
ಒಟ್ಟಾವಾ: ಕೆನಡಾದ (Canada) ಬ್ರಾಂಪ್ಟನ್ (Brampton) ನಗರದಲ್ಲಿರುವ ಹಿಂದೂ ದೇವಾಲಯವೊಂದರ ಮೇಲೆ ಖಲಿಸ್ತಾನಿ ಗುಂಪು (Khalistani attack) ಭಾನುವಾರ ದಾಳಿ ಮಾಡಿ ಹಿಂದೂಗಳ ಮೇಲೆ ಹಲ್ಲೆ ನಡೆಸಿತ್ತು. ಪರಿಸ್ಥಿತಿ ವಿಕೋಪಕ್ಕೇರಿದಾಗ ಪೊಲೀಸರನ್ನು ನಿಯೋಜಿಸಲಾಗಿತ್ತು.
ಆದರೆ ಈಗ ಪೊಲೀಸರೇ ಹಿಂದುಗಳ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಪೊಲೀಸರು ಹಿಂದೂಗಳ ಮೇಲೆ ಹಲ್ಲೆ ನಡೆಸಿದ ವಿಡಿಯೋ ವೈರಲ್ ಆಗಿದೆ.
ಭಾನುವಾರ ಖಲಿಸ್ತಾನಿ ಗುಂಪೊಂದು ಹಿಂದು ದೇವಸ್ಥಾನಕ್ಕೆ ನುಗ್ಗಿ ಹಿಂದೂಗಳ ಮೇಲೆ ಹಲ್ಲೆ ನಡೆಸಿದೆ. ಘಟನಾ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಖಲಿಸ್ತಾನಿಗಳನ್ನು ಬೆಂಬಲಿಸಿ ಹಿಂದೂಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ನಡೆಸಿದ ದೃಶ್ಯವನ್ನು ಪತ್ರಕರ್ತ ಡೇನಿಯಲ್ ಬೋರ್ಡ್ಮನ್ ಎಂಬುವವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಪೊಲೀಸರು ಹಿಂದೂಗಳ ಮೇಲೆ ಹಲ್ಲೆ ಮಾಡುತ್ತಿರುವುದು ಕಾಣಿಸುತ್ತದೆ. ಭಾರತೀಯ ಮೂಲದವರು ತ್ರಿವರ್ಣ ಧ್ವಜವನ್ನು ಹಿಡಿದು ಪ್ರತಿಭಟನೆ ನಡೆಸಿದ್ದಾರೆ.
ಬೋರ್ಡ್ಮನ್ ಹೇಳಿರುವ ಪ್ರಕಾರ ಖಲಿಸ್ತಾನಿ ಬೆಂಬಲಿಗರು ಮತ್ತು ಹಿಂದೂ ಸಮುದಾಯದ ಸದಸ್ಯರ ನಡುವಿನ ವಾಗ್ವಾದದ ನಂತರ ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಪೊಲೀಸರು ದೇವಾಲಯಕ್ಕೆ ಹೋಗಿದ್ದಾರೆ. ಆದರೆ ಹಿಂದೂಗಳ ಜೊತೆಯೇ ವಾಗ್ವಾದ ನಡೆಸಿ ಅವರನ್ನು ತಳ್ಳಿ, ಲಾಠಿಯಿಂದ ಹಲ್ಲೆ ನಡೆಸಿದ್ದಾರೆ ಎಂದಿದ್ದಾರೆ. ವಿಡಿಯೋದಲ್ಲಿ ಮಹಿಳೆಯೊಬ್ಬರು ಮಹಿಳೆ ಗಡ್ಡಧಾರಿ ಅಧಿಕಾರಿಯನ್ನು ತೋರಿಸುತ್ತಾ, ಹಿಂದೂಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಖಲಿಸ್ತಾನಿಗಳನ್ನು ರಕ್ಷಿಸುತ್ತಿದ್ದಾರೆ ಹಾಗೂ ಹಿಂದೂ ಸಮುದಾಯವನ್ನು ಗುರಿಯಾಗಿಸಿದ್ದಾರೆ ಎಂದು ಆರೋಪಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ನಿನ್ನೆ ಖಲಿಸ್ತಾನಿ ಬೆಂಬಲಿಗರು ದೇವಾಲಯದ ಮೇಲೆ ದಾಳಿ ಮಾಡಿ ಹಿಂದೂಗಳ ಮೇಲೆ ಹಲ್ಲೆ ನಡೆಸಿದ್ದರು. ಘಟನೆಗೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಖಂಡನೆ ವ್ಯಕ್ತಪಡಿಸಿದ್ದು, ಬ್ರಾಂಪ್ಟನ್ ದೇವಾಲಯದಲ್ಲಿ ನಡೆದ ಹಿಂಸಾಚಾರ ಒಪ್ಪುವಂತದ್ದಲ್ಲ, ಕೆನಡಾದಲ್ಲಿ ಪ್ರತಿಯೊಬ್ಬರಿಗೂ ತಮ್ಮ ಧರ್ಮವನ್ನು ಆಚರಿಸುವ ಹಕ್ಕು ಇದೆ. ಘಟನೆಯ ಬಗ್ಗೆ ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇನ್ನು ಘಟನೆಯನ್ನು ಕರ್ನಾಟಕ ಮೂಲದ ಕೆನಡಾ ಸಂಸದ ಚಂದ್ರ ಆರ್ಯ ಖಂಡಿಸಿದ್ದಾರೆ. ಖಲಿಸ್ತಾನಿಗಳ ವರ್ತನೆ ಮಿತಿ ಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತ ಹಾಗೂ ಕೆನಡಾ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ ಈ ಘಟನೆ ನಡೆದಿದೆ






