
ಮೂಡಬಿದ್ರೆ:ಮೂಡಬಿದ್ರೆ ತಾಲೂಕಿನ ಪಡುಕೊಣಾಜೆ ಗ್ರಾಮದ ಕೊಣಾಜೆ ಕಲ್ಲಿನಲ್ಲಿ ಚಾರಣಕ್ಕೆ ಹೋದ ಯುವಕನೊಬ್ಬ ಅಕಾಲಿಕವಾಗಿ ಸಾವನ್ನಪ್ಪಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಪುತ್ತೂರು ತಾಲೂಕಿನ ಇರ್ದೆ ಗ್ರಾಮದ ನಿವಾಸಿ ಮನೋಜ್ ಎನ್ (25 ವರ್ಷ) ಮಂಗಳೂರಿನ ರಾವ್ ಅಂಡ್ ರಾವ್ ಚಾರ್ಟರ್ಡ್ ಅಕೌಂಟೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಸ್ನೇಹಿತ ಕಾರ್ತಿಕ್ ಜೊತೆ ಬೆಳಿಗ್ಗೆ 6.20ಕ್ಕೆ ಟ್ರೆಕ್ಕಿಂಗ್ಗೆ ತೆರಳಿದ್ದರು.
ಸುಮಾರು 8.30ಕ್ಕೆ ಕೊಣಾಜೆ ಕಲ್ಲಿನ ತುದಿಗೆ ತಲುಪುತ್ತಿದ್ದಂತೆ ಮನೋಜ್ ಅವರಿಗೆ ವಾಂತಿ ಉಂಟಾಗಿ ಅಸ್ವಸ್ಥಗೊಂಡರು. ತಕ್ಷಣವೇ 108 ಅಂಬುಲೆನ್ಸ್ ಮೂಲಕ ಮೂಡಬಿದ್ರೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು. ಆದರೆ ವೈದ್ಯರು ಮನೋಜ್ ಮೃತಪಟ್ಟಿರುವುದಾಗಿ ಘೋಷಿಸಿದರು.
ಮೃತ ಮನೋಜ್ ಅವರ ತಂದೆಯ ದೂರಿನಂತೆ, ಹೃದಯಾಘಾತದಿಂದ ಸಾವುವಾಗಿರಬಹುದೆಂದು ಶಂಕಿಸಲಾಗಿದೆ. ಈ ಕುರಿತು ಮೂಡಬಿದ್ರೆ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ 44/2025, ಕಲಂ 194 ಬಿ.ಎನ್.ಎಸ್.ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.






