಿಕ್ವಿಡ್, ಎಕ್ಸೋ, ಟಿ-ಶೈನ್ ಹೀಗೆ ಹತ್ತು ಹಲವು ಉತ್ಪನಗಳನ್ನು ಉತ್ಪದಿಸುತ್ತಿದ್ದು, ಅಂದು ತಮ್ಮ ಸ್ವಂತ ತಾತ್ಕಾಲಿಕ ಕಾರ್ಖಾನೆಯನ್ನು ಸ್ಥಾಪಿಸಲು ರಾಮಚಂದ್ರನ್ ಅವರು ತನ್ನ ಸಹೋದರನಿಂದ 5000 ರೂ ಸಾಲವನ್ನು ಪಡೆದು, ಇಂದು ಅದನ್ನು 13,583 ಕೋಟಿ ರೂಪಾಯಿ ಮಾರುಕಟ್ಟೆ ಬಂಡವಾಳವನ್ನು ಹೊಂದಿರುವ ಕಂಪನಿಯನ್ನಾಗಿ ಪರಿವರ್ತಿಸಿದ್ದಾರೆ.
ಕೇರಳದವರಾದ ರಾಮಚಂದ್ರನ್ ಅವರು ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದರು. ಶಾಲಾ ಶಿಕ್ಷಣದ ಬಳಿಕ ತ್ರಿಶೂರ್ನ ಸೇಂಟ್ ಥಾಮಸ್ ಕಾಲೇಜಿನಲ್ಲಿ ತಮ್ಮ ಬಿ.ಕಾಂ ಪದವಿ ಪಡೆದುಕೊಂಡರು. ಮುಂದೆ ಓದಬೇಕೆಂಬ ಅತಿಯಾಸೆ ಇದ್ದರೂ ಆರ್ಥಿಕ ಸಮಸ್ಯೆಯಿಂದಾಗಿ ರಾಮಚಂದ್ರನ್ ಅವರು ಅಕೌಂಟೆಂಟ್ ಆಗಿ ಕೆಲಸ ಮಾಡಲು ಪ್ರಾರಂಭಿಸಿದರು.ಕೆಲ ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿದರೂ ಆ ಸಂಸ್ಥೆ ಸ್ಥಗಿತಗೊಂಡ ಕಾರಣ ಹೊಸ ಉದ್ಯೋಗವನ್ನು ಹುಡುಕುವ ಬದಲು ಹೊಸದಾಗಿರುವ ಮತ್ತು ಸ್ವಂತವಾಗಿರುವ ವ್ಯಾಪಾರ ಪ್ರಾರಂಭಿಸಬೇಕು ಅಂದುಕೊಂಡರು. ರಾಮಚಂದ್ರನ್ ಬಟ್ಟೆಗಾಗಿ ವೈಟ್ನರ್ ತಯಾರಿ ಮಾಡಲು ನಿರ್ಧರಿಸಿ ಇದಕ್ಕಾಗಿ ಅವರು ತಮ್ಮ ಅಡುಗೆಮನೆಯಲ್ಲಿ ಪ್ರಯೋಗವನ್ನು ಪ್ರಾರಂಭಿಸಿದರು, ಆದರೆ ಅವರಿಗೆ ಯಶಸ್ಸು ಸಿಗಲಿಲ್ಲ.
ಹೀಗಿರುವ ಒಂದು ದಿನ ರಾಮಚಂದ್ರನ್ ಅವರು ಕೆಮಿಕಲ್ ಇಂಡಸ್ಟ್ರಿ ಮ್ಯಾಗಜೀನ್ ಓದುತ್ತಿರುವಾಗ, ಅದರಲ್ಲಿ ಪರ್ಪಲ್ ಡೈ ಯಿಂದ ಜವಳಿ ತಯಾರಕರು ಸಾಧ್ಯವಾದಷ್ಟು ಬಿಳಿ ಮತ್ತು ಬ್ರೈಟ್ ಕಲರ್ ಪಡೆಯಬಹುದು ಎಂದು ಬರೆದಿತ್ತು. ಇದಾದ ನಂತರ, ರಾಮಚಂದ್ರನ್ ಒಂದು ವರ್ಷ ನೇರಳೆ ಬಣ್ಣಗಳ ಪ್ರಯೋಗವನ್ನು ಮುಂದುವರೆಸಿದರು.
ಜೀವನ ಬದಲಾಯಿಸಿದ ಉಜಾಲಾ
"ಉಜಾಲಾ" ಅವರ ಜೀವನವನ್ನು ಬದಲಾಯಿಸುವ ಈ ಕಥೆಯು 1983 ರಲ್ಲಿ ಪ್ರಾರಂಭವಾಯಿತು. ಅದೇ ವರ್ಷ ರಾಮಚಂದ್ರನ್ ಅವರು ಕೇರಳದ ತ್ರಿಶೂರ್ನಲ್ಲಿ ತಮ್ಮ ಕುಟುಂಬದ ಜಮೀನಿನ ಸ್ವಲ್ಪ ಭಾಗದಲ್ಲಿ ತಾತ್ಕಾಲಿಕ ಕಾರ್ಖಾನೆಯೊಂದು ಸ್ಥಾಪಿಸಿದರು. ತಮ್ಮ ಕಂಪನಿಗೆ ಜ್ಯೋತಿ ಲ್ಯಾಬೋರೇಟರೀಸ್ ಎಂದು ತಮ್ಮ ಮಗಳು ಜ್ಯೋತಿಯ ಹೆಸರಿರಿಸಿದರು.
ಉಜಾಲಾ ನಿಜಕ್ಕೂ ನವೀನ ಪರಿಕಲ್ಪನೆಯಾಗಿ ಬಡವರಿಂದ ಸಿರಿವಂತರವರೆಗೆ ಇದು ಆಕರ್ಷಿಸಿತು. ಮೊದಲು 5 ಮಾರಾಟ ಮಹಿಳೆಯರ ಮೂಲಕ ಮನೆಯಿಂದ ಮನೆಗೆ ಮಾರಾಟ ಆರಂಭಿಸಿ ಉಜಾಲಾವನ್ನು ಹಲವು ಪ್ರಯತ್ನದ ಬಳಿಕ ಅಂಗಡಿಗಳಲ್ಲಿ ಮಾರಾಟಕ್ಕೆ ಸ್ವೀಕರಿಸಲಾಯಿತು ಮತ್ತು ವಾಣಿಜ್ಯಿಕವಾಗಿ ವಿಸ್ತರಿಸಲಾಯಿತು. ಉಳಿದ ಕಥೆ ಇತಿಹಾಸವಾಯಿತು!
Posted by Vidyamaana on 2024-04-08 20:29:36 |
ಕರೀಂನಗರ: ತಂದೆ ತಾಯಿಗೆ (Parents) ಮಕ್ಕಳ ಮೇಲೆ ಹಲವು ನಿರೀಕ್ಷೆಗಳಿರುತ್ತವೆ. ಅವರಿಗೆ ಒಳ್ಳೆಯ ವಿದ್ಯಾಭ್ಯಾಸ (Education) ಕೊಡಿಸಬೇಕು, ವಿದ್ಯಾವಂತರನ್ನಾಗಿ ಮಾಡಿ ಒಳ್ಳೆ ಕೆಲಸ ಸಿಗುವಂತೆ ಮಾಡಬೇಕೆನ್ನುವ ಕನಸಿರುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ತಂದೆ ತಾಯಿ ಪ್ರೀತಿಯನ್ನೇ (Love) ಕಡೆಗಣಿಸಿ ತಾವೂ ಪ್ರೀತಿಸಿದ ಹುಡುಗಿ, ಹುಡುಗರ ಜೊತೆ ಹೋಗಿ ಮದುವೆಯಾಗುತ್ತಿದ್ದಾರೆ.ಆದರೆ ಇದರಿಂದ ಪೋಷಕರು ಅನುಭವಿಸುವ ಮಾನಸಿಕ ಯಾತನೆ ಹೇಳತೀರದು. ಇಂತಹದ್ದೇ ಘಟನೆ ತೆಲಂಗಾಣದ (Telangana) ಸಿರಿಸಿಲ್ಲದಲ್ಲಿ ನಡೆದಿದೆ.
ಪ್ರೀತಿಸಿದ ಯುವಕ ಜೊತೆ ಪರಾರಿಯಾದ ಯುವತಿ
ರಾಜಣ್ಣ ಸಿರಿಸಿಲ್ಲ ನಿವಾಸಿ ಮುರಳಿ ಎಂಬಾತನ ಮಗಳು ಬಿ.ಟೆಕ್ ಓದುತ್ತಿದ್ದಳು. ಮುರಳಿ ತನ್ನ ಮಗಳನ್ನ ಕಷ್ಟಪಟ್ಟು ಸುತ್ತಿದ್ದರು. ಆದರೆ ಮನೆಯವರಿಗೆ ದ್ರೋಹ ಮಾಡಿ ಆಕೆ ತಾನು ಪ್ರೀತಿಸಿದ ಯುವಕನನ್ನು ಮದುವೆಯಾಗಿ ದೂರ ಹೋಗಿದ್ದಾಳೆ. ಈ ಮನನೊಂದ ಪೋಷಕರು ತನ್ನ ಮಗಳು ಸತ್ತಿದ್ದಾಳೆಂದು ಶ್ರದ್ದಾಂಜಲಿ ಫ್ಲೆಕ್ಸಿ ಮಾಡಿ ಮನೆಯ ಮುಂಭಾಗದ ಗೋಡೆಯ ಮೇಲೆ ಹಾಕಿದ್ದಾರೆ.
Posted by Vidyamaana on 2024-02-05 07:28:22 |
ಬೆಂಗಳೂರು, ಫೆ.5: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಣಿಜ್ಯ ಮಳಿಗೆ ಶುಲ್ಕ ಮರುಪಾವತಿಯಲ್ಲಿ 11.81 ಕೋಟಿ ಹಗರಣ ಸಂಬಂಧ BMTC ಲೆಕ್ಕಪತ್ರ ವಿಭಾಗದ ಮುಖ್ಯ ಲೆಕ್ಕಾಧಿಕಾರಿ ಅಬ್ದುಲ್ ಖುದ್ದುಸ್ ಅವರನ್ನು ವಿಲ್ಸನ್ ಗಾರ್ಡನ್ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಣಿಜ್ಯ ಮಳಿಗೆ ಶುಲ್ಕ ಮರುಪಾವತಿಯಲ್ಲಿ 11.81 ಕೋಟಿ ಹಗರಣ ಸಂಬಂಧ FIR ವಿಳಂಬದ ಬಗ್ಗೆ ಟಿವಿ9 ಸುದ್ದಿ ಪ್ರಸಾರ ಮಾಡಿತ್ತು. ಬಳಿಕ BMTC ಮುಖ್ಯ ಲೆಕ್ಕಾಧಿಕಾರಿ ಅಬ್ದುಲ್ ಖುದ್ದುಸ್ ಹಾಗೂ ಇತರ ಅಧಿಕಾರಿಗಳ ವಿರುದ್ಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ FIR ದಾಖಲಾಗಿತ್ತು.ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವಾಣಿಜ್ಯ ಮಳಿಗೆ ಶುಲ್ಕ ಮರುಪಾವತಿಯಲ್ಲಿ 11.81 ಕೋಟಿ ಹಗರಣ ನಡೆದಿತ್ತು. ಅಸಿಸ್ಟೆಂಟ್ ಸೆಕ್ಯುರಿಟಿ ಮತ್ತು ವಿಜಿಲೆನ್ಸ್ ಅಧಿಕಾರಿ ರಮ್ಯಾ ದೂರಿನ ಅನ್ವಯ FIR ದಾಖಲಾಗಿತ್ತು. ಅಲ್ಲದೆ, ಮುಖ್ಯ ಲೆಕ್ಕಾಧಿಕಾರಿ ಆಗಿದ್ದ ಅಬ್ದುಲ್ ಖುದ್ದುಸ್ ಅವರನ್ನು ನಿನ್ನೆ ಪೊಲೀಸರು ಬಂಧಿಸಿದ್ದಾರೆ.ವಂಚನೆಯಲ್ಲಿ ಶಾಮೀಲಾದ ಇತರರ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜನವರಿ 19 ರಂದು ಅಬ್ದುಲ್ ಖುದ್ದುಸ್ ಅವರನ್ನು ಅಮಾನತು ಮಾಡಿ ಕೆಎಸ್ಆರ್ಡಿಸಿ ಎಂಡಿ ಆದೇಶಿಸಿದ್ದರು. ಆದರೂ ಪೊಲೀಸರು ಎಫ್ಐಆರ್ ದಾಖಲಿಸಿರಲಿಲ್ಲ. ಈ ಬಗ್ಗೆ ಟಿವಿ9 ವರದಿ ಪ್ರಕಟಿಸಿದ ಬೆನ್ನಲ್ಲೇ ಎಚ್ಚೆತ್ತ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಚುನಾವಣಾ ಶಿರಸ್ತೇದಾರ್ ಪೂರ್ಣಿಮಾ ಅಮಾನತ್ತು
ರಾಮನಗರ: ಜಿಲ್ಲೆಯ ಕನಕಪುರ ತಾಲೂಕು ಕಚೇರಿಯ ಚುನಾವಣಾ ಶಾಖೆ ಕೊಠಡಿಯಲ್ಲಿ ಡಿ ಗ್ರೂಪ್ ಸಿಬ್ಬಂದಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ಸಂಬಂಧ ಶಿಸ್ತು ಪ್ರಾಧಿಕಾರ ಅಧಿಕಾರಿ ಆಮ್ಲನ್ ಆದಿತ್ಯ ಬಿಸ್ವಾಸ್ ಅವರು ಕನಕಪುರ ತಾಲೂಕು ಕಚೇರಿಯಲ್ಲಿ ಚುನಾವಣಾ ಶಿರಸ್ತೇದಾರ್ ಆಗಿದ್ದ ಪೂರ್ಣಿಮಾ ಅವರನ್ನು ಅಮಾನತು ಮಾಡಿ ಆದೇಶಿಸಿದ್ದಾರೆ.ಚುನಾವಣಾ ಶಾಖಾ ಸಿಬ್ಬಂದಿ ಸುರೇಶ್ (49) ಆತ್ಮಹತ್ಯೆ ಎಂಬವರು ಕನಕಪುರ ತಾಲೂಕು ಕಚೇರಿಯ ಚುನಾವಣಾ ಶಾಖೆ ಕೊಠಡಿಯಲ್ಲಿ ನೇಣುಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಆತ್ಮಹತ್ಯೆಗೂ ಮುನ್ನ ಸುರೇಶ್ ಅವರು ಬರೆದಿಟ್ಟಿದ್ದ ಡೆತ್ನೋಟ್ನಲ್ಲಿ ಶಿರಸ್ತೇದಾರ್ ಪೂರ್ಣಿಮಾ ಕಿರುಕುಳ ನೀಡಿದ್ದಾಗಿ ಉಲ್ಲೇಖಿಸಿದ್ದರು.
ಪ್ರಕರಣ ಸಂಬಂಧ ಪೂರ್ಣಿಮಾ ಅವರನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಪೊಲೀಸರು ಪೂರ್ಣಿಮಾ ಅವರನ್ನು ವಶಕ್ಕೆ ಪಡೆದ ಬೆನ್ನೆಲೆ ಶಿಸ್ತು ಇಲಾಖೆಯು ಪೂರ್ಣಿಮಾ ಅವರನ್ನು ಅಮಾನತು ಮಾಡಿ ಆದೇಶಿಸಿದೆ.
Posted by Vidyamaana on 2023-06-02 14:25:24 |
ಬೆಂಗಳೂರು : ಕಾಂಗ್ರೆಸ್ ಗ್ಯಾರಂಟಿ ಘೋಷಣೆ ವೇಳೆ ಸಿಎಂ ಸಿದ್ದರಾಮಯ್ಯ ಅವರು ರಫ್ & ಟಫ್ ಆಗಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದರು.ಸುದ್ದಿಗೋಷ್ಠಿಯ ವೇಳೆ ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಕುರಿತು ಪತ್ರಕರ್ತರೊಬ್ಬರು ಈ ಯೋಜನೆ ದುಡಿಯುವ ವರ್ಗ, ಸರ್ಕಾರಿ ಉದ್ಯೋಗಿ ಮಹಿಳೆಯರಿಗೆ ಸಿಗುತ್ತದೆಯಾ ಎಂದು ಪ್ರಶ್ನಿಸಿದರು. ಉತ್ತರಿಸಿದ ಸಿಎಂ, ”ಎಲ್ಲರಿಗೂ ಸಿಗುತ್ತದೆ, ನನ್ನ ಹೆಂಡತಿಗೂ ಸಿಗುತ್ತದೆ” ಎಂದು ಉತ್ತರಿಸಿದರು. ಈ ವೇಳೆ ಉಪಸ್ಥಿತರಿದ್ದ ಸಚಿವರೆಲ್ಲರೂ ಗೊಳ್ಳನೇ ನಕ್ಕು ನಗೆ ಗಡಲಲ್ಲಿ ತೇಲಾಡಿದರು.
ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿನಿಯರನ್ನೊಳಗೊಂಡಂತೆ ಬಸ್ ನಲ್ಲಿ ಉಚಿತ ಪ್ರಯಾಣ ಜೂನ್ 11 ರಿಂದ ಜಾರಿ ಮಾಡುತ್ತೇವೆ. ಕರ್ನಾಟಕದೊಳಗೆ ಪ್ರಯಾಣಿಸಲು ಅನ್ವಯ. ರಾಜ್ಯದ ಒಳಗಡೆ ಎಸಿ, ರಾಜಹಂಸ ಬಸ್ ಹೊರತುಪಡಿಸಿ ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್ ನಲ್ಲೂ ಫ್ರೀ ಆಗಿ ಪ್ರಯಾಣ ಮಾಡಬಹುದು. ಕೆಎಸ್ ಆರ್ ಟಿಸಿ ಯಲ್ಲಿ ಪುರುಷರಿಗೆ 50% ಮೀಸಲಿಡುತ್ತೇವೆ, ಇದು ಬಿಎಂಟಿಸಿ ಬಸ್ ನಲ್ಲಿ ಅನ್ವಯವಾಗುವುದಿಲ್ಲ ಎಂದರು.
Posted by Vidyamaana on 2024-05-24 17:22:27 |
ಬೆಳ್ತಂಗಡಿ : ಅಕ್ರಮ ಗಣಿಗಾರಿಕೆ ಮೇಲೆ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಮೇ.18 ರಂದು ಸಂಜೆ ದಾಳಿ ಮಾಡಿದ ಪ್ರಕರಣ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಮೇ.18 ರಂದು ಒಂದು ಪ್ರಕರಣ ದಾಖಲಿಸಿದ್ದರು. ಬೆಳ್ತಂಗಡಿ ಪೊಲೀಸರು ಮತ್ತು ಬೆಳ್ತಂಗಡಿ ತಹಶೀಲ್ದಾರ್ ನೀಡಿದ ವರದಿಯ ಆಧಾರದಲ್ಲಿ ದಕ್ಷಿಣ ಕನ್ನಡ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಮೇ.20 ರಂದು ಸ್ಥಳ ಮಹಜರು ಮಾಡಿ ಪ್ರಮೋದ್ ಗೌಡ ದಿಡುಪೆ, ಶಶಿರಾಜ್ ಶೆಟ್ಟಿ , ಸೂರಪ್ಪ ಪೂಜಾರಿ ಸೇರಿ ಮೂವರ ವಿರುದ್ಧ ಬೆಳ್ತಂಗಡಿ ನ್ಯಾಯಾಲಯದಲ್ಲಿ ಮೇ.23 ರಂದು ಪ್ರಕರಣ ದಾಖಲಿಸಿದ್ದಾರೆ.
Posted by Vidyamaana on 2024-02-29 21:43:42 |
ಪುತ್ತೂರು: ರಾಜ್ಯ ಸರಕಾರವು ಕೃಷಿಕರ, ರೈತರ ಪರವಾಗಿದೆ, ಈ ಕಾರಣಕ್ಕೆ ಸರಕಾರ ಕೃಷಿಕರಿಗೆ ಸಹಕಾರಿ ಸಂಘಗಳ ಮೂಲಕ ನೀಡುತ್ತಿಲ್ಲ ಶೂನ್ಯ ಬಡ್ಡಿದರದಲ್ಲಿ ನೀಡುತ್ತಿದ್ದ ಅಲ್ಪಾವಧಿ ಸಾಲದ ಮೊತ್ತ ೩ ಲಕ್ಷದಿಂದ ೫ ಲಕ್ಷಕ್ಕೆ ಏರಿಸಿತ್ತು, ಶೇ. ೩ ಬಡ್ಡಿದರದಲ್ಲಿ ಕೃಷಿಕರಿಗೆ ದೊರೆಯುತ್ತಿದ್ದ ಸಾಲದ ಮೊತ್ತವನ್ನು ೧೦ ರಿಂದ ೧೫ ಲಕ್ಷಕ್ಕೆ ಏರಿಕೆ ಮಾಡಿದೆ ಆದರೆ ಈ ಎರಡೂ ಯೋಜನೆಗಳು ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಅನುಷ್ಠಾನವಾಗಿಲ್ಲ ಇದುವರೆಗೂ ಯಾವುದೇ ಕೃಷಿಕರಿಗೆ ಯೋಜನೆಯ ತಲುಪಿಲ್ಲ ಎಂದು ಪುತ್ತೂರು ಶಾಸಕರಾದ ಅಶೋಕ್ ರೈಯವರು ವಿಧಾನಸಭಾ ಅಧಿವೇಶನದಲ್ಲಿ ಸರಕಾರದ ಗಮನಕ್ಕೆ ತಂದರು.
ಅಧಿವೇಶನದಲ್ಲಿ ಮಾತನಾಡಿದ ಶಾಸಕರು ಸರಕಾರ ಕೃಷಿಕರ ಅಥವಾ ರೈತರಿಗೆ ನೆರವಾಗಲು ಈ ಯೋಜನೆಯನ್ನು ಜಾರಿಗೆ ತಂದಿದೆ. ಯಾವುದೇ ಸರಕಾರ ನೀಡಿದ ಸೌಲಭ್ಯವನ್ನು ರಾಜ್ಯ ಸರಕಾರ ಜಾರಿಗೆ ತಂದಿದೆ. ಆದರೆ ಈ ಯೋಜನೆಯಿಂದ ಕರಾವಳಿ ಜಿಲ್ಲೆಯ ಕೃಷಿಕರು ವಂಚಿತರಾಗಿದ್ದಾರೆ. ಉಭಯ ಜಿಲ್ಲೆಗಳ ಯಾವುದೇ ಸಹಕಾರಿ ಸಂಘಗಳಲ್ಲಿ ಈ ಸಾಲವನ್ನು ಕೃಷುಕರಿಗೆ ನೀಡುತ್ತಿಲ್ಲ ಎಂದು ಸರಕಾರದ ಗಮನಕ್ಕೆ ತಂದರು. ಈಗಾಗಲೇ ೬೭೧೫ ಅರ್ಜಿಗಳು ಬಂದಿದ್ದು ಈ ಪೈಕಿ ೬೩೫೪ ಅರ್ಜಿದಾರರಿಗೆ ಸಾಲವನ್ನು ನೀಡಲಾಗಿದೆ. ದಕ ಮತ್ತು ಉಡುಪಿ ಜಿಲ್ಲೆಯ ಕೃಷಿಕರು ಮಾತ್ರ ಈ ಸಾಲದಿಂದ ವಂಚಿತರಾಗಿದ್ದಾರೆ. ಯಾವ ಕಾರಣಕ್ಕೆ ಸಹಕಾರಿ ಸಂಘಗಳಲ್ಲಿ ಸಾಲವನ್ನು ನೀಡುತ್ತಿಲ್ಲ ಎಂದು ಅಧಿವೇಶನದಲ್ಲಿ ಪ್ರಶ್ನಿಸಿದ ಶಾಸಕರು ಸರಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ದ ಕ ಮತ್ತು ಉಡುಪಿ ಜಿಲ್ಲೆಯ ಕೃಷಿಕರಿಗೆ ಸರಕಾರದ ಕೃಷಿ ಸಾಲ ದೊರೆಯುವಂತೆ ವ್ಯವಸ್ಥೆ ಮಾಡಬೇಕು ಎಂದು ಮನವಿ ಮಾಡಿದರು. ಶಾಸಕರ ಮನವಿಗೆ ಸ್ಪೀಕರ್ ಯು ಟಿ ಖಾದರ್ ದ್ವನಿಗೂಡಿಸಿದರು.
ಲೋಪವಾಗಿದ್ದಲ್ಲಿ ಸರಿಪಡಿಸಲಾಗುವುದು: ಸಚಿವರ ಸ್ಪಷ್ಟನೆ
ಸರಕಾರ ಜಾರಿಗೆ ತಂದಿರುವ ಶೂನ್ಯ ಬಡ್ಡಿದರದಲ್ಲಿ ದೊರೆಯುವ ಅಲ್ಪಾವಧಿ ಸಾಲ ಮತ್ತು ಶೇ. ೩ ಬಡ್ಡಿದರದಲ್ಲಿ ದೊರೆಯುತ್ತಿದ್ದ ಸಾಲದ ಮೊತ್ತವನ್ನು ೧೦ ರಿಂದ ೧೫ ಲಕ್ಷಕ್ಕೆ ಏರಿಕೆ ಮಾಡಿತ್ತು. ಅರ್ಹ ಕೃಷಿಕರಿಗೆ ಈ ಸಾಲವನ್ನು ನೀಡಲಾಗಿದೆ. ದ ಕ ಮತ್ತು ಉಡುಪಿ ಜಿಲ್ಲೆಯಲ್ಲಿ ವಿಳಂಬವಾಗಿರುವ ಬಗ್ಗೆ ಶಾಸಕರು ಗಮನ ಸೆಳೆದಿದ್ದಾರೆ. ಯಾವ ಕಾರಣಕ್ಕೆ ಹೀಗಾಯ್ತು ಎಂಬುದನ್ನು ಪರಿಶೀಲಿಸುತ್ತೇನೆ. ಅರ್ಹ ಫಲಾನುಭವಿಗಳನ್ನು ಹುಡುಕಿ ಅಂಥವರಿಗೆ ಸಾಲವನ್ನು ಕೊಡುವ ಕೆಲಸವನ್ನು ಮಾಡುವುದಾಗಿ ಸಚಿವ ಪ್ರಿಯಾಂಗ ಖರ್ಗೆ ಸ್ಪಷ್ಟಪಡಿಸಿದರು.