ನಗರದಲ್ಲಿ ಸಿಲಿಂಡರ್ ಸ್ಫೋಟಗೊಂಡು (Cylinder Blast) ಗಾಯಗೊಂಡಿದ್ದ ಅಯ್ಯಪ್ಪ (Ayyappa) ಮಾಲಾಧಾರಿ ನಿಜಲಿಂಗಪ್ಪ ಬೇಪುರಿ (58) ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ (Death). ಮೃತರ ಕುಟುಂಬಕ್ಕೆ ಈಗಾಗಲೆ ಉಸ್ತುವಾರಿ ಸಚಿವ ಸಂತೋಷ್ ಲಾಡ್ (Santosh Lad) 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.

ಈ ನಡುವೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಶವಾಗಾರ ಬಳಿ ಹೈಡ್ರಾಮಾ ನಡೆದಿದ್ದು, ನಿಜಲಿಂಗಪ್ಪ ಅವರ ಮೃತದೇಹಕ್ಕಾಗಿ ಇಬ್ಬರ ಹೆಂಡತಿಯರು ಜಗಳವಾಡಿದ್ದಾರೆ.

ಉಣಕಲ್ ಹತ್ತಿರದ ಸಾಯಿ ನಗರದಲ್ಲಿ ಸೋಮವಾರ ಬೆಳಗಿನ ಜಾವ ಸಿಲಿಂಡರ್ ಸ್ಫೋಟಗೊಂಡು 9 ಮಂದಿ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ಗಾಯಗೊಂಡಿದ್ದರು. ಎಲ್ಲರಿಗೂ ಹುಬ್ಬಳ್ಳಿಯ ಕಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇಂದು ನಿಜಲಿಂಗಪ್ಪ ಬೇಪುರಿ(58) ಮತ್ತು ಸಂಜಯ ಸವದತ್ತಿ (20) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಪೊಲೀಸರ ವಿರುದ್ಧ ಎರಡನೇ ಪತ್ನಿ ಆಕ್ರೋಶ
ಕಿಮ್ಸ್ ಶವಾಗಾರದ ಬಳಿ ಹೈಡ್ರಾಮಾ ನಡೆದಿದ್ದು, ನಿಜಲಿಂಗಪ್ಪ ಅವರ ಪತ್ನಿಯರು ಮೃತದೇಹಕ್ಕಾಗಿ ಜಗಳವಾಡಿದ್ದಾರೆ. ನಿಜಲಿಂಗಪ್ಪನ ಮೊದಲ ಮತ್ತು ಎರಡನೇ ಹೆಂಡತಿ ಜಗಳವಾಡಿದ್ದು, ತನ್ನ ಮನೆ ಬಳಿ ಪೂಜೆ ಮಾಡಲು ಮೊದಲು ಅವಕಾಶ ಕೊಡುವಂತೆ ಎರಡನೇ ಹೆಂಡತಿ ಶಾಂತ ಆಗ್ರಹಿಸಿದ್ದಾರೆ. ಮೃತದೇಹವನ್ನು ವಾಪಸ್ ಶವಾಗಾರಕ್ಕೆ ತಂದ ಎರಡನೇ ಹೆಂಡತಿ ಶಾಂತ, ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನನ್ನ ಮನೆಗೆ ಮೊದಲು ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿದ್ರಿ. ಆದರೆ ಈಗ ಮೊದಲ ಹೆಂಡತಿ ಮನೆಗೆ ಕರೆದೊಯ್ಯುತ್ತಿದ್ದೀರಿ ಎಂದು ಕಿಡಿ ಕಾರಿದರು.

ಪರಿಹಾರ ಸಿಗುತ್ತೆ ಅಂತ ಬಂದಿದ್ದಾರೆ ಎಂದು ಕಿಡಿ
ಮೊದಲ ಹೆಂಡತಿ ಬಗ್ಗೆ ಕಿಡಿ ಕಾರಿದ ಎರಡನೇ ಪತ್ನಿ ಶಾಂತ ಅವರು, ನಿಜಲಿಂಗಪ್ಪ ಆಸ್ಪತ್ರೆ ಸೇರಿದಾಗ ಯಾರೂ ಬರಲಿಲ್ಲ. ಈಗ ಪರಿಹಾರ ಸಿಗುತ್ತೆ ಅಂತ ಮೊದಲ ಹೆಂಡತಿ ಬಂದಿದ್ದಾಳೆ. ಇದಕ್ಕೆ ನೀವೆಲ್ಲ ಅವಕಾಶ ಮಾಡಿಕೊಡುತ್ತಿದ್ದೀರಿ ಎಂದು ಪೊಲೀಸ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸ್ ಅಧಿಕಾರಿಗಳ ಮಧ್ಯಪ್ರವೇಶ ಮಾಡಿದ ನಂತರ ಪರಿಸ್ಥಿತಿ ತಿಳಿಗೊಂಡಿದ್ದು, ನಂತರ ಶವವನ್ನು ತೆಗೆದುಕೊಂಡು ಹೋಗಲು ಶಾಂತ ಅವರು ಒಪ್ಪಿದ್ದಾರೆ.

5 ಲಕ್ಷ ರೂಪಾಯಿ ಪರಿಹಾರ ಘೋಷಣೆ

ಸಿಲಿಂಡರ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಕುಟುಂಬಸ್ಥರು ಸಚಿವ ಸಂತೋಷ್ ಲಾಡ್ ಎದುರು ಕಣ್ಣೀರು ಹಾಕಿದರು. ಅವರು ಅಹವಾಲು ಕೇಳಿದ ಸಚಿವರು ಮೃತ ಕುಟುಂಬಕ್ಕೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!