ಪುತ್ತೂರು: ಅರುಣಾ ಕಲಾಮಂದಿರದ ಸಮೀಪದ ಎಪಿಎಂಸಿ ತಿರುವಿನಲ್ಲಿ ಪಾದಚಾರಿಗಳಿಗೆ ಅಪಾಯ ತಂದೊಡ್ಡಿದ್ದ ತುಂಡಾದ ಚರಂಡಿ ಸ್ಲ್ಯಾಬ್ ಸಮಸ್ಯೆಗೆ ವಿದ್ಯಮಾನ ನ್ಯೂಸ್ ವರದಿ ಫಲಶ್ರುತಿಯಾಗಿ ಇದೀಗ ಪರಿಹಾರ ದೊರೆತಿದೆ.
ಮೂರು ರಸ್ತೆಗಳು ಸೇರುವ ಈ ಪ್ರದೇಶದಲ್ಲಿ ವಾಹನ ದಟ್ಟಣೆಯ ನಡುವೆ ಪಾದಚಾರಿಗಳು ರಸ್ತೆಯಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ಇತ್ತು. ಇದರ ನಡುವೆ ಚರಂಡಿಯ ಸ್ಲ್ಯಾಬ್ಗಳು ಹಲವು ಕಡೆಗಳಲ್ಲಿ ತುಂಡಾಗಿ, ಸರಳುಗಳು ಹೊರಗೆ ಚಾಚಿಕೊಂಡಿದ್ದವು. ಇದರಿಂದ ಪಾದಚಾರಿಗಳು ಆಯತಪ್ಪಿ ಚರಂಡಿಗೆ ಬೀಳುವ ಆತಂಕ ಎದುರಾಗಿತ್ತು.
ಈ ಕುರಿತು ವಿದ್ಯಮಾನ ನ್ಯೂಸ್ ಸಮಸ್ಯೆಯನ್ನು ವರದಿ ಮಾಡಿ ಸಂಬಂಧಪಟ್ಟವರ ಗಮನ ಸೆಳೆದಿತ್ತು. ವರದಿ ಶಾಸಕ ಅಶೋಕ್ ಕುಮಾರ್ ರೈ ಅವರ ಗಮನಕ್ಕೂ ಬಂದಿದ್ದು, ಅವರು ಸಂಬಂಧಪಟ್ಟ ಅಧಿಕಾರಿಗಳ ಮೂಲಕ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಶಾಸಕರ ಸೂಚನೆಯಂತೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳದಲ್ಲಿ ದುರಸ್ತಿ ಕಾಮಗಾರಿ ಕೈಗೊಂಡಿದ್ದು, ಹಲವು ವರ್ಷಗಳಿಂದ ಪಾದಚಾರಿಗಳಿಗೆ ತೊಂದರೆ ನೀಡುತ್ತಿದ್ದ ಸಮಸ್ಯೆಗೆ ಇದೀಗ ಪರಿಹಾರ ದೊರೆತಿದೆ.
“ಶಾಸಕರ ಗಮನಕ್ಕೆ ಬಂದರೆ ಮೂರು ದಿನದೊಳಗೆ ಸಮಸ್ಯೆ ಪರಿಹಾರವಾಗುತ್ತದೆ ಎಂದು ನಾವು ಹೇಳಿದ್ದೆವು. ಅದರಂತೆ ಇದೀಗ ಸಮಸ್ಯೆ ಬಗೆಹರಿದಿದೆ. ಜನರ ಸಮಸ್ಯೆಗೆ ಸ್ಪಂದಿಸುವ ಮೂಲಕ ಶಾಸಕರು ನಮ್ಮ ನಂಬಿಕೆಯನ್ನು ಉಳಿಸಿದ್ದಾರೆ” ಎಂದು ಸ್ಥಳೀಯರು ತಿಳಿಸಿದ್ದಾರೆ











