
ನಗರದ ನೂತನ ಜಿಲ್ಲಾಡಳಿತ ಕೇಂದ್ರವಾದ ʼಪ್ರಜಾ ಸೌಧʼ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಸಿಎಂ ಸಿದ್ದರಾಮಯ್ಯ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ಇತಿಹಾಸ ಪಾಠ ಮಾಡಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮೊದಲಿಗೆ ಮಾತನಾಡಿದ ವೇದವ್ಯಾಸ್ ಕಾಮತ್ ಸ್ಮಾರ್ಟ್ ಸಿಟಿ ಯೋಜನೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕನಸಿನ ಕೂಸು.
ಈ ಯೋಜನೆ ಇಲ್ಲದೇ ಇದ್ದಿದ್ದರೆ ಇಂದು ಈ ಕೆಲಸ ಆಗುತ್ತಲೇ ಇರಲಿಲ್ಲ ಎಂದು ಹೇಳಿದರು. ಇದನ್ನೆಲ್ಲ ಆಲಿಸುತ್ತಾ ಕುಳಿತಿದ್ದ ಸಿದ್ದರಾಮಯ್ಯ ತಮ್ಮ ಭಾಷಣದ ವೇಳೆ ಕಾಮತ್ಗೆ ತಿರುಗೇಟು ನೀಡಿದರು.
ʼಮಿಸ್ಟರ್ ಕಾಮತ್. ನಾನೇ ಇದರ ಗುದ್ದಲಿ ಪೂಜೆ ಮಾಡಿದ್ದದ್ದು, ನಾನೇ ಇವಾಗ ಉದ್ಘಾಟನೆ ಮಾಡ್ತಾ ಇರೋದು. ನೀವು ಒಂದು ಮಾತು ಹೇಳಿದ್ರಿ. ಸ್ಮಾರ್ಟ್ ಸಿಟಿ ಯೋಜನೆಯನ್ನು ಪ್ರಧಾನಮಂತ್ರಿ ಮಾಡಿದ್ರು ಅಂತ. ನಿಜ, ಆದರೆ ನಾವೂ ಅರ್ಧ ದುಡ್ಡು ಕೊಡುತ್ತೇವೆ ಅಲ್ವೇ? ನೀವು ನಾಲ್ಕು ವರ್ಷ ಇದ್ರಲ್ಲ ಆಗ ಏಕೆ ಖರ್ಚು ಮಾಡಲಿಲ್ಲ? 4 ವರ್ಷ ಇದ್ರು ಆಗಲೂ ಸ್ಮಾರ್ಟ್ ಸಿಟಿ ಪ್ರೋಗ್ರಾಂ ಇತ್ತು. ಆಗ ಯಾಕೆ ಖರ್ಚು ಮಾಡಲಿಲ್ಲ? ಆಗ ಖರ್ಚು ಮಾಡಿದ್ರೆ ಇಷ್ಟು ದಿನ ಬೇಕಾಗಿತ್ತಾ?ʼ ಎಂದರು.
ʼ2015ರಲ್ಲಿ ಇದಕ್ಕೆ ಶಂಕುಸ್ಥಾಪನೆಯಾಯಿತು. ಇದಕ್ಕೆ ಕಾರಣ ರಮಾನಾಥ್ ರೈ ಅವರು. ಇದಕ್ಕೆ ಅಡಿಗಲ್ಲು ಹಾಕಲು ಕಾರಣ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮಾನಾಥ್ ರೈ ಅವರು ನನ್ನನ್ನು ಕರೆದುಕೊಂಡು ಬಂದು ಮಂಗಳೂರಿನಲ್ಲಿ ಹೊಸ ಜಿಲ್ಲಾಧಿಕಾರಿ ಕಚೇರಿ ಆಗಲೇಬೇಕು ಅಂತ ಹೇಳಿ ನನ್ನ ಮೇಲೆ ಒತ್ತಡ ಹಾಕಿ ಅವತ್ತು ಮೊದಲ 45 ಕೋಟಿ ರೂಪಾಯಿಗಳಿಗೆ ಮಂಜೂರಾತಿಯನ್ನು ಕೊಟ್ಟೆವುʼ ಎಂದರು.
ಅಲ್ಲದೇ ಇತಿಹಾಸ ತಿರುಚಬೇಡಿ, ಸುಳ್ಳು ಹೇಳಬೇಡಿ. ಜನ ನಂಬಬೇಕಲ್ಲ, ರಾಜಕೀಯ ಮಾಡೋಣ, ಆದರೆ ಅಭಿವೃದ್ಧಿಯಲ್ಲಿ ರಾಜಕೀಯ ಬೇಡ ಎಂದು ಸಿದ್ದರಾಮಯ್ಯ ಕ್ಲಾಸ್ ವೇದವ್ಯಾಸ್ ಕಾಮತ್ಗೆ ಕ್ಲಾಸ್ ತೆಗೆದುಕೊಂಡರು.









