
ಬೆಂಗಳೂರು, ಜೂನ್ 4 : ಐಪಿಎಲ್ ಟ್ರೋಫಿ ಗೆದ್ದ ಆರ್ ಸಿಬಿ
ಆಟಗಾರರ ಜೊತೆಗೆ ಅಭಿಮಾನಿಗಳ ಮೆರವಣಿಗೆ ಮಾಡಲು ಹೋಗಿ ದುರಂತವೇ ನಡೆದುಹೋಗಿದೆ. ಚಿನ್ನಸ್ವಾಮಿ ಸ್ಟೇಡಿಯಂ ಎದುರಲ್ಲಿ ಸಂಜೆ ನಾಲ್ಕು ಗಂಟೆ ಸುಮಾರಿಗೆ ಮೆರವಣಿಗೆ ಆಗುತ್ತಿದ್ದಾಗಲೇ ಸಾವಿರಾರು ಸಂಖ್ಯೆಯಲ್ಲಿ ಜನರು ಸೇರಿದ್ದಾಗಲೇ ಕಾಲ್ತುಳಿತ ಸಂಭವಿಸಿದ್ದು, ಹತ್ತಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ
ವಿಧಾನಸೌಧ ಎದುರಲ್ಲಿ ಆರ್ ಸಿಬಿ ಆಟಗಾರರನ್ನು ಸನ್ಮಾನಿಸಿ ಬೀದಿಯಲ್ಲಿ ಮೆರವಣಿಗೆ ನಡೆಸಲು ಸರಕಾರವೇ ಆಯೋಜನೆ ಮಾಡಿಕೊಂಡಿತ್ತು. ಚಿನ್ನಸ್ವಾಮಿ ಸ್ಟೇಡಿಯಂ ಪಕ್ಕದಲ್ಲಿ ಸಾವಿರಾರು ಜನರು ಸೇರಿದ್ದು ಮೆರವಣಿಗೆ ಆಗುತ್ತಿದ್ದಾಗಲೇ ಯುವಕರು ಜನರ ಮೈಮೇಲೆ ಬಿದ್ದಿದ್ದಾರೆ.
ಮೆಡಿಕಲ್ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದ್ದರು. ಈ ವೇಳೆ, ಒಬ್ಬರ ಮೇಲೊಬ್ಬರು ಹತ್ತಿ ಘಟನೆ ಉಂಟಾಗಿದೆ ಎನ್ನಲಾಗುತ್ತಿದ್ದು, ಪೊಲೀಸರನ್ನು ಲೆಕ್ಕಿಸದೆ ಕಾಲ್ತುಳಿತ ಉಂಟಾಗಿದೆ. ಗೇಟ್ ಅನ್ನು ಒಂದೇ ಸಮಯದಲ್ಲಿ ಓಪನ್ ಮಾಡಿದ್ದರಿಂದ ಜನರು ಎಲ್ಲ ಕಡೆಯಿಂದ ತಳ್ಳಿಕೊಂಡು ಬಂದಿದ್ದು, ನೂಕುನುಗ್ಗಲು ಉಂಟಾಗಿದ್ದರಿಂದ ದುರಂತವೇ ನಡೆದುಹೋಗಿದೆ.
ಮೃತದರಲ್ಲಿ ಅಂಬೇಡ್ಕರ್ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿಯೂ ಸೇರಿದ್ದಾಳೆ. 50ಕ್ಕೂ ಹೆಚ್ಚು ಮಂದಿಯನ್ನು ಶಿವಾಜಿನಗರದ ಬೌರಿಂಗ್ ಆಸ್ಪತ್ರೆ, ಮಲ್ಯ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದೆ. ಸತ್ತವರಲ್ಲಿ ಮಕ್ಕಳೂ ಇದ್ದಾರೆ, ಸದ್ಯಕ್ಕೆ ಮೃತರ ಬಗ್ಗೆ ಮಾಹಿತಿ ತಿಳಿದ ಹೆತ್ತವರು ಆಸ್ಪತ್ರೆಯತ್ತ ಧಾವಿಸಿದ್ದಾರೆ. ನಗರದ ವಿವಿಧ ಕಡೆಗಳಿಂದ ಅಭಿಮಾನಿಗಳು ಬಂದಿದ್ದರಿಂದ ಪೊಲೀಸರಿಗೆ ನಿರ್ವಹಣೆ ಮಾಡಲಾಗದೆ ದುರಂತ ಎದುರಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿಯೇ ಆರ್ ಸಿಬಿ ಆಟಗಾರರಿಗೆ ಸನ್ಮಾನ, ಮೆರವಣಿಗೆ ಆಯೋಜಿಸಲಾಗಿತ್ತು. ಇಷ್ಟೊಂದು ಜನ ಸೇರುವುದನ್ನು ನಿರೀಕ್ಷಿಸಿರದ ಪೊಲೀಸರು ಮತ್ತು ರಾಜ್ಯ ಸರಕಾರದ ಎಡವಟ್ಟಿನಿಂದಲೇ ಘಟನೆ ಆಗಿಹೋಗಿದೆ. ಆರ್ ಸಿಬಿ ಸಂಭ್ರಮ ಹೆಸರಲ್ಲಿ ಸಾವಿರಾರು ಜನರು ಇಡೀ ಕುಟುಂಬವೇ ಬಂದು ನೆರೆದಿತ್ತು. ಮಕ್ಕಳನ್ನು ಕರೆದುಕೊಂಡು ಬಂದಿದ್ದು ಏಕಾಏಕಿ ನೂಕುನುಗ್ಗಲು ಉಂಟಾಗಿ ದುರಂತವೇ ನಡೆದುಹೋಗಿದೆ.






