
ಮಂಗಳೂರು:ಉರ್ವಾ ಪೊಲೀಸ್ ಠಾಣೆಯಲ್ಲಿ 2021ರಲ್ಲಿ ದಾಖಲಾಗಿದ್ದ ಕೊಲೆ ಯತ್ನ ಪ್ರಕರಣದ ಆರೋಪಿ ಕುದ್ರೋಳಿ ಮೂಲದ ಮೊಹಮ್ಮದ್ ಸಿನಾನ್ (24), ವಿದೇಶದಿಂದ ವಾಪಸಾದ ತಕ್ಷಣ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧನಕ್ಕೊಳಗಾದ ಘಟನೆ ನಡೆದಿದೆ.
ಮಹಮ್ಮದ್ ಸಲೀಂ ಅವರ ಪುತ್ರನಾದ ಸಿನಾನ್ ವಿರುದ್ಧ Urwa PS Cr No.07/2021 U/s 143, 147, 148, 301, 323, 324, 307, 504, 506 R/W 149 IPC ಪ್ರಕರಣ ದಾಖಲಾಗಿದ್ದು, ಕಳೆದ ಎರಡು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ವಿದೇಶದಲ್ಲಿ ತಲೆಮರೆಸಿಕೊಂಡಿದ್ದನು.
ಈ ಹಿನ್ನೆಲೆಯಲ್ಲಿ ಘನ ನ್ಯಾಯಾಲಯವು ವಾರೆಂಟ್ ಹೊರಡಿಸಿದ್ದರ ಜೊತೆಗೆ, ವಾರೆಂಟ್ ಜಾರಿಗೆ ತರಲು ಭಾರತ ಸರ್ಕಾರದ ಬ್ಯೂರೋ ಆಫ್ ಇಮಿಗ್ರೇಶನ್, ನವದೆಹಲಿ ಮೂಲಕ ಎಲ್ಒಸಿ (Look Out Circular) ತೆರೆಯಲಾಗಿತ್ತು.
ಅ.08ರಂದು ಕತಾರ್ನಿಂದ ಮಂಗಳೂರಿಗೆ ಬಂದಿದ್ದ ಆರೋಪಿ, ಇಮಿಗ್ರೇಶನ್ ಅಧಿಕಾರಿಗಳ ವಶಕ್ಕೆ ಸಿಕ್ಕಿದ್ದು, ಬಳಿಕ ಉರ್ವಾ ಪೊಲೀಸ್ ಠಾಣಾ ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.
ಆತನನ್ನು ಅದೇ ದಿನ ರಾತ್ರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಇದೇ ವೇಳೆ, ನ್ಯಾಯಾಲಯದ ಕಲಾಪಗಳಿಗೆ ಹಾಜರಾಗದೇ ಜಾಮೀನು ಷರತ್ತು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ, ಉರ್ವಾ ಪೊಲೀಸ್ ಠಾಣೆಯಲ್ಲಿ ಹೊಸ ಮೊಕದ್ದಮೆ (Crime No.100/2025, Sec 269 BNS) ದಾಖಲಿಸಲಾಗಿದೆ.






