
ಪುತ್ತೂರು; ಜೂ 25: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಮುಸ್ಲಿಂ ಸಮುದಾಯದವರಿಗೆ ಜಮೀನು ಮಂಜೂರು ಮಾಡಿದರೆ ಅಧಿಕಾರಿಗಳನ್ನು ನೇಣಿಗೇರಿಸುತ್ತೇನೆ ಎಂದು ಬೆದರಿಕೆ ಹಾಕಿದ ಶ್ರೀರಂಗಪಟ್ಟಣ ಶಾಸಕರಾದ ಬಂಡಿಸಿದ್ದೇಗೌಡ ವಿರುದ್ಧ ದರ್ಬೆ ಜಂಕ್ಷನ್ನಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭದಲ್ಲಿ ಎಸ್ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ತಲಪಾಡಿ ಮಾತನಾಡಿ ಕಾಂಗ್ರೆಸ್ ಪಕ್ಷದೊಳಗೆ ನುಸುಳಿದ ಆರೆಸ್ಸೆಸ್ ಮನಸ್ಥಿತಿಯವರನ್ನು ಹೊರಗಟ್ಟಬೇಕು. ಜಾತ್ಯತೀತದ ಸೋಗಿನಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇಂತಹ ಕೋಮುವಾದಿ ನಿಲುವಿನ ವ್ಯಕ್ತಿಗಳನ್ನು ಯಾವ ಮಾನದಂಡದ ಮೇಲೆ ಟಿಕೆಟ್ ನೀಡಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಿದರು. ಸಂಘಪರಿವಾರದವರಂತೆ ಮುಸ್ಲಿಮರನ್ನು ನೇಣಿಗೇರಿಸಲು ಹವಣಿಸುವ ಕಾಂಗ್ರೆಸ್ ಶಾಸಕರಿಂದ ಮುಸ್ಲಿಂ ಸಮುದಾಯಕ್ಕೆ ಯಾವ ನ್ಯಾಯ ದೊರಕಿಸಲು ಸಾಧ್ಯ? ಹಲವು ವರ್ಷಗಳಿಂದ ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡಿಕೊಂಡು ಬಂದ ರೈತರು ಬಗರ್ ಹುಕುಂ ಯೋಜನೆಯಡಿ ಜಮೀನು ಮಂಜೂರಾತಿಗಾಗಿ ಅರ್ಜಿ ಸಲ್ಲಿಸಿದ್ದ ವಿಚಾರದಲ್ಲಿ ಅಧಿಕಾರಿಗಳಿಗೆ ಜಮೀನು ಮಂಜೂರು ಮಾಡಿದರೆ ನೇಣಿಗೇರಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದರು.
ಜಿಲ್ಲಾ ಸಮಿತಿ ಸದಸ್ಯರಾದ ಅಡ್ವೋಕೇಟ್ ಕಬೀರ್ ಹಾಗೂ ಎಸ್ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಉಪಾಧ್ಯಕ್ಷರಾದ ಅಬ್ದುಲ್ ಹಮೀದ್ ಸಾಲ್ಮಾರಾ ಮಾತನಾಡಿ ಕಾಂಗ್ರೆಸ್ ಶಾಸಕ ಬಂಡಿ ಸಿದ್ದೇಗೌಡರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯುದ್ದಕ್ಕೂ ಕಾಂಗ್ರೆಸ್ನೊಳಗಿನ ಮಂಕಾಳು ವೈದ್ಯ ಹಾಗೂ ಬಂಡಿಸಿದ್ದೇಗೌಡ ಸಹಿತ ಹಲವು ಸಂಘಪರಿವಾರದ ಮನಸ್ಥಿತಿಯವರ ವಿರುದ್ಧ ಘೋಷಣೆಗಳು ಮೊಳಗಿತು.
ಪ್ರತಿಭಟನಾ ಸಭೆಯಲ್ಲಿ ಪುತ್ತೂರು ವಿಧಾನಸಭಾ ಸಮಿತಿ ಅಧ್ಯಕ್ಷರಾದ ಅಶ್ರಫ್ ಬಾವು, ಕಾರ್ಯದರ್ಶಿ ಉಮ್ಮರ್ ಕೆ ಎಸ್ ಕೂರ್ನಡ್ಕ, ನಗರ ಸಮಿತಿ ಅಧ್ಯಕ್ಷರಾದ ಯಹ್ಯಾ ಕೂರ್ನಡ್ಕ, ಕಬಕ ಬ್ಲಾಕ್ ಅಧ್ಯಕ್ಷರಾದ ಸಿದ್ದೀಕ್ ಉರಿಮಜಲ್, ವಿಟ್ಲ ಬ್ಲಾಕ್ ಅಧ್ಯಕ್ಷರಾದ ಕಮರುದ್ದೀನ್ ಪುಣಚ ಉಪಸ್ಥಿತರಿದ್ದರು. ಪುತ್ತೂರು ವಿಧಾನಸಭಾ ಕ್ಷೇತ್ರ ಕಾರ್ಯದರ್ಶಿ ಉಸ್ಮಾನ್ ಏ ಕೆ ಸ್ವಾಗತಿಸಿ ಧನ್ಯವಾದಗೈದರು. ಕುಂಬ್ರ ಬ್ಲಾಕ್ ಅಧ್ಯಕ್ಷರಾದ ರಿಯಾಝ್ ಬಳಕ್ಕ ನಿರೂಪಿಸಿದರು






