ಪುತ್ತೂರು, ಆಗಸ್ಟ್ 19: ಸಹಪಾಠಿ ಯುವತಿಗೆ ವಿವಾಹದ ಆಮೀಷವೊಡ್ಡಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ಮದುವೆಯಾಗಲು ನಿರಾಕರಿಸಿದ ಪ್ರಕರಣದಲ್ಲಿ, ಬಿಜೆಪಿ ಮುಖಂಡನ ಪುತ್ರ ಶ್ರೀಕೃಷ್ಣ ಜೆ.ರಾವ್ ವಿರುದ್ಧ ಮಹತ್ವದ ಬೆಳವಣಿಗೆ ನಡೆದಿದೆ.

ಸಂತ್ರಸ್ತೆ ಜೂನ್ 27ರಂದು ಗಂಡು ಮಗುವಿಗೆ ಜನ್ಮ ನೀಡಿದ್ದ ಹಿನ್ನೆಲೆಯಲ್ಲಿ, ಮಗು 50 ದಿನಗಳಾದ ನಂತರ ಇಂದು (ಆ.19) ಪುತ್ತೂರಿನ ನ್ಯಾಯಾಲಯದಲ್ಲಿ ಸಂತ್ರಸ್ತೆ, ಮಗು ಹಾಗೂ ಆರೋಪಿ ಮೂವರ ಡಿಎನ್‌ಎ ಪರೀಕ್ಷೆ ನಡೆಯಿತು

ಮಂಗಳೂರಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಪೊಲೀಸರು ಮಧ್ಯಾಹ್ನ ನ್ಯಾಯಾಲಯಕ್ಕೆ ಕರೆ ತಂದರು. ಈ ಸಂದರ್ಭದಲ್ಲಿ ಸಂತ್ರಸ್ತೆ ಯುವತಿ, ಮಗು ಮತ್ತು ಯುವತಿಯ ತಾಯಿ ಹಾಜರಿದ್ದರು. ನ್ಯಾಯಾಧೀಶರ ಸಮ್ಮುಖದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರ ನೇತೃತ್ವದಲ್ಲಿ ವಿಧಿವಿಜ್ಞಾನ ಇಲಾಖೆಯ ಸಿಬ್ಬಂದಿ ಮೂವರ ರಕ್ತದ ಮಾದರಿಗಳನ್ನು ಸಂಗ್ರಹಿಸಿದರು.

ಸಂಗ್ರಹಿಸಿದ ಮಾದರಿಗಳನ್ನು ಡಿ.ಎನ್‌ಎ ಪರೀಕ್ಷೆಗಾಗಿ ಬೆಂಗಳೂರು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಮಹಿಳಾ ಠಾಣೆಯ ಪೊಲೀಸ್ ಸಿಬ್ಬಂದಿ ಬಸ್ ಮೂಲಕ ಅವುಗಳನ್ನು ಬೆಂಗಳೂರಿಗೆ ಸಾಗಿಸಿದರು. ಸಂತ್ರಸ್ತೆಯ ತಾಯಿಯೂ ಮಾದರಿಗಳ ಭದ್ರತೆಗಾಗಿ ಅವರೊಂದಿಗೆ ತೆರಳಿದ್ದಾರೆ.

ಈ ಮೊದಲು ಸಂತ್ರಸ್ತೆಯ ತಾಯಿ “ಡಿಎನ್‌ಎ ತಿರುಚುವ ಆತಂಕ” ವ್ಯಕ್ತಪಡಿಸಿದ್ದರಿಂದಲೇ ಈ ಬಾರಿ ಸ್ವತಃ ಮಾದರಿಗಳೊಂದಿಗೆ ಬೆಂಗಳೂರಿಗೆ ತೆರಳಿರುವುದಾಗಿ ಕುಟುಂಬ ಮೂಲಗಳು ತಿಳಿಸಿವೆ.

ಒಂದು ವಾರದಲ್ಲಿ ಎಫ್‌ಎಸ್‌ಎಲ್ ವರದಿ ಬರುವ ಸಾಧ್ಯತೆ ಇದೆ. ಈ ಪ್ರಕರಣಕ್ಕೆ ಸಂಬಂಧಿಸಿದ ದೋಷಾರೋಪಣ ಪಟ್ಟಿ ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

Join WhatsApp Group
error: Content is protected !!