ಪುತ್ತೂರು: ನೆಹರು ನಗರದ ವಿವೇಕಾನಂದ ವಿದ್ಯಾವರ್ಧಕ ಸಂಘ(ರಿ) ವತಿಯಿಂದ 45ನೇ ವರ್ಷದ ಗಣೇಶೋತ್ಸವ ಸಂಭ್ರಮ ಅದ್ದೂರಿಯಾಗಿ ನಡೆಯಲಿದೆ. ಇದರ ಅಂಗವಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಕಾರ್ಯಚರಿಸುತ್ತಿರುವ ವಿವಿಧ ವಿದ್ಯಾಸಂಸ್ಥೆಗಳು ಜೊತೆಯಾಗಿ ಸೆ. 14 ರಿಂದ ಸೆ. 16ರ ವರೆಗೆ ಮೂರು ದಿನಗಳ ಕಾಲ ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲಿದೆ.ಸೆ. 14 ರಂದು ಬೆಳಗ್ಗೆ ಶಿವಪೇಟೆಯಿಂದ ಮೆರವಣಿಗೆ ಮೂಲಕ ವಿಗ್ರಹವನ್ನು ತಂದು ವಿವೇಕಾನಂದ ಕ್ಯಾಂಪಸ್ ನ ಕೇಶವ ಸಂಕಲ್ಪ ಸಭಾಭವನದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ವಿವೇಕಾನಂದ ವಿದ್ಯಾವರ್ಧಕ ಸಂಘದ ಹಿರಿಯ ನಿವೃತ್ತ ಉದ್ಯೋಗಿ ನಾರಾಯಣ ಕೆ ಇವರಿಂದ ಜ್ಯೋತಿ ಬೆಳಗಿಸಲಾಗುವುದು. ವಿವೇಕಾನಂದ ವಿದ್ಯಾವರ್ಧಕ ಸಂಘದ ಅಂಗ ಸಂಸ್ಥೆಗಳಿಂದ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಜೊತೆಗೆ ಗ್ರಾಮಸ್ಥರಿಂದ ಭಜನೆ ಹಾಗೂ ರಂಗಪೂಜೆ ನಡೆಯಲಿದೆ. ವಿವೇಕಾನಂದ ಕಾಲೇಜಿನ ಅಧ್ಯಾಪಕರುಗಳ ನೇತೃತ್ವದಲ್ಲಿ ಗಣಹೋಮ, ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗಲಿದೆ. ಸೆ.15ರ ಬೆಳಗ್ಗೆ ಗಣಪತಿ ಹವನ, ಸಂಸ್ಕೃತಿಕ ಕಾರ್ಯಕ್ರಮಗಳು, ಗಣೇಶೋತ್ಸವದ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಕಾಲೇಜಿನ ವಿದ್ಯಾರ್ಥಿಗಳಿಗೆ ಆಯೋಜಿಸಿದ ಆಟೋಟ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಸಭಾ ಕಾರ್ಯಕ್ರಮ ನಡೆಯಲಿದ್ದು, ಕಾರ್ಯಕ್ರಮದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ ದಕ್ಷಿಣ ಕನ್ನಡ ಇದರ ಕಾರ್ಯದರ್ಶಿ ಲತೇಶ್ ಬಾಕ್ರಬೈಲು ಭಾಗವಹಿಸಲಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ಶೆಟ್ಟಿ ವಹಿಸಲಿದ್ದಾರೆ. ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ವಿಜಯ ನಾರಾಯಣ ಕೆ.ಎಂ ಉಪಸ್ಥಿತರಿರುತ್ತಾರೆ.ಗಣೇಶೋತ್ಸವದ ಕೊನೆಯ ದಿನ ಅಂದರೆ ಸೆ. 16ರಂದು ಸಾಂಸ್ಕೃತಿಕ ಕಾರ್ಯಕ್ರಮಗಳ ಬಳಿಕ ಮಧ್ಯಾಹ್ನ ಮಹಾಪೂಜೆ ನಡೆಯಲಿದ್ದು, ಅಪರಾಹ್ನ 2 ಗಂಟೆಗೆ ಗಣಪತಿಯು ವೈಭವಪೂರಿತ ಶೋಭಯಾತ್ರೆಯು ಸಾಗಿ ಹಾರಡಿಯ ಬಾವಿಯಲ್ಲಿ ವಿಸರ್ಜನೆಗೊಳ್ಳಲಿದೆ. ವಿವೇಕಾನಂದ ವಿದ್ಯಾವರ್ಧಕ ಸಂಘದಿಂದ ಹೊಸದಾಗಿ ಪ್ರಾರಂಭಿಸಿದ, ಸ್ವಯಂ ಆರತಿಯು ಈ ಬಾರಿಯ 45ನೇ ಶ್ರೀ ಗಣೇಶೋತ್ಸವದಲ್ಲಿ ವಿಶೇಷವಾಗಿರುತ್ತದೆ. ಜೊತೆಗೆ ರಂಗಪೂಜೆ, ಸರ್ವಸೇವೆ, ಮಹಾಪೂಜೆ, ಗಣಪತಿ ಹವನ, ಹರಕೆ ಸೇವೆ, ಪಂಚಕಜ್ಜಾಯ, ವಿದ್ಯಾರಕ್ಷೆ, ಕರ್ಪೂರಾರತಿ ಸೇವೆಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.











