ಕೇರಳದ ಕೋಯಿಕ್ಕೋಡ್ ಬೇಪೂರ್ ಭಾಗದ ಸಮುದ್ರದಲ್ಲಿ ಬೆಂಕಿ ಕಾಣಿಸಿಕೊಂಡ ಎಂವಿ ವ್ಯಾನ್ ಹೈ 503 ಹಡಗಿನಲ್ಲಿದ್ದ ಗಾಯಗೊಂಡ ಮತ್ತು ಸುರಕ್ಷಿತರಾಗಿ ಹೊರಬಂದ ಸಿಬ್ಬಂದಿಯನ್ನು ಕರೆದುಕೊಂಡು ಬಂದ ಐಎನ್‌ಎಸ್ ಸೂರತ್ ಹಡಗು ಸೋಮವಾರ ರಾತ್ರಿ ಮಂಗಳೂರು ತಲುಪಿದೆ.

ಚೀನಾದ ಎಂಟು ಮಂದಿ, ತಾಯ್ವಾನ್‌ ಮತ್ತು ಮ್ಯಾನ್ಮಾರ್‌ನ ತಲಾ ನಾಲ್ವರು, ಇಂಡೊನೇಷ್ಯಾದ ಇಬ್ಬರನ್ನು ನೌಕಾಪಡೆಯ ಹಡಗಿನಲ್ಲಿ ನವಮಂಗಳೂರು ಬಂದರು ನಿಗಮಕ್ಕೆ ಕರೆದುಕೊಂಡು ಬರಲಾಯಿತು.

10.45ರ ವೇಳೆ ತಲುಪಿದ ಹಡಗಿನಲ್ಲಿದ್ದ 18 ಮಂದಿಯ ಪೈಕಿ ಗಂಭೀರ ಗಾಯಗೊಂಡ ಇಬ್ಬರು ಸೇರಿದಂತೆ ಆರು ಮಂದಿಯನ್ನು ಕರಾವಳಿ ಕಾವಲು ಪಡೆಯ ಸಿಬ್ಬಂದಿ ನೆರವಿನೊಂದಿಗೆ ಆಂಬುಲೆನ್ಸ್‌ನಲ್ಲಿ ಕುಂಟಿಕಾನದ ಎಜೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

ಗಂಭೀರ ಸ್ಥಿತಿಯಲ್ಲಿರುವ ಇಬ್ಬರನ್ನು ಸ್ಟ್ರೆಚರ್‌ನಲ್ಲಿ ಆಸ್ಪತ್ರೆಯ ಒಳಗೆ ಕರೆದುಕೊಂಡು ಹೋಗಲಾಯಿತು. ನಾಲ್ವರು ನಡೆದುಕೊಂಡೇ ಹೋದರು. ಗಾಯಗಳಿಲ್ಲದವರನ್ನು ಹೋಟೆಲ್‌ನಲ್ಲಿ ಇರಿಸಲಾಗಿದೆ ಎಂದು ನಗರ ಪೊಲೀಸರು ತಿಳಿಸಿದ್ದಾರೆ.

ಲು ಯಾನ್ಲಿ ಮತ್ತು ಸೊನಿತುರ್ ಹೆನಿ ಅವರಿಗೆ ಗಂಭೀರ ಸುಟ್ಟ ಗಾಯಗಳಾಗಿದ್ದು ಕ್ಸು ಫ್ಯಾಬೊ, ಗುವೊ ಲಿನಿನೊ, ಥೆಯಿನ್ ಥಾನ್ ಹೆತೆ ಮತ್ತು ಕಿ ಜುವೊ ಹುತು ಅವರಿಗೆ ಸಾಮಾನ್ಯ ಗಾಯಗಳಾಗಿವೆ.

Leave a Reply

Your email address will not be published. Required fields are marked *

Join WhatsApp Group
error: Content is protected !!