Posted by vidyamaana on 2024-07-08 08:41:02 |
ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗೈಡ್ ಹಾಗೂ ಪುಸ್ತಕಗಳನ್ನಿಟ್ಟುಕೊಂಡು ಸಾಮೂಹಿಕ ನಕಲು ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಕೇವಲ ಮಕ್ಕಳಲ್ಲ ಶಿಕ್ಷಕರೂ ಅವರಿಗೆ ನೆರವಾಗುತ್ತಿರುವುದು ಸಿಸಿಟಿವಿ ದೃಶ್ಯದಲ್ಲಿ ಕಂಡುಬಂದಿದೆ. ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಗೈಡ್ ಇಟ್ಟುಕೊಂಡು ಸಾಮೂಹಿಕ ನಕಲು(Mass Cheating) ಮಾಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ಘಟನೆ ಸಿಸಿಟಿವಿಯಲ್ಲಿ ಬಯಲಾಗಿದೆ. ಜುಲೈ 5 ರಂದು ಪರೀಕ್ಷಾ ಕೇಂದ್ರದಲ್ಲಿ ಸಾಮೂಹಿಕ ನಕಲು ಮಾಡಿರುವ ಬಗ್ಗೆ ಮಾಹಿತಿ ಸಿಕ್ಕಿತ್ತು ಎಂದು ಎಸ್ ಡಿಎಂ ವಿಜಯ್ ಸಿಂಗ್ ಮಾಹಿತಿ ನೀಡಿದ್ದಾರೆ. ಅವರು ತನಿಖೆಗಾಗಿ ಸ್ಥಳಕ್ಕೆ ಬಂದರು ಆದರೆ ಅಲ್ಲಿ ಎಲ್ಲವೂ ಸಾಮಾನ್ಯವಾಗಿತ್ತು. ಇದಾದ ಬಳಿಕ ವಿಡಿಯೋವೊಂದು ಹೊರಬಿದ್ದಿದ್ದು, ನಂತರ ವಿಷಯ ಬೆಳಕಿಗೆ ಬಂದಿದೆ.
ಪರೀಕ್ಷಾ ಪತ್ರಿಕೆಗಳಲ್ಲಿನ ಅಕ್ರಮಗಳು ಮತ್ತು ಸೋರಿಕೆಗಳ ಬಗ್ಗೆ ದೇಶದಲ್ಲಿ ಕೋಲಾಹಲವಿದೆ, ಈ ನಡುವೆ ಈ ಘಟನೆ ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ತರಗತಿ ಕೊಠಡಿಯಲ್ಲಿ ಪರೀಕ್ಷೆ ನಡೆಯುವಾಗ ಹಲವು ಮಕ್ಕಳು ಗುಂಪು ಕಟ್ಟಿಕೊಂಡು ಬಹಿರಂಗವಾಗಿ ನಕಲು ಮಾಡುತ್ತಿದ್ದರು. ಅಲ್ಲಿ ಶಿಕ್ಷಕರೂ ಇದ್ದರು. ಆದರೆ ನಕಲು ನಿಲ್ಲಿಸುವ ಬದಲು ವಿದ್ಯಾರ್ಥಿಗಳಿಗೆ ಸಹಾಯ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಿಎ ಮತ್ತು ಬಿಎಸ್ಸಿ ಪರೀಕ್ಷೆಗಳು ಅಲ್ಲಿ ನಡೆಯುತ್ತಿತ್ತು, ಈ ಪರೀಕ್ಷೆಗಳ ಕೇಂದ್ರವನ್ನು ದಾಮೋಹ್ ಪ್ರದೇಶದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ನಡೆಸಲಾಗಿತ್ತು. ಸಿಸಿಟಿವಿ ದೃಶ್ಯಾವಳಿಗಳು ಅದೇ ಶಾಲೆಯ ತರಗತಿ ಕೊಠಡಿಯಲ್ಲಿದೆ ಎಂದು ಹೇಳಲಾಗಿದೆ.
ವಿದ್ಯಾರ್ಥಿಗಳು ಗೈಡ್ ಹಾಗೂ ಪುಸ್ತಕಗಳನ್ನು ತೆರೆದು ನಕಲು ಮಾಡುತ್ತಿರುವುದನ್ನು ಕಾಣಬಹುದು. ಈ ಬಗ್ಗೆ ಎಸ್ಡಿಎಂ ಭಿಂಡ್ ಕಲೆಕ್ಟರ್ ಸಂದೀಪ್ ಶ್ರೀವಾಸ್ತವ ಅವರಿಗೆ ಪತ್ರ ಬರೆದಿದ್ದಾರೆ. ಕೇಂದ್ರದ ಅಧ್ಯಕ್ಷರು ಹಾಗೂ ಪ್ರಾಂಶುಪಾಲರ ಶಾಮೀಲಾಗಿರುವುದನ್ನು ಇದರಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆಯೂ ಮಾತನಾಡಿದರು. ಇದೀಗ ಆಲಂಪುರದ ಹೈಯರ್ ಸೆಕೆಂಡರಿ ಶಾಲೆಯನ್ನು ಪರೀಕ್ಷಾ ಕೇಂದ್ರವನ್ನಾಗಿ ಮಾಡಲಾಗಿದೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ
ದುರ್ಗಾಪ್ರಸಾದ್ ಸರಾಫ್, ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಸ್ವಯಂ ಪ್ರಭಾ ಕಾಲೇಜಿನ ವಿದ್ಯಾರ್ಥಿಗಳೂ ದಾಮೋಹ್ ಕೇಂದ್ರದಲ್ಲಿ ನಕಲು ಮಾಡುತ್ತಿದ್ದು ಸಿಕ್ಕಿಬಿದ್ದಿದ್ದಾರೆ ಎಂದು ವರದಿಯಾಗಿದೆ.
Posted by Vidyamaana on 2023-08-17 05:46:19 |
ಮಂಗಳೂರು: ಮಗನ ಸಾವಿನಿಂದ ಮನನೊಂದು ಸಮುದ್ರಕ್ಕೆ ಹಾರಿ ಮೃತಪಟ್ಟ ಕಾಸರಗೋಡು ಜಿಲ್ಲೆಯ ಕುಂಬಳೆ ಬಂಬ್ರಾಣ ನಿವಾಸಿಯ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಇವರ ಸಾವಿಗೆ ಪತ್ನಿಯ ಅನೈತಿಕ ಸಂಬಂಧ ಪ್ರಕರಣವೇ ಕಾರಣ ಎನ್ನುವ ಮಾತು ಕೇಳಿಬಂದಿದೆ. ಈ ಬಗ್ಗೆ ಮೃತ ಲೋಕೇಶ್ ಕಾಸರಗೋಡು ಎಸ್ಪಿ ಕಚೇರಿಗೆ ದೂರು ನೀಡಿರುವುದು ಮತ್ತು ಇವರ ಅಣ್ಣ ಸುಧಾಕರ ಉಳ್ಳಾಲ ಪೊಲೀಸರಿಗೆ ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕುಂಬಳೆಯ ಬಂಬ್ರಾಣ ನಿವಾಸಿಯಾಗಿದ್ದ ಲೋಕೇಶ್ ತನ್ನ ಪತ್ನಿ ಪ್ರಭಾವತಿ ಮತ್ತು ಆಕೆಯ ಪ್ರಿಯಕರ ಎನ್ನಲಾದ ಸಂದೀಪ್ ಆರಿಕ್ಕಾಡಿ ಎಂಬಾತನ ವಿರುದ್ಧ ಕಾಸರಗೋಡು ಎಸ್ಪಿ ಕಚೇರಿಗೆ ಆಗಸ್ಟ್ 11ರಂದು ದೂರು ನೀಡಿದ್ದಾರೆ. ತನ್ನ ಮಗ ರಾಜೇಶ್ ಸಾವಿಗೆ ಇವರ ಅಕ್ರಮ ಸಂಬಂಧ ಮತ್ತು ಅದರ ವಿಚಾರದಲ್ಲಿ ನಡೆದಿದ್ದ ಗಲಾಟೆಯೇ ಕಾರಣ. ತಾಯಿ ಜೊತೆಗೆ ಸಂದೀಪ್ ಅಕ್ರಮ ಸಂಬಂಧ ಹೊಂದಿರುವುದನ್ನು ರಾಜೇಶ್ ಆಕ್ಷೇಪಿಸಿದ್ದು, ಅದಕ್ಕೆ ಪ್ರತಿಯಾಗಿ ಸಂದೀಪ್ ಬೆದರಿಕೆ ಹಾಕಿದ್ದ. ಇದರಿಂದ ನೊಂದು ರಾಜೇಶ್ ಉಳ್ಳಾಲಕ್ಕೆ ಬಂದು ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೈದಿದ್ದ. ಈ ಬಗ್ಗೆ ಪ್ರಭಾವತಿ ಮತ್ತು ಆಕೆಯ ತಂಗಿ ಬೇಬಿ ಹಾಗೂ ಪ್ರಿಯಕರ ಸಂದೀಪ್ ಆರಿಕ್ಕಾಡಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಲೋಕೇಶ್ ಕಾಸರಗೋಡು ಎಸ್ಪಿ ಕಚೇರಿಗೆ ನೀಡಿದ್ದ ದೂರಿನಲ್ಲಿ ಒತ್ತಾಯಿಸಿದ್ದರು.
ಜುಲೈ 10ರಂದು ಲೋಕೇಶ್(51) ಅವರ ಮಗ ರಾಜೇಶ್(26) ಉಳ್ಳಾಲ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದ. ಶವದ ಮರಣೋತ್ತರ ಪರೀಕ್ಷೆ, ಅಂತ್ಯಕ್ರಿಯೆ ಬಳಿಕ ಪ್ರಭಾವತಿ ಗಂಡನ ಮನೆ ತೊರೆದು ತನ್ನ ತಂಗಿಯ ಮನೆಯಲ್ಲಿ ಸೇರಿದ್ದರೆ, ಇತ್ತ ಲೋಕೇಶ್ ತನ್ನ ಸೋದರ ಸುಧಾಕರ್ ಅವರ ತೊಕ್ಕೊಟ್ಟಿನ ಮನೆಯಲ್ಲಿ ವಾಸ ಮಾಡಲಾರಂಭಿಸಿದ್ದರು. ತನ್ನ ಮಗನ ಸಾವಿನಿಂದ ತೀವ್ರ ನೊಂದುಕೊಂಡಿದ್ದ ಲೋಕೇಶ್, ತನ್ನ ಗೆಳೆಯರಿಗೆ ಪತ್ನಿಯ ಕಿರುಕುಳ, ಕೆಟ್ಟ ನಡತೆಯ ಬಗ್ಗೆ ಹೇಳಿಕೊಂಡಿದ್ದರು. ಮೊನ್ನೆ ಆಗಸ್ಟ್ 14ರಂದು ಇಷ್ಟೆಲ್ಲ ಆದಮೇಲೆ ಅಂತಹ ಪತ್ನಿಯೊಂದಿಗೆ ವಾಸ ಮಾಡಲು ಸಾಧ್ಯವಾಗದು. ಆಕೆಯ ಮುಖವನ್ನೂ ನೋಡುವುದಿಲ್ಲ. ನನ್ನ ಮೃತದೇಹ ಸೋಮೇಶ್ವರ ಸಮುದ್ರದಲ್ಲಿ ಸಿಗಬಹುದು ಎಂದು ತನ್ನ ಗೆಳೆಯರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದು ಫೋನನ್ನು ಸೋದರನ ತೊಕ್ಕೊಟ್ಟಿನ ಮನೆಯಲ್ಲಿಟ್ಟು ತೆರಳಿದ್ದರು. ವಾಯ್ಸ್ ಕೇಳಿದ ಗೆಳೆಯರು ಕೂಡಲೇ ಫೋನ್ ಮಾಡಿದ್ದು, ಫೋನನ್ನು ಮನೆಯಲ್ಲಿ ಬಿಟ್ಟು ಲೋಕೇಶ್ ತೆರಳಿರುವುದು ಗೊತ್ತಾಗಿತ್ತು.
ಇತ್ತ ಗೆಳೆಯರು ಮತ್ತು ಸೋದರ ಉಳ್ಳಾಲದಲ್ಲಿ ಹುಡುಕಾಡುತ್ತಿದ್ದಂತೆ, ಅದೇ ದಿನವೇ ಲೋಕೇಶ್ ಮೃತದೇಹ ಉಳ್ಳಾಲ ಸಮುದ್ರದಲ್ಲಿ ಪತ್ತೆಯಾಗಿತ್ತು. ಮೃತರ ಸೋದರ ಸುಧಾಕರ ಮತ್ತು ಲೋಕೇಶ್ ಅವರ ಇನ್ನೊಬ್ಬ ಮಗ ಶುಭಂ ತಂದೆಯದ್ದೇ ಶವ ಎಂದು ಗುರುತಿಸಿದ್ದಾರೆ. ಸುಧಾಕರ ಅವರು ಉಳ್ಳಾಲ ಠಾಣೆಗೆ ನೀಡಿರುವ ದೂರಿನಲ್ಲಿ ಪ್ರಭಾವತಿ, ಸಂದೀಪ್ ಆರಿಕ್ಕಾಡಿ, ಶುಭಂ, ಬೇಬಿ ಎಂಬವರ ಹೆಸರನ್ನು ಉಲ್ಲೇಖಿಸಿದ್ದು ಇವರ ಚಿತಾವಣೆಯಿಂದಲೇ ನನ್ನ ತಮ್ಮ ಲೋಕೇಶ್ ಸಾವಿಗೆ ಶರಣಾಗಿದ್ದಾರೆಂದು ತಿಳಿಸಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಇವರ ವಿರುದ್ಧ ಎಫ್ಐಆರ್ ದಾಖಲಾಗಿದೆ
Posted by Vidyamaana on 2023-04-12 05:58:07 |
ಸುಳ್ಯದಲ್ಲಿ ಬಿಜೆಪಿ ಟಿಕೆಟ್ ತಪ್ಪಿದ ಹಿನ್ನೆಲೆಯಲ್ಲಿ ಹಾಲಿ ಸಚಿವ, ಎಸ್ ಅಂಗಾರ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಕ್ಷ ಟಿಕೆಟ್ ನೀಡದ ಕುರಿತು ನನ್ನ ಅಸಮಾಧಾನವಲ್ಲ. ಆದರೆ ಇಷ್ಟು ವರ್ಷ ಪಕ್ಷಕ್ಕಾಗಿ ಮತ್ತು ಸಮಾಜಕ್ಕಾಗಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಮಾಡಿದ ಸೇವೆಯನ್ನು ಗೌರವಿಸುವ ಕ್ರಮ ಇದಲ್ಲ. ಪ್ರಾಮಾಣಿಕ ರಾಜಕಾರಣಕ್ಕೆ ಇಂದು ಬೆಲೆ ಇಲ್ಲದಂತಾಗಿದೆ. ನನ್ನ ಪ್ರಾಮಾಣಿಕತೆಯೇ ನನಗೆ ಮುಳುವಾಗಿದೆ. ಲಾಬಿ ಮಾಡುವುದು ನನ್ನ ಗುಣವಾಗಿರಲಿಲ್ಲ. ಅದೇ ನನಗೆ ಹಿನ್ನಡೆಯಾಯಿತು ಎಂದು ಹೇಳಿದ ಅಂಗಾರರು, ನಾನು ಇನ್ನು ರಾಜಕಾರಣದಲ್ಲಿಲ್ಲ. ಚುನಾವಣಾ ಪ್ರಚಾರ ಕಣದಲ್ಲೂ ಇಲ್ಲ. ಹೊಸ ಅಭ್ಯರ್ಥಿ ಮತ್ತು ಅವರ ಗೆಲುವನ್ನು ಪಕ್ಷ ನೋಡಿಕೊಳ್ಳಬಹುದು ಎಂದು ಹೇಳಿದರು.
Posted by Vidyamaana on 2023-05-18 08:51:49 |
ಪುತ್ತೂರು:ಕಂಬಳ ಪರ ಸುಪ್ರಿಂಕೋರ್ಟು ತೀರ್ಪು ನೀಡಿದ್ದು ಉಪ್ಪಿನಂಗಡಿ ವಿಜಯವಿಕ್ರಮ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷರಾದ ಪ್ರಸ್ತುತ ಶಾಸಕರಾಗಿರುವ ಅಶೋಕ್ ಕುಮಾರ್ ರೈಯವರ ಸುದೀರ್ಘ ೧೨ ವರ್ಷಗಳ ಹೋರಾಟಕ್ಕೆ ಕೊನೆಗೂ ಜಯಸಿಕ್ಕಂತಾಗಿದೆ.
ಕಂಬಳ ತುಳುನಾಡಿನ ಜಾನಪದ ಕ್ರೀಡೆಯಾಗಿದ್ದು , ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯಲ್ಲಿ ಈ ಕ್ರೀಡೆನಡೆಯುತ್ತಿದ್ದು ಕರಾವಳಿಯ ರೈತಾಪಿ ಜನರು ಭತ್ತದ ಕೊಯ್ಲಿನ ಜನರು ತಮ್ಮ ಮನರಂಜನೆಗೋಸ್ಕರ ಏರ್ಪಡಿಸುತ್ತಿದ್ದ ಈ ಕಂಬಳ ಕ್ರೀಡೆಯು ಕ್ರಮೇಣಸಾಂಪ್ರದಾಯಿಕ ಕ್ರೀಡೆಯಾಗಿ ಬೆಳೆದು ಬಂತು.
ಕಂಬಳಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ರಾಜರುಗಳ ಬೆಂಬಲ ಮತ್ತು ಪ್ರೋತ್ಸಾಹದಿಂದ ಈ ಕ್ರೀಡೆ ನಡೆಯುತ್ತಿತ್ತು. ಹೆಚ್ಚಾಗಿ ನವೆಂಬರ್ ಬಳಿಕ ಮಾರ್ಚ್ ತನಕ ಕರಾವಳಿ ಜಿಲ್ಲೆಗಳಲ್ಲಿ ಈ ಕ್ರೀಡೆ ನಡೆಯುತ್ತದೆ. ಕಂಬಳದಲ್ಲಿ ಎರಡು ಬಲಿಷ್ಟ ಕೋಣಗಳ ಕುತ್ತಿಗೆಗೆ ನೊಗ ಕಟ್ಟಿ ಅವುಗಳನ್ನು ಓಡಿಸಲಾಗುತ್ತದೆ. ಈ ಸಮಯದಲ್ಲಿ ಕೋಣಗಳು ಅತೀ ವೇಗವಾಗಿ ಓಡಲಿಕ್ಕಾಗಿ ಓಡಿಸುವ ವ್ಯಕ್ತಿ ಕೋಣಗಳಿಗೆ ಹಿಂಸಾತ್ಮ ರೀತಿಯಲ್ಲಿ ಪೆಟ್ಟು ಕೊಡುತ್ತಾನೆ ಎಂಂದು ಪ್ರಾಣಿದಯಾಸಂಘ (ಪೇಟಾ) ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ಕಂಬಳವನ್ನು ನಿಷೇಧಿಸುವಂತೆ ಆಗ್ರಹಿಸಿತ್ತು. ಪೇಟಾ ನ್ಯಾಯಾಲಯದಲ್ಲಿ ಮಾಡಿರುವ ಆರೋಪಗಳಲ್ಲಿ ಕೋಣಗಳನ್ನು ಹಿಂಸಾತ್ಮಕ ರೀತಿಯಲ್ಲಿ ಎಳೆಯುವಿಕೆ, ಕುಣಿಯುವಿಕೆ ಮತ್ತು ಮೂಗಿನ ಹಗ್ಗಗಳ ಒರಟು ನಿರ್ವಹಣೆ ಮೂಲಕ ಪ್ರಾಣಿಗಳಿಗೆ ಹಿಂಸಾತ್ಮಕ ರೀತಿಯಲ್ಲಿ ಕೌರ್ಯವನ್ನು ಮೆರೆಯಲಾಗಿತ್ತು ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ದಾವೆಯಲ್ಲಿ ತಿಳಿಸಿತ್ತು. ಕಂಬಳದ ಜೊತೆ ತಮಿಳುನಾಡಿನಲ್ಲಿ ಸುಗ್ಗಿಯ ಹಬ್ಬ ಪೊಂಗಲ್ ಬಳಿಕ ಗೂಳಿಯನ್ನು ಪಳಗಿಸುವ ಜಲ್ಲಿಕಟ್ಟು ವಿರುದ್ದವೂ ಪೇಟಾ ದಾವೆಯನ್ನು ಹೋಡಿತ್ತು. ಎರಡೂ ಪ್ರಕರಣಗಳು ಸುಪ್ರಿಂ ಅಗಳದಲ್ಲಿತ್ತು.
೧೨ ವರ್ಷಗಳ ಬಳಿಕ ನ್ಯಾಯ
ಪೇಟಾ ಹೂಡಿರುವ ದಾವೆಯ ವಿರುದ್ದ ಕಂಬಳದ ಪರವಾಗಿ ಉಪ್ಪಿನಂಗಡಿ ವಿಜಯ ವಿಕ್ರಮ ಜೋಡುಕರೆ ಕಂಬಲ ಸಮಿತಿ ಅಧ್ಯಕ್ಷರಾದ , ಪ್ರಸ್ತುತ ಪುತ್ತೂರು ಶಾಸಕರಾಗಿರುವ ಅಶೋಕ್ಕುಮಾರ್ ರೈಯವರು ಪೇಟಾ ವಿರುದ್ದ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿ ಕಂಬಳ ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾಗಿದ್ದು ಇದರಲ್ಲಿ ಯಾವುದೇ ರೀತಿಯ ಪ್ರಾಣಿ ಹಿಂಸೆಯಾಗುತ್ತಿಲ್ಲ. ಕಂಬಳದ ಬಗ್ಗೆ ಪೇಟಾ ಮಾಡಿರುವ ಆರೋಪಗಳು ನ್ಯಾಯಬದ್ದತೆಯಿಂದ ಕೂಡಿಲ್ಲ ಎಂದು ಕಂಬಳ ಪರ ವಕೀಲರು ನ್ಯಾಯಾಲಯದಲ್ಲಿ ವಾದಮಂಡಿಸುವ ಮೂಲಕ ಕಂಬಳದಲ್ಲಿ ಪ್ರಾಣಿ ಹಿಂಸೆಯಿಲ್ಲ ಎಂಬುದನ್ನು ಸಾಭೀತುಪಡಿಸುವಲ್ಲಿ ಯಸಶ್ವಿಯಾಗಿದ್ದರು. ಇದೀಗ ಕಂಬಳ ಸಮಿತಿ ಅಧ್ಯಕ್ಷರಾದ ಅಶೋಕ್ ರೈಯವರ ಏಕಾಂಗಿ ಹೋರಾಟಕ್ಕೆ ಜಯ ದೊರಕಿದ್ದು ಕಂಬಳ ಪರವಾಗಿ ದೇಶದ ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದೆ. ಮುಂದಿನ ದಿನಗಳಲ್ಲಿ ಕಂಬಳ ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಡೆಸಬಹುದಾಗಿದೆ.
ಹೋರಾಟಕ್ಕೆ ಸಂದ ಜಯ: ಅಶೋಕ್ ರೈ
ಕಂಬಳದ ವಿರುದ್ದ ಪೇಟಾ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದಾಗ ಅದರ ವಿರುದ್ದ ನಾನು ಸುಪ್ರಿಂ ಕೋರ್ಟಿನಲ್ಲಿ ಕಾನೂನು ಹೋರಾಟವನ್ನು ನಡೆಸಿದ್ದೆ. ಕಂಬಳ ಸಮಿತಿಗಳ ಪರವಾಗಿ ತಾನು ಸುಪ್ರಿಂ ಕೋರ್ಟಿಗೆ ಸುಪ್ರಿಂ ಕೋರ್ಟಿಗೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದು ಕಂಬಳ ಕೂಟಕ್ಕೆ ಪ್ರಾಚೀನ ಇತಿಹಾಸವಿದೆ. ಧಾರ್ಮಿಕ ಪರಂಪರೆ ಇದೆ, ಕಂಬಳದಲ್ಲಿ ಕೋಣಗಳಿಗೆ ಹಿಂಸೆಯಾಗುವುದಿಲ್ಲ, ಮಕ್ಕಳಂತೆ ಕೋಣಗಳನ್ನು ಸಾಕಿ ಸಲಹಲಾಗುತ್ತಿದೆ ಆದ್ದರಿಂದ ಕಂಬಳ ಕೂಟಕ್ಕೆ ನಿಷೇಧ ಹೇರಬಾರದು ಎಂದಿನಂತೆ ಕಂಬಳ ಕೂಟ ಆಯೋಜನೆಗೆ ಅವಕಾಶ ಮಾಡಿಕೊಡಬೇಕು ಎಂದು ನ್ಯಾಯಾಲಯದ ಮೂಲಕ ಮನವಿಯನ್ನು ಮಾಡಿದ್ದೆ. ನನ್ನ ಸತತ ೧೨ ವರ್ಷಗಳ ಹೋರಾಟಕ್ಕೆ ಜಯಗಳಿಸಿದ್ದು ತೀರ್ಪು ನಮ್ಮ ಪರ ಬಂದಿದೆ. ಇದು ತನಗೆ ಅತೀವ ಸಂತಸವನ್ನು ತಂದಿದೆ ಎಂದು ಉಪ್ಪಿನಂಗಡಿ ವಿಜಯವಿಕ್ರಮ ಕಂಬಳ ಸಮಿತಿ ಅಧ್ಯಕ್ಷರೂ , ಶಾಸಕರೂ ಆಗಿರುವ ಅಶೋಕ್ ಕುಮಾರ್ ರೈ ಕೋಡಿಂಬಾಡಿ ತಿಳಿಸಿದ್ದಾರೆ.
Posted by Vidyamaana on 2024-05-04 21:14:26 |
ವಿಟ್ಲ: ಬಿಸಿಲಿನ ತೀವ್ರತೆಯಿಂದಾಗಿ ಚಲಿಸುತ್ತಿದ್ದ ಬಸ್ಸಿನ ಗಾಜು ಇದ್ದಕ್ಕಿಂದ್ದಂತೆ ಒಡೆದ ಘಟನೆ ವಿಟ್ಲದ ಉರಿಮಜಲು ಎಂಬಲ್ಲಿ ನಡೆದಿದೆ. ಕೇರಳ ರಾಜ್ಯ ಸಾರಿಗೆ ಬಸ್ಸಿನ ಗಾಜು ಒಡೆದಿದ್ದು, ಇಬ್ಬರು ಮಕ್ಕಳು ಮತ್ತು ಚಾಲಕ ಗಾಯಗೊಂಡಿದ್ದಾರೆ.
ಪುತ್ತೂರಿನಿಂದ ವಿಟ್ಲ ಮೂಲಕ ಕಾಸರಗೋಡಿಗೆ ಹೊರಟಿದ್ದ ಕೇರಳ ರಾಜ್ಯದ ಮಲಬಾರ್ ಬಸ್ ಉರಿಮಜಲು ಸೊಸೈಟಿ ತಲುಪುತ್ತಿದ್ದಂತೆ ಮುಂಭಾಗದ ಗಾಜು ಒಡೆದಿದೆ.
Posted by Vidyamaana on 2023-09-24 17:32:28 |
ಪುತ್ತೂರು : ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಬನ್ನೂರು ಸಮೀಪದ ಸನ್ನಿಧಿ ಲೇಔಟ್ ನಲ್ಲಿ ನಡೆದಿದೆ.
ವಿವೇಕಾನಂದ ಕಾಲೇಜಿನಲ್ಲಿ ತೃತೀಯ ಬಿಸಿಎ ಓದುತ್ತಿದ್ದ ಕೀರ್ತಿಕಾ (19) ಮೃತ ಯುವತಿ.
ಕೀರ್ತಿಕಾ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಮೃತರು ತಂದೆ, ತಾಯಿ, ಸಹೋದರ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.
Posted by Vidyamaana on 2023-07-10 16:28:58 |
ಕಡಬ : ಹೊಳೆನೀರಿಗೆ ಬಿದ್ದು ಕೃಷಿಕ ಸಾವನ್ನಪ್ಪಿರುವ ಘಟನೆ ಕಡಬ ಸಮೀಪದ ಇಚ್ಚಂಪಾಡಿ ಗ್ರಾಮದಲ್ಲಿ ನಡೆದಿದೆ.ಇಚ್ಚಂಪಾಡಿ ಗ್ರಾಮದ ಕುಡಾಲ ನಿವಾಸಿ ಕೃಷ್ಣಪ್ಪ ಗೌಡ(ಕಿಟ್ಟಣ್ಣ) ಮೃತ ದುರ್ದೈವಿ.
ಜು.9ರಂದು ಮಧ್ಯಾಹ್ನ ಇಚ್ಚಂಪಾಡಿಯ ಕೊಕ್ಕೊ ಕಾಡಿನ ಹೊಳೆಬದಿಗೆ ಹೋದವರು ಸಂಜೆಯಾದರೂ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಮನೆಯವರು ಹೊಳೆಯಲ್ಲಿ ಹುಡುಕಾಟ ನಡೆಸಿದ್ದ ವೇಳೆ ಅವರ ಚಪ್ಪಲಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ರಾತ್ರಿ ತನಕ ಹೊಳೆ ಬದಿ ಹುಡುಕಾಟ ನಡೆಸಿದ್ದರೂ ಯಾವುದೇ ಸುಳಿವು ದೊರೆತಿರಲಿಲ್ಲ.
ಜು.10ರಂದು ಬೆಳಿಗ್ಗೆ ಹೊಳೆಬದಿ ಮತ್ತೆ ಹುಡುಕಾಟ ನಡೆಸಿದಾಗ ಗುಂಡ್ಯಹೊಳೆ ಸೇರುವಲ್ಲಿ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.