
ಬೆಂಗಳೂರು : (ನ.18): ಕಲಬುರಗಿ ಪ್ರವಾಸದಲ್ಲಿರುವ ರಾಜ್ಯದ ಉಪ ಲೋಕಾಯುಕ್ತ ಬಿ.ಶಿವಪ್ಪ ಶನಿವಾರ ಬೆಳ್ಳಂಬೆಳಗ್ಗೆಯೇ ಜೈಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ದಿನನಿತ್ಯದ ಚಟುವಟಿಕೆಗಳನ್ನು ಮಾಡಿಕೊಳ್ಳಲು ಪರದಾಡುತ್ತಿದ್ದ ವಯೋವೃದ್ಧೆ ಕೈದಿಯನ್ನು ಕಂಡು ಮರುಗಿದ ಪ್ರಸಂಗ ನಡೆಯಿತು.
ವೃದ್ಧ ಮಹಿಳಾ ಕೈದಿಗೆ ಎದ್ದು ಓಡಾಡಲು ಆಗುತ್ತಿರಲಿಲ್ಲ, ಊಟೋಪಚಾರ, ಶೌಚ, ಸ್ನಾನಾದಿಗಳನ್ನೆಲ್ಲ ಬೇರೆಯವರೇ ಮಾಡಬೇಕಾಗಿತ್ತು. ಇದನ್ನು ಕಂಡವರೇ ಆ ವೃದ್ಧೆಯ ಮಾಹಿತಿ ಪಡೆದರು. ಜೇವರ್ಗಿಯ 93 ವರ್ಷದ ನಾಗಮ್ಮ ಎಂಬುವವರೇ ಆ ಕೈದಿ ಎಂಬುದು ಅರಿತು ಅವರ ಪೂರ್ವಾಪರ ತಿಳಿದರು. ಸೊಸೆ ಹಾಕಿರುವ ವರದಕ್ಷಣೆ ಕಿರುಕುಳ ಪ್ರಕರಣದಲ್ಲಿ ನಾಗಮ್ಮಗೆ 3 ವರ್ಷ ಸಜೆಯಾಗಿದೆ. ವರದಕ್ಷಿಣೆ ಪ್ರಕರಣದಲ್ಲಿ ಹೈಕೋರ್ಟ್ ಶಿಕ್ಷೆ ಎತ್ತು ಹಿಡಿದಿದ್ದರಿಂದ ಸುಪ್ರೀಂ ಕೋರ್ಟ್ಗೆ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಬೇಕಿದೆ. ಈ ಬಗ್ಗೆ ವೃದ್ಧೆ ನಾಗಮ್ಮಳ ಬಗೆಗಿನ ಅಗತ್ಯ ವೈದ್ಯಕೀಯ ದಾಖಲೆಗಳನ್ನೆಲ್ಲ ಸಿದ್ಧಪಡಿಸುವಂತೆ ಜೈಲು ಅಧೀಕ್ಷಕಿ ಡಾ. ಅನಿತಾಗೆ ಲೋಕಾಯುಕ್ತರು ಸೂಚಿಸಿದರು.
ವಯೋವೃದ್ಧೆಯ ಪ್ರಕರಣದ ಬಗ್ಗೆ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಶಶಿಧರ್ ಶೆಟ್ಟಿಗೆ ಕರೆ ಮಾಡಿ ಮಾತನಾಡಿ, ಮೇಲ್ಮನವಿ ಸಲ್ಲಿಕೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಸರ್ವೋಚ್ಚ ನ್ಯಾಯಾಲಯಕ್ಕೆ ಅವರ ಆರೋಗ್ಯ ಹದಗೆಟ್ಟಿರುವ ವಿಚಾರ ಗಮನಕ್ಕೆ ತಂದು ಇಂದೇ ಮೇಲ್ಮನವಿ ಅರ್ಜಿ ಕಳುಹಿಸಿರಿ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಅವರಿಗೆ ಸೂಚಿಸಿದರು.






