
ಉಪ್ಪಿನಂಗಡಿ:“ಉಪ್ಪಿನಂಗಡಿ ನಿವಾಸಿ ಸಾದಿಕ್ ಕೇರಳ ರಾಜ್ಯ ಓಣಂ ಬಂಪರ್ ಲಾಟರಿಯಲ್ಲಿ 10 ಕೋಟಿ ರೂ. ಗೆದ್ದಿದ್ದಾರೆ” ಎಂಬ ಸುದ್ದಿ ಕಳೆದ ಎರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಊರೇ ಗದ್ದಲಗೊಂಡಿದೆ.
ಆದರೆ ಈ ಸುದ್ದಿ ಸಂಪೂರ್ಣ ಸುಳ್ಳು ಎಂದು ದೃಢಪಟ್ಟಿದೆ. ಕಿಡಿಕೇಡಿಗಳು ಸುಳ್ಳು ಪ್ರಚಾರ ನಡೆಸಿರುವುದು ಬಹಿರಂಗವಾಗಿದೆ.
ಉಪ್ಪಿನಂಗಡಿ ಕರಾಯದ ನಿವಾಸಿಯಾಗಿರುವ ಹಾಗೂ ಪ್ರಸ್ತುತ ದುಬೈಯಲ್ಲಿ ಉದ್ಯೋಗದಲ್ಲಿರುವ ಸಾದಿಕ್ ಈ ಕುರಿತು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. “ನನಗೆ ಯಾವುದೇ ಲಾಟರಿ ಬಂದಿಲ್ಲ. ಆದರೆ ಈ ಸುಳ್ಳು ಸುದ್ದಿಯ ಕಾರಣದಿಂದ ಒಂದು ದಿನವೂ ನೆಮ್ಮದಿ ಇಲ್ಲ. ಪ್ರತಿಕ್ಷಣಕ್ಕೂ ಅಭಿನಂದನೆ ಕರೆಗಳಿಗೆ ಉತ್ತರಿಸುವುದು ಕಷ್ಟವಾಗಿದೆ” ಎಂದು ಅವರು ಹೇಳಿದ್ದಾರೆ.
ಯಾರು, ಏಕೆ ಈ ಸುಳ್ಳು ವದಂತಿ ಹರಡಿದ್ದಾರೆ ಎನ್ನುವುದು ಇನ್ನೂ ನಿಗೂಢವಾಗಿದೆ.






