
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಲಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದು, 30 ಜನ ಮೃತಪಟ್ಟಿದ್ದಾರೆ.
ಪಾಕ್ ಬೆಂಬಲಿತ ಟಿಆರ್ ಎಫ್ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದು ಶಿವಮೊಗ್ಗದ ಉದ್ಯಮಿ ಮಂಜುನಾಥ್ ರಾವ್ ಮತ್ತು ಬೆಂಗಳೂರಿನ ಉದ್ಯಮಿ ಭರತ್ ಭೂಷಣ್ ಕೂಡಾ ಬಲಿಯಾಗಿದ್ದಾರೆ.
ಪತ್ನಿ ಮತ್ತು ಪುತ್ರನ ಎದುರಲ್ಲೇ ಉಗ್ರರು ಮಂಜುನಾಥ್ ರಾವ್ ಅವರನ್ನು ಹತ್ಯೆಗೈದಿದ್ದು, ಶಿವಮೊಗ್ಗದಲ್ಲಿರುವ ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದಾರೆ.
ಘಟನೆಯಲ್ಲಿ ಇಬ್ಬರು ವಿದೇಶಿ ಪ್ರವಾಸಿಗರು ಕೂಡಾ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಅತೀ ದೊಡ್ಡ ಉಗ್ರ ದಾಳಿ ಇದಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಷಾ ಶ್ರೀನಗರಕ್ಕೆ ಧಾವಿಸಿ ಹಿರಿಯ ಅಧಿಕಾರಿಗಳ ಸಭೆ ನಡೆಸಿದ್ದಾರೆ. ನಾಳೆ ಅಮಿತ್ ಷಾ ಪಹಲ್ಗಾಂವ್ ಗೆ ಭೇಟಿ ನೀಡಲಿದ್ದಾರೆ.
ಕರ್ನಾಟಕದ ಇಬ್ಬರು ಪ್ರವಾಸಿಗರು ಮೃತಪಟ್ಟಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತುರ್ತು ಕ್ರಮಗಳನ್ನು ಕೈಗೊಂಡಿದ್ದು, ಐಪಿಎಸ್ ಅಧಿಕಾರಿ ಆರ್. ಚೇತನ್ ನೇತೃತ್ವದ ಪೊಲೀಸರ ತಂಡವನ್ನು ಕನ್ನಡಿಗರ ಸುರಕ್ಷಿತ ವಾಪಸಾತಿಗೆ ಕ್ರಮ ವಹಿಸಲು ಕಾಶ್ಮೀರಕ್ಕೆ ಕಳುಹಿಸಿದೆ.
ಇನ್ನು ಘಟನೆಯ ಹಿನ್ನೆಲೆಯಲ್ಲಿ ಅನಂತ್ ನಾಗ್ ಪೊಲೀಸರು ಹೆಲ್ಸ್ ಲೈನ್ ಸ್ಥಾಪಿಸಿದ್ದು, ಉಗ್ರರ ಕೃತ್ಯಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ






