
ವಿಟ್ಲ :ಎರಡು ದಿನಗಳಿಂದ ಅಪಾಯ ಸಂಭವಿಸಬಹುದಾದ ಸ್ಥಿತಿಯಲ್ಲಿ ವಿಟ್ಲ -ಮುಡಿಪು ಮಧ್ಯೆ ಸಂಚರಿಸುತ್ತಿದ್ದ ಖಾಸಗಿ ಬಸ್ಸನ್ನು ಸಾರ್ವಜನಿಕರು ತಡೆದು ವಿಟ್ಲ ಪೊಲೀಸರಿಗೆ ಒಪ್ಪಿಸಿದ್ದಾರೆ.
ವಿಟ್ಲ-ಮುಡಿಪು-ಮಂಗಳೂರು ಮಧ್ಯೆ ಸಂಚರಿಸುವ ಸಾರಾ ಹೆಸರಿನ ಖಾಸಗಿ ಬಸ್ಸಿನ ಹಿಂದಿನ ಎಡಭಾಗದಲ್ಲಿ ಒಂದೇ ಚಕ್ರದಲ್ಲಿ ಸಂಚರಿಸುತ್ತಿತ್ತು.
ಇನ್ನೊಂದು ಟಯರ್ ಒಡೆದು ವಿಚಿತ್ರ ಶಬ್ದ ಬರುತ್ತಿದ್ದರೂ ಚಾಲಕ, ನಿರ್ವಾಹಕ ಕ್ಯಾರೇ ಮಾಡಿರಲಿಲ್ಲ. ಶನಿವಾರ ಮಧ್ಯಾಹ್ನದಿಂದ ರವಿವಾರ ಮಧ್ಯಾಹ್ನ ತನಕ ವಿಟ್ಲ ಮುಡಿಪು ಮಂಗಳೂರು ಮಧ್ಯೆ ಹೀಗೇ ಸಂಚರಿಸುತ್ತಿದ್ದ ಸ್ಥಿತಿಯನ್ನು ಗಮನಿಸಿದ ಸಾರ್ವಜನಿಕರು ರೊಚ್ಚಿಗೆದ್ದಿದ್ದಾರೆ.
ಪ್ರಯಾಣಿಕರ ಜೀವದ ಜೊತೆ ಬಸ್ ಸಿಬಂದಿಗಳು ಚೆಲ್ಲಾಟ ಆಡುತ್ತಿದ್ದರೆಂದು ಪ್ರಯಾಣಿಕರು ಆರೋಪಿಸಿ, ಸಾಲೆತ್ತೂರು ಪೇಟೆಯಲ್ಲಿ ಬಸ್ಸನ್ನು ತಡೆ ಹಿಡಿದು ವಿಟ್ಲ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ. ಬಂಟ್ವಾಳ ಸಾರಿಗೆ ಅಧಿಕಾರಿಗಳಿಗೂ ಮಾಹಿತಿ ನೀಡಿದ್ದಾರೆ.






