
ಮೂಡುಬಿದಿರೆ: ಠಾಣೆಗೆ ದೂರು ನೀಡಲು ಬಂದಿದ್ದ ಮಹಿಳೆಗೆ ಕರೆ ಮಾಡಿ ಅಶ್ಲೀಲವಾಗಿ ಮಾತನಾಡುತ್ತಿದ್ದ ಹಾಗೂ ಸಂದೇಶಗಳನ್ನು ರವಾನಿಸಿದ ಆರೋಪದ ಮೇಲೆ ಮೂಡುಬಿದಿರೆಯ ಪೊಲೀಸ್ ಸಿಬ್ಬಂದಿ ಕೊಪ್ಪಳ ಮೂಲದ ಶಾಂತಪ್ಪ ಮೇಲೆ ಪ್ರಕರಣ ದಾಖಲಾಗಿದ್ದು, ಮಂಗಳವಾರ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ತೋಡಾರು ಬಳಿಯ ವಿವಾಹಿತೆಯೋರ್ವರು ಆ. 23ರಂದು ಕೌಟುಂಬಿಕ ಸಮಸ್ಯೆ ಬಗ್ಗೆ ಮೂಡುಬಿದಿರೆ ಠಾಣೆಯಲ್ಲಿ ದೂರು ನೀಡಿದ್ದು, ಬಳಿಕ ಪತಿ ಮತ್ತು ಪತ್ನಿಯನ್ನು ಕರೆಸಿ ಮಧ್ಯಸ್ಥಿಕೆ ಮಾಡಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಗಿತ್ತು.
ಬಳಿಕ ಆರೋಪಿಯು ದೂರಿನ ಪ್ರತಿಯಲ್ಲಿ ಬರೆಯಲಾಗಿದ್ದ ಮಹಿಳೆಯ ನಂಬರ್ ತೆಗೆದು ಆಕೆಯೊಂದಿಗೆ ಮಾತುಕತೆ ನಡೆಸಿದ್ದ ಎನ್ನಲಾಗಿದೆ. ಮಹಿಳೆಯು ಆತನ ಧ್ವನಿಮುದ್ರಿಸಿ ದಾಖಲೆ ಸಹಿತ ಸೆ. 1ರಂದು ದೂರು ನೀಡಿದ್ದರು ಮೇಲಧಿಕಾರಿಗಳ ಆದೇಶದಂತೆ ಮೂಡುಬಿದಿರೆ ಪೊಲೀಸ್ ನಿರೀಕ್ಷಕ ಸಂದೇಶ್ ಪಿ.ಜಿ. ಪ್ರಕರಣ ದಾಖಲಿಸಿಕೊಂಡು ಕ್ರಮ ಜರಗಿಸಿದ್ದಾರೆ.






