ಬಂಟ್ವಾಳ: ಸುಳ್ಳು ದೂರು ನೀಡಿದ ಹಿನ್ನೆಲೆಯಲ್ಲಿ ಬಂಟ್ವಾಳ ಸಜೀಪ ಮುನ್ನೂರು ನಿವಾಸಿ ಉಮರ್ ಪಾರೂಕ್ (48) ವಿರುದ್ಧ ಪೊಲೀಸ್ ಠಾಣೆಯಲ್ಲಿ ಹೊಸ ಪ್ರಕರಣ ದಾಖಲಾಗಿದೆ.
ಜೂನ್ 11, 2025 ರಂದು ಮುಂಜಾನೆ, ನಂದಾವರದಿಂದ ದೇರಳಕಟ್ಟೆ ಕಡೆಗೆ ಜೀಪಿನಲ್ಲಿ ತೆರಳುತ್ತಿದ್ದಾಗ ದೇರಾಜೆ ಬಸ್ ನಿಲ್ದಾಣದ ಬಳಿ ಇಬ್ಬರು ಅಪರಿಚಿತರು ತಲವಾರಿನಿಂದ ಹಲ್ಲೆ ಮಾಡಲು ಯತ್ನಿಸಿದ್ದಾರೆಂದು ಉಮರ್ ಪಾರೂಕ್ ದೂರಿದ್ದರು. ಆ ದೂರಿನ ಆಧಾರದ ಮೇಲೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ.ಕ್ರ. 68/2025, ಕಲಂ 109, 324(4) ಹಾಗೂ 3(5) BNS-2023 ರಂತೆ ಪ್ರಕರಣ ದಾಖಲಾಗಿತ್ತು.
ಆದರೆ ತನಿಖೆ ನಡೆಸಿದಾಗ ಪ್ರಕರಣ ಸುಳ್ಳು ಎಂದು ಸಾಬೀತಾಗಿ, ಈ ಬಗ್ಗೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ತನಿಖೆಯಲ್ಲಿ ಉಮರ್ ಪಾರೂಕ್ ಸಾರ್ವಜನಿಕರಲ್ಲಿ ಭಯಭೀತಿಯನ್ನು ಉಂಟುಮಾಡಿ, ಗಲಭೆ ಪ್ರಚೋದಿಸುವ ಉದ್ದೇಶದಿಂದ ಸುಳ್ಳು ಆಪಾದನೆ ಮಾಡಿರುವುದು ಬಹಿರಂಗವಾಗಿದೆ.
ಈ ಹಿನ್ನೆಲೆಯಲ್ಲಿ ಆತನ ವಿರುದ್ಧ ಮತ್ತೊಂದು ಪ್ರಕರಣ (ಅ.ಕ್ರ.128/2025) ಕಲಂ 192, 353(1)(b), 230(1), 248(A) BNS ಅಡಿಯಲ್ಲಿ ದಾಖಲಿಸಲಾಗಿದೆ.
ಆರೋಪಿ ಉಮರ್ ಪಾರೂಕ್ ಅವರನ್ನು ದಸ್ತಗಿರಿ ಮಾಡಿ ಎಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯ ಬಂಟ್ವಾಳದ ಮುಂದೆ ಹಾಜರುಪಡಿಸಲಾಗಿದ್ದು, ಮಾನ್ಯ ನ್ಯಾಯಾಲಯವು 2025ರ ಸೆಪ್ಟೆಂಬರ್ 6ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.














