
ಸುಖವಾಗಿ ಸಂತೋಷದಿಂದ ಜೀವನ ನಡೆಸುತ್ತಿದ್ದ ದಂಪತಿ ದುರಂತ ಅಂತ್ಯಕಂಡಿರುವ ಹೃದಯ ವಿದ್ರಾವಕ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದದಲ್ಲಿ ನಡೆದಿದೆ. ರಾಜು (48ವ) ಮತ್ತು ಮೀನಾ (42ವ) ಮೃತ ದಂಪತಿಯಾಗಿದ್ದಾರೆ.
ಮನೆಯ ಬಾತ್ರೂಂಗೆ ಸ್ನಾನಕ್ಕೆಂದು ರಾಜು ತೆರಳಿದ್ದ ವೇಳೆ ಗ್ಯಾಸ್ ಗೀಸರ್ ಲೀಕ್ ಆಗಿ ಉಸಿರಾಡಲು ಸಾಧ್ಯವಾಗದೆ ಒದ್ದಾಡಿ ಪ್ರಾಣ ಕಳೆದುಕೊಂಡಿದ್ದಾರೆ.
ಪತಿಯ ಸಾವಿನ ವಿಷಯ ತಿಳಿಯುತ್ತಿದ್ದಂತೆ ದುಃಖ ತಾಳಲಾರದೆ ಬ್ಯಾಂಕ್ ಉದ್ಯೋಗಿಯಾಗಿದ್ದ ಪತ್ನಿ ಮೀನಾ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತುಮಕೂರು ಜಿಲ್ಲೆಯ ಕುಣಿಗಲ್ ನಿವಾಸಿಯಾಗಿದ್ದ ದಂಪತಿ ಕೆಲಸ ನಿಮ್ಮಿತ್ತ ನೆಲಮಂಗಲ ನಗರದಲ್ಲಿ ಮಗನ ಜೊತೆಗೆ ವಾಸವಿದ್ದರು. ಮೀನಾ ಬೆಂಗಳೂರಿನ ಬ್ಯಾಂಕ್ ಒಂದರ ಉದ್ಯೋಗಿಯಾಗಿದ್ದು, ಪತಿಯ ಸಾವಿನ ವಿಚಾರ ತಿಳಿಯುತ್ತಲೇ ನೆಲಮಂಗಲ ನಗರದ ಜಕ್ಕಸಂದ್ರದ ಮನೆ ಕಡೆ ಹೊರಟ್ಟಿದ್ದಾರೆ. ಪತಿಯ ಅಗಲುವಿಕೆಯ ಸುದ್ದಿ ಕೇಳಿ ತೀವ್ರ ಆಘಾತಕ್ಕೆ ಒಳಗಾಗಿದ್ದ ಮೀನಾ ಮೃತ ಗಂಡನ ಮುಖ ಕೂಡ ನೋಡಿಲ್ಲ. ತಾವು ನಿರ್ಮಾಣ ಮಾಡುತ್ತಿದ್ದ ಮನೆಯ ಸಲ್ಪ ದೂರದಲ್ಲಿಯೇ ಇದ್ದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಡೆತ್ನೋಟ್ ಬರೆದು ಸೂಸೈಡ್
ಮೀನಾ ಡೆತ್ನೋಟ್ ಕೂಡ ಬರೆದಿದ್ದಾರೆ. ಗಂಡನನ್ನ ಬಿಟ್ಟು ಒಂದು ನಿಮಿಷವೂ ತಾನು ಬದುಕಿರುವುದಿಲ್ಲ ಎಂದು ಉಲ್ಲೇಖ ಮಾಡಿದ್ದು, ಜೊತೆಗೆ ಯಾರ್ಯಾರಿಗೆ ಏನೇನು ಕೊಡಬೇಕು ಅದೆಲ್ಲವನ್ನ ಕೊಟ್ಟುಬಿಡಿ. ನನ್ನ ಕ್ಷಮಿಸಿಬಿಡಿ ಎಂದು ಬರೆದಿದ್ದಾರೆ.
ದಂಪತಿಯ ದುರಂತ ಅಂತ್ಯ ಕುಟುಂಬಸ್ಥರಿಗೆ ಬರಸಿಡಿಲು ಬಡಿದಂತಾಗಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತ ದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ






