ಪುತ್ತಿಗೆ, ಮಾ.22: ನೂತನ ಮನೆಯ ಗೃಹ ಪ್ರವೇಶಕ್ಕೆ ಕೆಲವೇ ಗಂಟೆಗಳು ಬಾಕಿ ಇರುವ ವೇಳೆ ಮನೆಯೊಡೆಯ ಹೃದಯಾಘಾತದಿಂದ ಸಾವನ್ನಪ್ಪಿದ ದಾರುಣ ಘಟನೆ ಪುತ್ತಿಗೆ ಸಮೀಪ ಸಂಭವಿಸಿದೆ.
ಮುಗು ಉರ್ಮಿ ಜುಮಾ ಮಸೀದಿ ಸಮೀಪದ ಕುಂಮಾಹಿನ್ ಕುಟ್ಟಿ ಅವರ ಪುತ್ರ ಮುಹಮ್ಮದ್ (50) ಮೃತರು. ಅವರನ್ನು ಮೋಣು ಎಂದೂ ಕರೆಯಲಾಗುತ್ತಿತ್ತು.
ಮೃತರು ಎರಡು ವಾರಗಳ ಹಿಂದೆ ಕೊಲ್ಲಿಯಿಂದ ಸ್ವಗ್ರಾಮಕ್ಕೆ ಬಂದಿದ್ದರು. ಮುಗುವಿನಲ್ಲಿ ನಿರ್ಮಿಸಿದ ಹೊಸ ಮನೆಯ ಗೃಹ ಪ್ರವೇಶವನ್ನು ಮಾ.20ರಂದು ಬೆಳಗ್ಗೆ ನೆರವೇರಿಸಲು ಕುಟುಂಬಸ್ಥರು ತೀರ್ಮಾನಿಸಿದ್ದರು. ಈ ಹಿನ್ನೆಲೆಯಲ್ಲಿ ಪತ್ನಿಯನ್ನು ಕರೆದುಕೊಂಡು ಶುಕ್ರವಾರ ಮುಂಜಾನೆ 4 ಗಂಟೆ ಸುಮಾರಿಗೆ ಕಾರಿನಲ್ಲಿ ಮನೆ ಕಡೆ ಬರುತ್ತಿದ್ದಾಗ ಅವರಿಗೆ ಹೃದಯಾಘಾತ ಸಂಭವಿಸಿದೆ ಎನ್ನಲಾಗಿದೆ.
ತಕ್ಷಣ ಅವರನ್ನು ಕಾಸರಗೋಡಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಗೃಹ ಪ್ರವೇಶದ ಸಂಭ್ರಮ ದುಃಖದಲ್ಲಿ ಮುಳುಗಿದ್ದು, ಕುಟುಂಬಸ್ಥರು ಹಾಗೂ ಬಂಧುಮಿತ್ರರ ಆಕ್ರಂದನ ಮನಕಲಕುವಂತಿದೆ.














