
ಕ್ರಿಸ್ಮಸ್ ಹಬ್ಬದ ರಜೆಗಾಗಿ ಊರಿಗೆ ಬರುವ ವೇಳೆ, ಕಾರಿನ ಮೇಲೆ ಕಂಟೇನರ್ ಬಿದ್ದು ಐಎಎಸ್ಟಿ ಸಾಫ್ಟ್ವೇರ್ ಸಲ್ಯೂಷನ್ ಕಂಪನಿಯ ಮಾಲೀಕ ಚಂದ್ರಮ್ ಯೇಗಪ್ಪಗೋಳ ಹಾಗೂ ಅವರ ಇಡೀ ಕುಟುಂಬ ಸಾವು ಕಂಡಿತ್ತು. ಚಂದ್ರಮ್ ಅವರ ಪತ್ನಿ ಗೌರಾಬಾಯಿ, ಮಕ್ಕಳಾದ ದೀಕ್ಷಾ, ಧ್ಯಾನ್, ತಂಗಿಯಾದ ವಿಜಯಲಕ್ಷ್ಮಿ ಹಾಗೂ ಆಕೆಯ 6 ವರ್ಷದ ಪುತ್ರಿ ಆರ್ಯಾ ಸಾವು ಕಂಡಿದ್ದರು.
ಆರು ಮಂದಿಯ ದಾರುಣ ಸಾವಿಗೆ ಇಡೀ ಕರ್ನಾಟಕ ಶೋಕ ವ್ಯಕ್ತಪಡಿಸಿತ್ತು. ಡಿಸೆಂಬರ್ 22 ರಂದು ಪ್ರಕರಣದ ನಡೆದಿದ್ದರೆ, ಮರುದಿನ ಅವರ ಹುಟ್ಟೂರಾದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿಯಲ್ಲಿ ಶೋಕ ಸಾಗರದ ನಡುವೆ ಅಂತ್ಯಸಂಸ್ಕಾರ ನೆರವೇರಿತ್ತು.
ಮಗ, ಮಗಳು, ಸೊಸೆ ಹಾಗೂ ಮೊಮ್ಮಕ್ಕಳ ಮೃತದೇಹವನ್ನು ಕಂಡು ಆಘಾತಕ್ಕೆ ಒಳಗಾಗಿದ್ದ ಚಂದ್ರಮ್ ಯೇಗಪ್ಪಗೋಳ ಅವರ ತಂದೆ ಈರಗೊಂಡ ಯೇಗಪ್ಪಗೋಳ ಶನಿವಾರ ನಿಧನರಾಗಿದ್ದಾರೆ. ಅವರಿಗೆ 80 ವರ್ಷ ವಯಸ್ಸಾಗಿತ್ತು.
ಕಣ್ಣೆದುರಲ್ಲೇ ಮಗ, ಮಗಳು, ಸೊಸೆ, ಮೊಮ್ಮಕ್ಕಳ ಚಿತೆಗೆ ಬೆಂಕಿ ಇರಿಸಿದ್ದನ್ನು ನೋಡಿ ಈರಗೊಂಡ ಆಘಾತಕ್ಕೆ ಒಳಗಾಗಿದ್ದರು. ಅಂದಿನಿಂದಲೂ ಅವರು ಯಾರೊಂದಿಗೂ ಮಾತನಾಡುತ್ತಿರಲಿಲ್ಲ. ಅದಲ್ಲದೆ, ದೀರ್ಘಕಾಲದ ಅನಾರೋಗ್ಯ ಕೂಡ ಅವರನ್ನು ಬಾಧಿಸುತ್ತಿತ್ತು. 6 ಮೃತದೇಹ ಕಂಡಿದ್ದ ಮನೆಯಲ್ಲಿ ಮತ್ತೆ ಅರು ದಿನಕ್ಕೆ ಇನ್ನೊಂದು ಸಾವು ಆದಂತಾಗಿದೆ.






