ವಿಟ್ಲ: ನಿಯಂತ್ರಣ ತಪ್ಪಿದ ಟಿಪ್ಪರ್ ಲಾರಿಯೊಂದು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಹಾಗೂ ಕ್ಲೀನರ್ ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲ ಸಮೀಪದ ಉಕ್ಕುಡದ ದರ್ಬೆ ಎಂಬಲ್ಲಿ ಜು.17ರ ರಾತ್ರಿ ನಡೆದಿದೆ.ಗಾಯಾಳುಗಳನ್ನು ಪುತ್ತೂರು ಮೂಲದ ದಿನೇಶ್ ಮತ್ತು ಅಂಕಿತ್ ಎಂದು ಗುರುತಿಸಲಾಗಿದೆ.ಉಕ್ಕುಡದಿಂದ ಕುದ್ದುಪದವು ಕಡೆಗೆ ಸಂಚರಿಸುತ್ತಿದ್ದ ಟಿಪ್ಪರ್ ಲಾರಿ, ವಿಟ್ಲ–ಅಡ್ಯನಡ್ಕ ರಸ್ತೆಯ ಉಕ್ಕುಡ ದರ್ಬೆಯ ಅಪಾಯಕಾರಿ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ.ಡಿಕ್ಕಿಯ ತೀವ್ರತೆಗೆ ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು, ಚಾಲಕ ಹಾಗೂ ಕ್ಲೀನರ್ ಕ್ಯಾಬಿನ್ನೊಳಗೆ ಸಿಲುಕಿಕೊಂಡಿದ್ದರು. ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ಹೊರತೆಗೆದು ಆಸ್ಪತ್ರೆಗೆ ಸಾಗಿಸಿದ್ದಾರೆ.ಅಪಘಾತಕ್ಕೀಡಾದ ಲಾರಿ ಉಪ್ಪಿನಂಗಡಿ ನಿವಾಸಿಯೊಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿದೆ.







