
ಪುತ್ತೂರು: ಸಾಮಾಜಿಕ ಜಾಲತಾಣದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಅವರ ಬಗ್ಗೆ ಅಸಭ್ಯ ಕಾಮೆಂಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಳ್ಯ ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ಕಾರ್ತಿಕ್ ಎಂಬವರು ಶಾಸಕರ ಬಳಿ ಬಂದು ಕ್ಷಮೆ ಯಾಚಿಸಿದ್ದು, ಶಾಸಕರು ಹೃದಯದ ವೈಶಾಲ್ಯತೆಯನ್ನು ಮೆರೆದು ಆತನಿಗೆ ಕ್ಷಮೆ ನೀಡಿದ್ದಾರೆ.
ಅಶೋಕ್ ರೈ ಶಾಸಕರಾಗಿ ಆಯ್ಕೆಯಾದ ಕೆಲ ತಿಂಗಳ ಬಳಿಕ ಕಾರ್ತಿಕ್ ಫೇಸ್ಬುಕ್ನಲ್ಲಿ ಶಾಸಕರ ಬಗ್ಗೆ ಅಸಭ್ಯ ಪದಗಳನ್ನು ಬಳಸಿ ಪೋಸ್ಟ್ ಮಾಡಿದ್ದರು. ಈ ಕುರಿತು ಅಶೋಕ್ ರೈ ಅಭಿಮಾನಿಗಳು ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಪ್ರಕರಣದ ತನಿಖೆ ಪ್ರಾರಂಭವಾಗುತ್ತಿದ್ದಂತೆಯೇ ಕಾರ್ತಿಕ್ ಶಾಸಕರ ಬಳಿ ಬಂದು “ನಾನು ತಪ್ಪು ಮಾಡಿದ್ದೇನೆ, ದಯವಿಟ್ಟು ಕ್ಷಮಿಸಿ ಸರ್. ನನ್ನ ನೌಕರಿಗೆ ಕುತ್ತು ಬರಬಾರದು” ಎಂದು ವಿನಂತಿಸಿಕೊಂಡರು.
ಶಾಸಕರು ತಾಳ್ಮೆಯಿಂದ ಪ್ರತಿಕ್ರಿಯೆ ನೀಡಿ, “ನಾನು ನಿಮಗಾಗಲಿ ನಿಮ್ಮ ಕುಟುಂಬದವರಿಗಾಗಲಿ ಯಾವುದೇ ತೊಂದರೆ ಕೊಟ್ಟಿಲ್ಲ. ಹಾಗಿದ್ದರೂ ಯಾಕೆ ಈ ರೀತಿಯ ಕಮೆಂಟ್ ಹಾಕಿದಿರಿ?” ಎಂದು ಪ್ರಶ್ನಿಸಿದರು. ಆದರೆ ಕಾರ್ತಿಕ್ ತಾನು ಪಶ್ಚಾತ್ತಾಪಪಟ್ಟಿರುವುದನ್ನು ತಿಳಿಸಿದ ಬಳಿಕ, ಶಾಸಕರು “ಮುಂದೆ ಯಾರ ಕುರಿತಾದರೂ ಅಸಭ್ಯ ಕಮೆಂಟ್ ಹಾಕಬೇಡಿ, ಇದು ಸಬ್ಯರ ಲಕ್ಷಣವಲ್ಲ” ಎಂದು ಬುದ್ಧಿವಾದ ಹೇಳಿ ಕ್ಷಮೆ ನೀಡಿದರು.






