
ತನ್ನ ಮನೆಯಲ್ಲಿ ತಾನೇ ಕದ್ದು ಕಳ್ಳತನದ (Theft) ನಾಟಕವಾಡಿದ ಕಿಲಾಡಿ ಯುವತಿ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಗರಬನ್ನಿಹಟ್ಟಿ ಗ್ರಾಮದಲ್ಲಿ ನಡೆದಿದೆ. ತಸ್ಮೀಯ ಖಾನಂ(26) ಹಾಗೂ ಮುಜೀಬುಲ್ಲಾ ಶೇಖ್ ಬಂಧಿತ (Arrest) ಆರೋಪಿಗಳು. ಬಂಧಿತರಿಂದ 9.5 ಲಕ್ಷ ಮೌಲ್ಯದ 155 ಗ್ರಾಂ ಚಿನ್ನದ ಆಭರಣ ಹಾಗೂ 1.27 ಲಕ್ಷ ರೂಪಾಯಿ ನಗದು ವಶಕ್ಕೆ ಪಡೆಯಲಾಗಿದೆ.
ಕಳೆದ ಸೆಪ್ಟೆಂಬರ್ 30ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಶಿವಮೊಗ್ಗದ ಇಲಿಯಾಜ್ ನಗರದ ನಿವಾಸಿ ಮುಜೀಬುಲ್ ಶೇಖ್ ಜೊತೆ ಸೇರಿ ತಸ್ಮೀಯ ಖಾನಂ ತನ್ನದೇ ಮನೆಯ ಕಳ್ಳತನ ಮಾಡಿದ್ದಳು. ಬಳಿಕ ಮನೆಯಲ್ಲಿ ತಾನು ಒಬ್ಬಳೇ ಇದ್ದಾಗ ಯಾರೋ ಬಂದು ಮುಖಕ್ಕೆ ಬೂದಿ ಹಾಗೂ ಕೆಮಿಕಲ್ ಹಾಕಿ ಪ್ರಜ್ಞೆ ತಪ್ಪಿಸಿ ಕಳ್ಳತನ ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದಳು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದ ಚನ್ನಗಿರಿ ಇನ್ಸ್ ಪೆಕ್ಟರ್ ಬಾಲಚಂದ್ರ ನಾಯ್ಕ ತಂಡ ಫೋನ್ ಕಾಲ್ ಮಾಹಿತಿ ಮೇಲೆ ಮುಜೀಬುಲ್ನನ್ನು ವಶಕ್ಕೆ ಪಡೆದಿದ್ದರು. ನಂತರ ತಸ್ಮೀಯ ಖಾನಂ ತಾನು ಮಾಡಿದ ಕಳ್ಳತನವನ್ನು ಒಪ್ಪಿಕೊಂಡಿದ್ದಾರೆ. ಪ್ರಕರಣ ಪತ್ತೆ ಹಚ್ಚಿದ ಪೊಲೀಸ್ ತಂಡಕ್ಕೆ ಎಸ್ಪಿ ಉಮಾ ಪ್ರಶಾಂತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.






