
ಒಬ್ಬ ವ್ಯಕ್ತಿಯ ನಂಬಿಕೆಯನ್ನು ಸಂಪೂರ್ಣವಾಗಿ ನಾಶಮಾಡುವಂತ ಕೃತ್ಯಕ್ಕೆ ಕೈ ಹಾಕಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕಳೆದ 10 ವರ್ಷಗಳಿಂದ ತನ್ನ ಬಳಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ರಾಜೇಶ್ ಎಂಬಾತ, ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು ಮಾಲೀಕ ತೋಟ ಪ್ರಸಾದ್ ಅವರ 1.51 ಕೋಟಿ ರೂಪಾಯಿಯನ್ನು ಎಗರಿಸಿದ್ದಾನೆ.
ವೈಯಾಲಿಕಾವಲ್ ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ 1.48 ಕೋಟಿ ನಗದು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಹಣವನ್ನೇ ಎಗರಿಸಿದ ನಂಬಿಕಸ್ಥ ಡ್ರೈವರ್: ತೋಟ ಪ್ರಸಾದ್ ಅವರು ಚಾರ್ಟೆರ್ಡ್ ಅಕೌಂಟೆಂಟ್ ಆಗಿದ್ದು, ಬೆಂಗಳೂರಿನ ಕೊದಂಡರಾಮಪುರದಲ್ಲಿರುವ ತಮ್ಮ ಕಚೇರಿಯಿಂದ ಏಪ್ರಿಲ್ 6ರಂದು ಬ್ಯಾಂಕ್ನಲ್ಲಿ ಠೇವಣಿ ಮಾಡಲು 1.51 ಕೋಟಿ ರೂ. ನಗದು ಡ್ರೈವರ್ ರಾಜೇಶ್ ಗೆ ನೀಡಿದ್ದರು. ಈ ಹಣವನ್ನು ನೀಡಿದ ಬಳಿಕ, ರಾಜೇಶ್ ತನ್ನ ಕಾರನ್ನು ಪಾರ್ಕ್ ಮಾಡುವ ನೆಪದಲ್ಲಿ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದನು. ಆಂಧ್ರಪ್ರದೇಶದ ಗುಂಟೂರಿನ ಮೂಲ ಹೊಂದಿರುವ ರಾಜೇಶ್, ಪರಾರಿಯಾದ ಬಳಿಕ ಹಣವನ್ನು ತನ್ನ ಮನೆಯಲ್ಲಿಟ್ಟುಕೊಂಡು ಸುಮಾರು ₹2.5 ಲಕ್ಷ ಖರ್ಚು ಮಾಡಿಕೊಂಡಿದ್ದಾನೆ. ಪೊಲೀಸರು ತಕ್ಷಣವೇ ತನಿಖೆ ಆರಂಭಿಸಿ, ಆತನನ್ನು ಪತ್ತೆಹಚ್ಚಿ ಬಂಧಿಸಿ ₹1.48 ಕೋಟಿ ನಗದು ವಶಪಡಿಸಿಕೊಂಡಿದ್ದಾರೆ.
ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು: ವೈಯಾಲಿಕಾವಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಮುಂದುವರಿಸುತ್ತಿದ್ದಾರೆ. ಕಳೆದ ಒಂದು ದಶಕದಿಂದ ತಮ್ಮ ಬಳಿ ಕೆಲಸ ಮಾಡುತ್ತಿದ್ದ ಡ್ರೈವರ್ನಿಂದ ಈ ರೀತಿ ದ್ರೋಹ ನಡೆಯುವುದು ತೋಟ ಪ್ರಸಾದ್ ಅವರ ನಂಬಿಕೆಗೆ ಅಘಾತವಾಗಿದೆ. ಕೆಲಸದ ಸ್ಥಳದಲ್ಲಿ ನಂಬಿಕೆ, ಪ್ರಾಮಾಣಿಕತೆ ಎಷ್ಟೋ ತೋರಿಸಿದರೂ ಅವರ ಮೇಲೆ ಒಂದು ಕಣ್ಣಿಟ್ಟು ನಿಗಾವಹಿಸುವುದು ಅಗತ್ಯವಾಗಿದೆ. ಇಲ್ಲಿ ಮಾಲೀಕ ಕೋಟಿಗಟ್ಟಲೆ ಹಣವನ್ನು ಒಬ್ಬ ಸಾಮಾನ್ಯ ಡ್ರೈವರ್ ಕೈಗೆ ಕೊಟ್ಟು ವ್ಯವಹಾರ ಮಾಡುವಂತೆ ಕೊಟ್ಟಾಗ ಹೀಗೆ ಹಣ ಕದ್ದು ಪರಾರಿಯಾಗಿ ಇದೀಗ ಜೈಲು ಕಂಬಿ ಎಣಿಸುವಂತಾಗಿದೆ






