Posted by vidyamaana on 2023-07-10 07:10:00 | Last Updated by Vidyamaana on 2023-09-05 06:51:23
ಪುತ್ತೂರು: “ನೆಟ್ಟೇ ಕಮ್ಮಿ. ನನ ಬರೋಡ್ಚಿ…”
ಹೀಗೆ ಹೇಳಿ ಔಷಧಿ ನೀಡಿದರೆಂದರೆ, ಯಾರದೇ ರೋಗವಾದರೂ ವಾಸಿಯಾಗಲೇಬೇಕು. ಆಸ್ಪತ್ರೆಗೆ ಹೋಗಿ ತಾಸುಗಟ್ಟಲೇ ಕಾಯಬೇಕೆಂದಿಲ್ಲ. ಹೆದರಿಕೆಯಾಗುವ ಬಿಲ್ ಕೂಡ ಇಲ್ಲ. ಯಾರೇ ಬಂದರೂ ಅವರ ನಗುವೇ ದಿವ್ಯೌಷಧ.
ಇದು ಎರಡೇ ಸಾಲಿನಲ್ಲಿ ವಿವರಣೆ ಕೊಡಬಹುದಾದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರ ಪರಿಚಯ. ತನ್ನ 16ನೇ ವಯಸ್ಸಿಗೇ ಡಾ. ಶಿವರಾಮ ಭಟ್ ಅವರ ಜೊತೆಗೆ ಕಾಂಪೌಂಡರ್ ಆಗಿ ಸೇರಿಕೊಂಡ ಅವರು, ಇದುವರೆಗೆ ಸುದೀರ್ಘ 68 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಹಾರಾಡಿಯಲ್ಲಿ ವಾಸವಾಗಿರುವ ಇವರ ತಂದೆ ಶಂಕರ್ ಭಟ್, ತಾಯಿ ಕಾವೇರಮ್ಮ. ಸರಸ್ವತಿ ಇವರ ಪತ್ನಿ. ಸಾಫ್ಟ್ ವೇರ್ ಇಂಜಿನಿಯರ್ ಆಗಿರುವ ಪುತ್ರ ಕಾರ್ತಿಕ್ ತನ್ನ ಪತ್ನಿ - ಮಗನೊಂದಿಗೆ ಲಂಡನಿನಲ್ಲಿ ವಾಸವಾಗಿದ್ದಾರೆ.
ಇದೀಗ ತನ್ನ 82ನೇ ವಯಸ್ಸಿನಲ್ಲಿ ವಿಶ್ರಾಂತ ಜೀವನಕ್ಕೆ ತೆರಳಿದ್ದಾರೆ. ವಯೋ ಸಹಜ ಸಮಸ್ಯೆಗಳ ಕಾರಣದಿಂದಾಗಿ ಡಾ. ಶಿವರಾಮ ಭಟ್ ಅವರ ಕ್ಲಿನಿಕ್ ಅನ್ನು ಬಂದ್ ಮಾಡಲಾಗಿದೆ ಎಂದು ಕ್ಲಿನಿಕ್ ಮುಂದುಗಡೆ ಬೋರ್ಡ್ ಹಾಕಲಾಗಿದೆ.
ಹಾಗಾಗಿ, ಔಷಧಕ್ಕೆಂದು ಆಗಮಿಸುವ ಜನರು ಬೋರ್ಡ್ ನೋಡಿ, ಹ್ಯಾಪ್ ಮೋರೆ ಹಾಕಿಕೊಂಡು ವಾಪಾಸ್ ಹೋಗುತ್ತಿದ್ದಾರೆ. ದಿನಕ್ಕೆ ಸುಮಾರು 300 ಮಂದಿಯಂತೆ ತಿಂಗಳಿಗೆ 10 ಸಾವಿರದಷ್ಟು ಮಂದಿ ಇವರ ಔಷಧವನ್ನೇ ಅವಲಂಬಿತರಾಗಿದ್ದರು. ಇದೀಗ ಇಷ್ಟು ಮಂದಿ ಬೇರೆ ವೈದ್ಯರ ಮೊರೆ ಹೋಗಲೇಬೇಕಾದ ಅನಿವಾರ್ಯತೆ ಎದುರಾಗಿದೆ.
ಮಳೆಗಾಲ ಆರಂಭವಾಯಿತೆಂದರೆ ಜ್ವರ, ಶೀತ, ಕೆಮ್ಮು ಸಿದ್ಧ. ಇದಕ್ಕೆಲ್ಲಾ ಕಾಂಪೌಂಡರ್ ನೀಡುವ 3 ಹೊತ್ತಿನ ಮದ್ದು ಸಾಕು. ಕಡಿಮೆ ಶುಲ್ಕ ಮಾತ್ರವಲ್ಲ, ಸುಲಭದಲ್ಲಿ ಸಿಗುವ ವೈದ್ಯರು ಎಂಬ ಕಾರಣಕ್ಕೆ ಜನರೂ ಇಲ್ಲಿಗೆ ಆಗಮಿಸುತ್ತಿದ್ದರು. ಇನ್ನು ಮುಂದೆ ಪುತ್ತೂರಿನ ಹೃದಯ ಭಾಗದಲ್ಲಿ ಇದ್ದ ಡಾ. ಶಿವರಾಮ ಭಟ್ ಅವರ ಕ್ಲಿನಿಕಿನಲ್ಲಿ ಕಾಂಪೌಂಡರ್ ಮದ್ದು ನೀಡುವುದಿಲ್ಲ!
ಡಾ. ಶಿವರಾಮ ಭಟ್ ಗುರು:
ಡಾ. ಶಿವರಾಮ ಭಟ್ ಅವರನ್ನೇ ಗುರುವಾಗಿ ನೆಚ್ಚಿಕೊಂಡಿದ್ದ ಕಾಂಪೌಂಡರ್ ಖ್ಯಾತಿಯ ನರಸಿಂಹ ಭಟ್ ಅವರು, ಸುದೀರ್ಘ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಡಾ. ಶಿವರಾಮ ಭಟ್ ಅವರ ನಿಧನದ ನಂತರವೂ ಅವರ ಹೆಸರಿನಲ್ಲೇ ಕ್ಲಿನಿಕ್ ನಡೆಯುತ್ತಿತ್ತು. ಆಗ ಕಾಂಪೌಂಡರ್ ಅವರೇ ಔಷಧ ನೀಡುತ್ತಿದ್ದರು. ಕ್ಲಿನಿಕಿಗೆ ಆಗಮಿಸಿದ ಹೆಚ್ಚಿನ ಜನರಿಗೆ ಇವರೇ ಡಾ. ಶಿವರಾಮ ಭಟ್ ಎಂದು ನಂಬಿದ್ದರು.
ಸರ್ಕಾರಿ ಉದ್ಯೋಗದ ಅವಕಾಶವನ್ನೇ ಕೈಚೆಲ್ಲಿದರು!
ನರಸಿಂಹ ಭಟ್ ಅವರಿಗೆ ಸರ್ಕಾರಿ ಉದ್ಯೋಗದ ಅವಕಾಶವೂ ಕೈಬೀಸಿ ಕರೆಯಿತು. ಆದರೆ ಡಾ. ಶಿವರಾಮ್ ಭಟ್ ಅವರನ್ನೇ ಮಾನಸ ಗುರುವಾಗಿ ಸ್ವೀಕರಿಸಿದ್ದರಿಂದ, ಸರ್ಕಾರಿ ಉದ್ಯೋಗದ ಅವಕಾಶವನ್ನು ಕೈಚೆಲ್ಲಿದರು. ಡಾ. ಶಿವರಾಮ ಭಟ್ ಅವರು ಇರುವವರೆಗೂ ಹಾಗೂ ಅವರು ಇಲ್ಲದ ಬಳಿಕವೂ ತನ್ನ ಗುರುವಿನ ಹೆಸರಿನಲ್ಲಿಯೇ ಔಷಧ ನೀಡಿತ್ತಿದ್ದರು ಎನ್ನುವುದು ಕಾಂಪೌಂಡರ್ ಅವರ ವಿಶೇಷತೆ.
Posted by Vidyamaana on 2024-04-12 16:06:24 |
ಶಿವಮೊಗ್ಗ: ರಾಜ್ಯದಲ್ಲಿ ಲೋಕಸಭಾ ಚುನಾವಣೆಯ 2ನೇ ಹಂತದ ಚುನಾವಣೆಗೆ ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಮೊದಲ ದಿನವೇ ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕೆಎಸ್ ಈಶ್ವರಪ್ಪ ನಾಮಪತ್ರ ಸಲ್ಲಿಸಿದ್ದಾರೆ. ಅವರು ನಾಮಪತ್ರ ಸಲ್ಲಿಸಲು ಬಂದಿದ್ದರು.
ಸಾವಿರಾರು ಬೆಂಬಲಿಗರೊಂದಿಗೆ ಶಿವಮೊಗ್ಗದ ರಾಮಣ್ಣಶ್ರೇಷ್ಟಿ ಪಾರ್ಕ್ ನಿಂದ ಮೆರವಣಿಗೆ ಮೂಲಕ ಗೋಪಿ ಸರ್ಕಲ್ವರೆಗೂ ತೆರಳಿದ ಬಳಿಕ ನಾಮಪತ್ರ ಸಲ್ಲಿಸಿಸಿದರು. ಈ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ.
ಕೆ ಎಸ್ ಈಶ್ವರಪ್ಪ ಪತ್ನಿ ವಿಜಯಲಕ್ಷ್ಮಿ, ಪುತ್ರ ಕಾಂತೇಶ್ ಹಾಗೂ ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತು ಆಪ್ತರೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು. ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ನಾಮಪತ್ರ ಸ್ವೀಕರಿಸಿದರು.
Posted by Vidyamaana on 2023-04-03 11:48:56 |
ಪುತ್ತೂರು: ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಕೋಡಿಂಬಾಡಿ ರೈ ಎಸ್ಟೇಟ್ ಮಾಲಕರಾದ ರೈ ಎಸ್ಟೇಟ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ಪ್ರವರ್ತಕ ಅಶೋಕ್ ಕುಮಾರ್ ರೈ ಯವರಿಗೆ ಅವಕಾಶ ದೊರೆಯಬೇಕು ಹಾಗೂ ಅಶೋಕ್ ಕುಮಾರ್ ರೈಯವರು ಚುನಾವಣೆಯಲ್ಲಿ ಜಯಗಳಿಸಬೇಕು ಎಂದು ಅವರ ಅಭಿಮಾನಿಗಳು ಮತ್ತು ಹಿತೈಷಿಗಳು ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.
Posted by Vidyamaana on 2023-08-05 15:29:18 |
ಪುತ್ತೂರು: 81 ವರ್ಷ ಪ್ರಾಯದ ಹಿರಿಯ ನಾಗರಿಕರ ಜಮೀನನ್ನು ಲೀಸಿಗೆ ಕೊಡಲು ಒತ್ತಾಯಿಸಿ, ಕೊಡದೇ ಇದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸುವಂತೆ ನ್ಯಾಯಾಲಯ ಬೆಳ್ಳಾರೆ ಪೊಲೀಸ್ ಠಾಣೆಗೆ ಆದೇಶಿಸಿದೆ.
ಕುರಿಯ ಗ್ರಾಮದ ದೇರ್ಕಜೆ ವೆಂಕಟ್ರಮಣ ಭಟ್, ಸವಣೂರು ಗ್ರಾಮದ ಪಣೆಮಜಲು ನಿವಾಸಿ ಜಾಫರ್, ಬಪ್ಪಳಿಗೆ ನಿವಾಸಿ ಸುಭಾಶ್ ರೈ ಆರೋಪಿಗಳು. ಇವರು ಹಿರಿಯ ನಾಗರಿಕೆ, ಕಡಬ ತಾಲೂಕಿನ ಸವಣೂರು ಗ್ರಾಮದ ಸೋಂಪಾಡಿ ನಿವಾಸಿ ನಾಗರತ್ನಮ್ಮ (81 ವರ್ಷ) ಅವರಿಗೆ ಕೊಲೆ ಬೆದರಿಕೆ ಹಾಕಿದ್ದಲ್ಲದೇ, ಅಲ್ಲಿದ್ದ 2 ಕ್ವಿಂಟಾಲ್ ಅಡಿಕೆಯನ್ನು ಕಳ್ಳತನ ಮಾಡಿದ್ದರು. ಮಾತ್ರವಲ್ಲ ಕೋಳಿ ಹಾಗೂ ಆಡು ಸಾಕಿಕೊಂಡಿದ್ದ ದೊಡ್ಡ ಶೆಡ್ಡನ್ನು ಜೆಸಿಬಿಯಲ್ಲಿ ಕೆಡವಿ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಪ್ರಕರಣದ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದಾಗ, ದೂರು ಸ್ವೀಕರಿಸಿಲ್ಲ ಎಂಬ ಕಾರಣಕ್ಕೆ ನಾಗರತ್ನಮ್ಮ ಅವರು ನ್ಯಾಯಾಲಯದ ಕದ ತಟ್ಟಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಪ್ರಕರಣ ದಾಖಲಿಸುವಂತೆ ಆದೇಶ ನೀಡಿದೆ.
ಏನಿದು ಪ್ರಕರಣ?
ನಾಗರತ್ನಮ್ಮ ಅವರು ಪುಣ್ಚಪ್ಪಾಡಿಯಲ್ಲಿ ಜಮೀನು ಹೊಂದಿದ್ದು, ಅದನ್ನು ಲೀಸಿಗೆ ಕೊಡುವಂತೆ ಆರೋಪಿಗಳು ಒತ್ತಾಯಿಸಿದ್ದರು. ಕೊಡದೇ ಇದ್ದಾಗ ಮೇ 30ರಂದು ನಾಗರತ್ನಮ್ಮ ಅವರ ಜಮೀನಿಗೆ ಅಕ್ರಮ ಪ್ರವೇಶ ಮಾಡಿದ ಆರೋಪಿಗಳು, ಹಿರಿಯ ನಾಗರಿಕೆ ನಾಗರತ್ನಮ್ಮ ಅವರಿಗೆ ಬೆದರಿಕೆ ಹಾಕಿದ್ದರು. ಜಮೀನು ಕೊಡದೇ ಇದ್ದರೆ ನಾಗರತ್ನಮ್ಮ ಅವರ ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಇದನ್ನು ನಾಗರತ್ನಮ್ಮ ಅವರ ಅಳಿಯ ಆಕ್ಷೇಪಿಸಿದಾಗ, ಅವರಿಗೂ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿದೆ.
ಇದೇ ಸಂದರ್ಭ ಗೋಣಿಯಲ್ಲಿ ಕಟ್ಟಿಟ್ಟಿದ್ದ 2 ಕ್ವಿಂಟಾಲ್ ಅಡಿಕೆಯನ್ನು ಹೊತ್ತೊಯ್ದಿದ್ದು ಮಾತ್ರವಲ್ಲ, ಆಡು ಹಾಗೂ ಕೋಳಿ ಸಾಕಿಕೊಂಡಿದ್ದ ಬೃಹತ್ ಶೆಡ್ಡನ್ನು ಜೆಸಿಬಿಯಿಂದ ಮುರಿದು ಹಾಕಿದ್ದರು ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದರ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದಾಗ, ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ನ್ಯಾಯಾಲಯದ ಮೊರೆ ಹೋಗಲಾಗಿತ್ತು ಎಂದು ಹೇಳಲಾಗಿದೆ.
Posted by Vidyamaana on 2023-07-01 10:39:15 |
ಸುಳ್ಯ : ಹಿಂದೂ ಕಾರ್ಯಕರ್ತ ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಪರಾರಿಯಾದ ಆರೋಪಿಗಳಿಗೆ ಶರಣಾಗಲು ಎನ್ಐಎ ಕೋರ್ಟ್ ಜೂನ್ 30 ರಂದು ಕೊನೆಯ ಡೆಡ್ ಲೈನ್ ನೀಡಲಾಗಿತ್ತು.ಆದ್ರೆ ನ್ಯಾಯಾಲಯಕ್ಕೆ ಯಾವ ಆರೋಪಿಗಳು ಕೂಡ ಹಾಜರಾಗಿಲ್ಲ ಎಂದು ಎನ್ಐಎ ಮೂಲಗಳಿಂದ ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಗೆ ಮಾಹಿತಿ ದೊರಕಿದೆ.
ಪ್ರಮುಖ ಆರೋಪಿಗಳು ಶರಣಾಗಲು ಡೆಡ್ ಲೈನ್:
ಉಮರ್ ಫಾರುಕ್, ಅಬುಬಕರ್ ಸಿದ್ದಿಕ್, ತುಫೈಲ್, ಮೊಹಮ್ಮದ್ ಮುಸ್ತಾಫಾ ಕೊಲೆ ಪ್ರಕರಣದಲ್ಲಿ ಎನ್.ಐ.ಎಗೆ ಬೇಕಾಗಿರುವ ಮೋಸ್ಟ್ ವಾಂಟೆಡ್ ಆರೋಪಿಗಳಾಗಿದ್ದು. ಕೊಡಗಿನ ತುಫೈಲ್ ಎಮ್.ಹೆಚ್ ಈ ನಾಲ್ಕು ಜನ ಆರೋಪಿಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಈ ನಾಲ್ಕು ಜನ ಆರೋಪಿಗಳ ಪತ್ತೆಗೆ ಒಟ್ಟು 14 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ. ಈ ಪೈಕಿ ತುಫೈಲ್, ಮೊಹಮ್ಮದ್ ಮುಸ್ತಾಫಾ ಸುಳಿವಿಗೆ ತಲಾ 5 ಲಕ್ಷ, ಉಮರ್ ಫಾರುಕ್, ಅಬುಬಕರ್ ಸಿದ್ದಿಕ್ ಪತ್ತೆಗೆ ತಲಾ 2 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ. ಇನ್ನೂ ಈ ಪ್ರಕರಣದಲ್ಲಿ ಒಟ್ಟು 8 ಜನ ಆರೋಪಿಗಳ ಬಂಧನಕ್ಕೆ ಬಾಕಿಯಿದ್ದು. ಈ ಎಲ್ಲಾ ಆರೋಪಿಗಳು ಕೋರ್ಟ್ ಗೆ ಶರಣಾಗತಿಯಾಗಲು ಜೂನ್ 30 ರಂದು ಡೆಡ್ಲೈನ್ ನೀಡಲಾಗಿತ್ತು.ಆರೋಪಿಗಳು ಒಂದು ವೇಳೆ ಎನ್.ಐ.ಎ ಕೋರ್ಟ್ ಗೆ ಹಾಜರಾಗದೆ ಇದ್ದಲ್ಲಿ ಅವರ ಆಸ್ತಿ ಮುಟ್ಟುಗೋಲು ಹಾಕುವುದಾಗಿ ಎಚ್ಚರಿಕೆ ನೀಡಿ ನ್ಯಾಯಾಲಯದ ಆದೇಶದ ಪ್ರತಿಗಳನ್ನು ಆರೋಪಿಗಳ ಮನೆ ಹಾಗೂ ಪ್ರಮುಖ ಸ್ಥಳಗಳಲ್ಲಿ ಹಚ್ಚಿದ್ದರು ಅದಲ್ಲದೆ ಮೈಕ್ ಮೂಲಕ ಆರೋಪಿಗಳ ಬಗ್ಗೆ ಎನ್ಐಎ ಅಧಿಕಾರಿಗಳು ಪ್ರಚಾರ ಮಾಡಿದ್ದರು.
ವಿದೇಶಕ್ಕೆ ಪರಾರಿಯಾಗಿರುವ ಶಂಕೆ:
ಮೋಸ್ಟ್ ವಾಂಟೆಡ್ ಆರೋಪಿಗಳು ಎನ್ಐಎ ಅಧಿಕಾರಿಗಳ ತನಿಖೆಯ ಪ್ರಕಾರ ವಿದೇಶಕ್ಕೆ ಪರಾರಿಯಾಗಿ ಆಶ್ರಯ ಪಡೆದಿರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದು, ಆರೋಪಿಗಳ ಬಗ್ಗೆ ಎನ್ಐಎ ಅಧಿಕಾರಿಗಳು ರಾ ಎಜೆಸ್ಸಿ ಯನ್ನು ಸಂಪರ್ಕಿಸಿ ಪ್ರಕರಣದ ದಾಖಲೆಗಳನ್ನು ನೀಡಿದ್ದು ಈ ಮೂಲಕ ರಾ ಏಜೆನ್ಸಿ ವಿದೇಶದಲ್ಲಿ ಅಡಗಿರುವ ಆರೋಪಿಗಳನ್ನು ಕಾರ್ಯಾಚರಣೆ ನಡೆಸಿ ಭಾರತಕ್ಕೆ ಕರೆತರಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ
Posted by Vidyamaana on 2023-10-01 18:36:02 |
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಇತ್ತೀಚೆಗೆ ತಮ್ಮ ಮನೋಜ್ಞ ಅಭಿನಯ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ನಟ ನಾಗಭೂಷಣ್ ವಿರುದ್ಧ ಹಿಟ್ ಅಂಡ್ ರನ್ ಕೇಸು ದಾಖಲಾಗಿ ಪೊಲೀಸರು ಅವರನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.
ಕಳೆದ ರಾತ್ರಿ ಬೆಂಗಳೂರಿನಲ್ಲಿ ನಟ ನಾಗಭೂಷಣ್ ಕಾರು ಕನಕಪುರ ರಸ್ತೆಯ ವಸಂತಪುರ ರಸ್ತೆಯ ಅಪಾರ್ಟ್ ಮೆಂಟ್ ಬಳಿ ಆಪಘಾತವಾಗಿದ್ದು, ಫುಟ್ ಪಾತ್ ನಲ್ಲಿ ನಡೆದುಕೊಂಡು ಹೋಗುತ್ತಿದ್ದ 48 ವರ್ಷದ ಪ್ರೇಮಾ ಎಂಬ ಮಹಿಳೆ ಮೃತಪಟ್ಟರೆ, ಅವರ ಪತಿ ಗಂಭೀರ ಗಾಯಗೊಂಡಿದ್ದಾರೆ. ಉತ್ತರ ಹಳ್ಳಿಯ ಕೆ ಎಸ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಮುಂದಿನ ತನಿಖೆ ನಡೆಯುತ್ತಿದೆ.
ಖಾಸಗಿ ವಾಹಿನಿಯ ಕಾರ್ಯಕ್ರಮ ಮುಗಿಸಿ ಬರುವ ವೇಳೆ ನಾಗಭೂಷಣ ಅವರು ಕಾರು ಅಪಘಾತಕ್ಕೀಡಾಗಿದೆ. ಗಾಯಾಳುಗಳನ್ನು ನಾಗಭೂಷಣ ಅವರು ಆಸ್ಪತ್ರೆಗೆ ಸೇರಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರೇಮ ಮೃತಪಟ್ಟಿದ್ದಾರೆ.
ನಾಗಭೂಷಣ್ ಅವರು ಕಳೆದ ರಾತ್ರಿ ಕಾರನ್ನು ವೇಗವಾಗಿ ಚಾಲನೆ ಮಾಡಿಕೊಂಡುಬಂದು ಫುಟ್ಪಾತ್ನಲ್ಲಿ ನಡೆದುಹೋಗುತ್ತಿದ್ದ ಕೃಷ್ಣ ಬಿ (58) ಮತ್ತು ಅವರ ಪತ್ನಿ ಎಸ್ ಪ್ರೇಮ ಅವರಿಗೆ ಡಿಕ್ಕಿ ಹೊಡೆದಿದೆ. ಫುಟ್ ಪಾತ್ಗೆ ಬಂದ ಕಾರು ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಪ್ರೇಮ ಅವರ ಮುಖ, ತಲೆಗೆ ಗಾಯವಾಗಿ ತೀವ್ರ ರಕ್ತಸ್ತ್ರಾವ ಮೂಗು ಹಾಗೂ ಬಾಯಿಯಿಂದ ರಕ್ತಬಂದು ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮೃತಪಟ್ಟಿದ್ದಾರೆ.
Posted by Vidyamaana on 2024-03-15 20:41:36 |
ಪುತ್ತೂರು: ಅರುಣ್ ಕುಮಾರ್ ಪುತ್ತಿಲ ಇನ್ನು ಬಿಜೆಪಿ ಸೇರ್ಪಡೆಗೊಂಡಿಲ್ಲ ಎನ್ನುವುದು ಇದೀಗ ದೃಢಗೊಂಡಿದೆ.
ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಸಂಜೆ ನಡೆದ ಗೌಪ್ಯ ಸಭೆಯ ಬಳಿಕ ಅವರು ಮಾಧ್ಯಮದೊಂದಿಗೆ ಮಾತನಾಡಿದರು.
ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸುತ್ತಾ, "ಪುತ್ತಿಲ ಬಿಜೆಪಿ ಸೇರ್ಪಡೆಗೊಂಡಿರುವುದು ಮಾಧ್ಯಮ ಪ್ರಚಾರ" ಎಂದು ಹೇಳಿದರು.
ಈ ಮೂಲಕ ಬಿಜೆಪಿ ಹಾಗೂ ಪುತ್ತಿಲ ಪರಿವಾರ ಇನ್ನು ಒಂದು ಒಮ್ಮತಕ್ಕೆ ಬರಲು ವಿಫಲವಾಗಿದೆ ಎನ್ನುವುದು ದೃಢಗೊಂಡಿದೆ. ಎರಡು ಬಣಗಳು ಪರಸ್ಪರ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಆದ್ದರಿಂದ ಬಿಜೆಪಿ ಜಿಲ್ಲಾಧ್ಯಕ್ಷರು ಪುತ್ತಿಲ ವಿಚಾರವಾಗಿ ಒಂದೇ ವಾಕ್ಯದಲ್ಲಿ ಮಾತು ಮುಗಿಸಿದರು.
ಉಳಿದಂತೆ ಚುನಾವಣೆ ಬಗ್ಗೆಯೇ ಮಾತುಕತೆ ನಡೆಯಿತು.