ಕೃತಕ ಬುದ್ದಿಮತ್ತೆ (ಎಐ) ತಂತ್ರಜ್ಞಾನ ಬಳಸಿ ನಟಿ ರುಕ್ಮಿಣಿ ವಸಂತ್ ಅವರ ಫೋಟೋ ಹಾಗೂ ವಿಡಿಯೋ ವನ್ನು ಅಶ್ಲೀಲವಾಗಿ ಮಾರ್ಪಡಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದ ಮೂವರನ್ನು ಬೆಂಗಳೂರು ಸೈಬರ್ ಕ್ರೈಂ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಜಿಲ್ಲೆಯ ಚಿಲಕಮುಖೀ ಗ್ರಾಮದ ರವಿಕುಮಾರ್ (24), ಶಿವಮೊಗ್ಗದ ತೀರ್ಥಹಳ್ಳಿ ಮೂಲದ ಬೆಂಗಳೂರಿನ ಕಾಮಾಕ್ಷಿ ಪಾಳ್ಯದ ನಿವಾಸಿ ಚಂದ್ರಕಾಂತ್ (33), ಮಹಾಲಕ್ಷ್ಮೀ ನಗರ 4ನೇ ಮುಖ್ಯ ರಸ್ತೆ, ಮಂಜುನಾಥ ನಗರ (ನ್ಯೂ ಎನ್ಯನ್), ನಾಗಸಂದ್ರ ಪೋಸ್ಟ್ ನಿವಾಸಿ ರಂಜಿತ್ (25) ಬಂಧಿತರು.
ಕೃತ್ಯಕ್ಕೆ ಬಳಸಿದ 3 ಮೊಬೈಲ್ ಫೋನ್ ಜಪ್ತಿ ಮಾಡಲಾಗಿದೆ. ಕಾಂತಾರ ಸಿನಿಮಾ ನಟಿ ರುಕ್ಮಿಣಿ ವಸಂತ್ ಬಗ್ಗೆ ಅವಮಾನಕರ ರೀತಿ ಬಿಂಬಿಸುವ ಸಲುವಾಗಿ ಎಐ ತಂತ್ರಜ್ಞಾನ ಬಳಸಿ ತಯಾರಿಸಿದ ಭಾವಚಿತ್ರ ಮತ್ತು ವಿಡಿಯೋಗಳನ್ನು ಆರೋಪಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಬೆಂಗಳೂರು ನಗರ ಸೈಬರ್ಕ್ರೈಂ ಪೊಲೀಸ್ ಠಾಣೆಯಲ್ಲಿ ನಟಿ ರುಕ್ಮಿಣಿ ವಸಂತ್ ದೂರು ದಾಖಲಿಸಿದ್ದರು. ಈ ಕುರಿತು ಆರೋಪಿಗಳ ಪತ್ತೆಗಾಗಿ ತಂಡ ರಚನೆ ಮಾಡಲಾಗಿತ್ತು.







