ಸುಳ್ಯ: ತಾಲೂಕಿನ ಜಾಲ್ಸೂರು ಸಮೀಪದ ಮಾಪಳಡ್ಕ ದರ್ಗಾ ಶೆರೀಪ್ ಹೊರಭಾಗದಲ್ಲಿರುವ ಗೋರಿಯೊಂದನ್ನು ಅನಾಮಿಕ ವ್ಯಕ್ತಿಯೊಬ್ಬ ಅಗೆದು ಹಾನಿ ಮಾಡಿರುವ ಘಟನೆ ಮಾ. 22ರ ತಡರಾತ್ರಿ ನಡೆದಿದ್ದು, ವಿಷಯ ತಡವಾಗಿ ಬೆಳಕಿಗೆ ಬಂದಿದೆ.
ರಾತ್ರಿ ವೇಳೆ ಗೋರಿಯನ್ನು ಹಾರೆ ಹಾಗೂ ಪಕ್ಕಾಸಿನಿಂದ ಒಡೆಯುತ್ತಿರುವ ಶಬ್ದ ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ತಡೆಯಲು ಯತ್ನಿಸಿದಾಗ, ವ್ಯಕ್ತಿ ಹಲ್ಲೆಗೆ ಮುಂದಾದರೆಂದು ತಿಳಿದುಬಂದಿದೆ. ಮಾಹಿತಿ ಪಡೆದ ಸುಳ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆತನನ್ನು ವಶಕ್ಕೆ ಪಡೆದರು.
ಆರೋಪಿ ಕೇರಳ ಗಡಿಭಾಗದ ಪರಪ್ಪೆ ನಿವಾಸಿಯಾಗಿದ್ದು, ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವುದಾಗಿ ತಿಳಿದುಬಂದಿದೆ. ಗೋರಿಯನ್ನು ಅಗೆುವ ವೇಳೆ ‘ಇದು ನಮ್ಮ ಅಜ್ಜನ ಗೋರಿಯಾಗಿದೆ’ ಎಂದು ಹೇಳುತ್ತಿದ್ದನೆಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆ ಸಂಬಂಧ ದರ್ಗಾ ಪದಾಧಿಕಾರಿಗಳು ಮತ್ತು ಆತನ ಕುಟುಂಬಸ್ಥರು ಮಾತುಕತೆ ನಡೆಸಿ, ಮಾನಸಿಕ ಸ್ಥಿತಿ ಪರಿಗಣಿಸಿ ಪ್ರಕರಣ ದಾಖಲಿಸಬಾರದೆಂದು ಲಿಖಿತ ಮನವಿ ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಲ್ಲ. ವ್ಯಕ್ತಿಯನ್ನು ಮಂಗಳೂರಿನ ಕಂಕನಾಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.














