ವಿಟ್ಲ: ಶ್ರೀ ಭಗವತೀ ಕ್ಷೇತ್ರದಲ್ಲಿ ಸಿಂಹಮಾಸದ ವಿಶೇಷ ಪೂಜೆಯ ಅಂಗವಾಗಿ ವೈಷ್ಣವೀ ನಾಟ್ಯಾಲಯ (ರಿ.) ಪುತ್ತೂರು ಇದರ ರಜತ ನೃತ್ಯಾಂತರ್ಯಾನದ ಪ್ರಯುಕ್ತ ವಿಟ್ಲ ಶಾಖೆಯ ವಿದ್ಯಾರ್ಥಿಗಳಿಂದ ‘ನೃತ್ಯಾರ್ಪಣಂ’ ಕಾರ್ಯಕ್ರಮ ನಡೆಯಿತು.ಕಾರ್ಯಕ್ರಮವನ್ನು ವೈಷ್ಣವೀ ರಜತ ನೃತ್ಯಾಂತರ್ಯಾನದ ಗೌರವಾಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಉದ್ಘಾಟಿಸಿದರು. ಶ್ರೀ ಭಗವತೀ ದೇವಸ್ಥಾನದ ವ್ಯವಸ್ಥಾಪಕ ಕೇಶವ ಆರ್.ವಿ. ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸುಭಾಷ್ ಚಂದ್ರ ನಾಯಕ್ ಹಾಗೂ ಸಂಗೀತ ಗುರು ವಿದುಷಿ ಪಾರ್ವತಿ ಗಣೇಶ್ ಭಟ್ ಹೊಸಮೂಲೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು.ನಾಟ್ಯಾಲಯದ ನಿರ್ದೇಶಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಾಟ್ಯಾಲಯದ ವತಿಯಿಂದ ಕೇಶವ ಆರ್.ವಿ., ವಿದುಷಿ ಪಾರ್ವತಿ ಗಣೇಶ್ ಭಟ್ ಹಾಗೂ ಲಲಿತಾ ಅವರನ್ನು ಗೌರವಿಸಲಾಯಿತು.ಸಭಾ ಕಾರ್ಯಕ್ರಮದ ಬಳಿಕ ನಾಟ್ಯಾಲಯದ ವಿದ್ಯಾರ್ಥಿಗಳಿಂದ ಭರತನಾಟ್ಯ ಪ್ರದರ್ಶನ ನಡೆಯಿತು. ನಟುವಾಂಗದಲ್ಲಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್, ಗಾಯನದಲ್ಲಿ ವಿದ್ವಾನ್ ವಿಷ್ಣು ಭಟ್ ವೆಳಿಕ್ಕೋತ್ ಹಾಗೂ ವಸಂತ ಕುಮಾರ ಗೋಸಾಡ, ಮೃದಂಗದಲ್ಲಿ ರಾಜೀವ ಗೋಪಾಲ ವೆಳ್ಳಿಕ್ಕೋತ್, ಕೊಳಲಿನಲ್ಲಿ ರಾಜಗೋಪಾಲ ಕಾಞಂಗಾಡ್ ಹಾಗೂ ರಿದಂನಲ್ಲಿ ಶಶಾಂಕ ಬಿ.ಸಿ.ರೋಡು ಸಹಕರಿಸಿದರು.ತುಳಸಿ ವಿಟ್ಲ ಕಾರ್ಯಕ್ರಮ ನಿರೂಪಿಸಿದರು. ಚಂಪಾ ವಿಟ್ಲ ವಂದಿಸಿದರು.











