ಕರ್ನಾಟಕ ರಾಜ್ಯ ಪೊಲೀಸ್‌ ಮಹಾನಿರ್ದೇಶಕರಾಗಿರುವ ಅಲೋಕ್‌ ಮೋಹನ್‌ ಅವರು ಏಪ್ರಿಲ್‌ 30ರ ಬುಧವಾರದಿಂದ ಸೇವೆಯಿಂದ ನಿವೃತ್ತರಾಗಲಿದ್ದಾರೆ. ಆದರೆ ಅವರ ಜಾಗಕ್ಕೆ ಹೊಸ ಡಿಜಿಪಿಯನ್ನು ಸದ್ಯಕ್ಕೆ ನೇಮಕ ಮಾಡುವ ಬದಲು ಅವರ ಸೇವೆಯನ್ನೇ ಇನ್ನೂ ಮೂರು ವಾರಕ್ಕೆ ವಿಸ್ತರಣೆ ಮಾಡಲು ಕರ್ನಾಟಕ ಸರ್ಕಾರ ಮುಂದಾಗಿದೆ.

ಇದಕ್ಕಾಗಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಸಹಿತ ಪ್ರಮುಖರ ಸಮಿತಿಯು ಅಲೋಕ್‌ ಮೋಹನ್‌ ಅವರ ಸೇವಾವಧಿಯನ್ನು ಮುಂದುವರೆಸಲು ನಿರ್ಧರಿಸಿದೆ ಎನ್ನಲಾಗಿದೆ. ಅಲೋಕ್‌ ಮೋಹನ್‌ ಅವರು ಕರ್ನಾಟಕದ ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿ ಮೇ 22ಕ್ಕೆ ಎರಡು ವರ್ಷ ತುಂಬಲಿದೆ. ಈ ಕಾರಣದಿಂದಲೇ ಅವರ ಸೇವಾವಧಿ ವಿಸ್ತರಿಸಲಾಗುತ್ತಿದೆ ಎನ್ನಲಾಗಿದೆ.

1987ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾಗಿರುವ ಅಲೋಕ್‌ಮೋಹನ್‌ ಅವರು ಎರಡು ವರ್ಷದ ಹಿಂದೆ ಅಧಿಕಾರ ಸ್ವೀಕರಿಸಿದ್ದರು. ಆಗ ಡಿಜಿಪಿಯಾಗಿದ್ದ ಪ್ರವೀಣ್‌ ಸೂದ್‌ ಅವರು ಸಿಬಿಐ ನಿರ್ದೇಶಕರಾಗಿ ಕೇಂದ್ರ ಸೇವೆಗೆ ತೆರಳಿದ್ದರಿಂದ ತೆರವಾದ ಸ್ಥಾನಕ್ಕೆ ಅಲೋಕ್‌ಮೋಹನ್‌ ಅವರನ್ನು ನೇಮಿಸಲಾಗಿತ್ತು. ಈಗ ಅವರ ನಿವೃತ್ತಿ ಸಮಯ. ಕೆಲವು ದಿನಗಳಿಂದ ಹೊಸ ಡಿಜಿಪಿ ನೇಮಕದ ಪ್ರಕ್ರಿಯೆ ನಡೆದಿದೆ.

ಸದ್ಯ ಪ್ರಶಾಂತ್‌ ಕುಮಾರ್‌ ಠಾಕೂರ್‌ ಅವರು ಹಿರಿತನದ ಮೇಲೆ ಪೊಲೀಸ್‌ ಮುಖ್ಯಸ್ಥರ ಹುದ್ದೆಗೆ ನೇಮಕಗೊಳ್ಳುವ ಅವಕಾಶವಿದ್ದರೂ ಅವರ ಬದಲು ಮುಂದಿನ ಬ್ಯಾಚ್‌ನ ಇಬ್ಬರ ಹೆಸರು ಪ್ರಮುಖವಾಗಿದೆ. ಅದರಲ್ಲಿ ಡಾ.ಎಂ.ಎ.ಸಲೀಂ ಹಾಗೂ ಡಾ.ರಾಮಚಂದ್ರರಾವ್‌ ಹೆಸರು ಪರಿಗಣನೆಯಲ್ಲಿದೆ. ಸಲೀಂ ಪರವಾಗಿ ಸಿಎಂ ಸಿದ್ದರಾಮಯ್ಯ ಇದ್ದಾರೆ. ಕನ್ನಡಿಗರೊಬ್ಬರಿಗೆ ಡಿಜಿಪಿ ಹುದ್ದೆ ಸಿಗಲಿದೆ. ಮುಸ್ಮೀಂ ಸಮುದಾಯದವರಿಗೂ ಡಿಜಿಪಿ ಹುದ್ದೆಯ ಅವಕಾಶ ಸಿಗಲಿ ಎನ್ನುವ ಲೆಕ್ಕಾಚಾರವಿದೆ.

ಆದರೆ ಡಾ.ರಾಮಚಂದ್ರರಾವ್‌ ಅವರ ಪರವಾಗಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಹಾಗೂ ಗೃಹ ಸಚಿವ ಡಾ.ಪರಮೇಶ್ವರ್‌ ಇವರಿದ್ದಾರೆ. ಡಾ.ರಾಮಚಂದ್ರರಾವ್‌ ಪುತ್ರಿ ರನ್ಯಾ ಪ್ರಕರಣದ ವಿವಾದದ ಹಿನ್ನೆಲೆಯಲ್ಲಿ ಅವರಿಗೆ ಅವಕಾಶ ತಪ್ಪಬಹುದು ಎನ್ನುವ ಚರ್ಚೆಗಳೂ ನಡೆದಿವೆ.
ಸುಪ್ರೀಂ ಕೋರ್ಟ್ ಆದೇಶದ ಅನ್ವಯ 2 ವರ್ಷ ಕಾರ್ಯನಿರ್ವಹಣೆ ಮಾಡಬೇಕು. ಪೊಲೀಸ್ ಮಹಾನಿರ್ದೇಶಕರು 2 ವರ್ಷ ಕಾರ್ಯನಿರ್ವಹಿಸಬೇಕು ಎಂಬ ಆದೇಶದ ಅನ್ವಯ ಮುಂದಿನ ಮೇ.31ರವರೆಗೆ ಸೇವಾವಧಿಯನ್ನು ವಿಸ್ತರಣೆ ಮಾಡಿ ಆದೇಶಿಸಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!